Tuesday, April 12, 2011

ಯುದ್ಧ ಕುರಿತು

ಮಾರ್ಚ್ 20ರಂದು ನನ್ನ ಪುಸ್ತಕ ಬಿಡುಗಡೆ ಮಾಡಿ ಮಾತಾಡಿದ ಡಾ. ನರಹಳ್ಳಿ ಬಾಲಸುಬ್ರಹ್ಮಣ್ಯ ಒಂದು ಮುಖ್ಯ ಮಾತು ಹೇಳಿದರು. ಕನ್ನಡದಲ್ಲಿ ಯುದ್ಧ ವಿರೋಧಿ ಕೃತಿಗಳು ಕಮ್ಮಿ, ನನಗೆ ಮುಖ್ಯ ಎಂದು ನೆನಪಾಗುವ ಯುದ್ಧವಿರೋಧಿ ಕೃತಿಗಳೆಂದರೆ ಪಂಪನ ಆದಿಪುರಾಣ, ಕುವೆಂಪುರ ಸ್ಮಶಾನ ಕುರುಕ್ಷೇತ್ರ ಮತ್ತು ನನ್ನ ರಥಮುಸಲ  ಎಂಬುದು ಅವರ ಅಭಿಪ್ರಾಯ. ಆದಿಪುರಾಣ ಯುದ್ಧವಿರೋಧಿ ಎನ್ನುವುದಕ್ಕೆ ಅವರು ಭರತ ಮತ್ತು ಬಾಹುಬಲಿ ಮಧ್ಯೆ ನಡೆಯುವ ದೃಷ್ಟಿಯುದ್ಧ, ಜಲಯುದ್ಧ ಮೊದಲಾದವುಗಳನ್ನು ಉದಾಹರಿಸುತ್ತಾರೆ. ಇದು ರಕ್ತಪಾತವಿಲ್ಲದ ಯುದ್ಧ. ಅದರಲ್ಲಿ ಗೆದ್ದವನನ್ನು ವಿಜಯಿ ಎಂದು ಒಪ್ಪಿಕೊಳ್ಳುವುದು ಒಂದು ದೃಷ್ಟಿಯಿಂದ ಯುದ್ಧವಿರೋಧಿ ಎಂದು ಪರಿಗಣಿಸಬಹುದು. ಆದರೆ, ಪಂಪ ಕಲಿತನವನ್ನು ಒಪ್ಪಿಕೊಂಡವನು. ಇಡೀ ಯುಗವೇ ಕಲಿತನವನ್ನು ಒಪ್ಪಿಕೊಂಡಿತ್ತು. ಈ ಕಲಿತನ ಮತ್ತು ಅಹಿಂಸೆಯನ್ನು ಪ್ರತಿಪಾದಿಸುವ ಜೈನ ಧರ್ಮ--ಇವೆರಡನ್ನು ಪಂಪ ಹೇಗೆ ಹೊಂದಾಣಿಕೆ ಮಾಡುತ್ತಾನೆ? ಇವು ಅವನಲ್ಲಿ ಬೇರೆ ಬೇರೆಯಾಗಿ ಉಳಿಯುತ್ತವೆಯೇ ಅಥವಾ ವೈರುಧ್ಯಗಳನ್ನು  ಹೊಂದಿಸಿ ಒಂದು ಮಾಡಿ ಕಟ್ಟುತ್ತಾನೆಯೇ? ಈ ಬಗ್ಗೆ ಸದ್ಯಕ್ಕೆ  ಏನು ಹೇಳಲೂ ನಾನು ಅಸಮರ್ಥ.  ಈ ಪ್ರಶ್ನೆಯನ್ನೇ ಮನಸ್ಸಿನಲ್ಲಿಟ್ಟುಕೊಂಡು ಪಂಪನನ್ನು ಮತ್ತೊಮ್ಮೆ ಓದಬೇಕು.

