Saturday, March 5, 2011

ಐದು ಪ್ರೇಮ ಕವನಗಳು

1. ಉರಿ

ನನ್ನ ಹೃದಯ ಭಾವನೆಗಳೇ ಇಲ್ಲದೆ ತಣ್ಣಗಾಗುತ್ತಿತ್ತು.
ಬೆಚ್ಚಗಾಗಲಿ ಎಂದು ಉರಿವ ಉಲ್ಕೆಗಳ ಬಳಿ ಇಟ್ಟೆ;
ನಕ್ಷತ್ರಗಳ ಕರೆದೆ, ಬನ್ನಿ, ಬೆಚ್ಚಗಾಗಿಸಿ ಎಂದು;
ಸೂರ್ಯನಿಗೆ ಗೋಗರೆದೆ, ಬೆಚ್ಚಗಾಗಿಸೊ ಎಂದು.

ಉಲ್ಕೆಗಳು ಉರಿದು ಕರ್ರಗಾದವು;
ನಕ್ಷತ್ರಗಳು ಕಣ್ಣುಗಳ ಮಿಟುಕಿಸಿದವು;
ಸೂರ್ಯ ಉರಿಯುತ್ತಾ ಉರಿಯುತ್ತಾ ಧಗೆಯ ಹಚ್ಚುತ್ತಿದ್ದ;
ಹೃದಯ ಮಾತ್ರ ಹಾಗೇ ಇತ್ತು.

ನೀನು ಯಾವಾಗ ನನ್ನ ಈ ಇಂಥ ಹೃದಯಕ್ಕೆ ಬಂದೆ?
ಆಗ ನೀನಲ್ಲಿ ಹಬ್ಬಿಸಿದ ಉರಿಗೆ
ಉಲ್ಕೆ ನಕ್ಷತ್ರ ಸೂರ್ಯಗಳೆ
ಬೆವರುತ್ತಲಿದ್ದಾವೆ.

2. ಕರೆ

ಯಾಕೆ ಈ ಕರೆ ಮರಳಿ
ಮರಳಿ ಮರಳಿ?

ನೀನು ಕಾಣುವ ರೀತಿ
ತಿರುಗಿ ನೋಡಲಿ ಹೇಗೆ?
ನಾಶವಾಗದ ಹಾಗೆ
ಮುಂದೆ ನಡೆಯಲಿ ಹೇಗೆ?

ಯಾಕೆ ಈ ಕರೆ ಮರಳಿ
ಮರಳಿ ಮರಳಿ?

******

ಮರೆಗೆ ಕೂರುವುದು
ಕೂಗುವುದು ಬೆದೆ ಬಂದ ನವಿಲಿನ ಹಾಗೆ

ಸ್ನೇಹಾಕಾಂಕ್ಷಿ ಒಬ್ಬಂಟಿ
ಕರೆ ಕೇಳಿ
ಮೆಲ್ಲ ಮೆಲ ಮೆಲ್ಲ
ಬಳಿ ಸಾರುವುದು
ನಿಲ್ಲುವುದು ನೋಡುವುದು ಹೆದರುವುದು
ಮತ್ತೆ ಬಳಿ ಸಾರುವುದು

ಆಗಲೇ ಗುಂಡಿಕ್ಕಿ ಕೊಲ್ಲುವುದು
ಮಾಂಸ ವಿಂಗಡಿಸುವುದು

ಬಿದ್ದ ಗರಿಗಳ ಹೆಕ್ಕಿ
ಬೀಸಣಿಗೆ ಮಾಡುವುದು

*******

ಅಥವಾ ನಿನಗೆ ಕೇಕಿಯ ರೋಷ
ನನಗೆ ನವಿಲಿನ ವೇಷ

ನೀನು ಹಂಸವಾಗಿ
ನಾನೂ ಹಂಸವಾಗಿ ಈಜಿ ಕೂಡಿ

ನೀನು ಸಿಂಹವಾಗಿ
ನಾನೂ ಸಿಂಹವಾಗಿ ಮೊರೆದು ಕೂಡಿ

ನೀನು ಚಿರತೆಯಾಗಿ
ನಾನೂ ಚಿರತೆಯಾಗಿ ನೆಗೆದು ಕೂಡಿ

ನೀನು ಹಾವಾಗಿ
ನಾನೂ ಹಾವಾಗಿ ಹೊರಳಿ ಕೂಡಿ

ಕೋತಿ ನಾಯಿ ನರಿ ಮುಸುವ ನಕ್ಕುರು ಆಡು ಕುರಿ ಜಿಂಕೆ
ಹಂದಿ ಆನೆ ಮಿಡತೆ ಮೀನು ಕಪ್ಪೆ ಏಡಿ ಆಮೆ ದನ ಒಂಟೆ

