Saturday, January 22, 2011

ಆತ್ಮಕಥನ 9

(ನನ್ನ ಅಭ್ಯಾಸದ ಕೋಣೆ. ಫೊಟೋ ಫ್ರೇಮಿನಲ್ಲಿರುವುದು ನನ್ನ ಮಗಳು ರೋಶ್ನಿ ಮತ್ತು ಅಳಿಯ ಡಾ. ನವೀನ್ ಶರ್ಮ. ರೋಶ್ನಿ ದಂತವೈದ್ಯೆ, ನವೀನ್ ವಿಜ್ಞಾನಿ.)

ಏವಂ ಇಂದ್ರಜಿತ್  ನಾಟಕ ನಿರ್ದೇಶನಕ್ಕೆ ಹಿಂದಿರುಗುತ್ತೇನೆ.

ಆ ನಾಟಕ ನಿರ್ದೇಶನದ ಸಮಯದಲ್ಲಿ ನನಗಾದ ಸೃಜನಶೀಲತೆಯ ಅನುಭವ ಒಂದು ಪದ್ಯ ಅಥವಾ ಕತೆ ಬರೆಯುವಾಗ ಆದದ್ದಕ್ಕಿಂತ ಬೇರೆಯಲ್ಲ. ನನ್ನ ಮನಸ್ಸಿನೊಳಗೆ ಏನಿದೆ ಎನ್ನುವುದನ್ನೂ ಅದನ್ನು ಯಾವ ರೀತಿ ಪರಿಣಾಮಕಾರಿಯಾದ ವಿವರಗಳ ಮೂಲಕ ರೂಪಿಸಬಹುದು ಎಂಬುದನ್ನೂ ನಾನು ನಿರ್ದೇಶನದ ಸಮಯದಲ್ಲೇ ಪತ್ತೆ ಮಾಡಿಕೊಳ್ಳುತ್ತಾ ಹೋದೆ. ಬಹುಶಃ ನಾಟಕ ನಿರ್ದೇಶನವನ್ನೇ ನಾನು ಕೆರಿಯರ್ ಆಗಿ ತೆಗೆದುಕೊಂಡಿದ್ದರೂ ಪದ್ಯ ಅಥವಾ ಕತೆ ಅಥವಾ ನಾಟಕ ಬರೆಯವಾಗ ಅನುಭವಿಸುವ ಸೃಜನಶೀಲತೆಯ ಅನುಭವವನ್ನೇ ಪಡೆಯುತ್ತಿದ್ದೆ. ಒಂದೇ ವ್ಯತ್ಯಾಸವೆಂದರೆ ಸಾಹಿತ್ಯ ಕೃತಿಗಳಲ್ಲಿ ಪದಗಳ ಮೂಲಕ ಸೃಜನಶೀಲತೆಯ ಅನುಭವ ಪಡೆದರೆ ನಾಟಕ ನಿರ್ದೇಶನದಲ್ಲಿ ಅದನ್ನು ನಟರು, ಲೈಟಿನವ, ಹಿನ್ನೆಲೆ ಸಂಗೀತಗಾರ ಮೊದಲಾದವರನ್ನು ಬಳಸಿ ಪಡೆಯಬೇಕಾಗುತ್ತದೆ. ಆಗಲೇ ಹೇಳಿದದಂತೆ, ನಾನು ಹೆಚ್ಚು ಒಂಟಿಯಾಗಿರಲು ಬಯಸುವವ. ನನ್ನ ಈ ಸ್ವಭಾವಕ್ಕೆ ಒಗ್ಗುವುದು ಪೆನ್ನು, ಪೇಪರು, ನನ್ನ ಮನಸ್ಸು ಮತ್ತು ಅಗಾಧ ಸಾಧ್ಯತೆಗಳ ಈ ಸಮೃದ್ಧ ಈ ಜಟಿಲ ಈ ಸರಳ ಕನ್ನಡ ಭಾಷೆಯಲ್ಲಿ ನನಗೆ ದಕ್ಕಿದಷ್ಟರ ಜೊತೆ ಒಂಟಿಯಾಗಿ ಕೂತು ಮಾಡುವ ಬರೆವಣಿಗೆಯ ಕೆಲಸ ಮಾತ್ರ. ಆದರೆ, ಒಂದು ಭಾಷೆಯ ಜೊತೆ ಲೇಖಕನೊಬ್ಬ ಒಂಟಿಯಾಗಿ ಕೂತರೆ ಆತ ಒಂಟಿಯಾಗಿ ಇರುವುದಿಲ್ಲ. ಅವನ ಜೊತೆ ಆ ಭಾಷೆ ಹೊತ್ತುಕೊಂಡ ಭೂತಕಾಲ, ವರ್ತಮಾನಕಾಲ, ಮತ್ತು ಅದು ಮುಂಚಾಚಿ ಕಾಣುವ ಭವಿಷ್ಯತ್ಕಾಲ ಸೇರಿಕೊಳ್ಳುತ್ತವೆ.