ನರಹಳ್ಳಿಯವರು ಕುವೆಂಪುರವರ ಸ್ಮಶಾನ ಕುರುಕ್ಷೇತ್ರದ ಬಗ್ಗೆ ಹೇಳಿದ್ದು ನಿಜ. ಕನ್ನಡದ ಶ್ರೇಷ್ಠ ನಾಟಕಗಳಲ್ಲಿ ಇದೊಂದು. ಅದರ ಹಿಂದಿನ ಎನರ್ಜಿ, ದೃಶ್ಯಗಳನ್ನು ಸಂಯೋಜಿಸುವ ರೀತಿ ಕುವೆಂಪು ನುರಿತ ನಾಟಕಕಾರರು ಎಂಬುದನ್ನು ತೋರಿಸುತ್ತದೆ. ಹಾಗೇ ನನಗೆ ಇಷ್ಟವಾದ ಇನ್ನೊಂದು ಯುದ್ಧ ವಿರೋಧಿ ನಾಟಕ ಸಂಸರ ಬಿರುದೆಂತೆಂಬರ ಗಂಡ. ಅದನ್ನು ಅವರು ಯುದ್ಧ ವಿರೋಧಿ ಎಂದು ಬರೆದದ್ದಲ್ಲ. ಬಹುಶಃ ಅವರ ಉದ್ದೇಶ ಕೃಷ್ಣರಾಜ ಒಡೆಯರ್ ಬಿರುದೆಂತೆಂಬರ ಗಂಡ ಎಂಬ ಬಿರುದನ್ನು ಹೇಗೆ ಸಂಪಾದಿಸಿದರು ಎಂಬುದನ್ನು ತೋರಿಸುವುದೇ ಆಗಿದ್ದಿರಬೇಕು. ಮಲ್ಲೇಶ್ವರದ 20ನೇ ಶತಮಾನದ ಸುರುವಿಗೆ ನಿರ್ಮಿಸಿದ ಒಂದು ದೇವಸ್ಥಾನದಲ್ಲಿ ಕೃಷ್ಣರಾಜ ಒಡೆಯರ ಅನೇಕ ಬಿರುದಾವಳಿಗಳಲ್ಲಿ "ಬಿರುದೆಂತೆಂಬರ ಗಂಡ" ಎಂಬ ಬಿರುದನ್ನು ಸಹಾ ನೋಡುವ ವರೆಗೆ ಸಂಸರ ಈ ನಾಟಕದ ಬಿರುದು ನಿಜವಾದ ಬಿರುದೋ ಅಥವಾ ಅವರ ಕಲ್ಪನೆಯೋ ಎಂಬ ಅನುಮಾನ ಇತ್ತು.

ಬಿರುದು ಸಂಪಾದನೆಯ ಬಗೆಗಗಿನ ನಾಟಕ ಬರೆಯುವ ಉದ್ದೇಶದಿಂದ ಬರೆದದ್ದು ಯುದ್ಧ ವಿರೋಧಿಯೂ ಆದದ್ದು ಕೃತಿಕಾರನ ಮೂಲ ಉದ್ದೇಶ ಮೀರಿ ಕೃತಿ ಬೆಳೆದದ್ದಕ್ಕೆ  ಉದಾಹರಣೆ. ಬಿರುದಿಗಾಗಿ ಎಲ್ಲಾ ವಾದ ವಿವಾದ ಮಾಡಿ ಮುಗಿಸಿದ ಮೈಸೂರು ಮತ್ತು ತಿರುಚಿರಾಪಳ್ಳಿಯ ಜನ ಕೊನೆಗೆ ತಮ್ಮ ಕತ್ತಿಯಿಂದ ಮಾತಾಡಲು ತೊಡಗುತ್ತಾರೆ. ಬಿರುದಿಗಾಗಿ ಪರಸ್ಪರ ಕೊಂದುಕೊಳ್ಳುವಂಥಾ ಕೆಲಸಕ್ಕೆ ತೊಡಗುವಷ್ಟು ಜನ ಮೂರ್ಖರಾಗುತ್ತಾರೆ ಎಂಬುದನ್ನು ತೋರಿಸುವುದರಿಂದಲೇ ಅದು ಯುದ್ಧ ವಿರೋಧಿ ಕೃತಿ.

ರಥಮುಸಲ ಯುದ್ಧವಿರೋಧಿ ಕೃತಿಯೇ, ಸ್ಪಷ್ಟವಾಗಿ. ಯುದ್ಧವೊಂದೇ ಅಲ್ಲ, ವೈರತ್ವ ಬೆಳೆಸುವ ಗೂಢಚಾರಿಕೆ, ಪಿತೂರಿ, ಕಳ್ಳಸಾಗಣಿಕೆ, ಜನರನ್ನು ದಾಳಗಳಂತೆ ಕಾಣುವುದು, ಜನತಂತ್ರ ವಿರೋಧಿಯಾದ ನಿರ್ಣಯಗಳು, ತಮ್ಮ ಉದ್ದೇಶ ಸಾಧನೆಗಾಗಿ ಸಂಬಂಧಗಳನ್ನು ನಿರ್ಲಕ್ಷಿಸುವುದು ಮೊದಲಾದ ಎಲ್ಲವುಗಳನ್ನು ಸೇರಿಸಿ ಬರೆಯುವುದು ನನ್ನ ಉದ್ದೇಶವಾಗಿತ್ತು.

