Wednesday, March 16, 2011

ಮಾರ್ಚ್ 20ರ ಬೇಂದ್ರೆ ಕಾವ್ಯೋತ್ಸವ

ಮಾರ್ಚ್ 20ರ ಬೇಂದ್ರೆ ಕಾವ್ಯೋತ್ಸವಕ್ಕಾಗಿ ಸಿದ್ಧತೆ ನಡೆಸುತ್ತಿರುವಾಗ ಅವರ ಕಾವ್ಯದ ಈ ಕೆಲವು ಸಾಲುಗಳು ಫಕ್ಕನೆ ನೆನಪಿಗೆ ಬಂದವು:

ಎನ್ನ ಪಾಡೆನಗಿರಲಿ ಅದರ ಹಾಡನ್ನಷ್ಟೆ
ನೀಡುವೆನು ರಸಿಕ ನಿನಗೆ
ನನ್ನ ಕತೆಯನು ಕೇಳಿ  ನಿನ್ನೆದೆಯು ಕರಗಿದರೆ
ಆ ಸವಿಯು ಹಣಿಸು ನನಗೆ.
(ನಾದಲೀಲೆ)

ಕರುಳಿನ ತೊಡಕನು ಕುಸುರಾಗಿ ಬಿಡಿಸಿಟ್ಟು
ತಿರುಗೊಮ್ಮೆ ತೊಡವಾಗಿ ನಾ ಧರಿಸಲೇ?
(ಸಖೀಗೀತ)

ಇದು ಮಂತ್ರ; ಅರ್ಥಕೊಗ್ಗದ ಶಬ್ದಗಳ ಪವಣಿಸುವ ತಂತ್ರ.
(ಉಯ್ಯಾಲೆ)

ಸಂಜೀಯ ಮುಗಿಲಾಗ ರೊಂಯ್ಬಿಲ್ಲ ಪಟವೊಂದು
ಗಾಳಿ ಸುಳಿಗೆ ಶ್ರುತಿ ಹಿಡಿದ್ಹಾಂಗ
ಗಗನಸಂಚಾರದ ನಾರದನ ವೀಣೆಯ
ಹಾಡೀನ ತೆರಿ ತೆರಿ ಬಡಿಧಾಂಗ
ಆತನೀತನವಂತ ಯಾತನದ ಯಾತನೆಯ
ಯಾತ ಕಿರುಗುಟ್ಟೋದು ನಿಂಧಾಂಗ
ನಾನೀನ ನುಡಿ ನುಂಗಿ ತಾನೀನ ತಾನೆ ತಾ
ತಾನಾಗಿ ತನನsನ ಬಂಧಾಂಗ
ರಂಗೊಂದು ದಂಗೊಂದು ಗುಂಗೊಂದು ಒಂದಕ್ಕೊಂದು
ಹತ್ತಾಗಿ ಜತ್ತಾಗಿ ಸುಳಿಧಾಂಗ
ದಣಿದ ಜೀವದ ಮ್ಯಾಲೆ ಜೇನಿನ ಸುರಿಮಳಿ
ಜೇಂಗುಟ್ಟಿ ಹನಿಹನಿ ಇಳಿಧಾಂಗ
(ಮಾಯಾಕಿನ್ನರಿ)

ಮಾತು ಜ್ಯೋತಿ, ಆ ಹರಳು_ಧೂಮ, ರಸ ಸಲಿಲ, ಭಾವ ಗಾಳಿ
ಕವಿಯೊಳಾಗಿ ಕಟ್ಟಿತ್ತು ಕಾವ್ಯ ನವ ಮೇಘ ರೂಪ ತಾಳಿ.
(ಮೇಘದೂತ--ಕವಿಯ ಮೇಘ)
*******
ತಾನು ಉಂಡ ಎದೆಯೊಲುಮೆ ತಾನು ಸೊಗವಟ್ಟು ಪಡೆದ ಹೆಣ್ಣು
ತಾನು ಕಂಡ ಋತುಮಾನ ತನ್ನ ಬಾಗಿಸಿದ ಚೆಲುವು ಕಣ್ಣು.
ಬಂದ ಬಂದ ನದಿ ಬೆಟ್ಟ ಪಟ್ಟಣದ ರಮ್ಯ ಛಾಯೆಯಿಂದ
ಮೋಡದೊಂದು ನೆಪ ಮಾಡಿ ಹಾಡಿದನು ಯಕ್ಷ-ಮಾಯೆಯಿಂದ.