ಪ್ರತಿಯೊಂದು ನಾವಾಗಿ ಪ್ರತಿಯೊಂದ ಸೃಷ್ಟಿಸಿ ನಾವು

ಗಿಜಿಗುಟ್ಟ ತೊಡಗಿರಲು ಈ ಹಳ್ಳ ಈ ಕೊಳ್ಳ ಈ ಬೆಟ್ಟ ಈ ಗುಡ್ಡ
ನವಿಲಿಂದ ಹಂಸಗಳಿಂದ ಗಿಳಿಯಿಂದ ಚಿರತೆಗಳಿಂದ

ಮರಳಿ ಕರೆ ಮರೆಯಿಂದ
ಮರಳಿ ಮರಳಿ.

                                                                 (1990)



3. ಎಷ್ಟೊಂದು ಹುಡುಗಿಯರು

ಎಷ್ಟೊಂದು ಹುಡುಗಿಯರು, ಎಷ್ಟೊಂದು ಹುಡುಗಿಯರು,
ಎಷ್ಟೊಂದು ಹುಡುಗಿಯರ ಎಷ್ಟು ನಗು, ವೈಯ್ಯಾರ,
ಎಷ್ಟು ಕಟು ನಿರ್ಧಾರ!

ಒಬ್ಬಳು ತಾನು ಹಿಡಿದದ್ದೆ ಆಗಬೇಕೆಂಬವಳು,
ಸಿಡುಕಿ, ಉದ್ದಾಲಕ ಚಂಡಿ;
ಇನ್ನೊಬ್ಬಾಕೆ ಕೊಲೆಯ ಶಕ್ತಿಯ ಮೊಲೆಯ ಹಾಲಿಗೆ ಕರೆದು
ಅತಿಥಿ ನಿದ್ದೆಯ ಕೊಲೆಗೆ ಪತಿಯ ಹೊರಡಿಸಿದವಳು;
ಇನ್ನೊಬ್ಬ ಚೆಲುವೆ ಸಿರಿಗಂಧ ಶಾಲಿನಿ:
ಅಪ್ಪ ಹೇಳಿದನೆಂದು ಪ್ರಿಯಕರನಿಂದ ಮುಖ ತಿರುಗಿ
ಹುಚ್ಚೇರಿ, ಹಾಡುತ್ತ ಕೊಂಬೆಗೆ ಏರಿ,
ನದಿಯ ಕೆಸರಿಗೆ ಬಿದ್ದು ನೀರು ಪಾಲಾದವಳು;
ಮತ್ತೊಬ್ಬ ಕರಿಯ ಸುಂದರಿ
ಪ್ರಣಯಿ ಮುತ್ತಿಡುವ ಮೃದು ಎದೆ ಮೇಲೆ
ಸರ್ಪಗಳ ಚೀಪಲು ಬಿಟ್ಟು ಪ್ರಾಣ ಬಿಟ್ಟವಳು.

ಎಷ್ಟೊಂದು ಹುಡುಗಿಯರು, ಎಷ್ಟೊಂದು ಹುಡುಗಿಯರು,
ಎಷ್ಟೊಂದು ಹುಡುಗಿಯರ ಎಷ್ಟು ರುಚಿ ಮುತ್ತುಗಳು
ಎಷ್ಟು ಮೃದು ಒತ್ತುಗಳು!

