Thursday, December 2, 2010

ಕುದುರೆ ಖುರಪುಟದಗ್ನಿಕಿಡಿ ಹಾರುತಿದೆ

ತುಂಬಾ ಸಮಯದ ಹಿಂದೆ--ಬಹುಶಃ ಮೂವತ್ತು ವರ್ಷಕ್ಕೂ ಹಿಂದೆ---ಕೆಲವು ವಾಚಿಕೆಗಳು ಪ್ರಕಟವಾಗಿದ್ದವು. ಇದನ್ನು ಸಾಹಿತ್ಯ ಪರಿಷತ್ತು ಪ್ರಕಟಿಸಿತೇ? ಹಾಗೆಂದು ಅಸ್ಪಷ್ಟ ನೆನಪು. ಸ್ಪಷ್ಟವಾಗಿ ನೆನಪಿರುವುದೆಂದರೆ ನಿರಂಜನ ವಾಚಿಕೆ ಎಂಬೊಂದು ವಾಚಿಕೆ ಪ್ರಕಟವಾಗಿತ್ತು ಎಂಬುದು. ನಿರಂಜನರ ಓದುಗರ ಸಂಖ್ಯೆ ಕ್ಷೀಣಿಸುತ್ತಿದ್ದ ಸಮಯದಲ್ಲಿ ಅವರ ಬಗ್ಗೆ ಈ ವಾಚಿಕೆ ಹೊಸ ಆಸಕ್ತಿ ಹುಟ್ಟಿಸುವ ಪ್ರಯತ್ನವಾಗಿ ಬಂದಿತ್ತು ಎಂದೂ ನೆನಪು. ಓದುಗರ ಸಂಖ್ಯೆ ಕ್ಷೀಣಿಸಲು ಮುಖ್ಯ ಕಾರಣ ನವ್ಯ ಸಾಹಿತ್ಯ ಚಳವಳಿಯಿಂದಾಗಿ ಅಭಿರುಚಿ ಬದಲಾದದ್ದು. ಕಾವ್ಯದ ಧ್ವನಿಶಕ್ತಿ ಇಲ್ಲದ ಯಾವ ಬರೆವಣಿಗೆಯೂ ಆಗ ಅಷ್ಟೊಂದು ಪ್ರಮುಖ ಅನ್ನಿಸುತ್ತಿರಲಿಲ್ಲ.  ನಿರಂಜನ ವಾಚಿಕೆಗೆ ಯಾವ ಪ್ರತಿಕ್ರಿಯೆ ಬಂತು, ಇದರ  ಜೊತೆಗೆ ಬೇರೆ ವಾಚಿಕೆಗಳು ಬಂದುವೇ ಹೇಗೆ ಗೊತ್ತಿಲ್ಲ. ಬಂದಿರಬಹುದು. ಆದರೆ ಆನಂತರ ಈ ವಾಚಿಕೆ ಬರುವ ಸಂಪ್ರದಾಯ ಕನ್ನಡದಲ್ಲಿ ನಿಂತು ಹೋಯಿತು. ಆಯ್ದ ಕವನ ಕತೆ ಇತ್ಯಾದಿ ಬರುತ್ತವೆ. ವಾಚಿಕೆಗಳು ಬಂದಂತಿಲ್ಲ. ಆದರೆ ವಾಚಿಕೆ ಒಬ್ಬ ಲೇಖಕನ ಸಮಗ್ರ ಕೃತಿಗಳಿಗೆ ಒಂದು ಮುನ್ನುಡಿಯಿದ್ದಂತೆ: ಅವನನ್ನು ಪರಿಚಯಿಸಿ  ಹೆಚ್ಚು ಓದುಗರನ್ನು ದೊರಕಿಸಿಕೊಡುವುದರಲ್ಲಿ ಇಂಥಾ ವಾಚಿಕೆಗಳ ಮಹತ್ವವಿದೆ.

ಇಂಗ್ಲಿಷಿನಲ್ಲಿ ಈ ಬಗೆಯ ವಾಚಿಕೆಗಳು ಅನೇಕ ಲೇಖಕರ ಬಗ್ಗೆ ಇವೆ. ವಾಚಿಕೆ ಎನ್ನುವ ಕನ್ನಡ ಪದವೂ ಸೇರಿದಂತೆ ಇಡೀ ವಾಚಿಕೆಯ ಪರಿಕಲ್ಪನೆಯೇ ಇಂಗ್ಲಿಷಿನಿಂದ ಬಂದದ್ದು. ಇಂಗ್ಲಿಷಿನಲ್ಲಿ ಇವು ಪಠ್ಯಪುಸ್ತಕಗಳ ಅಗತ್ಯ ಪೂರೈಸುವ  ಉದ್ದೇಶ ಹೊಂದಿವೆ. ಕೆಲವು ತುಂಬಾ ಒಳ್ಳೆಯ ವಾಚಿಕೆಗಳೂ ಇಂಗ್ಲಿಷಿನಲ್ಲಿ ಇವೆ. ನಾನು ಆಗಾಗ ಬಳಸುವ ಫ್ರೆಡರಿಕ್ ನೀಷೆ ರೀಡರ್ ಫಕ್ಕನೆ ನೆನಪಾಗುವ ಒಂದು ಉದಾಹರಣೆ.

ಕನ್ನಡದಲ್ಲಿ ಹಿಂದೆ ಬಂದ ವಾಚಿಕೆಗಳ ನಂತರ ಈಗ ನುಡಿ ಪುಸ್ತಕ ಪ್ರಕಾಶನದ ರಂಗನಾಥನ್ ಮತ್ತೆ ವಾಚಿಕೆಗಳ ಸಂಪ್ರದಾಯ ಪ್ರಾರಂಭಿಸಿದ್ದಾರೆ. ಮುಂದೆ ಅನೇಕ ಮುಖ್ಯ ಲೇಖಕರ ವಾಚಿಕೆ ಪ್ರಕಟಿಸುವ ಯೋಜನೆ ಅವರಿಗಿದೆ. ಈಗಾಗಲೇ ಚಾಲ್ತಿಯಲ್ಲಿರುವ ಲೇಖಕರಲ್ಲದೆ ಮರೆಗೆ ಸರಿದ ಒಳ್ಳೆಯ ಲೇಖಕರು, ಅಥವಾ ಯಾರ ಪುಸ್ತಕಗಳು ಸುಲಭವಾಗಿ ಸಿಕ್ಕುತ್ತಿಲ್ಲವೋ ಅಂಥಾ ಲೇಖರು--ಇಂಥವರ ವಾಚಿಕೆಗಳ ಅಗತ್ಯವೂ  ಕನ್ನಡಕ್ಕೆ ಇದೆ. ಅನಕೃ, ತರಾಸು, ನಿರಂಜನ, ಎಂ.ಕೆ. ಇಂದಿರಾ, ಬಸವರಾಜ ಕಟ್ಟೀಮನಿ, ಪುತಿನ, ತೀನಂಶ್ರೀ--ಹೀಗೆ ವಾಚಿಕೆಗಳು ಪ್ರಕಟವಾಗಬೇಕಾದ ಅಗತ್ಯವಿರುವ ಲೇಖಕರ ಪಟ್ಟಿಯನ್ನೇ ಕೊಡಬಹುದು. ಅನಕೃ ಶ್ರೇಷ್ಠ ಲೇಖಕರೆಂದು ಪ್ರತಿಪಾದಿಸಿದರೆ ಅದನ್ನು ಒಪ್ಪುವವರು ಕಮ್ಮಿ ಇರಬಹುದು.  ಆದರೆ ಅವರ ಐತಿಹಾಸಿಕ ಮಹತ್ವವನ್ನು ಯಾರೂ ಅಲ್ಲಗಳೆಯಲಾರರು. ಅದು ಏನು ಎಂಬುದನ್ನು ವಾಚಿಕೆ ಓದುಗರ ಎದುರು ಇಡಬಲ್ಲುದು; ಅವರ ಬಗ್ಗೆ --ಅವರಂಥಾ ಇನ್ನೂ  ಕೆಲವರ ಬಗ್ಗೆ --ಹೊಸ ಚರ್ಚೆ ನಡೆಯುವಂತೆ ನೋಡಿಕೊಳ್ಳಬಲ್ಲುದು.

ಕೆಲವು ತಿಂಗಳ  ಹಿಂಧೆ ರಂಗನಾಥನ್ ವೈದೇಹಿ ವಾಚಿಕೆ ಪ್ರಕಟಿಸಿದ್ದರು. ವೈದೇಹಿ ಬಗ್ಗೆ ಅದೊಂದು ಒಳ್ಳೆಯ ವಾಚಿಕೆ.  ಆ ವಾಚಿಕೆ ಓದಿ ವೈದೇಹಿ ಬಗ್ಗೆ ಹೊಸ ಆಸಕ್ತಿ ಬೆಳೆಸಿಕೊಂಡವರನ್ನು ನಾನು ಬಲ್ಲೆ. ವೈದೇಹಿ ತುಂಬಾ ಒಳ್ಳೆಯ ಲೇಖಕಿ ಮಾತ್ರವೇ ಅಲ್ಲ. ಅವರ ಬರೆವಣಿಗೆಗೆ ಮನಸ್ಸನ್ನು ಮೃದುಗೊಳಿಸಬಲ್ಲ ಗುಣವಿದೆ. ಇಂದಿನ ಯಾಂತ್ರಿಕ ಜೀವನದಲ್ಲಿ, ಪ್ರತಿಯೊಬ್ಬರೂ ಹಣದ ಅಥವಾ ಇತರ ಒಂದಲ್ಲ ಒಂದು ಸೌಕರ್ಯಗಳ ಬೆನ್ನು ಹತ್ತಿರುವ ಈ ದಿನಗಳಲ್ಲಿ ಮನಸ್ಸನ್ನು ಮೃದುಗೊಳಿಸಬಲ್ಲ, ನಮ್ಮನ್ನು ಮತ್ತೆ ನೋಯಬಲ್ಲ, ಮುದಗೊಳ್ಳಬಲ್ಲ ವ್ಯಕ್ತಿಗಳನ್ನಾಗಿ ಮಾಡಬಲ್ಲ ವೈದೇಹಿಯವರ ಬರೆವಣಿಗೆಗಳು ಆ ಕಾರಣಕ್ಕಾಗಿಯೇ  ನಮ್ಮ ಈ  ನಾಗರಿಕತೆಗೆ ಗುಣಕಾರಿಯಾಗಬಲ್ಲ ಗುಣ ಹೊಂದಿವೆ.

ರಂಗನಾಥನ್ ತಮ್ಮ ಪ್ರಕಾಶನದ ಮೂಲಕ ಈ ವಾರ ಮತ್ತೆ ಮೂರು ವಾಚಿಕೆ ಬಿಡುಗಡೆಗೊಳಿಸುತ್ತಿದ್ದಾರೆ. ಅವುಗಳಲ್ಲಿ ಒಂದು ವಾಚಿಕೆ ಶಾಂತಿನಾಥ ದೇಸಾಯಿ ಬಗ್ಗೆ. ಇದನ್ನು ನಾನೇ ಸಂಪಾದಿಸಿ ಕೊಟ್ಟಿದ್ದೇನೆ.ಇದರ ಸಂಪಾದನೆಗಾಗಿ ದೇಸಾಯಿಯವರ ಎಲ್ಲಾ ಬರೆವಣಿಗೆಗಳನ್ನು ಶಿಸ್ತುಬದ್ಧವಾಗಿ ಅಧ್ಯಯನ ಮಾಡುತ್ತಿದ್ದಂತೆ ಇವರೆಷ್ಟು ಒಳ್ಳೆಯ ಲೇಖಕ ಎಂದು ಸ್ಪಷ್ಟವಾಗಿ ಅರಿವಿಗೆ ಬಂತು. ಅವರ ಬರೆವಣಿಗೆ ಬಗೆಗಿನ ನನ್ನ ಮರುಓದು ವಾಚಿಕೆಯ ದೀರ್ಘ ಪ್ರಸ್ತಾವನೆಯಾಗಿ ಪ್ರಕಟವಾಗುತ್ತಿದೆ. ಓದುಗರು ಅದನ್ನು ದೇಸಾಯಿಯವರ ಬರೆಹಗಳ ಜೊತೆಗೆ ಓದುವುದು ಸೂಕ್ತವಾದ್ದರಿಂದ ಇಲ್ಲಿ ಕೊಡುತ್ತಿಲ್ಲ.

ದೇಸಾಯಿಯವರದ್ದು ನಾನು ಬರೆಯುತ್ತಿರುವ ನಾಲ್ಕನೆಯ ಮರುಓದು. ಇದಕ್ಕಿಂತ ಮೊದಲು ಕನಕದಾಸ, ಗೋಪಾಲಕೃಷ್ಣ ಅಡಿಗ, ಅನಂತಮೂರ್ತಿ ಕುರಿತು ಮರು ಓದುಗಳನ್ನು ಪ್ರಕಟಿಸಿದ್ದೆ. ಮುಂದೆ ಪಂಪ, ಕವಿರಾಜಮಾರ್ಗದಿಂದ ಪ್ರಾರಂಭಿಸಿ ಇಪ್ಪತ್ತನೆಯ ಶತಮಾನದ ವರೆಗೆ ನನಗೆ ಮುಖ್ಯ ಅನ್ನಿಸಿದ ಲೇಖಕರ ಬಗ್ಗೆ ಮರು ಓದುಗಳ ಲೇಖನ ಬರೆಯಬೇಕೆಂದಿದೆ. ಈ ಬ್ಲಾಗಿನಲ್ಲಿ ನಾನು ಬರೆಯುತ್ತಿರುವ ಉಪನಿಷತ್ತು ಕುರಿತ ಲೇಖನ ಮಾಲೆಯೂ ಮರುಓದುಗಳೇ. ಒಟ್ಟು ನನಗೆ ಇಷ್ಟವಾದ ಸಂಸ್ಕ್ರತ, ಕನ್ನಡ, ಯುರೋಪಿನ ಭಾಷೆಗಳ ಕೃತಿಗಳು--ಇವುಗಳ ಬಗ್ಗೆ ಮರುಓದಿನ ಸರಣಿ ಬರೆಯಬೇಕೆಂದುಕೊಂಡಿದ್ದೇನೆ. ಇವು ಮುಂದೆ ಪುಸ್ತಕಗಳಾಗಿ ಪ್ರಕಟವಾಗಲಿವೆ.