ಆದರೆ ನನ್ನ ಯುದ್ಧ ವಿರೋಧಿ ಕೃತಿ ಇದೊಂದೇ ಅಲ್ಲ. ನೇರವಾಗಿ ಯುದ್ಧದ ಬಗ್ಗೆ ಅಲ್ಲದಿದ್ದರೂ ಕುದುರೆ ಬಂತು ಕುದುರೆ ಸೂಚ್ಯವಾಗಿ ವೈಯಕ್ತಿಕ ಜೀವನದ ಜಗಳಗಳ ಬಗ್ಗೆ ಇದೆ. ಕ್ಲರ್ಕ್ ಮತ್ತು ಪೋಸ್ಟ್ ಮನ್ ಬದ್ಧ ದ್ವೇಷದಿಂದ ಜಗಳವಾಡುತ್ತಾರೆ. ಕೊಳಲು ಮತ್ತು ಶಂಖ ಕೃಷ್ಣನ ಜೀವನದಲ್ಲಿ ಪ್ರಮುಖ ಪಾತ್ರ ವಹಿಸಿದ ಎರಡು ಮುಖವಾದ್ಯಗಳಾದ ಕೊಳಲು ಮತ್ತು ಶಂಖ ಬಗ್ಗೆ ಇದೆ. ಮಥುರೆಗೆ ಬಿಲ್ಲ ಹಬ್ಬಕ್ಕೆ ಹೋಗುವ ಮೊದಲು ಅವನು ಕೊಳಲು ನುಡಿಸುತ್ತಿದ್ದ. ಬಿಲ್ಲಹಬ್ಬದ ಬಳಿಕ ಶಂಖ ನುಡಿಸಲು ತೊಡಗಿದ. ಆದರೆ ಈ ನುಡಿತ ಸಂಗೀತಕ್ಕಾಗಿ ಅಲ್ಲ; ಯುದ್ಧಕ್ಕೆ ಕರೆಯಲು. ನನ್ನ ನಾಟಕ ಅವನ ಅವಸಾನದ ಕೆಲವೇ ಗಳಿಗೆಗಳ ಮೊದಲಿನ ಅವನ ಯೋಚನೆ/ಭಾವನೆಗಳ ಬಗ್ಗೆ ಇದೆ. ಈಗ ಅವನು ಅವನ ಬಾಲ್ಯದ ಮುಖವಾದ್ಯವಾದ ಕೊಳಲನ್ನು ಮತ್ತೆ  ಮತ್ತೆ ನುಡಿಸುತ್ತಾ ಹಳೆಯ ರಾಗಗಳನ್ನು ನೆನಪಿಸಿಕೊಳ್ಳುತ್ತಿದ್ದಾನೆ; ಸೂಚ್ಯವಾಗಿ ಯುದ್ಧಕಾಲದ ತನ್ನ ಮುಖವಾದ್ಯವಾದ ಶಂಖದ ಬಳಕೆಯ ವಿಮರ್ಶೆಯನ್ನೂ ಮಾಡುತ್ತಿದ್ದಾನೆ.

ಸುದರ್ಶನ  ಹೆಸರೇ ಸೂಚಿಸುವಂತೆ ವಿಷ್ಣವಿನ ಆಯುಧವಾದ ಸುದರ್ಶನ ಚಕ್ರ ಕುರಿತ ನಾಟಕ. ಅದರಲ್ಲಿ ಆಯುಧ ದೇವರನ್ನು ಪದಚ್ಯುತಗೊಳಿಸಿ ತಾನೇ ಆಡಳಿತ ನಡೆಸುತ್ತಾನೆ. ಡಾಗ್ ಶೋವೂ ನಾಯಿಗಳು ಮತ್ತು ಡಾಗುಗಳ ಮಧ್ಯದ ಯುದ್ಧದ ವರೆಗೆ ನಡೆಯುತ್ತದೆ. ಜರಾಸಂಧವೂ ಆಯುಧದ  ಉಪಯೋಗ ಕುರಿತ ನಾಟಕ. ರಾಹು ಮತ್ತು ಕೇತುವಿನಲ್ಲಿ ಕೇತು ಶಸ್ತ್ರ ಹಿಡಿದವನು; ಬಲಶಾಲಿ; ಬುದ್ಧಿಜೀವಿಯಾದ, ಮೆದುಳು ಮತ್ತು ಮಾತು ಮಾತ್ರ ಇರುವ ರಾಹು ದುರ್ಬಲ.

