Wednesday, January 19, 2011

ಆತ್ಮಕಥನ 6


 (ನನ್ನ ಮನೆ ಅಂಗಳದ ಒಂದು ಚಿತ್ರ. ಚಿತ್ರದಲ್ಲಿರುವುದು ನಾನು, ನನ್ನ ಮಗಳು, ಹಾಗೂ ಅವಳ ಅತ್ತೆ-ಮಾವ)

ನನಗೆ ಕೊಳಲು ಮತ್ತು ಶಂಖ ಬರೆದಾಗ ಹೀಗೆ ಧ್ವನಿಯ ಏರಿಳಿತಗಳ ಮೂಲಕವೇ ರಂಗಾನುಭವ ಉಂಟು ಮಾಡುವ ಒಂದು ನಾಟಕ ಬರೆಯಬೇಕೆಂಬ ಉದ್ದೇಶವಿತ್ತು. ಕೆಲವರು ಸ್ನೇಹಿತರು ಅದರಲ್ಲಿ ಏಕ್ಷನ್ ಇಲ್ಲ ಎಂದರು. ಕೃಷ್ಣನ ಕಾಲಿಗೆ ಬೇಡನ ಬಾಣದಿಂದ ಪೆಟ್ಟಾಗಿ ನಡೆಯಲು ಅಸಾಧ್ಯವಾಗುತ್ತಿರುವ ಸನ್ನವೇಶದಿಂದಲೇ ನಾಟಕ ಪ್ರಾರಂಭವಾಗುತ್ತದೆ. ಕ್ಷಣ ಕ್ಷಣಕ್ಕೆ ಅವನಿಗೆ ನಡೆಯುವುದು--ಹೀಗಾಗಿ ಕ್ರಿಯೆ--ಅಸಾಧ್ಯವಾಗುತ್ತದೆ. ಹೀಗಿರುವಾಗ ಏಕ್ಷನ್ ಇರಲು ಹೇಗೆ ಸಾಧ್ಯ? ಕ್ರಿಯೆ ಅಸಾಧ್ಯವಾಗುತ್ತ ಹೋದಂತೆ ಧ್ವನಿಯನ್ನು, ಕೊಳಲನ್ನು, ಹಿಂದಿನ ನೆನಪುಗಳನ್ನು ಕೃಷ್ಣ ಆಶ್ರಯಿಸಬೇಕಾಗುತ್ತದೆ. ಈ ದೃಷ್ಟಿಯಿಂದ ನೋಡಿದಾಗ ಏಕ್ಷನ್ ಮೂಲಕ ಅಲ್ಲ, ಧ್ವನಿಯ ಮತ್ತು ಕೊಳಲ ಧ್ವನಿ ತರಂಗಗಳ ಮೂಲಕ ಈ ನಾಟಕ ಆಡಬೇಕು ಎನ್ನುವುದು ಹೊಳೆದೀತು. ಆದರೂ ಅದರಲ್ಲಿ ನರ್ತನಕ್ಕೆ, ಯುದ್ಧದೃಶ್ಯಕ್ಕೆ ಸಾಕಷ್ಟು ಅವಕಾಶ ಇದೆ. ನಾಟಕದ ಆಶಯ ಸರಿಯಾಗಿ ವ್ಯಕ್ತವಾಗಬೇಕಾದರೆ ಈ ದೃಶ್ಯಗಳನ್ನು ಲೋ ಕೀಯಲ್ಲಿ ತೋರಿಸುವುದು ಅಗತ್ಯ. ಅಥವಾ ಹಿಂದೆಂದೋ ನಡೆದುಹೋದ ಈ ಘಟನೆಗಳಿಗೂ ಇಂದು ಅವುಗಳ ಬಗ್ಗೆ ಯೋಚಿಸುತ್ತಾ ಕೂತ ಕೃಷ್ಣನಿಗೂ ಇರುವ ವ್ಯತ್ಯಾಸ ಸ್ಪಷ್ಟವಾಗುವ ಹಾಗೆ ದೃಶ್ಯಗಳನ್ನು ಯೋಜಿಸಬೇಕು.