ನುಡಿ ಪುಸ್ತಕದಿಂದ ಈಗ ಪ್ರಕಟಿಸುತ್ತಿರುವ ವಾಚಿಕೆಗಳಲ್ಲಿ ಒಂದು ಶ್ರೀಕೃಷ್ಣ ಆಲನಹಳ್ಳಿ ವಾಚಿಕೆ. ಆಲನಹಳ್ಳಿ ನನಗೆ ಹೈಸ್ಕೂಲು ದಿನಗಳಿಂದ ಗುರುತಿದ್ದ ಏಕವಚನದ ಸಲಿಗೆಯ ಸ್ನೇಹಿತ. ನಾನು ಪಂಜ ಹೈಸ್ಕೂಲಿನಲ್ಲಿ ಓದುತ್ತಿದ್ದಾಗ ಅವನು ಮೈಸೂರು ಮಹಾರಾಜಾ ಕಾಲೇಜಿ ವಿದ್ಯಾರ್ಥಿಯಾಗಿದ್ದ. ಆಗಲೇ ಸಮೀಕ್ಷಕ  ಎಂಬ ಹೆಸರಿನ ಒಂದು ಸಾಹಿತ್ಯ ಪತ್ರಿಕೆ ಪ್ರಾರಂಭಿಸಿದ್ದ. ಅದರ ಪರವಾಗಿ ನನಗೆ ಪದ್ಯ ಕಳಿಸುವಂತೆ, ಚಂದಾ ಕಳಿಸುವಂತೆ ಪತ್ರ ಬರೆದಿದ್ದ. ನನ್ನ ಪದ್ಯಗಳು ಆಗ ಸಂಕ್ರಮಣ, ಗೋಕುಲ  ಮೊದಲಾದ ಪತ್ರಿಕೆಗಳಲ್ಲಿ ಪ್ರಕಟವಾಗಿದ್ದವು. ಹೀಗೆ ಅವನಿಗೆ ನನ್ನ ವಿಳಾಸ ಸಿಕ್ಕಿತ್ತು.  ಕೊನೆಗೆ ಚಂದಾ ಮತ್ತು ಪದ್ಯ ಕಳಿಸಿದೆ. ಸಮೀಕ್ಷಕ  ಆಗಿನ ಒಂದು ಒಳ್ಳೆಯ ಸಾಹಿತ್ಯಿಕ ಪತ್ರಿಕೆ. ಅದರಲ್ಲಿ ಆಗಿನ ಅನೇಕ ಪ್ರಸಿದ್ಧ ಲೇಖಕರು ಬರೆದಿದ್ದರು. ಎಚ್. ಎಂ. ಚೆನ್ನಯ್ಯ ಅದರ ಸಾಹತ್ಯಿಕ ಸಲಹೆಗಾರಲ್ಲಿ ಒಬ್ಬರು. ಪೋಲಂಕಿ ರಾಮಮೂರ್ತಿಯವರ ಒಂದು ಬರೆಹ ಅದರಲ್ಲಿ ಪ್ರಕಟವಾಗಿತ್ತು. ಲಂಕೇಶರ "ನನ್ನ ಸುತ್ತಾ" ಎಂಬ ಕವನ ಮೊದಲು ಪ್ರಕಟವಾದದ್ದು ಅದರಲ್ಲೇ.

ಈ ರಸ್ತೆಗಳು ಈ ಮನೆಗಳು ಈ ಮರಗಳು ಈ ಮನುಷ್ಯರು
ಈ ವೀರರು ಈ ಪೀಡೆಗಳು ಈ ರಂಭೆ ಈ ರಂಗ ಈ ಶಿವ
ಕಣ್ಣೆದುರಿನ ಈ ನರಕಕೆ, ಈ ನಗರದ ಈ ಪುಲಕಕೆ,
ಈ ಹುಡುಗರ ತಂಡ, ಈ ಕನ್ಯೆಯ ಖಂಡ, ಭಾಷಣಗಳ ಭಂಡ
ಈ ಹೆಂಗಸರು ಹಾರಾಡುವ ಈ ಹೆಂಗಸರು ತೂರಾಡುವ ಈ ಹೆಂಗಸರು
ಉಸಿರಾಡುವ ಬಸಿರಾಗುವ ಬೆರಗಾಗುವ ಹೊರಗಾಗುವ
(ಈ ಗಂಡು ಈ ಥರ ಸುಮ್ಮನೆ ಕೊರಗಾಡುವ)

ಅವರೆಲ್ಲರ ಸ್ವಪ್ನದ ಸರ್ಪಕೆ ಚಪ್ಪಾಳೆಯ ಹೊಡೆವ
ಈ ಹಬ್ಬದ  ಸಂಭ್ರಮ, ಈ ಕೃಷ್ಣನ ಕಾಟ,
ಈ ಮಂತ್ರದ ಪಾಠ....

"ಈ ಮನೆಗಳು ಈ ಜನಗಳು ಈ ನರಕ ಈ ಪುಲಕ"  ಎಂದು ಕೊನೆಯಾಗುವ ಈ ಕವನದ ಮೇಲಿನ ಸಾಲಿನ ಕೃಷ್ಣ ಆಲನಹಳ್ಳಿ ಕೃಷ್ಣನೇ. ಸಮೀಕ್ಷಕಕ್ಕೆ ಪದ್ಯ ಕೊಡಿ ಎಂಬ ಕೃಷ್ಣನ ವರಾತವನ್ನೇ ಲಂಕೇಶ್ ಪದ್ಯದ ಒಂದು  ಸಾಲು ಮಾಡಿದ್ದರು. ಅವನ ಹಠದಿಂದಾಗಿ ಕನ್ನಡಕ್ಕೆ ಅನುರಣನ ಲಯದ ಒಂದು ಒಳ್ಳೆಯ ಪದ್ಯ ಸಿಕ್ಕಿದಂತಾಯಿತು. ಬೇಂದ್ರೆಯವರ "ಈ ಇದೂ ತುಂಬಿ ಆ ಅದೂ ತುಂಬಿ  ಯಾವುದೂ ತುಂಬಿ ಇರದೇ ತುಂಬಿ ಕಳೆದರೂ  ತುಂಬಿ ಉಳಿದರೂ ತುಂಬಿ ತುಂಬಿ ಬರದೇ" ಎಂಬಿತ್ಯಾದಿ ಸಾಲುಗಳಿರುವ ಪದ್ಯ  ಅದೇ ಬಗೆಯ ಅನುರಣನ ಲಯವಿರುವ ಪದ್ಯ. ಬರೀ ತುಂಬಿ ಪದದ ಅನುರಣನದಿಂದ ಬೇಂದ್ರೆ ಎಂಥಾ ಪರಿಣಾಮ ಸಾಧಿಸುತ್ತಾರೆ ಎಂಬುದಕ್ಕೆ ಈ ಕೆಲವು ಸಾಲು ನೋಡಿ:

ತುಂಬಿದ್ದು ತಾನೆ ಎಂದೆಂದು ತುಳುಕದೆಂದೆಂದರೂನು ತುಂಬಿ
ತೂತೂಬು ತುಂಬಿ ಹೊರಸೂಸಿ ಚೆಲ್ಲಿ ತುಳುಕಾಡಿ ಮತ್ತೆ ತುಂಬಿ
ಮುಮ್ಮೊದಲೆ ತುಂಬಿ ಮೊಳಕೆಯಲಿ ತುಂಬಿ ಚಿಚ್ಚಿಗುರಿನಲ್ಲಿ ತುಂಬಿ
ಎಲೆ ನನೆಯು ತುಂಬಿ ಹೂ ಹೀಚು ತುಂಬಿ ಮಿಡಿ ಕಾಯಿ ಹಣ್ಣು ತುಂಬಿ

ನೆಲ ಹೂತು ತುಂಬಿ ಮನಸೋತು ತುಂಬಿ ಉಸಿರಾಟ ತುಂಬಿ ತುಂಬಿ
ಜಗವರಳಿ ಕಂಡು ಕಣ್ತುಂಬಿ ಮರಳಿ ಮರುಳಾಗಿ ತುಂಬಿ ತುಂಬಿ
ರಸದುಂಬಿ ತುಂಬಿ ನಾಲಗೆಯು ಎಂಬ ದುರದುಂಬಿ ತುಂಬಿ ತುಂಬಿ
ಝೇಂಕಾರ ಕೇಳಿ ಕಿವಿ ತುಂಬಿ ತುಂಬಿ ಓಂಕಾರ ತುಂಬಿ ತುಂಬಿ

ಆ ತುಂಬಿನಿಂದ ತುಟಿವರೆಗು ತುಂಬಿ ತುದಿ ವರೆಗು ತುಂಬಿ ತುಂಬಿ
ಅಂಗಾಂಗ ತುಂಬಿ ಲಿಂಗಾಂಗ ತುಂಬಿ ಆಲಿಂಗನಾಂಗ ತುಂಬಿ
ಆಚಾರ ತುಂಬಿ ಉಚ್ಚಾರ ತುಂಬಿ ಸಂಚಾರ ತುಂಬಿ ತುಂಬಿ
ವಿಶ್ರಾಂತಿ ತುಂಬಿ ಸ್ಥಿರ ಶಾಂತಿ ತುಂಬಿ ಕಡು ಕಾಂತಿ ತುಂಬಿ ತುಂಬಿ

ಗುರುವಿಂದ ತುಂಬಿ ಅರವಿಂದ ತುಂಬಿ ತುಂಬುರುವಿನಿಂದ ತುಂಬಿ
ತಾಯೆಂದು ತುಂಬಿ ತಂದೆಂದು ತುಂಬಿ ಕಂದನ್ನ ತನ್ನ ತುಂಬಿ
ಅಂಬಿಕೆಯ ತುಂಬಿ ನಂಬಿಕೆಯ ತುಂಬಿ ಕಣ್ಗೊಂಬೆ ರಂಭೆ ತುಂಬಿ
ಶ್ರೀಮಾತೆ ತುಂಬಿ ಈ ಮಾತೆ ತುಂಬಿ ತಂತಾನೆ ಬಂತು ತುಂಬಿ

ಈ ಪದ್ಯದ ಬಳಿಕ ಅದೇ ಬಗೆಯ ಅನುರಣನ ಲಯವಿರುವ ಪದ್ಯ ಕನ್ನಡದಲ್ಲಿ ಬಂದದ್ದೆಂದರೆ ಲಂಕೇಶರ "ನನ್ನ ಸುತ್ತಾ". ಕೃಷ್ಣನ ಒತ್ತಾಯದ ಕಾರಣವಾಗಿ ಲಂಕೇಶರಿಂದ ಆ ಪದ್ಯ ನಮಗೆ  ಲಭ್ಯವಾಯಿತು. 

ಹೈಸ್ಕೂಲು, ಪಿಯುಸಿ ಮುಗಿಸಿದ ಮೇಲೆ ನಾನೂ ಮಹಾರಾಜಾ ಕಾಲೇಜು ಸೇರಿದೆ. ನಾನು ಮೊದಲ ಬಿ. ಎ. ಯಲ್ಲಿದ್ದಾಗ ಕೃಷ್ಣ  ಅಂತಿಮ ಬಿ.ಎ.ಯಲ್ಲಿದ್ದ. ನಾನು ಕಾಲೇಜು ಸೇರಿ  ಎರಡು ಮೂರು ದಿನ ಕಳೆದ ಮೇಲೆ   ಅವನ ಪರಿಚಯ ಮಾಡಿಕೊಳ್ಳಲೆಂದು ಅವನ ಕ್ಲಾಸು ನಡೆಯುತ್ತಿದ್ದ ರೂಮಿನ ಹೊರಗೆ ನಿಂತಿದ್ದೆ. ಹತ್ತು ಹದಿನೈದು ಜನರಿದ್ದ ಮೇಜರ್ ಕನ್ನಡ ಕ್ಲಾಸು ಅದು. ಕ್ಲಾಸಿನಲ್ಲಿ ಹಿಂದಿನ ಬೆಂಚಿನಲ್ಲಿ ಕೂತಿದ್ದ ಒಬ್ಬ ಏನೇನೋ ಚೇಷ್ಟೆ ಮಾಡುತ್ತಾ ನಗುತ್ತಾ ಪಿಸಿ ಪಿಸಿ ಮಾತಾಡುತ್ತಾ ಕೂತಿದ್ದ. ನನಗೆ ಅವನೇ ಕೃಷ್ಣ ಅನ್ನಿಸಿತು. ಹೌದು, ಅವನೇ ಕೃಷ್ಣನಾಗಿದ್ದ. ಕ್ಲಾಸು ಬಿಟ್ಟು ಹೊರಗೆ ಬಂದಾಗ __ಕ್ಲಾಸು ಬಿಟ್ಟೊಡನೆ ಗಂಭೀರವಾಗಿ ಹೊರಗೆ ಬಂದ__ನನ್ನ ಹೆಸರು ಹೇಳಿ ಪರಿಚಯ ಮಾಡಿಕೊಂಡೆ. ಬನ್ನಿ, ಕಾಫಿ ಕುಡಿಯೋಣ ಎಂದು ಕ್ಯಾಂಟೀನಿಗೆ ಕರೆದುಕೊಂಡು ಹೋದ. ಕ್ಯಾಂಟೀನಿನಲ್ಲಿ   ಅಧ್ಯಾಪಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಎಂದು ಪ್ರತ್ಯೇಕ ಸ್ಥಳಗಳಿದ್ದವು. ನಾನು ವಿದ್ಯಾರ್ಥಿಗಳ ಸ್ಥಳದ ಕಡೆ ಹೋಗುತ್ತಿದ್ದರೆ ಇಲ್ಲೇ ಬನ್ನಿ ಎಂದು ಹೋಗಿ ಅಧ್ಯಾಪಕರಿಗೆ ಮೀಸಲಾದ ಸ್ಥಳದಲ್ಲಿ ಕೂತು ಸಿಗರೇಟು, ಬೈಟು ಕಾಫಿ ತರಹೇಳಿದ.   ನಾನು ಕಾಫಿ ಕುಡಿದು ಮುಗಿಸಿ ಕ್ಲಾಸಿದೆ ಎಂದು ಹೊರಡಲು ಏಳುತ್ತಿದ್ದಂತೆ ಚಕ್ಕರ್ ಹೊಡೀರ್ರೀ ಎಂದ. ಅಲ್ಲೇ ಇದ್ದ ಕೆ. ರಾಮದಾಸ್, ಈಗ ತಾನೇ ಕಾಲೇಜು ಸೇರಿದ್ದಾರೆ, ಅವರಿಗೆ ನಿನ್ನ ಬುದ್ಧಿ ಕಲಿಸಿ ಹಾಳು ಮಾಡಬೇಡ ಎಂದು ಬೈದರು. ಆದರೆ ನನಗೆ ದಿನ ಹೋದಂತೆ ಚಕ್ಕರ್ ಹೊಡೆಯುವುದರಲ್ಲಿ ಕೃಷ್ಣನೇ ಮಾದರಿಯಾದ. ಮತ್ತು ಮಹಾರಾಜಾ ಕಾಲೇಜಿನಲ್ಲಿ ಚಕ್ಕರ್ ಹೊಡೆದವರ ಒಂದು ದೊಡ್ಡ ಪರಂಪರೆಯೇ ಇತ್ತು. ಅಲ್ಲದೆ ಚಕ್ಕರ್ ಹೊಡೆದದ್ದಕ್ಕೂ  ಆ ಕಾಲೇಜಿನ ವಿದ್ಯಾರ್ಥಿಗಳ ಸಾಧನೆಗೂ ಏನೇನೂ ಸಂಬಂಧವಿರಲಿಲ್ಲ. ನಮಗಿಂತ ಸುಮಾರು ಇಪ್ಪತ್ತು ವರ್ಷ ಮೊದಲು ಆ ಕಾಲೇಜಿನಲ್ಲಿ ವಿದ್ಯಾರ್ಥಿಯಾಗಿದ್ದ ಕೆ. ವಿ. ಸುಬ್ಬಣ್ಣ ಎಟೆಂಡೆನ್ಸ್ ಶಾರ್ಟೇಜ್ ಆಗಿ ಕೊನೆಗೆ ಎಟೆಂಡೆನ್ಸ್ ರಿಜಿಸ್ಟರ್ ಹಾರಿಸಿ ಸುಟ್ಟು ಹಾಕಿದ್ದರಂತೆ. ಅನಂತಮೂರ್ತಿಯವರಿಗೆ ಎಟೆಂಡೆನ್ಸ್ ಶಾರ್ಟೇಜ್ ಆಗಿ ಪರೀಕ್ಷೆಗೆ ಕೂರಲಿಕ್ಕಾಗದೆ ಅದೇ ಕ್ಲಾಸಿನಲ್ಲಿ ಮತ್ತೊಂದು ವರ್ಷ ಕೂರಬೇಕಾಗಿ ಬಂದಿತ್ತು. ಹಾಗೆಂದು ಅವರೇ ಬರೆದುಕೊಂಡಿದ್ದಾರೆ. ಪರೀಕ್ಷೆ ಹತ್ತಿರ ಬರುತ್ತಿದ್ದಂತೆ ನಮ್ಮ ಸಮಸ್ಯೆ ಓದಿನದ್ದಾಗಿರಲಿಲ್ಲ. ಅದನ್ನು ಚಕ್ಕರ್ ಹೊಡೆದರೂ ಮಾಡಿರುತ್ತಿದ್ದೆವು. ಸಮಸ್ಯೆ ಎಟೆಂಡೆನ್ಸ್ ಭರ್ತಿ ಮಾಡುವುದು ಹೇಗೆ ಎಂಬುದೇ ಆಗಿರುತ್ತಿತ್ತು.