ನರಹಳ್ಳಿಯವರ ಮಾತಿನ ಬಗ್ಗೆ ಯೋಚಿಸಿದಾಗ ನಾನು ಮತ್ತೆ ಮತ್ತೆ ಯುದ್ಧ ಮತ್ತು ಅದರ ಪರಿಕರಗಳ ಬಗ್ಗೆ, ಹಿಂಸೆಯ ವಿವಿಧ ರೂಪಗಳ ಬಗ್ಗೆ ಬರೆಯುತ್ತಿದ್ದೇನೆ ಅನ್ನಿಸಿತು. ನಾನಿದನ್ನು ಪ್ರಜ್ಞಾಪೂರ್ವಕವಾಗಿ ಮಾಡುತ್ತಿಲ್ಲ. ನನಗೆ ಗೊತ್ತಿಲ್ಲದಂತೆಯೇ ನನ್ನ ಮನಸ್ಸು ಮತ್ತೆ ಮತ್ತೆ ಈ ವಿಷಯಕ್ಕೆ ಹಿಂದಿರುಗಿ ಅದರ ವಿವಿಧ ಮುಖಗಳ ಬಗ್ಗೆ  ಯೋಚಿಸುತ್ತದೆ. ನಾನೇನೂ ಯುದ್ಧದಲ್ಲಿ ಭಾಗವಹಿಸಿಲ್ಲ. ಯುದ್ಧದ ಅನುಭವಗಳ ಬಗ್ಗೆ  ಪುಸ್ತಕ ಓದಿದ್ದೂ ಕಮ್ಮಿ. ನನ್ನ ಪರಿಚಯದವರಲ್ಲಿ ಯುದ್ಧದಲ್ಲಿ ಭಾಗವಹಿಸಿದವರು ಯಾರೂ ಇಲ್ಲ. ಆದರೂ ಯುದ್ಧದ ಬಗ್ಗೆ ಬರೆಯುವುದು--ಬಹುಶಃ ಇಂದಿನ ಬಹು ದೊಡ್ಡ ವಾಸ್ತವವಾದ ಯುದ್ಧದ ಬಗ್ಗೆ ಯೋಚಿಸದೆ ಇರುವುದು ಯಾರಿಗೂ ಸಾಧ್ಯವಿಲ್ಲ ಅನ್ನಿಸುತ್ತದೆ. ಕಳೆದ ಐವತ್ತು ವರ್ಷಗಳಲ್ಲಿ ಒಂಬತ್ತು ದಿನಗಳು ಮಾತ್ರ ಯುದ್ಧವಿಲ್ಲದ ದಿನಗಳಿದ್ದವು ಎಂದು ಸುಮಾರು 1975ರ ಹೊತ್ತಿಗೆ ಎಲ್ಲಿಯೋ ಓದಿದ ನೆನಪು. ಆನಂತರ ಯುದ್ಧ ಒಂದಿಲ್ಲೊಂದು ಕಡೆ ಆದ ಸುದ್ದಿಯೇ ಬರುತ್ತದೆ ಹೊರತು ಯುದ್ಧ ನಿಂತದ್ದು ಎಂದಿಲ್ಲ. ನಿಂತಿದ್ದರೂ ಅದರ ಬೀಜರೂಪವಾದ ಜಗಳ, ಗೂಢಚಾರಿಕೆ ಮೊದಲಾದವು ನಡೆಯುತ್ತಲೇ ಇರುತ್ತವೆ.

ನಾಗರಿಕತೆ ಬೆಳೆಯಲು ಯುದ್ಧ ಬೇಕಾಗಿಲ್ಲ. ಯುದ್ಧ ಮನುಷ್ಯನ ಆಕ್ರಮಣಕಾರೀ ಪ್ರವೃತ್ತಿಯ ಫಲ. ಎಸ್. ಆರ್. ರಾವ್ ಅವರ ಪ್ರಕಾರ ಹರಪ್ಪಾ ಮೊಹಂಜದಾರೋಗಳಲ್ಲಿ ಒಂದೇ ಒಂದು ಶಸ್ತ್ರ ಸಿಕ್ಕಿಲ್ಲ. ವಾಣಿಜ್ಯ ವ್ಯವಹಾರಗಳಿಂದ ಅಂಥಾ ನಾಗರಿಕತೆಯನ್ನು ಹಿಂದೆಯೇ ಅವರು ಕಟ್ಟಿದ್ದರು ಎಂದಾದರೆ, ಈಗ ಯಾಕೆ ಸಾಧ್ಯ ಆಗಬಾರದು?

No comments:

Post a Comment