Monday, January 31, 2011

ಬೇಸಿಗೆಯ ನಡುಹಗಲು

(ಇದು ನಾನು ಪಂಜ ಹೈಸ್ಕೂಲಿನಲ್ಲಿ ಓದುತ್ತಿದ್ದಾಗ ನನ್ನ ಹದಿನಾರನೇ ವಯಸ್ಸಿನಲ್ಲಿ ಬರೆದ ಪದ್ಯಗಳಲ್ಲಿ ಒಂದು. ಇದು  ಬಾಕಿನ ಸಂಪಾದಿಸಿ ಪ್ರಕಟಿಸುತ್ತಿದ್ದ ಕಾವ್ಯಕ್ಕೆ ಮೀಸಲಾದ ಪತ್ರಿಕೆ ಕವಿತಾದ ಎರಡನೇ ಸಂಚಿಕೆ, ಜೂನ್-ಜುಲೈ 1964ರಲ್ಲಿ ಮೊದಲು ಪ್ರಕಟವಾಯಿತು. ಅದೇ ಸಂಚಿಕೆಯಲ್ಲಿ ರಾಮಚಂದ್ರ ಶರ್ಮರ "ಹೆಸರಗತ್ತೆ", ಜಿ. ಎಸ್. ಶಿವರುದ್ರಪ್ಪನವರ "ಕಾರಿರುಳಲ್ಲಿ" ಎಂಬ ಪದ್ಯ ಕೂಡಾ ಇದ್ದವು. ಆ ಸಮಯದಲ್ಲಿ ನಾನು ಖಾದ್ರಿ ಶಾಮಣ್ಣನವರ ಸಂಪಾದಕತ್ವದಲ್ಲಿ ಪ್ರಕಟವಾಗುತ್ತಿದ್ದ ಗೋಕುಲ ಎಂಬ ವಾರಪತ್ರಿಕೆಯಲ್ಲೂ ತುಂಬಾ ಪದ್ಯ ಪ್ರಕಟಿಸುತ್ತಿದ್ದೆ. ಅವುಗಳಲ್ಲಿ ಹೆಚ್ಚಿನವು ಈಗ ಕಳೆದುಹೋಗಿವೆ).

ದಿಕ್ಕುಗೆಟ್ಟು ಉರಿಗಾರುತಿದೆ ಹುಚ್ಚು ಆಗಸದಲ್ಲಿ ಅಗ್ನಿಗೆಂಡ.
ಹುಟ್ಟಲಿಲ್ಲವೋ ಏನೋ ಭಗೀರಥನೊಬ್ಬ ಇನ್ನೂ ಇವನ ರಾಜ್ಯದಲ್ಲಿ!
ಧೂಳಿನ ಸಾಮ್ರಾಜ್ಯದಲ್ಲಿ ಬಸ್ಸು ಹೊರಟಿದೆ ತೆವಳಿ
ಕುಡಿವ ನೀರನು ಹುಡುಕಿ ಸಮುದ್ರದೆಡೆಗೆ.
ಕೋಟಿ ಕೋಟಿ ವರುಷಗಳ ಹಿಂದಿನ ಸುಮಂಗಲೆಯರೆಲ್ಲ
ನಾಲ್ಕೆ ದಿನದಲ್ಲಿ ಭಸ್ಮೀಭೂತ!
ಸಾರ್ವಜನಿಕ ವಸ್ತು ಪ್ರದರ್ಶನಾಲಯದಲ್ಲಿ
ಕುತ್ತ ನಿಂತಿದೆ ಅಸ್ಥಿಪಂಜರವದೊಂದು.
ತನ್ನ ಹಸಿರು ನಿಶಾನಿಗಾಗಿ ಕೈ ಚಾಚಿ ಬೇಡುತಿದೆ ಉರಿವ ಕೆಂಡವನ್ನು.
ಮೊನ್ನೆ ಮೊನ್ನ ನಗುತಿದ್ದ ಕಂದರನು ನುಂಗಿ ನೀರು ಕುಡಿದಿದೆ ಭೂಮಿ!
ಹಲವು ಚೈತ್ರ ಪುರುಷರನೆ ತಿಂದು ತೇಗಿಹಳೀಕೆ;
ಏನು ಮಾಡಿದರೂ ಹುಟ್ಟು ಗುಣ ಎಲ್ಲಿ ಹೋದೀತು ಹೇಳು....?
ಸಪ್ತಸಾಗರ ಈಜಿ, ಮರಳು ಭೂಮಿಯ ದಾಟಿ,
ಹಸುರ ನಂದನದ ಮಧ್ಯದಲ್ಲಿ
ತಮ್ಮ ಸಾಮ್ರಾಜ್ಯ ಸ್ಥಾಪಿಸಿ ಕೇಕೆ ಹಾಕುತ್ತಿವೆ
ಸ್ಮಶಾನದ ಪ್ರೇತಗಳ ಗುಂಪು!

*        *       *          *


ಕನಸಿನಲಿ ತಿರುಕ ಊರಿನರಸನಾದಂತೆ ಆಗಿದೆ ಈಗ!
ಅಪ್ಸರೆಯ ಮೈಯ್ಯೆಲ್ಲಾ ಒಡೆದು ರಕ್ತ ತೊಟ್ಟಿಕ್ಕುತಿದೆ,
ಮದ್ದು ಮಾಡುವ ವೈದ್ಯ ಬರುವುದಿನ್ನಾವಗಲೋ ಏನೋ!
ಜೇಡಹುಳುವಿನ ಗೆಳೆತನವೆ ವಾಸಿಯೆನಿಸಿದೆ ನನಗೆ
ಹೀಗಾದರೆ ಆಗುವುದೆ ಹೀಗೆ!

*       *         *          *

ಈ ತುಮುಲ ತಂಟೆಯಲಿ ಎದ್ದು ಸಿಡಿದಿದೆ ಬಾಂಬು,
ಎದ್ದೆದ್ದು ಗರ್ಜಿಸಿದೆ ಪ್ರೇತಗಳ ಗುಂಪು!
ಎಂದು ಮುಕ್ತಿಯೊ ನಮಗಿವನಿಂದ?
ಯಾವಾಗಲೋ ಹೊಸತು ಆಡಳಿತದಾರಂಭ?
ಎಷ್ಟು ದಿವಸಗಳಾಯ್ತು ಹೀಗೆ, ಅವ್ಯವಸ್ಥೆ?
ಮುಗಿಯಬಾರದೆ ಬೇಗ ಈ ಹುಚ್ಚುದೊರೆಯ ಕಾರುಭಾರ!

No comments:

Post a Comment