ಅದೇ ವರ್ಷ ಅವನ ಕವನ ಸಂಗ್ರಹ ಮಣ್ಣಿನ ಹಾಡು ಪ್ರಕಟವಾಗಿತ್ತು. ಮುನ್ನುಡಿಯಲ್ಲಿ  ಅಡಿಗರು ಅದನ್ನು ಕನ್ನಡ ಕಾವ್ಯದಲ್ಲಿ ನಡೆದ ಘಾತಪಲ್ಲಟ ಎಂದು ಬಣ್ಣಿಸಿದ್ದರು. ಅದು ಕೃಷ್ಣನಿಗೆ  ದೊಡ್ಡ ಹೆಸರು ತಂದ ಪುಸ್ತಕ. ಎಷ್ಟು ಹೆಸರು ಎಂದರೆ--ನಮಗೆಲ್ಲರಿಗೆ ಅಧ್ಯಾಪಕರಾಗಿದ್ದ ಎಸ್. ನಾರಾಯಣ ಶೆಟ್ಟರು, ಲೈಬ್ರೆರಿಯಿಂದ ಕೃಷ್ಣನ ಪುಸ್ತಕ ಎಲ್ಲರೂ ತೆಗೆದುಕೊಂಡು ಹೋಗಿ ಓದುತ್ತಾರೆ, ನನ್ನದು ಯಾರೂ ತೆಗೆದುಕೊಂಡು ಹೋಗುವುದಿಲ್ಲ, ನನ್ನದನ್ನೂ  ತೆಗೆದುಕೊಂಡು ಹೋಗಲಿ ಎಂದು ಲೈಬ್ರೆರಿಯಲ್ಲಿ ನನ್ನ ಪುಸ್ತಕವನ್ನು ಅವನ ಪುಸ್ತಕದ ಹತ್ತಿರವೇ ಇಟ್ಟೆ, ಆದರೂ ಯಾರೂ ತೆಗೆದುಕೊಂಡು ಹೋಗಲಿಲ್ಲ ಎಂದು ಹೇಳುತ್ತಿದ್ದರು. ತಮಾಷೆಯಾಗಿ ಹೇಳಿದ ಆ ಮಾತು ನಿಜವೂ ಆಗಿತ್ತು. ಕೃಷ್ಣ ಒಳ್ಳೆಯ ಲೇಖಕ ಮಾತ್ರ ಅಲ್ಲ, ಜನಪ್ರಿಯನೂ ಆಗಿದ್ದ.

ಮುಂದೆ ಆತ ಕಾದಂಬರಿಗಳನ್ನು  ಬರೆಯಲು ಪ್ರಾರಂಭಿಸಿದ. ಅವನ ಕಾಡು, ಪರಸಂಗದ ಗೆಂಡೆತಿಮ್ಮ, ಗೀಜಗನ ಗೂಡು ಸಿನೆಮಾಗಳಾದವು. ಅವನಿಗೆ ಖ್ಯಾತಿ ಬಂತು. ಹಣ ಬಂತೇ? ಬಹುಶಃ ಇಲ್ಲ. ತೋಟ ಮಾಡಿದ. ಅದು ಫಲ ಬರುವಷ್ಟು ಬೆಳೆಯುವ ಹೊತ್ತಿಗೆ ಸತ್ತ. ಸಮೀಕ್ಷಕ ಪ್ರಕಟಿಸುವಾಗಲೂ ಅವನು ಶ್ರೀಮಂತನಾಗಿರಲಿಲ್ಲ. ತಂದೆಯನ್ನು ಚಿಕ್ಕಂದಿನಲ್ಲಿ ಕಳೆದುಕೊಂಡಿದ್ದ. ತಾಯಿ ಊರಿನಲ್ಲಿ ಇದ್ದರು. ಅವನು ಶಿವರಾತ್ರೀಶ್ವರ ಹಾಸ್ಟೆಲ್ಲಿನಲ್ಲಿ ಫ್ರೀ ಊಟ ಮಾಡುತ್ತಿದ್ದ. ಗೀತಾ ರಸ್ತೆಯಲ್ಲಿ ಸಂಪಿಗೆ ಮರದ ಕೆಳಗಿದ್ದ ಆ ರೂಮಿಗೆ ಹದಿನೈದು ರೂಪಾಯಿ ಬಾಡಿಗೆ. ಹಣ ಎಲ್ಲಿಂದ ತರುತ್ತಿದ್ದ? ನಾಳೆ ಕೊಡುತ್ತೇನೆಂದು ಎಲ್ಲೆಲ್ಲಿಂದಲೋ ತರುತ್ತಿದ್ದನೆಂದು ಕಾಣುತ್ತದೆ. ಸಾಕಷ್ಟು ಕಡೆ ಉದ್ದರಿಗಳಿರುತ್ತಿದ್ದವು.

 ಬಡಾಯಿ, ಸುಳ್ಳು, ಎಗ್ಗಿಲ್ಲದೆ ನಡೆದುಕೊಳ್ಳುವುದು  ಮೊದಲಾದವುಗಳ  ಮಧ್ಯೆ ಸಹಾ ತನ್ನ ಬರೆವಣಿಗೆಯ ಇತಿ ಮಿತಿಗಳ ಬಗ್ಗೆ  ಕೃಷ್ಣನಿಗೆ  ಗಾಢ ಎಚ್ಚರವಿತ್ತು. ಆದ್ದರಿಂದಲೇ ಅವನು ಬೆಳೆಯುತ್ತಿದ್ದ ಲೇಖಕ. ಕಾವ್ಯದಿಂದ ಕಾದಂಬರಿಗೆ ಬದಲಾಯಿಸಿಕೊಂಡದ್ದೇ ಹೆಚ್ಚು ಅನುಭವವನ್ನು ಕಾದಂಬರಿಯಲ್ಲಿ  ಹೇಳಬಹುದೆಂದು. ಅವನ ಕೊನೆಯ ಕೃತಿಗಳಾದ "ತಿಕ ಸುಟ್ಟ ದೇವರು" "ಅರಮನೆ"  ಮೊದಲಾದವುಗಳಲ್ಲಿ ಭಾಷೆಯ ಬಳಕೆ, ಅನುಭವ ಹೆಚ್ಚು ಮಾಗಿದ್ದು ಕಾಣುತ್ತೇವೆ. ಅವನು ಶ್ರೇಷ್ಠತೆಯ ಹತ್ತಿರ ಹತ್ತಿರ ತಲುಪಿದ್ದ.

ಅವನ ಒಂದು ಕವನದಲ್ಲಿ  ಕುದುರೆ ಖುರಪುಟದಗ್ನಿಕಿಡಿ ಹಾರುತಿದೆ ಎಂಬ ಪದಪುಂಜ ಬರುತ್ತದೆ. ಕುಮಾರವ್ಯಾಸನನ್ನು ಅನುಸರಿಸಿ ಬಳಸಿದ ಪದಪುಂಜ ಅದು. ಅವನು ಸತ್ತು ಸುಮಾರು ಇಪ್ಪತ್ತು ವರ್ಷಗಳ ಬಳಿಕ ಅವನ ಬರೆವಣಿಗೆಯ ವಾಚಿಕೆ ಪ್ರಕಟವಾಗುತ್ತಿದೆ. ಒಂದು ಇಡೀ ಜನಾಂಗವೇ ಅವನ ನಿಧನದ ಬಳಿಕ ಲೇಖಕರಾಗಿ ಓದುಗರಾಗಿ ರೂಪುಗೊಂಡಿದೆ.  ಇವರೆಲ್ಲಾ ಈಗ ಮತ್ತೆ "ಈ ಕೃಷ್ಣನ ಕಾಟ"ಕ್ಕೆ ತಲೆಯೊಡ್ಡುತ್ತಾರೆ ಎಂದರೆ, ಸವಾರ ಸವಾರಿಸಿ ಹೋದ ಮೇಲೂ ಕುದುರೆ ಖುರಪುಟದಗ್ನಿಕಿಡಿ ಹಾರುತಿದೆ ಎಂದು ಮತ್ತೆ ಹೇಳಬೇಕೆನ್ನಿಸುತ್ತದೆ. ಇನ್ನು ಇಪ್ಪತ್ತೈದು ವರ್ಷ ಕಳೆದ ಮೇಲೆ ಬರುವ ಹೊಸ ಜನಾಂಗವೂ ಇವನ ಬರೆವಣಿಗೆಯನ್ನು ಮತ್ತೆ ಹೊಸದಾಗಿ ಓದಬಹುದು. ಮತ್ತೆ ಅವನು ತನ್ನ ಬರೆವಣಿಗೆಯ ಮೂಲಕ ಸಾಧಿಸಿದ ಧೀಮಂತ  ಅಶ್ವಗತಿಯನ್ನು,  ಆ ಅಶ್ವಗತಿ ತನ್ನ ಖುರಪುಟದಿಂದ ಹಾರಿಸಿದ ಅಗ್ನಿಕಿಡಿಯನ್ನು ಕುತೂಹಲದಿಂದ ನೋಡಬಹುದು ಅನ್ನಿಸುತ್ತದೆ.

**********

ನಾನು ಕಳೆದ ಹತ್ತು ವರ್ಷಗಳಲ್ಲಿ ಸಾಕಷ್ಟು ಬರೆದೆ. ಅವು ಮತ್ತು ಹಿಂದಿನ ಬರೆವಣಿಗೆ ಸೇರಿ ಮುಂದಿನ ನಾಕೈದು ವರ್ಷಗಳಲ್ಲಿ ನನ್ನ ಎಲ್ಲಾ ಬರೆವಣಿಗೆಗಳು ಸುಮಾರು ಇಪ್ಪತ್ತು ಸಂಪುಟಗಳಲ್ಲಿ  ಬೋಧಿ ಟ್ರಸ್ಟ್, ಕಲ್ಮಡ್ಕ 574212, ಕರ್ನಾಟಕ--ಇದರ  ಮೂಲಕ ಪ್ರಕಟವಾಗಲಿವೆ. ನಮ್ಮ ಪುಸ್ತಕಗಳು ನ್ಯೂ ಪ್ರೀಮಿಯರ್ ಬುಕ್ ಶಾಪ್, ಬನಶಂಕರಿ ಎರಡನೇ ಹಂತ, ಬಿಡಿಎ ಕಾಂಪ್ಲೆಕ್ಸ್ ಎದುರು, ಬೆಂಗಳೂರು 70 ಮತ್ತು ಅತ್ರಿ ಬುಕ್ ಸೆಂಟರ್, ಮಂಗಳೂರು-- ಇಲ್ಲಿ  ಸಿಗುತ್ತವೆ. ಇವಲ್ಲದೆ ನಮ್ಮ ಪ್ರಕಟಣೆಗಳನ್ನು ನೀವು ಈಗ ನೇರವಾಗಿ ಮನೆ ಬಾಗಿಲಿಗೆ ತರಿಸಿಕೊಳ್ಳಬಹುದು. ನಿಮಗೆ ಬೇಕಾದ ಪುಸ್ತಕಗಳ ಮೊತ್ತವನ್ನು Bodhi Trust, SB Account No.1600101008058, Canara Bank, Yenmur-574328, Sullia Taluk, Dakshina Kannada District, Karnataka; IFSC: CNRB0001600---ಇಲ್ಲಿಗೆ ಕಳಿಸಿ ನಿಮ್ಮ ವಿಳಾಸವನ್ನುbodhitrustk@gmail.comಗೆ ಇಮೇಲ್ ಮಾಡಿ ಅಥವಾ ಬೋಧಿ ಟ್ರಸ್ಟ್, ಕಲ್ಮಡ್ಕ 574212, ಕರ್ನಾಟಕ ಇಲ್ಲಿಗೆ
ಪತ್ರ ಬರೆದು ತಿಳಿಸಿದರೆ ಪುಸ್ತಕಗಳನ್ನು ನಮ್ಮ ವೆಚ್ಚದಲ್ಲಿ ಕಳಿಸುತ್ತೇವೆ. ವಿದೇಶದಲ್ಲಿರುವವರು ಅಂಚೆವೆಚ್ಚ ಸೇರಿಸಿ ಕಳಿಸಿ.

ಬೋಧಿ ಟ್ರಸ್ಟ್ ಲಾಭ ಬೇಡ ನಷ್ಟ ಬೇಡ ಆಧಾರದ ಮೇಲೆ ನಡೆದುಕೊಂಡು ಹೋಗಬೇಕೆಂದು ಬಯಸುತ್ತಿರುವ ಸಂಸ್ಥೆ.


ಇವು ಸದ್ಯಕ್ಕೆ  ಮಾರಾಟಕ್ಕೆ ಲಭ್ಯವಿರುವ ಪುಸ್ತಕಗಳು. ಎಲ್ಲಾ ಪುಸ್ತಕಗಳ ಲೇಖಕ ನಾನು, ರಾಮಚಂದ್ರ ದೇವ


ಸಮಗ್ರ ನಾಟಕಗಳು. ಸಂಪುಟ 3. ಅಶ್ವತ್ಥಾಮ, ಹುಲಿಯ ಕಥೆ, ದಂಗೆ--ಈ ಮೂರು ನಾಟಕಗಳಿವೆ. ಬೆಲೆ ರೂ75.00





ಮುಚ್ಚು ಮತ್ತು ಇತರ ಲೇಖನಗಳು. ಬೆಲೆ ರೂ60.00


ಮಹಾಭಾರತ, ವಡ್ಡಾರಾಧನೆ, ಕೋಡಂಗಿಗಳು, ಮಾತಾಡುವ ಮರ ಕುರಿತ ಜಾನಪದ ಕತೆ ಹಾಗೂ ಪೈಂಟಿಂಗ್, ಅಡಿಗರ ಕಾವ್ಯ, ಶಿವರಾಮ ಕಾರಂತರ ಕಾದಂಬರಿಗಳು ಮೊದಲಾದ ವಿಷಯ ಕುರಿತ ಲೇಖನಗಳಿವೆ.





              ಸಮಗ್ರ ನಾಟಕಗಳು  ಸಂಪುಟ 2.
              ಪುಟ್ಟಿಯ ಪಯಣ, ಸುದರ್ಶನ--
             ಈ ಎರಡು ನಾಟಕಗಳಿವೆ.
              ಬೆಲೆ ರೂ60.00




ಹ್ಯಾಮ್ಲೆಟ್. ಶೇಕ್ಸ್ಪಿಯರ್ ಅನುವಾದ.
ಬೆಲೆ ರೂ 50.00
                           ಮಾತಾಡುವ ಮರ
                ಸಮಗ್ರ ಕಾವ್ಯ, 1964-2003
                              ಬೆಲೆ ರೂ100.00

Thursday, November 25, 2010

ಉಪನಿಷತ್ತು ಕುರಿತು---2

ಸೂಚನೆ: 1.ಬೋಧಿ ಟ್ರಸ್ಟ್, ಕಲ್ಮಡ್ಕ 574212, ಕರ್ನಾಟಕ--ಇದರ ಪ್ರಕಟಣೆಗಳನ್ನು ಓದುಗರು ಈಗ ನೇರವಾಗಿ ಬೋಧಿ ಟ್ರಸ್ಟಿನಿಂದ ತರಿಸಿಕೊಳ್ಳಬಹುದು. ನಿಮಗೆ ಬೇಕಾದ ಪುಸ್ತಕಗಳ ಮೊತ್ತವನ್ನು Bodhi Trust, SB Account Number 1600101008058, Canara Bank, Yenmur--574328, Sullia Taluk, Dakshina Kannada District, Karnataka--ಇಲ್ಲಿಗೆ ಕಳಿಸಿ bodhitrustk@gmail.com ಗೆ ನಿಮ್ಮ ಅಂಚೆ ವಿಳಾಸ ಇಮೇಲ್ ಮಾಡಿದರೆ ಪುಸ್ತಕ ಕಳಿಸುತ್ತೇವೆ. ಬಳಸಬೇಕಾದ ಕೋಡ್:  IFSC: CNRB0001600.