ಅಲ್ಲದೆ ಏಕ್ಷನ್ ಬೇರೆ ಏಕ್ಟಿಂಗ್ ಬೇರೆ. ಏಕ್ಷನ್ ಇಲ್ಲದಿದ್ದರೂ ಏಕ್ಟಿಂಗ್ ಇರಬಹುದು. ಮೌನವಾಗಿ ನಿಶ್ಚಲವಾಗಿ ಕೂತುಕೊಳ್ಳುವುದೇ ಅತ್ಯಂತ ಕಷ್ಟದ ಏಕ್ಟಿಂಗ್--ಅದರಲ್ಲಿ ಏಕ್ಷನ್ ಇಲ್ಲದಿದ್ದರೂ. ಅನೇಕ ಸಲ ರಂಗಕರ್ಮಿಗಳು ತಮ್ಮ ಏಕ್ಟಿಂಗಿನ ಅಭಾವವನ್ನು ಏಕ್ಷನ್ನಿನಿಂದ ಮುಚ್ಚಿಕೊಳ್ಳಲು ಪ್ರಯತ್ನಿಸುತ್ತಾರೆ. ಅಗತ್ಯವಿಲ್ಲದಿದ್ದರೂ ರಂಗಕರ್ಮಿಗಳು ಒಂದು ಡಾನ್ಸ್, ಒಂದು ಚಲನೆ ಹಾಕುವುದು ಏಕ್ಟಿಂಗಿನ ಅಭಾವ ಮುಚ್ಚಿಕೊಳ್ಳಲು ಎಂದು ನನಗೆ ಮೇಲಿಂದ ಮೇಲೆ ಅನ್ನಿಸಿದೆ. ಹಾಗೆಯೇ ಕೆಲವರು ರಂಗಕರ್ಮಿಗಳಲ್ಲಿ ನಾನು ಗಮನಿಸಿದ ಇನ್ನೊಂದು ಅಂಶವೆಂದರೆ ಪದಗಳ ಬಗೆಗಿನ ನಿರ್ಲಕ್ಷ್ಯತೆ. ನಿರ್ದೇಶಕರೊಬ್ಬರು ನನ್ನ ರಥಮುಸಲ ಆಡಿಸಿದಾಗ ನಾನಿದನ್ನು ಸ್ಪಷ್ಟವಾಗಿ ಗಮನಿಸಿದೆ. ಅದರಲ್ಲಿ ಬೇರೊಬ್ಬರು ಬರೆದ ಕೆಲವು ಹಾಡುಗಳನ್ನು ಸೇರಿಸಿದ್ದರು. ಅಂಥಾ ಹಾಡುಗಳ ಒಂದು ಸಾಲು "ತಂಗಾಳಿ ಪಲ್ಲಕ್ಕಿ ಏರಿ ಬರಲಿ". ನೀರು ಈಗಾಗಲೇ ಫ್ಲೈಟಿನಲ್ಲಿ, ಆಹಾರ ಧಾನ್ಯ ಹಡಗಿನಲ್ಲಿ ಬರುತ್ತಿದೆ. ತಂಗಾಳಿಯೊಂದು ಬಿಟ್ಟಿ ಸಿಗುತ್ತಿದೆ. ಅದೂ ಪಲ್ಲಕ್ಕಿ ಏರಿ ಬರಲು ಸುರು ಮಾಡಿದರೆ ಜನತೆಯ ಪಾಡೇನು? ಅಲ್ಲದೆ ಪ್ರಜಾಪ್ರಭುತ್ವವನ್ನು ಎತ್ತಿ  ಹಿಡಿಯುವ ನಾಟಕದ ಆಶಯಕ್ಕೆ ಈ ಸಾಲು ವಿರೋಧ. ಅದೇ ಪ್ರಯೋಗದಲ್ಲಿ, ಪಿಂಗಳೀಕ ಕೊನೆಯಲ್ಲಿ ವೈಶಾಲಿ ಬಿಟ್ಟು ಓಡಿಹೋಗುವಾಗ ಸೈನ್ಯ ಜಮಾಯಿಸಿ ಮತ್ತೆ ನಮ್ಮ ಸಾಮ್ರಾಜ್ಯ ವಿಸ್ತರಿಸುತ್ತೇವೆ ಎನ್ನುತ್ತಾನೆ. ಈ ಮಾತು ನನ್ನ ನಾಟಕದಲ್ಲಿ ಇಲ್ಲ. ನಟ ಮಾತು ಮರೆತು, ಮರೆತದ್ದನ್ನು ತುಂಬಿಕೊಳ್ಳಲೆಂದು ಸಾಮ್ರಾಜ್ಯ ವಿಸ್ತರಿಸುತ್ತೇನೆ ಅಂದಿರಬಹುದು. ಆದರೆ, ನಟ ನಾಟಕವನ್ನು ಕೇರ್ಫುಲ್ ಆಗಿ ಓದಿದ್ದರೆ ಸಾಮ್ರಾಜ್ಯ ವಿಸ್ತರಣೆಯ ಮಾತು ಆಡುತ್ತಿರಲಿಲ್ಲ. ಯಾಕೆಂದರೆ ಇಡೀ ನಾಟಕವೇ ಸಾಮ್ರಾಜ್ಯ ವಿಸ್ತರಣೆಯ ವಿರೋಧಿ, ಮತ್ತು ಪಿಂಗಳೀಕ ಲೇಖಕನ ಆಶಯಗಳನ್ನು ಪ್ರತಿನಿಧಿಸುವ ಪಾತ್ರಗಳಲ್ಲೊಂದು. ಆದರೆ ಹೀಗೆ ನಾಟಕವನ್ನು ಕೇರ್ಫುಲ್  ಆಗಿ ಓದುವವರೇ ಕಮ್ಮಿ. ಸುಬ್ಬಣ್ಣ, ಬಿ. ವಿ. ಕಾರಂತರು, ವಿ. ರಾಮಮೂರ್ತಿ ಮೊದಲಾದ ಕೆಲವರು--ಹೊಸಬರಲ್ಲಿ  ಅಕ್ಷರ, ನಟರಾಜ ಹೊನ್ನವಳ್ಳಿ, ಲಕ್ಷ್ಮಿ ಚಂದ್ರಶೇಖರ್, ಇಕ್ಬಾಲ್ ಅಹಮದ್ ಮತ್ತು ಇನ್ನು ಕೆಲವರು--ಕಾವ್ಯದ ಓದಿನಲ್ಲಿಯೂ ನುರಿತವರು---ಮಾತ್ರ ಹೀಗೆ ಓದುತ್ತಾರೆ ಅನ್ನಬಹುದು. ಇಂದಿನ ಬಹುತೇಕ ರಂಗಕರ್ಮಿಗಳಿಗೆ ದೃಶ್ಯ ಸಾಧ್ಯತೆಗಳ ಬಗ್ಗೆ ಮಾತ್ರ ಗಮನವಿರುತ್ತದೆ. ಆದರೆ ಎಲ್ಲಾ ಮುಖ್ಯ ನಾಟಕಗಳನ್ನು ಲೇಖಕರು ದೃಶ್ಯ ಸಾಧ್ಯತೆಗಳನ್ನು  ಹೇಗೋ ಹಾಗೇ ಶ್ರವ್ಯ ಸಾಧ್ಯತೆಗಳನ್ನೂ ಗಮನದಲ್ಲಿಟ್ಟು ಕಟ್ಟಿರುತ್ತಾರೆ. ಎರಡೂ ಅವರು ಹೇಳಬಯಸುವುದನ್ನು ಪರಿಣಾಮಕಾರಿಯಾಗಿ ಹೇಳಲು ದುಡಿಯುತ್ತವೆ. ಆಂಗಿಕಗಳಷ್ಟೇ ಮಾತು--ಅಲ್ಲಿ ಬಳಸಿದ ಪದಗಳು--ಅದೇ ಪದ, ಪರ್ಯಾಯವಾಗಿ ನಟರಿಗೆ ರಂಗದ ಮೇಲೆ ಹೊಳೆದ ಇನ್ನೊಂದು ಪದ ಅಲ್ಲ--ಮುಖ್ಯ. ಇದನ್ನು ಅರಿಯದ ರಂಗಕರ್ಮಿಗಳು ಒಳ್ಳೆಯ ನಾಟಕಗಳ ಎಂಥಾ ನೋಡಲರ್ಹ ಪ್ರದರ್ಶನ ಮಾಡಿದರೂ ನನಗೆ ಅದರಿಂದ ಸಂತೋಷ ಆಗುವುದಿಲ್ಲ.  ಅದರಿಂದ ಖುಷಿ ಸಿಕ್ಕಬಹುದು; ಆನಂದವಲ್ಲ. ಅರಿವು ಬೆರೆತ ಆನಂದವಂತೂ ಖಂಡಿತ ಅಲ್ಲ. ಮತ್ತು ಒಳ್ಳೆಯ ಕಲೆ ನಮಗೆ ಅರಿವು ಬೆರೆತ ಆನಂದ ಕೊಡುತ್ತದೆ.

