Thursday, March 31, 2011

ಹೊಸ ಪುಸ್ತಕಗಳು

ಇವು ಮಾರ್ಚ್ 20ರಂದು ಬಿಡುಗಡೆಯಾದ ಪುಸ್ತಕಗಳು. ಇವುಗಳನ್ನು ಓದುಗರು ಪುಸ್ತಕದ ಅಂಗಡಿಗಳಲ್ಲಿ, www.flipkart.comನಲ್ಲಿ ಅಲ್ಲದೆ ನೇರವಾಗಿ ನಮ್ಮಿಂದಲೂ ಕೊಂಡುಕೊಳ್ಳಬಹುದು. ಬೇಕಾದ ಪುಸ್ತಕಗಳ ಮೊತ್ತವನ್ನು Bodhi Trust, SB Account no. 1600101008058, Canara Bank, Yenmur 574328, Dakshina Kannada District, Karnataka, IFSC: CNRB0001600--ಇಲ್ಲಿಗೆ ಜಮೆ ಮಾಡಿ ವಿಳಾಸ ತಿಳಿಸಿದರೆ ಪುಸ್ತಕಗಳನ್ನು ನಮ್ಮ ವೆಚ್ಚದಲ್ಲಿ ಕಳಿಸುತ್ತೇವೆ. ಪುಸ್ತಕಗಳ ವಿವರ ಹೀಗಿದೆ.

1. ಐದು ಕವನಗಳು. ರೂ50.00
"ಪ್ರೇತಲೋಕ" ಎಂಬ ಹೆಸರಿನ ದೀರ್ಘ ಕವನವೂ ಸೇರಿದಂತೆ ಐದು ಕವನಗಳಿವೆ. ಈ ಜಗತ್ತಿನಲ್ಲಿ ಒಟ್ಟು ಏಳು ಶತಕೋಟಿ ಪ್ರೇತಗಳಿವೆಯೆಂದು ಕೆನಡಾದ ಪ್ರೇತತಜ್ಞನಾದ ಸ್ಟೀಫನ್ ಹಾರ್ಟ್ವೆಲ್ ಹೇಳುತ್ತಾನೆ. ಆ ಪ್ರೇತಗಳು, ಅವು ವಾಸವಿರುವ ಕತ್ತಲು ಮತ್ತು ಅವನ್ನು ಓಡಿಸಲು ಬೇಕಾದ ಬೆಳಕು ಕುರಿತ ಪದ್ಯ. "ರಾಹು ಮತ್ತು ಕೇತು"  ಹೆಸರಿನ ಮತ್ತೊಂದು ದೀರ್ಘ ಕವನವಿದೆ. ಇದು ಈ ಹೆಸರಿನ ನಾಟಕದ ಮುಂದಿನ ಭಾಗ.

2. ಸಮಗ್ರ ನಾಟಕಗಳು. ಸಂಪುಟ 2. ರೂ60.00
"ಪುಟ್ಟಿಯ ಪಯಣ" ಮತ್ತು "ಸುದರ್ಶನ"--ಈ ಎರಡು ನಾಟಕಗಳು."ಪುಟ್ಟಿಯ ಪಯಣ" ಹದಿನಾಲ್ಕು ವರ್ಷದ ಹುಡುಗಿ ಅಪ್ಪ ಅಮ್ಮ ಆಫೀಸಿಗೆ ಹೋದ ಮೇಲೆ ಒಬ್ಬಳೇ ಮನೆಯಲ್ಲಿದ್ದಾಗ ಮರದ ಕಪಾಟಿನ ಮಾತಿನಂತೆ ಕಾಡಿಗೆ ಹೋಗುವ ಮತ್ತು ಅಲ್ಲಿ ವಿಶೇಷ ಅನುಭವಗಳನ್ನು ಪಡೆದು ಪ್ರಬುದ್ಧೆಯಾಗಿ ಮನೆಗೆ ಮರಳುವ ಕಥೆ. "ಸುದರ್ಶನ" ಶ್ರೀ ವಿಷ್ಣುವಿನ ಆಯುಧವಾದ ಸುದರ್ಶನ ಚಕ್ರದ ಕಥೆ. ಸುದರ್ಶನ ಶ್ರೀ ವಿಷ್ಣುವಿನ ಎಲ್ಲಾ ವಿಜಯಗಳಿಗೆ ತಾನೇ ಕಾರಣ ಎಂದು ಘೋಷಿಸಿ ವಿಷ್ಣುವನ್ನು ಪದಚ್ಯುತಗೊಳಿಸಿ ಜಗನ್ನಿಮಾಯಕನಾಗಿ ಆಳುತ್ತಾನೆ; ಅದಕ್ಕೆ ವಿರುದ್ಧವಾಗಿ ಪ್ರೇಮಿಗಳಾದ ಗುಬ್ಬಚ್ಚಿಗಳು ಪಿತೂರಿ ನಡೆಸುತ್ತವೆ--ಆ  ಕಥೆ.