ವಿದೇಶದಲ್ಲಿರುವವರು ಅಂಚೆ ವೆಚ್ಚ ಸೇರಿಸಿ ಕಳಿಸಿ. ವಿದೇಶಗಳಲ್ಲಿ ಪುಸ್ತಕಗಳ ಬೆಲೆ: ಮುಖಬೆಲೆಗೆ ಸಮಾನವಾದ ಡಾಲರ್ ಮೊತ್ತ.


ಇವು ಮಾರಾಟಕ್ಕೆ ಲಭ್ಯವಿರುವ ಪುಸ್ತಕಗಳು. ಎಲ್ಲಾ ಪುಸ್ತಕಗಳ ಲೇಖಕ ನಾನು, ರಾಮಚಂದ್ರ ದೇವ.
1. ಸಮಗ್ರ ನಾಟಕಗಳು, ಸಂಪುಟ 2 (ಪುಟ್ಟಿಯ ಪಯಣ, ಸುದರ್ಶನ--ಈ ಎರಡು ನಾಟಕಗಳಿವೆ) ರೂ60.00
2. ಸಮಗ್ರ ನಾಟಕಗಳು, ಸಂಪುಟ 3 (ಅಶ್ವತ್ಥಾಮ, ಹುಲಿಯ ಕಥೆ, ದಂಗೆ--ಈ ಮೂರು ನಾಟಕಗಳಿವೆ) ರೂ75.00
   (ಮೇಲಿನ ಎರಡು ಪುಸ್ತಕಗಳು ಒಂದು ತಿಂಗಳ ಹಿಂದೆ ಪ್ರಕಟವಾಗಿವೆ)
3. ಮಾತಾಡುವ ಮರ, ಸಮಗ್ರ ಕಾವ್ಯ, 1964--2003. ರೂ100.00
4. ಮುಚ್ಚು ಮತ್ತು ಇತರ ಲೇಖನಗಳು. ಶೇಕ್ಸ್ಪಿಯರ್, ಮಹಾಭಾರತ, ವಡ್ಡಾರಾಧನೆ, ಮಾತಾಡುವ ಮರ ಕುರಿತ ಜಾನಪದ ಕತೆ ಹಾಗೂ ಚಿತ್ರ, ಕೋಡಂಗಿ ವೇಷ ಹಾಗೂ ಕೋಡಂಗಿತನ ಕುರಿತ ತಾತ್ವಿಕ ಪರಿಕಲ್ಪನೆ, ಶಿವರಾಮ ಕಾರಂತರ ಕಾದಂಬರಿಗಳು, ಗೋಪಾಲಕೃಷ್ಣ ಅಡಿಗರ ಕಾವ್ಯ, ಬಾಲಕಾರ್ಮಿಕರು ಮೊದಲಾದ ವಿಷಯ ಕುರಿತ ಲೇಖನಗಳಿವೆ. ಬೆಲೆ ರೂ60.00
5. ಹ್ಯಾಮ್ಲೆಟ್. ಶೇಕ್ಸ್ಪಿಯರ್ ಅನುವಾದ. ರೂ50.00


2. ಕವಿ ಕೆ. ನ. ಶಿವತೀರ್ಥನ್ 2005ರಲ್ಲಿ ನನ್ನ ಬರೆವಣಿಗೆ ಕುರಿತು ದೇವಸಾಹಿತ್ಯ ಎಂಬ ಹೆಸರಿನ ಪುಸ್ತಕ ಸಂಪಾದಿಸಿ ಅವರದ್ದೇ ಮಾಲಿಕತ್ವದ ಪ್ರಕಾಶನ ಸಂಸ್ಥೆಯಾದ ನೈಋತ್ಯ ಪ್ರಕಾಶನದ ಮೂಲಕ ಪ್ರಕಟಿಸಿದ್ದರು. ಕಳೆದ ಮೂರು ವರ್ಷಗಳಿಂದ ಶಿವತೀರ್ಥನ್ ಪಾರ್ಶ್ವವಾಯು ಪೀಡಿತರಾಗಿ ಹಾಸಿಗೆ ಹಿಡಿದಿದ್ದಾರೆ. ನಾಲಗೆ ಮತ್ತು ಬಲ ಪಾರ್ಶ್ವ ಬಿದ್ದುಹೋಗಿವೆ. ಇಂಥಾ ಸ್ಥಿತಿಯಲ್ಲಿ ಸಾಕಷ್ಟು ಸಂಖ್ಯೆಯಲ್ಲಿರುವ ದೇವಸಾಹಿತ್ಯದ ಪ್ರತಿಗಳು ಗೆದ್ದಲು ಹಿಡಿದೋ ಬೇರೆ ರೀತಿಯಲ್ಲೋ ಹಾಳಾಗುವುದು ಬೇಡವೆಂದು ಅವರು ಅವನ್ನು ಬೋಧಿ ಟ್ರಸ್ಟಿಗೆ ಕೊಟ್ಟಿದ್ದಾರೆ. ಅದರಲ್ಲಿ   ಶ್ರೀರಂಗ, ಹಾ. ಮಾ. ನಾಯಕ, ಶಾಂತಿನಾಥ ದೇಸಾಯಿ, ಪಿ. ಲಂಕೇಶ್, ಜಿ. ಎಸ್. ಅಮೂರ್, ಯು. ಆರ್. ಅನಂತಮೂರ್ತಿ, ಡಿ. ಆರ್. ನಾಗರಾಜ್, ಇಕ್ಬಾಲ್ ಅಹಮದ್, ಜನಾರ್ದನ ಭಟ್, ಪಟ್ಟಾಭಿರಾಮ ಸೋಮಯಾಜಿ, ಕಿ. ರಂ. ನಾಗರಾಜ, ಎಚ್. ಎಸ್. ವೆಂಕಟೇಶಮೂರ್ತಿ, ಸಿ. ಆರ್. ಸಿಂಹ ಮೊದಲಾದವರು ನನ್ನ ಕೃತಿಗಳ ಕುರಿತು ಬರೆದ ಲೇಖನಗಳಿವೆ.  ಇವು ಬೇಕಾದವರು ತಮಗೆ ಸಾಧ್ಯವಿರುವ/ಸೂಕ್ತ ಕಂಡ ಮೊತ್ತವನ್ನು ಡೊನೇಷನ್ ಆಗಿ ಮೇಲೆ ಸೂಚಿಸಿದ ಬೋಧಿ ಟ್ರಸ್ಟ್ ಎಕೌಂಟಿಗೆ ಜಮೆ ಮಾಡಿ ತಮ್ಮ ಹೆಸರು ವಿಳಾಸಗಳನ್ನು bodhitrustk@gmail.com ಗೆ  ಇಮೇಲ್ ಮಾಡಿ ತಿಳಿಸಿದರೆ ಆ ಪುಸ್ತಕ ಕಳಿಸುತ್ತೇವೆ. ನಮಗೆ ಅದರ ಒಂದು ಪ್ರತಿಯನ್ನು ರಿಜಿಸ್ಟರ್ಡ್ ಬುಕ್ ಪೋಸ್ಟ್ ಮಾಡಲು (ಪ್ಯಾಕಿಂಗ್ ಹೊರತಾಗಿ) ರೂ21.00 (ರೂಪಾಯಿ ಇಪ್ಪತ್ತೊಂದು) ಅಂಚೆವೆಚ್ಚ ತಗಲುತ್ತದೆ. ಹಾಗಾಗಿ ನೀವು ಕೊಡುವ ಮೊತ್ತ ಅದಕ್ಕಿಂತ ಹೆಚ್ಚಿಗೆ ಇರಬೇಕಾದ್ದು ಅನಿವಾರ್ಯ. 206 ಪುಟಗಳಿರುವ ಆ ಪುಸ್ತಕದ ಬೆಲೆ  ರೂ100.00.


ಬೋಧಿ ಟ್ರಸ್ಟ್ ಲಾಭ ಬೇಡ, ನಷ್ಟ ಬೇಡ ಎಂಬ ತತ್ತ್ವದ ಮೇಲೆ ನಡೆದುಕೊಂಡು ಹೋಗುತ್ತಿರುವ ರಿಜಿಸ್ಟರ್ಡ್ ಸಂಸ್ಥೆ.


***************

ಬೃಹದಾರಣ್ಯಕ ಉಪನಿಷತ್ತನ್ನು ನಮ್ಮಲ್ಲಿ ಅನೇಕರು ಓದಲು ಕಾರಣ ಟಿ. ಎಸ್. ಎಲಿಯಟ್ಟಿನ ದಿ ವೇಸ್ಟ್ ಲ್ಯಾಂಡ್  ಕವನ ಎನ್ನುವುದು ನಾವು ರೂಢಿಸಿಕೊಂಡ ಇಂಗ್ಲಿಷ್ ವಿದ್ಯಾಭ್ಯಾಸದ ಪರಿಣಾಮ. ಆದರೆ ದಿ ವೇಸ್ಟ್ ಲ್ಯಾಂಡ್  ಕನ್ನಡದ ಮೇಲೆ ಪ್ರಭಾವ ಬೀರಲು ಪ್ರಾರಂಭವಾಗಿ ಐವತ್ತು ವರ್ಷಗಳೇ ಕಳೆದಿವೆ. ಆ ಅವಧಿಯಲ್ಲಿ  ಅವನ ಮೇಲೆ ಲೇಖನಗಳೂ ಕವನಗಳೂ ಬಂದಿವೆ. ಆದರೂ ಬೃಹದಾರಣ್ಯಕದ ಬಗ್ಗೆ ನನಗೆ ತಿಳಿದಂತೆ ಆಧುನಿಕ ಸಂವೇದನೆಯುಳ್ಳವರು ಆಸಕ್ತಿ ತೋರಿದ್ದು ಅಪರೂಪ. ಅದರ ಅಧ್ಯಾತ್ಮಿಕತೆಯನ್ನು  ಅಸ್ಪಷ್ಟ ಪದಪುಂಜಗಳಲ್ಲಿ ವಿವರಿಸುವ  ಪ್ರಕಟಣೆಗಳ ಹೊರತಾಗಿ ಬೇರೆ ರೀತಿಯ ವಿಶ್ಲೇಷಣಾತ್ಮಕ ಲೇಖನಗಳು ಬಂದದ್ದು ಕಮ್ಮಿ. ಆದರೆ ನಮ್ಮ ಬೌದ್ಧಿಕ ಹಸಿವಿಗೆ ಸಾಕಷ್ಟು ಗ್ರಾಸ ಒದಗಿಸಬಲ್ಲ ಅಪರೂಪದ ಪುಸ್ತಕಗಳಲ್ಲಿ ಇದೊಂದು.

ಎಲಿಯಟ್ ಉಪಯೋಗಿಸುವ ದಾಮ್ಯತ ದತ್ತ ದಯಧ್ವಂ ಇರುವ ಆ ಮೂರು ಶ್ಲೋಕಗಳು ಮೂಲದಲ್ಲಿ ಹೀಗಿವೆ:

ತ್ರಯಃ ಪ್ರಾಜಾಪತ್ಯಾಃ ಪ್ರಜಾಪತೌ ಪಿತರಿ ಬ್ರಹ್ಮಚರ್ಯಮೂಷುಃ ದೇವಾ ಮನುಷ್ಯಾ ಅಸುರಾಃ ಉಷಿತ್ವಾ ಬ್ರಹ್ಮಚರ್ಯಂ ದೇವಾ ಊಚುಃ ಬ್ರವೀತು ನೋ ಭವಾನಿತಿ ತೇಭ್ಯೋ ಹೈತದಕ್ಷರಮುವಾಚ ದ ಇತಿ ವ್ಯಜ್ಞಾಸಿಷ್ಮೇತಿ ಹೋಚುಃ ದಾಮ್ಯತೇತಿ ನ ಆತ್ಥೇತಿ ಓಮಿತಿ ಹೋವಾಚ ವ್ಯಜ್ಞಾಸಿಷ್ಟೇತಿ (1)
ಅಥ ಹೈನಂ ಮನುಷ್ಯಾ ಊಚುಃ ಬ್ರವೀತು ನೋ ಭವಾನಿತಿ ತೇಭ್ಯೋ ಹೈತದೇವಾಕ್ಷರಮುವಾಚ ದ ಇತಿ ವ್ಯಜ್ಞಾಸಿಷ್ಮೇತಿ ಹೋಚುಃ ದತ್ತೇತಿ ನ ಆತ್ಥೇತಿ ಓಮಿತಿ ಹೋವಾಚ ವ್ಯಜ್ಞಾಸಿಷ್ಟೇತಿ (2)
ಅಥ ಹೈನಮಸುರಾ ಊಚುಃ ಬ್ರವೀತು ನೋ ಭವಾನಿತಿ ತೇಭ್ಯೋ ಹೈತದೇವಾಕ್ಷರಂ ಉವಾಚ ದ ಇತಿ ವ್ಯಜ್ಞಾಸಿಷ್ಟಾ ಇತಿ ವ್ಯಜ್ಞಾಸಿಷ್ಟೇತಿ ತದೇತದೇವೈಷಾ ದೈವೀ ವಾಗನುವದತಿಸ್ತನಯಿತ್ನುರ್ದ ದ ದ ಇತಿ ದಾಮ್ಯತ ದತ್ತ ದಯಧ್ವಮಿತಿ ತದೇತತ್ ತ್ರಯಂ ಶಿಕ್ಷೇತ್ ದಮಂ ದಾನಂ ದಯಾಮಿತಿ (3)

ಈ ಶ್ಲೋಕ ಅತ್ಯುತ್ತಮ ಸಾಹಿತ್ಯ ಬರವಣಿಗೆಯ ಒಂದು ಉದಾಹರಣೆಯಾಗಿದೆ. ದ ಎಂಬ ಒಂದು ಅಕ್ಷರವನ್ನು ಅವರವರ ತಿಳುವಳಿಕೆ ಮತ್ತು ಅಗತ್ಯಕ್ಕೆ ಅನುಗುಣವಾಗಿ ಅರ್ಥಮಾಡಿಕೊಳ್ಳಲು ಬಿಡುವ ಈ  ತಂತ್ರವೇ ಪರಿಣಾಮಕಾರಿ. ಒಗಟಿನ ತಂತ್ರ ಬಳಸುವ ಈ ಶ್ಲೋಕಕ್ಕೆ ಕಾವ್ಯದ ಧ್ವನಿಶಕ್ತಿಯಿದೆ. ಅರ್ಥ ಮಾಡಿಕೊಳ್ಳುವವರ ಮಿತಿಯನ್ನು ದ ಪದಕ್ಕೆ ಅವರು ಕೊಡುವ
ಅರ್ಥವೇ ಸೂಚಿಸುತ್ತದೆ. ದ ಪದದ ಅರ್ಥಗಳು ದಿನನಿತ್ಯದ ಜೀವನ ನಿರ್ವಹಣೆಯ ದೃಷ್ಟಿಯಿಂದ ಸಹಾ ಉಪಯೋಗಕ್ಕೆ ಬರುವಂಥವು. ಭಾರತೀಯ ಜೀವನದಲ್ಲಿ ಈ ಮೂರೂ--ಮತ್ತು ನಾವೀಗ ಹೊಸತಾಗಿ ಸೇರಿಸಿರುವ ನಾಲ್ಕನೆಯ ದರ್ಪಣ__ಮೌಲ್ಯಗಳಾಗಿ ಉಳಿದಿವೆ. ಮಹಾಭಾರತ, ರಾಮಾಯಣಗಳ ಒಂದು ಮುಖ್ಯ ವಸ್ತುವೇ ಈ ಮೂರು ಮೌಲ್ಯಗಳನ್ನು--ಮತ್ತು ತನ್ನನ್ನು ತಾನೇ ನೋಡಿಕೊಳ್ಳಬೇಕಾದ ಅಗತ್ಯವನ್ನು--ಅತಿಕ್ರಮಿಸಿದಾಗ ಉಂಟಾಗುವ ಸಂಕಟ ಮತ್ತು ನಾಶ.