ಸೃಜನಶೀಲತೆಯ ಅನುಭವ ಒಬ್ಬ ಒಳ್ಳೆಯ ಸಂಗೀತಗಾರ ಅಥವಾ ಚಿತ್ರಕಾರನಿಗೆ ಆಗುವಂಥಾದ್ದು ಕೂಡಾ ಹೀಗೇ ನಿರ್ದೇಶಕನಿಗೆ ಅಥವಾ ನಟನಿಗೆ ಆಗುವಂಥಾದ್ದೇ ಇರಬಹುದು. ಅದಕ್ಕೆ ವಿರುದ್ಧವಾದ್ದೆಂದರೆ ಒಬ್ಬ ಕುಶಲ ಕೆಲಸಗಾರನ ಕೃತಿನಿರ್ಮಾಣ. ಕುಶಲ ಕೆಲಸಗಾರ ಕೃತಿನಿರ್ಮಾಣದ ಹೊತ್ತಿನಲ್ಲೇ ಹೊಸತೇನನ್ನೂ ಪತ್ತೆ ಮಾಡಿರುವುದಿಲ್ಲ. ಈಗಾಗಲೇ ಒಪ್ಪಿತವಾದ ನಿಯಮಗಳಿಗೆ, ಮಾದರಿಗಳಿಗೆ ಅನುಗುಣವಾಗಿ ಒಪ್ಪಿತವಾದ ರೀತಿಯಲ್ಲಿ ಜನಕ್ಕೆ ಬೇಕಾದ್ದನ್ನ ಉತ್ಪಾದಿಸಿರುತ್ತಾನೆ, ಅಷ್ಟೆ. ಮೊದಲ ಸಲ ಒಂದು ಮೇಜನ್ನು ಸೃಷ್ಟಿಸಿದವನಿಗೂ ಆನಂತರ ಅನೇಕ ಮೇಜುಗಳನ್ನು ಮಾಡಿ ಮಾರಾಟ ಮಾಡುವ ಬಡಗಿಗೂ ಇರುವ ವ್ಯತ್ಯಾಸಕ್ಕೆ ಇದನ್ನು  ಹೋಲಿಸಬಹುದು. ಮೊದಲ ಸಲ ಮೇಜನ್ನು--ಅಥವಾ ಇನ್ನು ಯಾವುದೇ ವಸ್ತುವನ್ನು--ಸೃಷ್ಟಿಸಿದವ ಪ್ರತಿಭಾವಂತ; ಆನಂತರ ಅಂಥಾದ್ದನ್ನು ಉತ್ಪಾದಿಸಿಕೊಂಡು ಹೋದವ ಬಡಗಿ.