3. ಸಮಗ್ರ ನಾಟಕಗಳು.  ಸಂಪುಟ 3. ರೂ75.00
"ಅಶ್ವತ್ಥಾಮ", "ಹುಲಿಯ ಕಥೆ" ಮತ್ತು "ದಂಗೆ"--ಈ ಮೂರು ನಾಟಕಗಳು. "ಅಶ್ವತ್ಥಾಮ" ಕುರುಕ್ಷೇತ್ರ ಯುದ್ಧದ ಬಳಿಕ ದ್ರೌಪದಿ ದುರ್ಯೋಧನನ ರಾಣಿ ಬಾನುಮತಿಯನ್ನು ಹೇಗೆ ದಾಸಿಯನ್ನಾಗಿ ಮಾಡಿಕೊಂಡಳು ಮತ್ತು ಅಶ್ವತ್ಥಾಮ ಕೊಂದ ಪಾಡವಪುತ್ರರು ಅವನನ್ನು ಹೇಗೆ ಕಾಡಿದರು ಎಂಬುದರ ಕುರಿತ ನಾಟಕ. "ಹುಲಿಯ ಕತೆ" ಗಾಂಧೀಜಿ ಹಾಗೂ ಅವರ ಪರಿತ್ಯಕ್ತ ಪುತ್ರ ಹರಿಲಾಲ್, ರಾಮ ಮತ್ತು ಅವನ ಪರಿತ್ಯಕ್ತ ಹೆಂಡತಿ ಮಕ್ಕಳಾದ ಸೀತೆ, ಲವ--ಕುಶ ಕುರಿತಾದದದ್ದು. "ದಂಗೆ"  1970ರಲ್ಲಿ ಬರೆದ ಕತೆ "ದಂಗೆಯ ಪ್ರಕರಣ"ದ ಮುಂದಿನ ಭಾಗ; ಬ್ಯೂರೋಕ್ರೆಸಿ ಕುರಿತಾದದ್ದು.

4. ಸಮಗ್ರ ನಾಟಕಗಳು. ಸಂಪುಟ 4. ರೂ75.00
"ಡಾಗ್ ಶೋ", "ರಾಹು ಮತ್ತು ಕೇತು", "ಜರಾಸಂಧ"--ಈ ಮೂರು ನಾಟಕಗಳು. "ಡಾಗ್ ಶೋ" ನಾಯಿಗಳೇ ಪಾತ್ರವಾಗುಳ್ಳ ನಾಟಕ. ಇದರಲ್ಲಿ ಉಪನಿಷತ್ತು ಮಹಾಭಾರತ ಮೊದಲಾದ ಕಡೆ ಬರುವ ಶುನಕಗಳು, ಹಾಲಿ ಇರುವ ಬೀದಿ ನಾಯಿಗಳು, ಅಲ್ಶೇಷಿಯನ್ ಮೊದಲಾದ ವಿದೇಶೀ ತಳಿಗಳು  ಪಾತ್ರಗಳು. "ರಾಹು ಮತ್ತು ಕೇತು" ರಾಹು ಎಂಬ ರುಂಡ ಹಾಗೂ ಕೇತು ಎಂಬ ಮುಂಡ ಕುರಿತ ಬೊಂಬೆಯಾಟ. ಅವರಿಬ್ಬರೂ ಒಂದೇ ವ್ಯಕ್ತಿ. ಅಮೃತ ಕುಡಿದ ಮೇಲೆ ಅಮರರಾಗಿದ್ದಾರೆ. ಆದರೆ ರುಂಡ ಮುಂಡಗಳು ಬೇರ್ಪಟ್ಟು ವಿಚ್ಛಿದ್ರರೂ ಆಗಿಬಿಟ್ಟಿದ್ದಾರೆ. ರಾಹು ಮಾತು, ಯೋಚನೆ; ಕೇತು ಕ್ರಿಯೆ. ರುಂಡ ಮಾತ್ರನಾದ ರಾಹು ತನ್ನ ಮುಂಡವಾದ ಕೇತು ಜೊತೆ ಸೇರಿ ಅಮರನೂ ಸಂಪೂರ್ಣನೂ ಆಗಲು ಪ್ರಯತ್ನಿಸುವ ಕುರಿತ ನಾಟಕ. "ಜರಾಸಂಧ" ಮತ್ತೊಂದು ಬೊಂಬೆ ಆಟ.

No comments:

Post a Comment