ದ ಕತೆ ಎಲಿಯಟ್ಟಿನ ದಿ ವೇಸ್ಟ್ ಲ್ಯಾಂಡ್  ಕವನಕ್ಕೆ ಹೊಸ ಅರ್ಥವ್ಯಾಪ್ತಿಯನ್ನು ಒದಗಿಸಿಕೊಡುತ್ತದೆ. ಬರಡು ನೆಲ ಮತ್ತು ಬರಡು ಸಂಬಂಧ ಮಳೆ ಬರುವುದರಿಂದ, ದತ್ತ ದಯ ದಾಮ್ಯತಗಳ ಅನುಷ್ಠಾನದಿಂದ ಫಲವತ್ತಾಗಬಹುದು ಎಂಬ ದಿ ವೇಸ್ಟ್ ಲ್ಯಾಂಡಿನ ವಸ್ತು ಉಪನಿಷತ್ತಿನ ಕಥೆಯಲ್ಲಿ ಅಂತಸ್ಥವಾಗಿರುವಂಥದು. ತನ್ನ ಕವನದ ಮೊದಲ ನಾಲ್ಕು ಭಾಗಗಳಲ್ಲಿ ಎಲಿಯಟ್ ಚಿತ್ರಿಸಿದ್ದು ಬರಡು ಜೀವನವನ್ನು. ಅದು ನೀರಿಲ್ಲದ, ಮಳೆ ಬಾರದ ನೆಲ; ಪ್ರೀತಿ ವಿಶ್ವಾಸಗಳಿಲ್ಲದ, ಯಾಂತ್ರಿಕ ಲೈಂಗಿಕ ಚಟಗಳ, ಅಧ್ಯಾತ್ಮಿಕವಾಗಿ ಸಹಾ ಬರಡಾದ ಸ್ಥಳ. ಇಂಥಾ ವೇಸ್ಟ್ಲಾಂಡ್ ಫಲವತ್ತಾಗಬೇಕಾದರೆ ಮಳೆಯೂ ಬರಬೇಕು, ಒಳ್ಳೆಯ ಜೀವನಕ್ಕೆ  ಅಗತ್ಯವಾದ ಮೌಲ್ಯಗಳೂ ಆಚರಣೆಗೆ ಬರಬೇಕು. ಗುಡುಗಿನ ನಂತರ ಬರಬಹುದಾದ ಮಳೆ ಮತ್ತು ಆ ಗುಡುಗು ನುಡಿಯುವ ದತ್ತ ದಯ ದಾಮ್ಯತ ಎಂಬ ಮಾತುಗಳು ಅದು ವರೆಗೆ ಚಿತ್ರಿಸಿದ ಎರಡೂ ಬಗೆಯ ಬರಡುತನವನ್ನು ನೀಗಬಲ್ಲವು ಎಂಬುದು ಕವನದ ಕೊನೆಯ ಭಾಗದ ಆಶಯ. ಹೀಗೆ ಆ ಕವನದ ಒಂದು ಬಹು ಮುಖ್ಯ ಅರ್ಥವಂತಿಕೆ  ಉಪನಿಷತ್ತಿನ ಶ್ಲೋಕಗಳಿಂದ ಬಂದದ್ದು. ಇದರಿಂದಾಗಿ ಕವನಕ್ಕೊಂದು ಫೋಕಸ್ ಸಿಕ್ಕುತ್ತದೆ. ಎಲ್ಲಾ ಪ್ರಮುಖ ಕವಿಗಳ ಪ್ರತಿಭೆ ಮುಖ್ಯವಾಗಿ ಸಿಂಥೆಟಿಕ್ ಎಂದು ಕ್ರಿಸ್ಟಾಫರ್ ಮಾರ್ಲೋ ಮೇಲಿನ ತನ್ನ ಪ್ರಬಂಧದಲ್ಲಿ ಎಲಿಯಟ್ ಹೇಳಿದ ಮಾತಿನ ಸತ್ಯತೆಗೆ ಅವನ ಈ ಕವನವೇ ಉದಾಹರಣೆ. ಅಥವಾ, ಅವನ ಈ ಮಾತನ್ನು ಅವನದೇ ಕವನ ಸಮರ್ಥಿಸುವಷ್ಟು ಬೇರೆ ಯಾವ ಕವನವೂ ಸಮರ್ಥಿಸುವುದಿಲ್ಲ. ಅವನು ಆ ಥಿಯರಿ ಮಾಡಿಕೊಂಡದ್ದು ತನ್ನದೇ  ಬರೆವಣಿಗೆಯ ಕ್ರಮವನ್ನು ವಿವರಿಸುವುದಕ್ಕಾಗಿ ಎಂದರೂ ನಡೆಯುತ್ತದೆ.

ಇನ್ನೊಂದು ಅರ್ಥದಲ್ಲಿಯೂ ಉಪನಿಷತ್ತಿನ ಶ್ಲೋಕಗಳು ದಿ ವೇಸ್ಟ್ ಲ್ಯಾಂಡ್  ಕವನದ ಅರ್ಥವಂತಿಕೆಯನ್ನು ಹೆಚ್ಚಿಸುತ್ತವೆ. The Fire Sermon ಎಂಬ ಮೂರನೇ ಭಾಗದಲ್ಲಿ ಮಲಿನ ನೀರು ಹರಿಯುವ ನದಿಯ ಚಿತ್ರವಿದೆ: "The river sweats oil and tar"  ಎಂಬುದು ಆ ಕವನದ ಒಂದು ಸಾಲು. ಮಳೆಯಾದರೆ ನದಿ ಹೊಸ ಜೀವ ಪಡೆಯಬಹುದು. ಜಗತ್ತು ಉರಿಯುತ್ತಿರುವ ಚಿತ್ರಣವೂ ಕವನದಲ್ಲಿ ಇದೆ. ಇದು ವಿಷಯಲಂಪಟತೆಯಿಂದ ಉಂಟಾದ ಉರಿಯುವಿಕೆ. ಈ ಉರಿಯುವಿಕೆಯೂ ಜೀವಜಲದಿಂದ ತಣಿಯಬಹುದು.

The Fire Sermon ಭಾಗದ ಶೀರ್ಷಿಕೆ ಮತ್ತು ವಸ್ತು ಬುದ್ಧನ ಪ್ರವಚನದಿಂದ ತೆಗೆದುಕೊಂಡದ್ದು. ನಮ್ಮ ಇಂದ್ರಿಯಗಳು ಮತ್ತು ಮನಸ್ಸು ಲಂಪಟತೆ ಹಾಗೂ ದ್ವೇಷದಿಂದ ತುಂಬಿದಲ್ಲಿ  ನಾವು ನೋಡುವ ಕ್ರಮವೇ ಉರಿಯಿಂದ ತುಂಬುತ್ತದೆ. ಅವುಗಳನ್ನು ಹದ್ದುಬಸ್ತಿನಲ್ಲಿಡುವುದರಿಂದ ಒಳಗಿನ ಬೆಂಕಿಯನ್ನು ನಿಯಂತ್ರಿಬಹುದು ಎಂಬುದು ಬುದ್ಧನ ಪ್ರವಚನದ ಸಾರ. ಎಲಿಯಟ್  ಬುದ್ಧನ ಈ ಪ್ರವಚನ ಬಳಸುವ ಮೂಲಕ ಮುಂದಿನ ಭಾಗದಲ್ಲಿ ಬರುವ ದಯ ದತ್ತ ದಾಮ್ಯತಕ್ಕೆ ನಮ್ಮನ್ನು ಸಿದ್ಧಪಡಿಸುತ್ತಿದ್ದಾನೆ.

ಬುದ್ಧ ಈ ಪ್ರವಚನ ನೀಡಿದ್ದು ಗಯಾ ಸಮೀಪದ ಗಯಾಶೀರ್ಷದಲ್ಲಿ. ಇಂದು ಆ ಊರಿಗೆ ಬ್ರಹ್ಮಯೋನಿ ಎಂಬ ಹೆಸರಿದೆ. ಅದಕ್ಕಿಂತ ಮೊದಲು ಉರುವೇಲ ಕಶ್ಯಪ, ಮತ್ತು ಅವನನ್ನು ಅನುಸರಿಸಿ ಅವನ ಸಹೋದರ ನದೀಕಶ್ಶಪ, ಗಯಾ ಕಶ್ಶಪ  ಮತ್ತು ಇವರ ಸುಮಾರು ಒಂದು ಸಾವಿರ ಜನ  ಹಿಂಬಾಲಕರು ಬುದ್ಧನ ಶಿಷ್ಯರಾಗಿದ್ದರು. ಹೀಗೆ ಅವನ ಶಿಷ್ಯರ ಸಂಖ್ಯೆ ಏರಿತ್ತು. ಇವರೆಲ್ಲರೂ ಅಗ್ನಿಯ ಉಪಾಸಕರು. ಯಜ್ಞ ಯಾಗಾದಿ ಮಾಡುವವರು. ಇಂದ್ರನ ಕೃಪೆಗಾಗಿ ಬೆಂಕಿ ಉರಿಸಿ ಮಾಡುತ್ತಿದ್ದ ಯಜ್ಞದ ವಿವರವನ್ನೇ ಜಗತ್ತಿನ ದಾರುಣ ಸ್ಥಿತಿ ಸೂಚಿಸಲು ಬುದ್ಧ ಬಳಸಿದ. ಆತ ಹೇಳಿದ: "ಪ್ರತಿಯೊಂದೂ ಬೆಂಕಿ ಹತ್ತಿ ಉರಿಯುತ್ತಿದೆ." ತನ್ಮೂಲಕ ಆತ ಜಗತ್ತಿನ ಸ್ಥಿತಿ ಸೂಚಿಸಲು ಪರಿಣಾಮಕಾರಿ ರೂಪಕ ಸೃಷ್ಟಿಸಿದ್ದೊಂದೇ ಅಲ್ಲ; ವೈದಿಕರ ಇಡೀ ಜೀವನಕ್ರಮಕ್ಕೆ ಪವಿತ್ರವಾದ ಯಜ್ಞವನ್ನೇ ಅಲ್ಲಗಳೆದಿದ್ದ. ವೈದಿಕರಿಗೆ ಬುದ್ಧನ ಮೇಲೆ ಸಿಟ್ಟು ಬರಲು ಇದೊಂದೇ ಸಾಕಾಗಿತ್ತು.

ಎಲಿಯಟ್ಟಿಗೆ ಬೆಂಕಿಯ ವಿವರ ಮುಖ್ಯವಾಗುವುದು ಒಂದು ರೂಪಕವಾಗಿ. ಬುದ್ಧನ ಸಂಸ್ಕ್ರತಿ ವಿಮರ್ಶೆಯನ್ನು ಎಲಿಯಟ್ ಒಂದು ರೂಪಕವಾಗಿ ಮಾತ್ರ ಬಳಸಲು ಸಾಧ್ಯವಾಗಿರುವುದು ಒಂದು ಸಂಸ್ಕ್ರತಿಯ ವಿವರ ಇನ್ನೊಂದು ಸಂಸ್ಕ್ರತಿಗೆ ಹೋದಾಗ ಆಗುವ ಬದಲಾವಣೆಗಳ ಬಗ್ಗ ಮತ್ತೊಮ್ಮೆ ನಮ್ಮ ಗಮನ ಸೆಳೆಯುತ್ತದೆ. ವೈದಿಕ ಜೀವನಕ್ರಮದ ಟೀಕೆಯಾಗಿ ಸಹಾ ಬುದ್ಧ ಉರಿಯುವಿಕೆಯನ್ನು ಬಳಸುತ್ತಿದ್ದ ಎಂಬುದು ಅದರ ಹಿನ್ನೆಲೆ ಗೊತ್ತಿಲ್ಲದವರಿಗೆ  ಅರ್ಥವಾಗಲಾರದು. ಯಜ್ಞ ಎಂದರೆ ನರಬಲಿ, ಪ್ರಾಣಿ ಬಲಿ. ಬುದ್ಧ ಪ್ರತಿಯೊಂದೂ ಬೆಂಕಿ ಹತ್ತಿ ಉರಿಯುತ್ತಿದೆ ಎಂದಾಗ ಈ ನರಬಲಿ ಪ್ರಾಣಿಬಲಿಗಳನ್ನು ಅಗತ್ಯ ಮಾಡುವ ವೈದಿಕ ಕರ್ಮಕಾಂಡವಾದ ಯಜ್ಞವನ್ನು ಟೀಕಿಸುತ್ತಿದ್ದಾನೆ ಎಂದು ಗೊತ್ತಿದ್ದವರಿಗೆ, ಬುದ್ಧನ ಈ  ರೂಪಕ ಕಟು ವೈಯಕ್ತಿಕ ಪ್ರತಿಕ್ರಿಯೆಗಳನ್ನು ಹುಟ್ಟಿಸುತ್ತದೆ. ಅವನ ಕಾಲದಲ್ಲಂತೂ ಖಂಡಿತ ಹುಟ್ಟಿಸಿತ್ತು. ವೈದಿಕರಲ್ಲಿ ಈ ಟೀಕೆ ಸಿಟ್ಟು ಬರಿಸಿದರೆ, ವೈದಿಕೇತರರಲ್ಲಿ ಇದು ಒಪ್ಪಿಗೆ ಪಡೆಯುತ್ತದೆ. ಬುದ್ಧನ ಅಹಿಂಸೆಯ ಪ್ರತಿಪಾದನೆ ಯಜ್ಞದಲ್ಲಿ  ನಡೆಯುವ ಪ್ರಾಣಿಬಲಿ ನರಬಲಿಗಳನ್ನು ನಿಲ್ಲಿಸುವುದನ್ನು ಒಂದು ಮುಖ್ಯ ಗುರಿಯಾಗಿರಿಸಿಕೊಂಡಿದೆ.