ನಾನು  ವಿದ್ಯಾರ್ಥಿಯಾಗಿದ್ದಾಗ ಮೈಸೂರಿನಲ್ಲಿ ಅಮೆಚೂರ್ ನಾಟಕ ಆಡುವುದಕ್ಕೆ ಇದ್ದದ್ದು ಎರಡೇ ಹಾಲುಗಳು. ಒಂದು, ಮಹಾರಾಜಾ ಕಾಲೇಜು ಶತಮಾನೋತ್ಸವ ಭವನ; ಇನ್ನೊಂದು ಗಂಗೋತ್ರಿಯ ಹ್ಯುಮೇನಿಟೀಸ್ ಸಭಾಂಗಣ. ಅದಕ್ಕೆ ಹಿಂದೆ ಸಿ. ಡಿ. ನರಸಿಂಹಯ್ಯನವರು ಮಹಾರಾಜಾ ಕಾಲೇಜು ಪ್ರಿನ್ಸಿಪಾಲರಾಗಿದ್ದಾಗ ರತ್ನ, ವಿಶ್ವನಾಥ ಮಿರ್ಲೆ ಮೊದಲಾದ ಆಗಿನ ವಿದ್ಯಾರ್ಥಿಗಳು ಜೂನಿಯರ್ ಬಿ. ಎ. ಹಾಲಿನಲ್ಲಿ ನಾಟಕ ಆಡುತ್ತಿದ್ದರಂತೆ. ಅದಂತೂ ಪಾಠ ಮಾಡುವುದಕ್ಕೆಂದೇ ರಚಿತವಾದ ಪಲ್ಪಿಟ್. ಆಗಿನ ರಂಗಾಸಕ್ತರು ಲಭ್ಯವಿರುವ ಅವಕಾಶಗಳನ್ನೇ ಬಳಸಿ ನಾಟಕ ಆಡಿದ್ದರು.