ಇರಲಿ  ಬೆಟ್ಟ ನದಿ, ಇರಲಿ ಶಿವನ ಸತಿ, ಇರಲಿ ಕಾಡು ನಾಡು
ಇರಲಿ ಕಾಮ-ರತಿ, ಅಜನು-ಇಂದುಮತಿ, ಬರಲಿ ಸಾವು ಕೇಡು.
ಯಕ್ಷ-ಯಕ್ಷಿ ಇರಲಕ್ಷಿ-ಪಕ್ಷಿ ಕಣ್ಗಂಡ ಪಾತ್ರದಿಂದ
ಪ್ರೇಮದಾಟವನು ಕವಿಯು ಆಡಿಸಿದ ಕಾಮಸೂತ್ರದಿಂದ.

ಬೆಟ್ಟಕೊಲಿಯೆ ಮನ ಬೆಟ್ಟದಂತೆ ಬಗೆಗರುಹು ಎತ್ತರಹುದು
ಹೊಳೆಗೆ ಒಲಿಯೆ ಮನ ಹೊಳೆಯ ಹಾಗೆ ಬಗೆ ಭಾವ ಹೊಳಿಸುತಿಹುದು
ಬೆಟ್ಟ ಹೊಳೆಯ ಬಿಟ್ಟಿರದು ನಿನ್ನ ಬಗೆ ಎಂಥ ಭವ್ಯ ರುಚಿಯು
ಕಡಲಿನಂತೆ ಗಂಭೀರ ಗುಂಭ, ಸೌಂದರ್ಯದಂತೆ ಶುಚಿಯು.
(ಮೇಘದೂತ--ಕವಿ ಕಾಳಿದಾಸ)
*******

ಆ  ವಿರಹ ಅಲಸ ಗುರುಪದಗಳಿಂದ ಲೀಲಾsಲೋಲವಾಗಿ
ಆಕ್ರಾಂತವಾಗಿ ಉತ್ಕಂಠೆಯಿಂದ ಲಘುಪದಗಳಿಂದ ಸಾಗಿ
ಮುಗಿತಾಯದಲ್ಲಿ ಗುರುಲಘುಗಳಿಂದ ದಿಂಕಿಡುವ ಹಾಗೆ ನೂಂಕಿ
ಮಂದಾಕ್ರಾಂತದಲ್ಲಿ ವಿರಹಿ ಹೃದಯವನು ಸುಡುವದಣ್ಣ ಬೆಂಕಿ.

ಜಲದ ಭಾರದಲಿ ಜಲದ ಬಾನಿನಲಿ ಮಂದಮಂದವಾಗಿ
ಗಾಳಿಯಿಂದ ಆಕ್ರಾಂತವಾಗಿ ಗುಡುಗುಡುಗಿ ದೂಡಿ ನೂಗಿ
ನದಿಗಾಗಿ ನಡೆದು ಬೆಟ್ಟಕ್ಕೆ ತಡೆದು ನಗರಿಯಲಿ ಮೋದವಡೆದು
ಸಾಗುತಿಹುದು ಮಂದಾsಕ್ರಾಂತ ರಸ ವಿರಹಿ ಛಂದ ಹಿಡಿದು.
(ಮೇಘದೂತ--ಮಂದಾಕ್ರಾಂತ)
******

ಕವಿಯ ಕಮಲಕೃತಿಯಲ್ಲಿ ಉಂಡೆ ನಾನೊಬ್ಬ ಭಾವಭೃಂಗ
ಪಕಳೆ ಮಾತು ಉದಿರಾಡಬಹುದು, ತುಂಬೀತು ಸ್ವಾಂತರಂಗ.
ತೋಳುಗೀಳು ಸಡಲೀತು ಪ್ರಿಯರ ಸುಸ್ನಿಗ್ಧ ಬಂಧದಲ್ಲು
ಪ್ರಾಣ ತುಂಬುವಾ ಅಧರಪಾನ ಇಳಿದೀತೆ ಉದರದಲ್ಲು?
(ಮೇಘದೂತ--ಭಾಷಾಂತರವಲ್ಲ, ಭಾವಗ್ರಹಣ)
********

ನಾನು ಕವಿತೆ ಬರೆಯುವ ಮುನ್ನ....I see them, I touch them, I feel them.
(ಸಿ.ಎನ್.ರಾಮಚಂದ್ರನ್ ಜೊತೆ ಮಾತುಕತೆಯಲ್ಲಿ ಬೇಂದ್ರೆಯವರು ಹೇಳಿದ್ದು)


No comments:

Post a Comment