ಎರಡು ಸಂಸ್ಕ್ರತಿಗಳ ಭಿನ್ನತೆ  ನಮ್ಮ ಸಂವೇದನೆಗಳಲ್ಲಿ ಉಂಟು ಮಾಡುವ ವ್ಯತ್ಯಾಸ ಕುರಿತು ಹೆಚ್ಚು ವಿವರವಾಗಿ ನನ್ನ ಶೇಕ್ಸ್ಪಿಯರ್: ಎರಡು ಸಂಸ್ಕ್ರತಿಗಳಲ್ಲಿ  (1993) ಬರೆದಿದ್ದೇನೆ. ಅಲ್ಲಿನ ವಿಚಾರಗಳ ಮುಂದುವರಿಕೆಯಾಗಿ ಹೇಳುವುದಾದರೆ--ಪರಸ್ಪರ ಸಂಪರ್ಕಕ್ಕೆ ಬಂದ ಎರಡು ವಿಭಿನ್ನ ಸಂಸ್ಕೃತಿಗಳು ಹೀಗೆ ಪರಸ್ಪರರಿಂದ ಪ್ರಭಾವಿತವಾಗುವುದು ಸಂಸ್ಕೃತಿಗಳ ಇತಿಹಾಸದಲ್ಲಿ ಸಾಮಾನ್ಯ. ಇದರಲ್ಲಿ ಒಕ್ಕಲು ಸಂಸ್ಕೃತಿ--ಅರ್ಥಿಕ ಸಾಮಾಜಿಕ ಕಾರಣಗಳಿಗಾಗಿ ಒಂದು ಕಾಲಘಟ್ಟದಲ್ಲಿ ಒಕ್ಕಲು ಸ್ಥಿತಿಯಲ್ಲಿ ಇರುವ ಸಂಸ್ಕೃತಿ-- ಅದರ ಬಗ್ಗ ಮುಜುಗರ ಪಟ್ಟುಕೊಂಡರೆ, ಧನಿಯ ಸ್ಥಾನದಲ್ಲಿರುವ ಸಂಸ್ಕೃತಿ ಅದೊಂದು ಸಾಮಾನ್ಯ ವಿಷಯ ಎಂಬಂತೆ ಹೆಚ್ಚು ಆತ್ಮವಿಶ್ವಾಸದಿಂದ--ಅಥವಾ ಉಡಾಫೆಯಿಂದ-- ನಡೆದುಕೊಳ್ಳುತ್ತದೆ. ಮುಜುಗರ ಪಟ್ಟುಕೊಂಡವರು ಪ್ರಭಾವವೇ ಇಲ್ಲ ಎಂದೋ, ಅಥವಾ ಪೂರಾ ಪ್ರಭಾವ, ಸ್ವಂತಿಕೆಯೇ ಇಲ್ಲ ಎಂದೋ ಇರುವುದನ್ನು ತಿರುಚಿ ಹೇಳುವುದಿದೆ. ಫರ್ಡಿನಾಂಡ್  ಸಸೂರ್ ಬೌದ್ಧ ದಾರ್ಶನಿಕ ದಿಙ್ನಾಗನಿಂದ ಪ್ರಭಾವಿತ, ಆದರೆ ಅದನ್ನು ಆತ ಎಲ್ಲಿಯೂ ದಾಖಲಿಸಿಲ್ಲ ಎನ್ನುತ್ತಾರೆ. ಇದನ್ನು  ಧನಿ ಸಂಸ್ಕೃತಿಯವನ ಹೇಳದಿದ್ದರೆ ನಡೆಯುತ್ತದೆ ಎಂಬ ಧೋರಣೆ ಎನ್ನಬಹುದು. ಆದರೆ,   ಒಂದು ಸಂಸ್ಕೃತಿ ಇನ್ನೊಂದು ಸಂಸ್ಕೃತಿಯ ಪ್ರಭಾವಕ್ಕೆ ತೆರೆದುಕೊಳ್ಳುವುದೇ ಎರಡೂ ಸಂಸ್ಕೃತಿಗಳ  ಜೀವಂತಿಕೆಯ ಲಕ್ಷಣ. ಪ್ರಭಾವಿತವಾಗುವ ಮೂಲಕ ಒಂದು ಸಂಸ್ಕೃತಿ ಇನ್ನೊಂದು ಸಂಸ್ಕೃತಿಯ ಜೊತೆ ಕೆಲವು ಹೊಂದಾಣಿಕೆ ಮಾಡಿಕೊಳ್ಳುತ್ತದೆ. ಈ ಹೊಂದಾಣಿಕೆ ಅದರ ಸಂಪರ್ಕದಲ್ಲಿರುವಾಗ ಅಗತ್ಯವೂ ಆಗುತ್ತದೆ.  ಒಂದು ಸಂಸ್ಕೃತಿಯ ಬುದ್ಧಿವಂತರು ಇನ್ನೊಂದು ಸಂಸ್ಕೃತಿಯ ಬೌದ್ಧಿಕ ಸಾಮಗ್ರಿಯನ್ನು ಹೊಸ ಅರ್ಥವಂತಿಕೆಯಲ್ಲಿ ನವೀಕರಿಸಿ ಆ ಸಂಸ್ಕೃತಿಗೇ ಉಪಯೋಗಕ್ಕೆ ಬರುವಂತೆ ಮಾಡುತ್ತಾರೆ.  ಇದು ವಿಭಿನ್ನ ಕಾಲಘಟ್ಟಗಳಲ್ಲಿರುವ ಒಂದೇ ಸಂಸ್ಕೃತಿಯ ಪಠ್ಯಗಳ ಬಗ್ಗೆಯೂ ನಿಜ. ಮೇಲಿನ ಮಾತಿಗೆ ದದದಕ್ಕೆ ಎರಡು ಸಂಸ್ಕೃತಿಗಳಲ್ಲಿ  ಮತ್ತು ಎರಡು ಕಾಲಘಟ್ಟಗಳಲ್ಲಿ ನಡೆದಿರುವ ಅರ್ಥೈಸುವಿಕೆಗಳು ಸಮರ್ಥ ಉದಾಹರಣೆಗಳಾಗಬಲ್ಲವು.

ಎಲ್ಲಾ ಸಂಸ್ಕೃತಿಗಳಲ್ಲಿ ಅನುಕರಣಶೀಲರು ಇದ್ದೇ ಇರುತ್ತಾರೆ. ಪರಕೀಯ ಸಂಸ್ಕೃತಿಯನ್ನೋ ಅಥವಾ ತಮ್ಮದೇ ಸಂಸ್ಕೃತಿಯ ಯಾವುದೋ ಕಾಲಘಟ್ಟದ ಊಹಿತ ಜೀವನಕ್ರಮವನ್ನೋ ಇವರು ಅನುಕರಿಸುತ್ತಾರೆ. ಸ್ವಂತ ವ್ಯಕ್ತಿತ್ವವಿಲ್ಲದ ಇಂಥವರು ಎರಡು ಸಂಸ್ಕೃತಿಗಳ ಅನುಸಂಧಾನಗಳ ಸಮಯದಲ್ಲಿ  ಹುಟ್ಟಿಕೊಳ್ಳುವ ಅಣಬೆಗಳು. ಅಣಬೆಗಳಷ್ಟೇ ಬೇಗ ಒಣಗಿಬಿಡುತ್ತಾರೆ. ಆಯಾ ಸಂಸ್ಕೃತಿಗಳು ಸಂಪನ್ನವಾಗುವುದು ವಿಭಿನ್ನ ಸಂಸ್ಕೃತಿಗಳನ್ನು ಮೇಳೈಸಿ ಹೊಸತು ಸೃಷ್ಟಿಸಬಲ್ಲ ಸೃಜನಶೀಲರಿಂದ.

********

ಸೂಚನೆ: ಈ ಲೇಖನ ಸಂಕಲನ, ಸಂಚಿಕೆ 6, ನವೆಂಬರ್ 2002ರಲ್ಲಿ ಪ್ರಕಟವಾದ  "ಬೃಹದಾರಣ್ಯಕಕ್ಕೊಂದು ಕಾಲುದಾರಿ" ಎಂಬ ನನ್ನ ಲೇಖನದ ಕೆಲವಂಶಗಳನ್ನು ಒಳಗೊಂಡಿದೆ.

Friday, November 19, 2010

ಉಪನಿಷತ್ತು ಕುರಿತು---1

ಬೃಹದಾರಣ್ಯಕ ಉಪನಿಷತ್ತಿನಲ್ಲಿ ಬರುವ ಒಂದು ಕತೆ ಹೀಗಿದೆ:

ದೇವತೆಗಳು, ಮನುಷ್ಯರು, ಮತ್ತು ಅಸುರರು ಪ್ರಜಾಪತಿಯ ಮಕ್ಕಳು. ಯವ್ವನದಲ್ಲಿ ಬ್ರಹ್ಮಚಾರಿಗಳಾಗಿ ತಮ್ಮ ತಂದೆಯ ಬಳಿ ವಾಸ ಮಾಡಿದರು. ಅವರ ಕಲಿಕೆಯ ಕೊನೆಯ ಹಂತದಲ್ಲಿ, ದೇವತೆಗಳು ಪ್ರಜಾಪತಿಯಲ್ಲಿ ತಮಗೆ ಉಪದೇಶಿಸುವಂತೆ ಕೇಳಿಕೊಂಡರು. ಅವನು ಅವರಿಗೆ "ದ" ಎಂದು "ಗೊತ್ತಾಯ್ತಾ?" ಎಂದು ಕೇಳಿದನು. "ಗೊತ್ತಾಯ್ತು. ದಾಂತರಾಗಿರಿ ಎಂದು ಉಪದೇಶ ಕೊಟ್ಟಿದ್ದೀ" ಎಂದರು. ಪ್ರಜಾಪತಿ, "ಸರಿ. ನಿಮಗೆ ಗೊತ್ತಾಗಿದೆ" ಎಂದನು.

ಆಗ ಮನುಷ್ಯರು ಹೇಳಿದರು: " ನಮಗೆ ಉಪದೇಶ ಕೊಡು". ಪ್ರಜಾಪತಿ ಮತ್ತೆ "ದ" ಎಂದು "ಗೊತ್ತಾಯ್ತಾ?" ಎಂದನು. "ಗೊತ್ತಾಯ್ತು. ದತ್ತ--ದಾನ ಮಾಡಿ ಎನ್ನುತ್ತಿದ್ದೀ" ಎಂದರು. ಪ್ರಜಾಪತಿ, "ಸರಿ. ನಿಮಗೆ ಗೊತ್ತಾಗಿದೆ" ಎಂದನು.

ಆಗ ರಾಕ್ಷಸರು ಪ್ರಜಾಪತಿಯನ್ನು ಸಮೀಪಿಸಿ, "ನಮಗೆ ಉಪದೇಶ ಕೊಡು" ಎಂದು ಕೇಳಿದರು. ಪ್ರಜಾಪತಿ ಅವರಿಗೂ "ದ"  ಎಂದೇ ಹೇಳಿ "ಗೊತ್ತಾಯ್ತಾ?" ಎಂದು ಕೇಳಿದನು. "ಗೊತ್ತಾಯ್ತು. ದಯೆಯನ್ನು ಹೊಂದಿ ಎಂದು ಹೇಳುತ್ತಿದ್ದೀ" ಎಂದರು. ಪ್ರಜಾಪತಿ "ಸರಿ. ನಿಮಗೆ ಗೊತ್ತಾಗಿದೆ" ಎಂದನು.

ದೈವೀವಾಣಿಯಾದ ಗುಡುಗು ಗುಡುಗುತ್ತಾ ಮತ್ತೆ ಮತ್ತೆ ಹೇಳುತ್ತಿರುವುದು ಇದನ್ನೇ: ದಾಂತರಾಗಿರಿ (ದಾಮ್ಯತರಾಗಿ), ದಾನ ಮಾಡಿ, ದಯಾವಂತರಾಗಿ.

ಈ ಸುಂದರ, ಶ್ರೀಮಂತ ಅರ್ಥಗಳ  ಕಥೆ ಇಪ್ಪತ್ತನೇ ಶತಮಾನದಲ್ಲಿ ಜಗತ್ಪ್ರಸಿದ್ಧವಾಗಲು  ಇಂಗ್ಲಿಷ್ ಕವಿ ಟಿ. ಎಸ್. ಎಲಿಯಟ್ ಅದನ್ನು ತನ್ನ ಕವನ ದಿ ವೇಸ್ಟ್ ಲ್ಯಾಂಡಿನಲ್ಲಿ ಬಳಸಿದ್ದು ಬಹುತೇಕ ಕಾರಣ. ಅವನ ಈ ಕವನದ ಕೊನೆಯ ಐದನೆಯ ಭಾಗದ ಶೀರ್ಷಿಕೆ  What the Thunder Said. ಇದನ್ನು "ಗುಡುಗು ಹೇಳಿದ್ದೇನು?" ಎಂದು ಅರ್ಥೈಸಬಹುದು; "ಗುಡುಗು ಹೇಳಿದ್ದು" ಎಂದೂ ಅರ್ಥೈಸಬಹುದು. " ಗುಡುಗು ಹೇಳಿದ್ದು" ಎಂದು ಅರ್ಥೈಸುವುದೇ ಹೆಚ್ಚು ಸೂಕ್ತ  ಎಂದು ನನ್ನ ಅಭಿಪ್ರಾಯ. ಗುಡುಗು ಏನು ಹೇಳಿತು ಎನ್ನುವುದು ಉಪನಿಷತ್ತಿನ ಕತೆಯಲ್ಲೇ ಇದೆ. ಉಪನಿಷತ್ತಿನ ಕತೆಯಲ್ಲಿ ಕೊನೆಯಲ್ಲಿ ಬರುವುದನ್ನು ಎಲಿಯಟ್  ಸುರುವಿಗೆ ಬಳಸುತ್ತಾನೆ.

ಉಪನಿಷತ್ತಿನ ಕತೆ ಎರಡು ಹಂತಗಳಲ್ಲಿ ಬಿಚ್ಚಿಕೊಳ್ಳುತ್ತದೆ. ಪ್ರಜಾಪತಿ ಹೇಳುವುದು ದ  ಎಂಬ ಪದವನ್ನು ಮಾತ್ರ. ದೇವತೆಗಳು ಅಸುರರು ಮತ್ತು ಮನುಷ್ಯರು ತಮ್ಮ ತಿಳುವಳಿಕೆಗೆ ಅನುಗುಣವಾಗಿ ಅದಕ್ಕೆ ದತ್ತ ದಾಮ್ಯತ ದಯ ಎಂಬ ಮೂರು ಅರ್ಥಗಳನ್ನು ಮಾಡುತ್ತಾರೆ. ಪ್ರಜಾಪತಿ ಮೂರೂ ಅರ್ಥಗಳು ಸರಿ ಎನ್ನುತ್ತಾನೆ. ಅವರವರಲ್ಲಿ ಯಾವುದರ ಕೊರತೆ ಇದೆಯೆಂದು ಅವರು ತಿಳಿದರೋ ಅದನ್ನು ಬೆಳೆಸಿಕೊಳ್ಳುವಂತೆ ಪ್ರಜಾಪತಿ ತಮಗೆ ಉಪದೇಶಿಸುತ್ತಿದ್ದಾನೆ ಎಂದು ಪ್ರತಿಯೊಬ್ಬರೂ  ಅಂದುಕೊಳ್ಳುತ್ತಾರೆ. ದೇವತ್ವ, ದಾನವತ್ವ, ಮನುಷ್ಯತ್ವ--ಮೂರೂ ಗುಣಗಳು ಎಲ್ಲಾ ಮಾನವರಲ್ಲಿ ಇದೆ ಎಂದು ಅಂದುಕೊಂಡರೆ,  ದತ್ತ ದಯ ದಾಮ್ಯತ--ಈ ಮೂರು ಗುಣಗಳನ್ನು ಬೆಳೆಸಿಕೊಳ್ಳಬೇಕು ಎಂದು ಪ್ರಜಾಪತಿ ಹೇಳುತ್ತಿದ್ದಾನೆ ಅಂದುಕೊಳ್ಳಬಹುದು. ಮತ್ತು, ಉಪದೇಶ ಪ್ರಜಾಪತಿಯ ಮಾತುಗಳಿಂದ ಒಂದೇ ಸಲಕ್ಕೆ ಮುಗಿಯುವುದಿಲ್ಲ. ಅದನ್ನು ಗುಡುಗು ನಿರಂತರವಾಗಿ ಮತ್ತೆ ಮತ್ತೆ ಹೇಳುತ್ತಿರುತ್ತದೆ. ಇದೇ ಕತೆಯ ಎರಡನೆಯ ಹಂತ. ಮೊದಲು ಪ್ರಜಾಪತಿಯ ಉಪದೇಶ ಮಾತ್ರವಾಗಿ ಇದ್ದದ್ದು  ಈಗ ಗುಡುಗಿನ ನುಡಿಯಾಗಿ ದೈವೀವಾಣಿಯಾಗಿ  ಮಾರ್ಪಡುತ್ತದೆ. ಇದು ದೈವೀವಾಣಿ ಎನ್ನುವುದು ಮೂಲದಲ್ಲೇ ಇರುವ ಮಾತು:  "ತದೇತದೇವೈಷಾ ದೈವೀವಾಗದನುವದತಿ ಸ್ತನಯಿತ್ನುರ್ದ ದ ದ ಇತಿ". ಮೊದಲು ದೇವತೆಗಳು ದಾನವರು ಮನುಷ್ಯರು ಪ್ರಜಾಪತಿಯಿಂದ ಉಪದೇಶವನ್ನು ಕೇಳಿ ಪಡೆದರು. ಈಗ ಆ ಉಪದೇಶ ಅವರು ಕೇಳದೆ ಪ್ರಕೃತಿಯ ಅಂಗವಾದ ಗುಡುಗಿನ ಮೂಲಕ ನಿರಂತರವಾಗಿ ಬರುತ್ತಿದೆ. ಹೀಗೆ ಪ್ರಜಾಪತಿಗೂ ಗುಡುಗಿಗೂ ಉಪನಿಷತ್ಕಾರ ಸಂಬಂಧ ಕಲ್ಪಿಸುತ್ತಾನೆ. ಮೊದಲು ದೇವತೆಗಳಿಗೆ ರಾಕ್ಷಸರಿಗೆ  ಮನುಷ್ಯರಿಗೆ ಪ್ರಜಾಪತಿ ಹೇಳಿದ ಮಾತು ಈಗ ಎಲ್ಲರೂ ಕೇಳುವಂತೆ ನಿರಂತರವಾಗಿ ಗುಡುಗಿನ ಮೂಲಕ ಆಕಾಶದಿಂದ ಬರುತ್ತಿದೆ.