ಈಗ ಮೈಸೂರಿನಲ್ಲಿ ಇರುವ ಎಲ್ಲಾ ರಂಗಮಂದಿರಗಳು ಆ ಮೇಲೆ ನಿರ್ಮಿತವಾದವು. ಶತಮಾನೋತ್ಸವ ಭವನ, ಹ್ಯುಮೇನಿಟೀಸ್ ಬ್ಲಾಕ್ ಆಡಿಟೋರಿಯಂ ಕೂಡಾ ರಂಗಮಂದಿರಗಳಲ್ಲ; ಸಭಾಂಗಣಗಳು. ಆದರೂ ಅನಿವಾರ್ಯವಾಗಿ ಅವುಗಳನ್ನೇ ಅಳವಡಿಸಿಕೊಂಡು ನಾಟಕ ಆಡಬೇಕಾಗುತ್ತಿತ್ತು. ಹ್ಯುಮೇನಿಟೀಸ್ ಬ್ಲಾಕ್ ಹಾಲಿನಲ್ಲಿ ನನ್ನ ಸ್ನೇಹಿತ ಬಸವರಾಜು ಮತ್ತೊಬ್ಬರು ಸೇರಿ ಫ್ರೆಂಚ್ ನಾಟಕಕಾರ ಶೀನ್ ಶೆನೆಯ  ಡೆಥ್ ವಾಚ್  ಆಡಿದ್ದರು. ತುಂಬಾ ಭಿನ್ನ  ಪರಿಸರ, ಸಂದರ್ಭಗಳಿಂದಾಗಿ ಅದು ನನ್ನ ಮೇಲೆ ಪರಿಣಾಮ ಬೀರಲಿಲ್ಲ. ವಿದ್ಯಾರ್ಥಿಗಳ ಒಂದು ನಾಟಕ ಸ್ಪರ್ಧೆಯಲ್ಲಿ ಲಂಕೇಶರ ಕತೆ "ಕುರುಡು ಕಾಂಚಾಣ"ವನ್ನು ಒಂದು ಕಾಲೇಜು ತಂಡದವರು ನಾಟಕವಾಗಿ ಪರಿವರ್ತಿಸಿ ಶತಮಾನೋತ್ಸವ ಭವನದಲ್ಲಿ ಆಡಿದ್ದರು. ಹೃದಯ ಕಲಕಿದ ಅಭಿನಯ ಅದು. ಹುಡುಗನೇ ಹುಡುಗಿಯ ಪಾರ್ಟು ಮಾಡಿದ್ದರೂ ನಾಟಕದಲ್ಲಿದ್ದ ಇಂಟೆನ್ಸಿಟಿಯಿಂದಾಗಿ ಕೃತಕ ಅನ್ನಿಸಲಿಲ್ಲ. ಸ್ಪರ್ಧೆಯ ಬೇರೆ ನಾಟಕ ಆಡುತ್ತಿದ್ದಾಗ ಗಲಭೆ ಮಾಡುತ್ತಿದ್ದ ಪ್ರೇಕ್ಷಕರೂ ಈ ನಾಟಕವನ್ನು ಮೌನವಾಗಿ ಕೂತು ನೋಡಿದರು. ಅದು ಯಾವ ಕಾಲೇಜಿನದ್ದೆಂದು ಈಗ ಮರೆತಿದೆ. ಆದರೆ ಆಗ ಆ ನಾಟಕ ಆಡಿದವರಲ್ಲಿ ಕೆಲವರಾದರೂ ಇಂದು ರಂಗಭೂಮಿಯಲ್ಲಿ, ಅಥವಾ ಬೇರೆ ದೃಶ್ಯಮಾಧ್ಯಮದಲ್ಲಿ ದೊಡ್ಡ ಹೆಸರು ಮಾಡಿದವರಿರಬಹುದು.