ನನ್ನ ನಿರ್ದೇಶನದ ಏವಂ ಇಂದ್ರಜಿತ್ ನ ಮೊದಲ ಪ್ರಯೋಗ ಬಿ. ಆರ್. ಪ್ರಾಜೆಕ್ಟಿನಲ್ಲಿ ನಡೆಯಿತು. ಪ್ರಯೋಗ ಚೆನ್ನಾಗಿತ್ತೆಂದು ನೋಡಿದ ಅನೇಕರು ಹೇಳಿದರು. ಸಾಕಷ್ಟು ಜನ ಪ್ರೇಕ್ಷಕರೂ ಬಂದಿದ್ದರು. ನಾಟಕಕ್ಕೆ ಟಿಕೇಟು ಇಡಲಾಗಿತ್ತು--ನಾಮ ಕೆ ವಾಸ್ತೆ. ಬಿಟ್ಟಿ ನಾಟಕ  ತೋರಿಸಬಾರದು, ಅದನ್ನು ಆಗ ಜನ ಗಂಭಿರವಾಗಿ ತೆಗೆದುಕೊಳ್ಳುವುದಿಲ್ಲ ಎಂಬ ಆಧುನಿಕ ರಂಗಚಳವಳಿಯ ಅಂಗವಾಗಿ. ನಾಟಕ ಇನ್ನೇನು ಮುಗಿಯಲಿದೆ ಎನ್ನುವಾಗ ಕೆಲವರು ಗೇಟಿನ ಹತ್ತಿರ ಸೇರಿ ಇಷ್ಟರ ವರೆಗೆ ಇಲ್ಲಿ ಟಿಕೇಟಿಲ್ಲದೆ ನಾಟಕ ಆಡುತ್ತಿದ್ದರು, ನೀವು ಟಿಕೇಟಿಟ್ಟು ನಾಟಕ ಆಡಿ ಹಣ ಮಾಡಲು ನೋಡುತ್ತಿದ್ದೀರಿ ಎಂದು ಗಲಾಟೆ ಮಾಡಿದರಂತೆ. ಗೇಟಿನ ಹತ್ತಿರ ಇದ್ದವರು ಏನೋ ಸಬೂಬು ಹೇಳಿ ಆಗ ಅವರನ್ನು ಸಾಗಹಾಕಿದರು. ನನಗೆ ಇದು ಗೊತ್ತಾದ್ದು ನಾಟಕ ಮುಗಿದು ನಟ ನಟಿಯರು ವೇಷ ಬಿಚ್ಚಿ ಮನೆಗೆ ಹೊರಡುವ ಹೊತ್ತಲ್ಲಿ. ಆ ನಾಟಕ ಹಣ ಮಾಡುವುದಿರಲಿ--ನನ್ನ ಕೈಯ್ಯಿಂದಲೇ ಸಾಕಷ್ಟು ಖರ್ಚಾಗಿತ್ತು. ನಾಟಕದಲ್ಲಿ ತೊಡಗಿಕೊಂಡ ವಿದ್ಯಾರ್ಥಿಗಳಿಗೂ ಓಡಾಟ ಕಾಫಿ ತಿಂಡಿ ಎಂದು ಸಾಕಷ್ಟು ಹಣ ಕೈಯ್ಯಿಂದ ಹೋಗಿರಬಹುದು. ಆದರೂ ನಾಟಕ ಆಡಿ ಹಣ ಮಾಡಲು ಹೊರಟಿದ್ದೇವೆ ಎಂಬ ಆಪಾದನೆಯನ್ನು ನಾವು ಅಲ್ಲಿ ಕೆಲವರಿಂದಲಾದರೂ ಕೇಳಬೇಕಾಯಿತು.

ಈ ನಾಟಕದ ಎರಡನೆಯ ಪ್ರಯೋಗ ಕೆಲವು ದಿನಗಳ ಬಳಿಕ ಶಿವಮೊಗ್ಗದಲ್ಲಿ ಕರ್ನಾಟಕ ಸಂಘದಲ್ಲಿ ನಡೆಯಿತು. ಕರ್ನಾಟಕ ಸಂಘದ ಹಾಲಿನಲ್ಲಿ ಎಕೋ ಹೊಡೆಯುತ್ತದೆ. ಎಕೋ ತಡೆಯುವುಕಕ್ಕೆಂದು ಮಾಡಿಗೆ ಕೆಲವು ಮಡಿಕೆಗಳನ್ನು ಕವುಚಿ ಕಟ್ಟಿದ್ದರು. ಇದು ಎಕೋ ತಡೆಯುವ ಒಂದು ಜಾನಪದೀಯ ಕ್ರಮ. ನಾವು ನಾಟಕಕ್ಕೆಂದು ಹಾಲ್ ಬುಕ್ ಮಾಡಿದಾಗ ಮಡಿಕೆಗಳು ಇದ್ದವು. ನಾಟಕಕ್ಕೆ ಇನ್ನೇನು ಒಂದು ದಿವಸ ಇದೆ ಎನ್ನುವಾಗ ಮಡಿಕೆಗಳನ್ನೆಲ್ಲಾ ತೆಗೆದಿದ್ದರು. ನಾಟಕ ಕೆಡಿಸುವುದಕ್ಕಾಗಿ ಇದನ್ನು  ಬೇಕೆಂದೇ ಮಾಡಿದ್ದಾರೆ ಎಂದು ಆ ಮೇಲೆ ನನಗೆ ಯಾರೋ ಹೇಳಿದರು. ಇದ್ದರೂ ಇರಬಹುದು. ಅಥವಾ ಕರ್ನಾಟಕ ಸಂಘದ ವ್ಯವಸ್ಥಾಪಕರ ಗಮನಕ್ಕೆ ಬಾರದೆ ಯಾರೋ ಕೆಲಸದವರು ಮಡಿಕೆಗಳ ಪ್ರಾಮುಖ್ಯತೆ ಗೊತ್ತಿಲ್ಲದೆ ಮಾಡಿದ ಕೆಲಸ ಇರಲೂ ಬಹುದು. ಮೊದಲೇ ಈ ವಿಚಾರ ಗೊತ್ತಾಗಿದ್ದರೆ ಮಡಿಕೆಗಳನ್ನು ನಾಟಕ ಮುಗಿದ ನಂತರ ತೆಗೆಯಿರೆಂದು ನಾನೇ ಪದಾಧಿಕಾರಿಗಳ ಹತ್ತಿರ ಹೋಗಿ ವಿನಂತಿಸಿಕೊಳ್ಳುತ್ತಿದ್ದೆ. ಬೇಂದ್ರೆಯವರ ನಾದಲೀಲೆ   ಪ್ರಕಟಿಸಿದಂಥಾ ಶ್ರೇಷ್ಠ ಪರಂಪರೆಯುಳ್ಳ ಕರ್ನಾಟಕ ಸಂಘ ನನ್ನ ವಿನಂತಿಯನ್ನು ಕಡೆಗಣಿಸುತ್ತಿರಲಿಲ್ಲ. ಅಂತೂ ಪ್ರತಿಧ್ವನಿ ಹೊಡೆದು ಅವತ್ತು ನಾಟಕ ಕೆಟ್ಟದ್ದು ನಿಜ. ಬಿ. ಆರ್. ಪ್ರಾಜೆಕ್ಟ್ ನ ಮೊದಲ ಪ್ರಯೋಗ ನೋಡಲು ಸಾಧ್ಯವಾಗದಿದ್ದ ಕುಲಪತಿಗಳಾದ ಶಾಂತಿನಾಥ ದೇಸಾಯಿಯವರೂ ಅವತ್ತು ನಾಟಕ ನೋಡಲು ಬಂದಿದ್ದರು. ನಾಟಕದ ಬಗ್ಗೆ ಸಾಕಷ್ಟು ತಿಳುವಳಿಕೆಯುಳ್ಳ ಅವರಿಗೂ ಅವತ್ತಿನ ಪ್ರಯೋಗ ಅತೃಪ್ತಿ ಉಂಟುಮಾಡಿರಬಹುದು.