ಕಣ್ಣು ಒಬ್ಬಳು ಚೆಲುವೆಯಿಂದ ಇನ್ನೊಬ್ಬಳು ಚೆಲುವೆಗೆ ಹರಿಯುತ್ತದೆ.
ಪಾರ್ಟಿಯಲ್ಲಿ ಪರಿಚಯದಲ್ಲಿ ಬ್ರಾದೆಲ್ಲಿನ ಕಮಟು ಹಾಸಿಗೆಯಲ್ಲಿ,
ಪಂಚತಾರಾ ಹೋಟೆಲ್ಲಿನ ಸೆಂಟು ಸಹವಾಸದಲ್ಲಿ
ಅನ್ಯೋನ್ಯಕ್ಕೆ ಎಳಸುವುದು: ಅಷ್ಟಕ್ಕೆ
ಅರ್ಧಾಂಗ ಕಳೆಯುವುದಿಲ್ಲ.
ವಿಚ್ಛೇದನದಿಂದ ಕೂಡುವಿಕೆಗೂ ಮತ್ತೊಂದು ವಿಚ್ಛೇದನಕ್ಕೂ ಸರಿಯುತ್ತಾ
ದೇಹ ಮನಸ್ಸಿನ ಸಮಾಗಮದ  ಕ್ಷಣ
ಹುಡುಕುತ್ತಲೇ ಇರುತ್ತದೆ--
ಕಾರ್ಮುಗಿಲು ತೂರಿ ಒಂದು ಬೆಳಕಿನ ಬೀಮು
ಇಳೆಯ ಬೆಳಗುವ ಕೃಪೆಯ
ಪರಮ ಗಳಿಗೆಯ ಕುರಿತು.

ಆದರೂ ಮದುವೆಯ ಮೂಲದಿಂದಲೇ ನಾಗರಿಕತೆ ಹುಟ್ಟಿತ್ತೆಂದು ಹೇಳಿದರೆ
ಅಲ್ಲ ಎಂದು ಹೇಳುವವರಾದರೂ ಯಾರು?
ಗ್ರೀಕರ ನಾಗರಿಕತೆ ಮೂಲ ಲೀಡಾಳನ್ನು  ಹಂಸ ಸೇರಿದ್ದ ಗಳಿಗೆಯೋ
ಹೆಲೆನ್ ಮತ್ತು ಕ್ಲೈಟಮ್ನೆಸ್ಟ್ರಾರ ಮದುವೆಯೋ?
ಮದುವೆ ಉಳಿಸುವ ರಾಮನ ಹಟ ಮತ್ತು ಸೀತೆಯ ಪಾತಿವ್ರತ್ಯದ ಜೊತೆ ಸೇರಿ
ಇಂದ್ರಪ್ರಸ್ಥದ ನಾಗರಿಕತೆ ಮತ್ತು ಯುಧಿಷ್ಠಿರನ ಹೊಸ ಧರ್ಮ ಇತ್ತು;
ಒಬ್ಬಳು ಮಣ್ಣಲ್ಲಿ ಹುಗಿದಿದ್ದು ನೇಗಿಲಿನಿಂದ ಬಂದವಳು;
ಇನ್ನೊಬ್ಬಾಕೆ ಅಗ್ನಿಯ ಮಗಳು.

ಎಷ್ಟೊಂದು ಹುಡುಗಿಯರು, ಎಷ್ಟೊಂದು ಹುಡುಗಿಯರು,
ಎಷ್ಟೊಂದು ಹುಡುಗಿಯರ ಎಷ್ಟು ಥರ ಸಂಚಾರ, ಎಷ್ಟು ಥರ ವ್ಯವಹಾರ,
ಅದೆಷ್ಟು ಬಗೆ ಸಂಸಾರ!
                                                        
                                                                              (1990)


4. ನೂಲಿನ ಮನೆ

ಮನೆಯಲ್ಲ, ಬರ್ಸಾತಿ. ಬ್ಯಾಚಲರ್ ಕಾಲದ್ದು. ನೀನು ಹೆಂಡತಿಯಾಗಿ
ಬಂದಾಗ ಅದರಲ್ಲೆ ಸಂಸಾರ ಹೂಡಿದೆವು.

ನಿರಾಶ್ರಿತರ ಕಾಲೊನಿ ಅದು. ಎದುರೊಂದು ಶೀಟು ಮನೆ.
ಮನೆಯಲ್ಲಿ ಗೋಲಿ ಕಣ್ಣಿನ ಮುದುಕಿ. ಒಬ್ಬಂಟಿ.