ಎಲಿಯಟ್ ಈ ಕತೆಯನ್ನು ಸೃಜನಶೀಲವಾಗಿ ಅರ್ಥೈಸಿ ತನ್ನ ಪದ್ಯದಲ್ಲಿ  ಬಳಸಿಕೊಳ್ಳುತ್ತಾನೆ. ಕವನದ ಮೊದಲ ನಾಲ್ಕು ಭಾಗಗಳಲ್ಲಿ ಫಲವಂತಿಕೆಯಿಂದ ವಂಚಿತರಾದವರ ಬೇರೆ ಬೇರೆ ಚಿತ್ರಗಳಿವೆ. ಮೊದಲನೆಯ ಭಾಗದಲ್ಲೇ  ಈ ಕೆಳಗಿನ ಸಾಲುಗಳು ಬರುತ್ತವೆ:

What are the roots that clutch, what branches grow
Out of this stony rubbish? Son of man,
You cannot say, or guess, for you know only
A heap of broken images, where the sun beats,
And the dead tree gives no shelter, the cricket no relief,
And the dry stone no sound of water.

ಮುಂದೆ ಉದ್ದಕ್ಕೆ ಬೇರೆ ಬೇರೆ ಬಗೆಯ ಬರಡುತನ, ಬಂಜೆತನಗಳ ಚಿತ್ರಗಳು ಬರುತ್ತವೆ. ಹೆಂಗಸರ ಮತ್ತು ಗಂಡಸರ ಲೈಂಗಿಕತೆ ಯಾಂತ್ರಿಕವಾಗಿದೆ. ಇಲ್ಲಿ ಪ್ರೇಮ, ಫಲವಂತಿಕೆ ಇಲ್ಲ; ಗಂಡೂ ಹೆಣ್ಣೂ ಎರಡೂ ಆಗಿರುವ ಟೈರ್ಸಿಯಾಸ್ ಇದ್ದಾನೆ.  ಅವನಿಗೆ ತಿಳುವಳಿಕೆ ಇದೆ; ಆದರೆ ಫಲವಂತಿಕೆ ಇಲ್ಲ. ರೊಮ್ಯಾಂಟಿಕ್ ಭಾವನೆಯನ್ನು ಹುಟ್ಟಿಸಬಲ್ಲ ಚಂದ್ರ ಈಗ ಅಂಥಾ ಯಾವ ಭಾವನೆಯನ್ನಾಗಲೀ ವಾತಾವರಣವನ್ನಾಗಲೀ ಹುಟ್ಟಿಸುತ್ತಿಲ್ಲ. ಯಾಕೆಂದರೆ,--

O the moon shone bright on Mrs. Porter
And on her daughter
They wash their feet on soda water.

ಇಂಥಲ್ಲಿ ಪ್ರತಿಯೊಂದೂ ಬೆಂಕಿ ಹತ್ತಿ ಉರಿಯುತ್ತಿದೆ. ಇಲ್ಲಿ ನೀರಿಲ್ಲ, ಬರೀ ಬಂಡೆಯಿದೆ; ಬರೀ ಬಂಡೆ ಮತ್ತು ಮರಳು ತುಂಬಿದ ರಸ್ತೆಯಿದೆ. ಈ ರಸ್ತೆ ಸುತ್ತುತ್ತಾ ಬೆಟ್ಟಗಳ ಮೇಲಿಂದ ಸಾಗುತ್ತಿದೆ. ಆದರೆ ಈ ಬೆಟ್ಟಗಳು ಬಂಡೆಗಳಿಂದ ತುಂಬಿದ
ನೀರಿಲ್ಲದ ಬೆಟ್ಟಗಳು. ಅಲ್ಲಿ ನೀರಿದ್ದಿದ್ದರೆ  ವಿಶ್ರಮಿಸಿ ನೀರು ಕುಡಿಯಬಹುದಾಗಿತ್ತು. ಆದರೆ ಬಂಡೆಗಳ ಮಧ್ಯೆ ಯೋಚಿಸಿಕೊಂಡು ನಿಲ್ಲಲಾಗುವುದಿಲ್ಲ. ಬೆವರು ಹರಿಯುತ್ತದೆ, ಪಾದಗಳನ್ನು ಮರಳು ಸುಡುತ್ತಿದೆ. ಬಂಡೆಗಳ ಮಧ್ಯೆ ನೀರಿದ್ದಿದ್ದರೆ--ಇಲ್ಲಿ ನಿಲ್ಲಲಾಗುವುದಿಲ್ಲ, ಕೂರಲಾಗುವುದಿಲ್ಲ, ಮಲಗಲಾಗುವುದಿಲ್ಲ--ಈ ಬೆಟ್ಟಗಳಲ್ಲಿ ಮೌನವೂ ಇಲ್ಲ--ಬರೀ ಬಂಜೆ  ಗುಡುಗು ಮಾತ್ರ. ಮಳೆಯಿಲ್ಲ. ಇಲ್ಲಿ ಏಕಾಂತವೂ ಇಲ್ಲ. ಕೆಂಪು ಉರಿ ಮುಸುಡುಗಳು ದುರುಗುಟ್ಟಿ ನೋಡುವುವು ಬಿರುಕೊಡೆದ ಗೋಡೆ ಬಾಗಿಲುಗಳೆಡೆಯಿಂದ.

ಇಂಥಲ್ಲಿ, ಗಂಗೆ ಇಂಗಿ ಹೋಗಿರುವಾಗ, ತರಗೆಲೆಗಳು ಮಳೆಗಾಗಿ ಕಾದಿರುವಾಗ, ಹಿಮವಂತನ ಮೇಲೆ ದೂರದಲ್ಲಿ ಕಾರ್ಮುಗಿಲು ಕವಿದಿರುವಾಗ, ಕಾಡು ಮಗ್ಗರಿಸಿ ಮುದುರಿ ಬಿದ್ದಿರುವಾಗ, ಆಗ, ಆಗ ಎಲಿಯಟ್ಟನ ಕವನದ ಗುಡುಗು ದ ದ ದ ಎನ್ನುತ್ತದೆ. ಈ ಮೂಲಕ ಬರೀ ಬಂಡೆಗಳು ತುಂಬಿದ ಒಣ ನೆಲಕ್ಕೆ ನೀರು ತರಿಸುವುದು ಮಾತ್ರವಲ್ಲ; ಬರಡು ಸಂಬಂಧಗಳೂ ಫಲವಂತವಾಗುತ್ತವೆ ಅನ್ನುವುದು ಕವನದ ಆಶಯ.

ಬರಡು ಸಂಬಂಧಗಳು ಮತ್ತು ಬರಡು ನೆಲ,-- ಇವುಗಳಿಗೆ ಸಂಬಂಧಿಸಿದ ವಿವರಗಳನ್ನು ಎಲಿಯಟ್ ಕವನದಲ್ಲಿ ಒಂದು ಸೂತ್ರಕ್ಕೆ ನೇಯುವುದು ಉಪನಿಷತ್ತಿನ ಈ ಕಥೆ. ಅದಿಲ್ಲದಿದ್ದರೆ ತಾನು ಸೂಚಿಸಬಯಸುವ ಇತ್ಯಾತ್ಮಕ ಮೌಲ್ಯಗಳನ್ನು  ಇಷ್ಟು ಪ್ರಭಾವಶಾಲಿಯಾಗಿ ಸೂಚಿಸುವುದು ಎಲಿಯಟ್ ಗೆ ಕಷ್ಟವಾಗುತ್ತಿತ್ತು. ಅಲ್ಲದೆ, ಎಲಿಯಟ್ ಯುರೋಪಿನ ಪರಂಪರೆಯನ್ನು ತನ್ನ ಕಾವ್ಯದಲ್ಲಿ ಮರಳಿ ಸೃಷ್ಟಿಸಲು ಪ್ರಯತ್ನಿಸಿದವನು; ಮತ್ತು ಬಹಳ ದೊಡ್ಡ ಮಟ್ಟದಲ್ಲಿ ಈ ಪ್ರಯತ್ನದಲ್ಲಿ ಯಶಸ್ಸು ಪಡೆದವನು. ಅವನ ಕಾವ್ಯದಲ್ಲಿ ಇಟಾಲಿಯನ್ ಕವಿ ಡಾಂಟೆ, . ಫ್ರೆಂಚಿನ ಬಾದಿಲೇರ್, ಎಲಿಜಾಬೆಥನ್ ಕವಿ-ನಾಟಕಕಾರರು,.ಇಂಗ್ಲಿಷಿನ  ಆದಿ ಕವಿ ಜಾಫ್ರೆ ಛಾಸರ್, ಸ್ಪೆನ್ಸರ್  ಮೊದಲಾದವರು ಹೊಸ ಅರ್ಥವಂತಿಕೆಯಿಂದ ಮರುಬಳಕೆ ಆಗುತ್ತಾರೆ. ಹಾಗೆಯೇ ಅವನು ಉಪನಿಷತ್ತಿನ ಕತೆಯನ್ನು ಬಳಸುವ ಮೂಲಕ ಭಾರತೀಯ ಸಾಹಿತ್ಯ ಪರಂಪರೆಯ ಒಂದು ಮುಖ್ಯ ಕೊಂಡಿಯನ್ನು ತನ್ನ ಕಾವ್ಯದಲ್ಲಿ ಪುನರುಜ್ಜೀವನಗೊಳಿಸಿದ.

ಇಂಗ್ಲಿಷ್/ಅಮೆರಿಕಾದ ಯಾವ ವಿಮರ್ಶಕನೂ ಇದನ್ನು ಒಂದು ದೊಡ್ಡ ವಿಷಯ ಎನ್ನುವಂತೆ ಹೇಳಿದ್ದು ನಾನು ನೋಡಿಲ್ಲ. ಆದರೆ ಸಿ. ಡಿ. ನರಸಿಂಹಯ್ಯನವರಂಥ ನಮ್ಮ ವಿಮರ್ಶಕರು ಅದನ್ನೇ ಒಂದು ದೊಡ್ಡ ಮಾತಾಗಿ ಹೇಳುತ್ತಿದ್ದರು. ನಮಗೆ ಎಂ. ಎ.ಕ್ಲಾಸಿನಲ್ಲಿ ಈ ಪದ್ಯ ಪಾಠ ಮಾಡುತ್ತಿದ್ದಾಗ  ಭಾರತದ ಪುರಾತನ ತಿಳುವಳಿಕೆ ಮೂಲಕ ಪತನ ಹೊಂದಿರುವ ಯುರೋಪು ನಾಗರಿಕತೆ ಮತ್ತೆ ಪುನರುಜ್ಜೀವನಗೊಳ್ಳಬಹುದು ಎಂದು ಎಲಿಯಟ್ ಸೂಚಿಸುತ್ತಿದ್ದಾನೆ ಎನ್ನುತ್ತಿದ್ದರು. ಹಾಗೆ ಹೇಳುವುದು ಈ ಪದ್ಯವನ್ನು ತೀರಾ ಸಾರಾಸಗಟಾಗಿ ಓದಿದ ಹಾಗೆ ಅನ್ನಿಸುತ್ತದೆ. ಯುರೋಪಿನ ನಾಗರಿಕತೆ ಹಾಗೆ ನಮ್ಮದೂ ಪತನಹೊಂದಿದೆ. ಇಲ್ಲಿ ಇರುವುದು ನಮ್ಮ ಹಿರಿಯರ ಬುದ್ಧಿವಂತಿಕೆಯ ಉತ್ತುಂಗ ಸಾಧನೆಗಳಾದ ಉಪನಿಷತ್ತು, ಮಹಾಭಾರತ, ಗೀತೆ ಮೊಲಾದವುಗಳು  ಮಾತ್ರವೇ ಅಲ್ಲ; ಜಾತೀಯ ವೈಷಮ್ಯತೆ, ಹಿಂಸೆ, ಲಂಚ, ಸುಳ್ಳು, ಅದಕ್ಷತೆಗಳು ಯುರೋಪನ್ನು ಮೀರಿಸುವ ಪ್ರಮಾಣದಲ್ಲಿ ನಮ್ಮಲ್ಲಿವೆ.

ಹೀಗೆ ನಮ್ಮದನ್ನು ಈ ದೊಡ್ಡ ಕವಿ ಬಳಸಿದನೆಂದು ಸಂಭ್ರಮಿಸಿಕೊಳ್ಳುವುದು ವಸಾಹತುಶಾಹಿ ಆಡಳಿತದಲ್ಲಿ ರೂಪುಗೊಂಡ ನಮ್ಮ ಒಕ್ಕಲು ಮನೋಭಾವ ಇರಬಹುದು: ಧನಿಗಳು ಮನೆಗೆ ಬಂದರೆ ಸಂಭ್ರಮಿಸುವ ಒಕ್ಕಲಿನಂತೆ ಇಂಥಾ ಸಂದರ್ಭದಲ್ಲಿ ನಮ್ಮ ವಿಮರ್ಶಕರು ನಡೆದುಕೊಳ್ಳುತ್ತಾರೆ. ಆದರೆ ಎಲಿಯಟ್  ಉಪನಿಷತ್ತಿನ ವಿವರಗಳನ್ನು  ತನ್ನ ಉದ್ದೇಶಕ್ಕೆ  ಹೊಂದುತ್ತದೆ ಎನ್ನುವುದರಿಂದ  ಬಳಸುತ್ತಿದ್ದಾನೆ ಹೊರತು ಅದು ಭಾರತದ್ದು ಎಂಬ ಕಾರಣಕ್ಕಾಗಿ ಅಲ್ಲ. ದದದ ಕತೆ ಅವನ ಕ್ಲಾಸಿಕಲ್ ದೃಷ್ಟಿಕೋನಕ್ಕೆ, ಮೂಲತಃ ಪಾಪಿಯಾದ ಮನುಷ್ಯ ಶಿಸ್ತಿನ ಮೂಲಕ ಒಳ್ಳೆಯತನ ರೂಢಿಸಿಕೊಳ್ಳುತ್ತಾನೆ ಎಂಬ ದೃಷ್ಟಿಕೋನಕ್ಕೆ ಹೊಂದುವುದರಿಂದ ಆತ ಅದನ್ನು ಬಳಸಿದ್ದಾನೆ. ಅಲ್ಲದೆ  ಲೇಖಕ ತನ್ನ ಭಾವನೆಗಳನ್ನು ಮಾತ್ರವಲ್ಲದೆ ಬುದ್ಧಿಯನ್ನೂ ಉಪಯೋಗಿಸಿ ಕವಿತೆ ಕಟ್ಟಬೇಕಾಗುತ್ತದೆ. ಅವನೇ ಹೇಳುವಂತೆ ಕವಿಗೆ--ಎಲ್ಲಾ ಮನುಷ್ಯರಿಗಿರುವಂತೆ--ಇರುವುದು ಹೃದಯ ಒಂದೇ ಅಲ್ಲ; ಮೆದುಳು ಬಳ್ಳಿ, ಪಿತ್ಥಜನಕಾಂಗ ಮೊದಲಾದ ಇತರ ಅಂಗಗಳೂ ಇವೆ. ಹೀಗಾಗಿ ಭಾವನೆಗಳಂತೆ ಬುದ್ಧಿಗೂ ನೇರ ಪಡೆದ ಅನುಭವಗಳಂತೆ ಓದಿನಿಂದ ಪಡೆದದ್ದಕ್ಕೂ ಕಾವ್ಯದಲ್ಲಿ ಸ್ಥಾನ ಇರಬೇಕಾದ್ದು  ಕಾವ್ಯ ಅನುಭವದ ಸಮಗ್ರತೆ ಒಳಗೊಳ್ಳಬೇಕಾದರೆ ಅತ್ಯಗತ್ಯ.