*************

ಬೋಧಿ ಟ್ರಸ್ಟ್, ಕಲ್ಮಡ್ಕ 574212, ಕರ್ನಾಟಕ--ಇದರ ಪುಸ್ತಕಗಳನ್ನು ಈಗ ನೇರವಾಗಿ ಪ್ರಕಾಶಕರಿಂದ ಕೊಂಡುಕೊಳ್ಳಬಹುದು. ನಿಮಗೆ ಬೇಕಾದ ಪುಸ್ತಕಗಳ ಮೊತ್ತವನ್ನು Bodhi Trust, SB Account no. 1600101008058, Canara Bank, Yenmur 574328, Dakshina Kannada District--ಇಲ್ಲಿಗೆ ಜಮೆ ಮಾಡಿ ನಮಗೆ ಪತ್ರ ಬರೆದು ಅಥವಾ bodhitrustk@gmail.comಗೆ ಇಮೇಲ್ ಮಾಡಿ ತಿಳಿಸಿದರೆ ಪುಸ್ತಕಗಳನ್ನು ನಮ್ಮ ವೆಚ್ಚದಲ್ಲಿ ಕಳಿಸುತ್ತೇವೆ. ಮಾರಾಟಕ್ಕೆ ಲಭ್ಯವಿರುವ ಪುಸ್ತಕಗಳು ಇವು:
1. ಸಮಗ್ರ ನಾಟಕಗಳು, ಸಂಪುಟ 2. ರೂ60.00
2. ಸಮಗ್ರ ನಾಟಕಗಳು, ಸಂಪುಟ 3. ರೂ75.00
3. ಮಾತಾಡುವ ಮರ, ಸಮಗ್ರ ಕಾವ್ಯ, 1964-2003. ರೂ100.00
4. ಹ್ಯಾಮ್ಲೆಟ್. ಅನುವಾದ. ರೂ50.00
5. ಮುಚ್ಚು ಮತ್ತು ಇತರ ಲೇಖನಗಳು. ರೂ60.00

ಐದು ಕವನಗಳು  ಜನವರಿ ತಿಂಗಳ ಕೊನೆಯಲ್ಲಿ ಪ್ರಕಟವಾಗಲಿರುವ ಹೊಸ ಕವನ ಸಂಕಲನ. ಇದರಲ್ಲಿ, ಹೆಸರೇ ಸೂಚಿಸುವಂತೆ, ಐದು ಕವನಗಳಿವೆ. ಇದರಲ್ಲಿ 663 ಸಾಲುಗಳ ದೀರ್ಘ ಕವನ "ಪ್ರೇತಲೋಕ" ಸೇರಿದೆ. ಇದರ ಬೆಲೆ ರೂ50.00.


No comments:

Post a Comment