ಆನಂತರ ನಾನು ಬೇರೆ ಬೇರೆ ಊರುಗಳಲ್ಲಿ ಬೇರೆ ಬೇರೆ ಭಾಷೆಯ ನಾಟಕ ನೋಡಿದ್ದೇನೆ. ಆದರೆ ರಂಗಭೂಮಿ, ನಾಟಕಗಳ ಮೇಲೆ ನನ್ನ ಆಸಕ್ತಿ ಬೆಳೆಯುತ್ತಿದ್ದ ವರ್ಷಗಳಲ್ಲಿ, ನನಗಿನ್ನೂ ಇಪ್ಪತ್ತು ವರ್ಷ ಆಗುವ ಮೊದಲೇ ನೋಡಿದ ಈ ನಾಟಕಗಳು, ಆಗ ಅವು ಹುಟ್ಟಿಸಿದ ಯೋಚನೆ--ಭಾವನೆಗಳು ಮನಸ್ಸಿನಲ್ಲಿ ಫ್ರೆಶ್ಶಾಗಿವೆ. ಅವು ಅಷ್ಟೊಂದು ಪರಿಣಾಮ ಬೀರಿದ್ದು ಕೂಡ ನನ್ನ ಮನಸ್ಸು ಹಸಿಮಣ್ಣಿನ ಗೋಡೆಯಂತೆ ಇದ್ದದ್ದರಿಂದ ಇರಬಹುದು.

**************


ಬೋಧಿ ಟ್ರಸ್ಟ್, ಕಲ್ಮಡ್ಕ 574212, ಕರ್ನಾಟಕ--ಇದರ ಪುಸ್ತಕಗಳು ಮಾರಾಟಕ್ಕೆ ಸಿಗುತ್ತವೆ. ನಿಮಗೆ ಬೇಕಾದ ಪುಸ್ತಕಗಳ ಮೊತ್ತವನ್ನು Bodhi Trust, Canara Bank SB Account no. 1600101008058, Yenmur 574328, Dakshina Kannada District, Karnataka, IFSCCNRB0001600--ಇಲ್ಲಿಗೆ ಜಮೆ ಮಾಡಿ ನಿಮ್ಮ ವಿಳಾಸವನ್ನು ಅಂಚೆ ಮೂಲಕ ಅಥವಾ bodhitrustk@gmail.comಗೆ ಇಮೇಲ್ ಮಾಡಿ ತಿಳಿಸಿದರೆ ಪುಸ್ತಕಗಳನ್ನು ನಮ್ಮ ವೆಚ್ಚದಲ್ಲಿ ಕಳಿಸುತ್ತೇವೆ. ಇವು ಮಾರಾಟಕ್ಕೆ ಲಭ್ಯವಿರುವ ಪುಸ್ತಕಗಳು:
1. ಸಮಗ್ರ ನಾಟಕಗಳು, ಸಂಪುಟ 2. ರೂ60.00
2. ಸಮಗ್ರ ನಾಟಕಗಳು, ಸಂಪುಟ 3. ರೂ75.00
3. ಮಾತಾಡುವ ಮರ, ಸಮಗ್ರ ಕಾವ್ಯ, 1964-2003. ರೂ100.00
4. ಹ್ಯಾಮ್ಲೆಟ್. ಶೇಕ್ಸ್ಪಿಯರ್ ಅನುವಾದ. ರೂ50.00
5. ಮುಚ್ಚು ಮತ್ತು ಇತರ ಲೇಖನಗಳು. ರೂ60.00  (ಇದರಲ್ಲಿ ವಡ್ಡಾರಾಧನೆ, ಮಹಾಭಾರತ, ಮಾತಾಡುವ ಮರ ಕುರಿತ ಪೇಂಟಿಂಗ್ ಮತ್ತು ಜಾನಪದ ಕತೆ, ವಸಾಹತುಶಾಹಿ, ಶಿವರಾಮ ಕಾರಂತರ ಕಾದಂಬರಿಗಳು, ಅಡಿಗರ ಕಾವ್ಯ ಮೊದಲಾದ ವಿಷಯ ಕುರಿತ ಲೇಖನಗಳಿವೆ)

No comments:

Post a Comment