ನೀನು ಮದುಕಿಯ ಕುರಿತು ಹೇಳಿದ್ದು ನೆನಪುಂಟೆ?--
ಶವದ ಪೆಟ್ಟಗೆಯಂತೆ ಬಾಗಿಲು ತೆರೆದು ಹೊರಗಿಣುಕಿ

ಶವದ ಪೆಟ್ಟಿಗೆ ಹಾಗೆ ಮರಳಿ ಬಾಗಿಲು ಹಾಕಿ
ಒಳಗೆ ಸೇರುವಳೆಂದು. ಮುದುಕಿ ಆದಾಗ ನೀನೂ ಹಾಗೆ

ಆಗುವಿಯೆಂದು ಭಯ ಎಂದೆ. ಆ ಮೇಲೆ ನಿಜವಾಗಿ
ಎದ್ದು ಬಂದಂತಿರುವ ಈ ಚಿತ್ರ ಬರೆದಿದ್ದೆ: ಗಲಭೆ ಕೊಲೆ

ನೆತ್ತರ ಬಣ್ಣ ಹಿನ್ನಲೆಯಲ್ಲಿ ಒಬ್ಬಂಟಿ ಮೊಣಕಾಲಲ್ಲಿ
ಮುಖ ಊರಿ ಕೂತಿದ್ದಾಳೆ; ದೂರದಲ್ಲೊಬ್ಬ ಗಂಡಸು

ತನ್ನಂತೆ ನಿಂತಿದ್ದಾನೆ; ಗಂಡ ಹೆಂಡತಿ ಬಳಚಿ
ಜೇಡ ನೂಲಿನ ಮನೆಯ ಕಟ್ಟುತ್ತಿದೆ.
                                                  
                                                          (1992)


5.  ವಿಚ್ಛೇದ

ಒಂಟಿತನ ದಾಟುವುದಕ್ಕೆ ಸಂಕ ಇಲ್ಲವೆ ಇಲ್ಲ.

ಅವರಿವರ ಕಾಣುತ್ತೇವೆ, ಮಾತಾಡುತ್ತೇವೆ, ಜೋಕು ಮಾಡುತ್ತೇವೆ,
ಪಾರ್ಟಿಯಲ್ಲೋ ನಾಟಕದಲ್ಲೋ ಬೆರೆತಂತೆ ಮಾಡುತ್ತೇವೆ--
ಅಷ್ಟಕ್ಕೆ ಒಂದಾದೆ ಅನ್ನಿಸದು. ಮತ್ತೆ ಮೊದಲಿನ ಹಾಗೆ
ಯಾರನ್ನೋ ನೆನೆಸುವುದು, ಕನಸುವುದು,
ಅವರೊಡನೆ ಸರಿಯಾಗಿ ಕಳೆದೇನೆಂದು ಭ್ರಮಿಸುವುದು,
ಅಂಥವರೊಬ್ಬರು ಸಿಕ್ಕಿದರೆ ಇವರಲ್ಲ,
ಇವರನ್ನಲ್ಲ ನಾ ನೆನೆಸಿದ್ದು ಅನಿಸುವುದು.

ಯಾರು ಬರುವರು ಹಾಗೆ?--
ಇನ್ನಿವರ ಬಿಟ್ಟು ಬೇರೆಲ್ಲಿಗೂ ಹೋಗಬೇಕಾದ್ದಿಲ್ಲ
ಎಂದು ಅನಿಸುವ ಹಾಗೆ? ಸಂಭೋಗದಲ್ಲಿ ಕೆಲವು ಸಲ
ಒಂದಾದೆ ಅನ್ನಿಸಿದರೆ ಸಮೇತ ಈ ಚೆಲುವೆ
ನನ್ನ ಮೆಚ್ಚಿದಳೇ ಪುಲಕಿತಳೇ ಎಂಬಿತ್ಯಾದಿ ದಕ್ಷತೆಯ
ಪ್ರಶ್ನೆಗಳು ತೊಡಕುವುವು. ಇಲ್ಲ. ಇನ್ನೊಂದು ಜೀವದ ಜೊತೆಗೆ
ಕೂಡುವಿಕೆಯೇ ಇಲ್ಲ. ಸಂತರು ಕೆಲರು

ತಮ್ಮಲ್ಲೆ ಇರುವ ಎಳೆಮಗುವ ಕಾಣುತ್ತ
ಕಂಡು ಮಾತಾಡುತ್ತ ಆಡುತ್ತ ಹಾಡುತ್ತ
ಮಗುಮುಖದ ಮೂಲಕವೆ ದೇವರೊಡಗೂಡುತ್ತ
ಇರುವುದುಂಟೆಂದು ಕೇಳಿದ್ದೇನೆ. ಮನಸ್ಸಲ್ಲಿ
ನೆರಿಗೆ ಮುಖ ತುಂಬಿದ ನನಗೆ
ಮಗುಮುಖವೆ ಹೊಳೆಯುತ್ತಿಲ್ಲ.
ವಿಚ್ಛೇದ, ಬರೀ ವಿಚ್ಛೇದ, ಒಂಟಿತನ

ಕಳೆದು ಕೂಡುವುದಕ್ಕೆ ಅಂಕ ಎಲ್ಲೂ ಇಲ್ಲ.



************

1. ಮೇಲಿನ ಕವನಗಳು ನನ್ನ ಕವನ ಸಂಗ್ರಹ ಮಾತಾಡುವ ಮರ, ಸಮಗ್ರ ಕಾವ್ಯ 1964-2003ದಲ್ಲಿ ಈ ಮೊದಲು ಪ್ರಕಟವಾಗಿವೆ.
2. ಬೋಧಿ ಟ್ರಸ್ಟ್ ನ ಪುಸ್ತಕಗಳು ಈಗ ಆನ್ಲೈನ್ ಪುಸ್ತಕ ಮಳಿಗೆ flipkartನಲ್ಲಿ ಸಿಗುತ್ತವೆ. www.flipkart.comಗೆ Enter ಕೊಟ್ಟು books by Ramachandra Deva ಎಂಬುದಕ್ಕೆ search ಕೊಟ್ಟರೆ ಪುಸ್ತಕಗಳ ಪಟ್ಟಿ ಮತ್ತು ಹೇಗೆ ಕೊಂಡುಕೊಳ್ಳಬಹುದು ಎಂಬ ವಿವರ ಬರುತ್ತದೆ.
3. ಇದಲ್ಲದೆ ನಮ್ಮ ಪುಸ್ತಕಗಳು ಪುಸ್ತಕದ ಅಂಗಡಿಗಳಲ್ಲಿ ಸಿಗುತ್ತದೆ. ಸಿಕ್ಕದಿದ್ದರೆ ನಿಮ್ಮ ಹತ್ತಿರದ ಅಂಗಡಿಯವರಿಗೆ ತರಿಸಿಕೊಡಲು ಹೇಳಿ. ಅಥವಾ ನಮಗೆ ಬರೆಯಿರಿ. ನಮ್ಮ ವಿಳಾಸ: bodhitrustk@gmail.com
4. ಮಾರ್ಚ್ 20ರ ಬೇಂದ್ರೆ ಕಾವ್ಯೋತ್ಸವಕ್ಕೆ ಬನ್ನಿ. ಪದ್ಯಗಳನ್ನು ಓದುವವರು ತಮ್ಮ ಡಯಲಾಗ್ ಡೆಲಿವರಿಗಾಗಿ ನಾಡಿನಾದ್ಯಂತ ಪ್ರಖ್ಯಾತರಾಗಿರುವ ಮೇರು ನಟರಾದ ಸಿಂಹ, ಶ್ರಿನಿವಾಸಪ್ರಭು ಮತ್ತು ಹೆಸರಾದ ರಂಗಕರ್ಮಿಗಳಾದ ರಘುನಂದನ, ಮಂಗಲಾ ಮೊದಲಾದವರು; ಓದುವುದು/ಹಾಡುವುದು ಜಗತ್ತಿನ ದೊಡ್ಡ ಕವಿಗಳಲ್ಲೊಬ್ಬರಾದ ಬೇಂದ್ರೆಯವರ ಪದ್ಯಗಳನ್ನು. ಹೀಗಾಗಿ ಇದೊಂದು ಅವಿಸ್ಮರಣೀಯ ಅನುಭವ ಆಗಲಿದೆ.  









No comments:

Post a Comment