ಬೇಂದ್ರೆಯವರ "ಸಹಸ್ರತಂತ್ರೀ ನಿಸ್ವನದಂತೆ" (ಅರಳು ಮರಳು, 1956) ಕವನದಲ್ಲಿ ಇದೇ ಕತೆ ಬೇರೆ ರೀತಿಯಲ್ಲಿ ಬಳಕೆಯಾಗಿದೆ. ಎಲಿಯಟ್ಟಿನ ಕವನದಲ್ಲಿ ಅದು ನೈತಿಕ ಮತ್ತು ಭೌತಿಕ ಬಂಜರು ನೆಲಕ್ಕೆ/ಬದುಕಿಗೆ ನೀರು/ಜೀವಜಲ ತರಬಲ್ಲ ದೈವೀವಾಣಿಯಾಗಿದ್ದರೆ ಬೇಂದ್ರೆಯವರ ಕವನದಲ್ಲಿ ಅದು ಸೃಷ್ಟಿಯ ಮಾಂಗಲ್ಯವನ್ನು ಹೆಚ್ಚಿಸುವ ಅಂಶವಾಗಿ ಪರಿಗಣಿತವಾಗಿದೆ. ಮೊದಲನೆಯ ಕೆಲವು ಸಾಲುಗಳು ಹೀಗಿವೆ:

ಸಹಸ್ರತಂತ್ರೀ ನಿಸ್ವನದಂತೆ
ಮಾತರಿಶ್ವನಾ ಘನಮನದಂತೆ
ಗುಡುಗಾಡುತ್ತಿದೆ ಗಗಗನದ ತುಂಬ
ಪ್ರಣವ ಪ್ರವೀಣನ ನಾದಸ್ತಂಭ.

ಲೋಕದಿಂದಲೇ ಉದಿಸಿದೆ ಸರ್ವ
ಐಕ್ಯ ಧರಿಸಿಯೇ ಆಳುವನೊರ್ವ
ಆ ಒರ್ವನೊಳೇ ಸರ್ವವು ಸೇರಿ
ಜಯವನು ಸಾರಲಿ ಧರ್ಮದ ಭೇರಿ

ದದದಾ ದದದೋಂ ದಮದಯ ದತ್ತೋಂ
ದಿಕ್ತಟ ತಟವಟ ಧಿಗಿದಂ ದಿಕ್ತೋಂ
ನಿರ್ದ್ವಂದ್ವದೊಳೆದ್ದಿತು ಓಂ ನಾದ
ತಾಂಡವೇಶ್ವರನ ಅಖಂಡವಾದ.

ಕೊನೆಯ ಸಾಲುಗಳು ಹೀಗಿವೆ:

ಸಹಸ್ರಾರವಿಂದೋತ್ಥಿತ ಬಾಲೆ
ಬ್ರಹ್ಮ ಹೃದಯರತಿ ಸುಷುಪ್ತ ಜ್ವಾಲೆ
ಏನಿದೆ ಎನಿದೆ ಏನಾ ಮೇಲೆ?
ಕೃಪಾಪುಷ್ಪಗಳ ಅನಂತಮಾಲೆ.

ಧರ್ಮಮೇಘವೇ ವರ್ಷಿಸುವಂತೆ
ಸತ್ಯದ ಸತ್ತ್ವವ ಸ್ಪರ್ಷಿಸುವಂತೆ
ಧರಣಿಯ ಕೆಚ್ಚಿಲ ಹರ್ಷಿಸುವಂತೆ
ಬರಲಿದೆ ಮಳೆ ಉದ್ಘರ್ಷಿಸುವಂತೆ--
ಸಹಸ್ರತಂತ್ರೀ ನಿಸ್ವನದಂತೆ.

 ಮೋಡಗಳು ನರ್ತಿಸುತ್ತಿವೆ. ನಾದ ಆಕಾಶವನ್ನು ತುಂಬಿದೆ. ಇದು ಪ್ರಣವದ ನಾದ. ಅನಾಹತನಾದ. ನರ್ತನ ಮತ್ತು ನಾದ--ಎರಡೂ ಮೋಡಗಳಿಂದ ಉಂಟಾಗಿವೆ. ಎರಡೂ ಭೂಮಿ ಅಂತರಿಕ್ಷಗಳನ್ನು ಒಳಗೊಳ್ಳುವಂಥಾದ್ದು. ಇಂಥಾ ಸಂದರ್ಭದಲ್ಲಿ ಮಂಗಳವಾದದ್ದು ನಡೆಯಬೇಕು. ಯಾಕೆಂದರೆ ಇದು  ಧರಣಿಯ ಕೆಚ್ಚಿಲು ಹರ್ಷಿಸುವಂತೆ ಮಳೆ ಬರುವ ಮೊದಲಿನ ನರ್ತನ, ಮೊದಲಿನ ನಾದ.

ಬೇಂದ್ರೆ ಕಾವ್ಯದಲ್ಲಿ ನರ್ತನ ಮತ್ತು ನಾದ ಬಹು ಮುಖ್ಯವಾದ ವಿಷಯಗಳು. ನರ್ತನದಿಂದಾಗಿ ಕಾಲವನ್ನು ಮೀರಬಹುದು; ನರ್ತನದಿಂದಾಗಿ ಕೀಸರು ಬೇಸರಗಳನ್ನು ಮೀರಿದ ಒಂದು ಸುಂದರ ಕಾಲಾತೀತದಲ್ಲಿ ಗಂಡು ಹೆಣ್ಣು ಇರಬಹುದು ಎನ್ನುವುದು ಅವರ "ಕುಣಿಯೋಣು ಬಾರಾ" ಕವನದಿಂದ ವ್ಯಕ್ತವಾಗುತ್ತಾ ಬಂದ ವಿಚಾರ. "ನಾದಲೀಲೆ"ಯಲ್ಲಿ, ಕಂಗೆಡಿಸುವ ಮಂಜು ಹಿಂದಿದೆ; ಕಂಗೊಳಿಸುವ ಕೆಂಪು ಮುಂದಿದೆ; ಈ ಸಂಧ್ಯಾಸಮಯದಲ್ಲಿ ತರಳ ಎರಳೆ, ಚಿಗುರ ಚಿಗುರೆ, ಹೂವು ಹೂವು ಹುಲ್ಲೆ ಮುಂಜಾವದ ಎಲರ ಮೂಸಿ ನೋಡುತ್ತಿವೆ;  ಕರೆವ ಕರುವು, ಕುಣಿವ ಮಣಕ ಬೀರುತ್ತಿರುವ ಪ್ರಾಣವಾಯು ಹೀರುತ್ತಿವೆ. ಇಂಥಲ್ಲಿ ಬೇಟೆಗಾರ ಬರಬಹುದು; ಹೀರುತ್ತಿರುವ ಪ್ರಾಣವಾಯು ಕುಣಿತಗಳನ್ನು ಅರ್ಥಹೀನ ಮಾಡಿಬಿಡಬಹುದು. ಆದರೆ, ಪರಸ್ಪರ ವಿರುದ್ಧ ಸೆಳೆತಗಳ ಈ ಸನ್ನಿವೇಶವನ್ನು  ಮೀರುವುದು ನಾದಲೀಲೆಯಿಂದ ಮತ್ತು ನರ್ತನದಿಂದ. ಆದ್ದರಿಂದಲೇ "ಕೋಲುಸಖಿ ಚಂದ್ರಮುಖಿ ಕೋಲೆ ನಾದಲೀಲೆ" ಎಂಬ ಸಾಲು ಪಲ್ಲವಿಯಾಗಿ ಬರುತ್ತದೆ. "ಸಹಸ್ರತಂತ್ರೀ ನಿಸ್ವನದಂತೆ"ಯಲ್ಲಿ  ನಾದ ಮತ್ತು ನರ್ತನಗಳು ಇದಕ್ಕಿಂತ ಹೆಚ್ಚು ವ್ಯಾಪಕ ಮಟ್ಟದಲ್ಲಿ ಜೊತೆ ಸೇರಿವೆ.  ಇಲ್ಲಿ ಇಡೀ ವಿಶ್ವಕ್ಕೆ ಸಂಬಂಧಿಸಿದ ವಿವರಗಳಲ್ಲಿ ನಾದ ಮತ್ತು ನರ್ತನಗಳು ಜೊತಗೂಡಿವೆ. ಮೋಡಗಳ ನರ್ತನ ಮತ್ತು ನಾದದಿಂದ ಅಂತರಿಕ್ಷ ತುಂಬಿಕೊಂಡಿದೆ; ಅದರಿಂದಾಗಿ ಇಡೀ ಧರಣಿಯ ಕೆಚ್ಚಿಲು ತುಂಬಿಕೊಳ್ಳಲಿದೆ.

ಭಾಷೆಯನ್ನು ಬೇಂದ್ರೆ ಎಷ್ಟು ಪ್ರಭಾವಶಾಲಿಯಾಗಿ ಬಳಸುತ್ತಾರೆ ಎನ್ನುವುದಕ್ಕೆ ದದದಾ ದದದೋಂ ದಮದಯ ದತ್ತೋಂ ಎಂಬ ಒಂದು ಸಾಲೇ ಉದಾಹರಣೆಯಾಗಿ ಸಾಕು. ಇದು ದದದ ಕತೆ ನೆನೆಪಿಸುತ್ತದೆ; ಜೊತೆಗೆ ಮದ್ದಳೆಯ ಬಡಿತವನ್ನು ಸೂಚಿಸುತ್ತದೆ; ನರ್ತನದ ಹೆಜ್ಜೆಗತಿಗಳ ಸೂಚಕ ಶಬ್ದಗಳಾದ ತತ್ತಿಕಿಟ ತರಿಕಿಟಗಳನ್ನು ನೆನಪಿಸುವವೂ ಆಗಿವೆ. ಇಂಥಲ್ಲಿ ಪದಗಳು ಬೇಂದ್ರೆಯವರಿಗೆ ಪ್ರಿಯವಾದ ಶ್ಲೇಷಾರ್ಥಗಳನ್ನು ಮೀರಿ ಧ್ವನ್ಯರ್ಥಗಳನ್ನು ಪಡೆಯುತ್ತವೆ.


ಅಡಿಗರು ಬೇಂದ್ರೆಯವರನ್ನು ಅವರ ನಾದಮಯತೆಗಾಗಿ ಟೀಕಿಸುತ್ತಿದ್ದರು. ಇವರಿಗೆ ಅರ್ಥಕ್ಕಿಂತ ನಾದ ಮುಖ್ಯ, ನಾದಕ್ಕಾಗಿ ಅರ್ಥವನ್ನು ತ್ಯಾಗ ಮಾಡುತ್ತಾರೆ ಎನ್ನುತ್ತಿದ್ದರು. ಆದರೆ ಈ ಮಾತು ಪೂರ್ತಿ ನಿಜ ಅಲ್ಲ ಎನ್ನಿಸುತ್ತದೆ. "ಆ ಅದೂ ತುಂಬಿ ಈ ಇದೂ ತುಂಬಿ" ಎಂಬಿತ್ಯಾದಿ ಸಾಲುಗಳಲ್ಲಿ ಬೇಂದ್ರೆ ನಾದಕ್ಕಾಗಿ ಅರ್ಥ ತ್ಯಾಗ ಮಾಡುವುದು ನಿಜ. ಆದರೆ ಬೇಂದ್ರೆ ನಾದವನ್ನು ಒಂದು ತಾತ್ವಿಕ ಪರಿಕಲ್ಪನೆಯಾಗಿಯೂ ಬಳಸುತ್ತಿದ್ದಾರೆ ಎಂಬುದನ್ನು ನಾವು ಗುರುತಿಸಬೇಕು. ಇಡೀ ವಿಶ್ವವೇ ಪ್ರಣವದ ನಾದದಿಂದ ತುಂಬಿದ ಗಳಿಗೆಯ ಬಗ್ಗೆ "ಸಹಸ್ರತಂತ್ರೀ ನಿಸ್ವನದಂತೆ"ಯಂಥಾ ಪದ್ಯಗಳಲ್ಲಿ ಅವರು ಬರೆಯುತ್ತಾರೆ. ಇಂಥಲ್ಲಿ ಅರ್ಥ ಮುಖ್ಯವಾಗುವುದಿಲ್ಲ; ಇದು ಅರ್ಥವನ್ನು, ಭಾಷೆಯನ್ನು ಮೀರಿದ ಸ್ಥಿತಿ.

ವೈಯಕ್ತಿಕವಾಗಿ ನನಗೆ ಈ ಕವನಕ್ಕಿಂತ ಎಲಿಯಟ್ಟಿನ ಪದ್ಯ ಹೆಚ್ಚು ಇಷ್ಟ. ಇಲ್ಲಿ ಅವನು ಆಧುನಿಕ ನಾಗರಿಕತೆಯ ಪತನದ ಚಿತ್ರ ಕೊಟ್ಟು ಕೊನೆಯಲ್ಲಿ ಇದರಂದ ಹೊರದಾರಿಯ  ಒಂದು ಸಾಧ್ಯತೆಯೆಂದು ದದದ ಉಲ್ಲೇಖಿಸುತ್ತಾನೆ. ಬೇಂದ್ರೆಯವರಲ್ಲಿ ಪತನದ, ಕರಾಳತೆಯ ಚಿತ್ರಗಳು ಕಮ್ಮಿ. ಪ್ರಣವದ ನಾದ ಅಂತರಿಕ್ಷವನ್ನು ತುಂಬಿತು ಎಂದಾಗ ಭೋರ್ಗರೆದು ಬರುವ ಯುದ್ಧವಿಮಾನಗಳ ಸದ್ದನ್ನು ಮರೆಯುವುದು ಹೇಗೆ? ಸಖ ಸಖಿಯರ ಕುಣಿತದ ಬಗ್ಗೆ ಓದುವಾಗ ಅವರೇ ಸೂಚಿಸಿದ ಕುರುಡು ಕಾಂಚಾಣದ ಕುಣಿತ ಹೇಗೆ ಮರೆಯುವುದು? ಬೇಂದ್ರೆಯವರ ಈ ಕವನ ಅನುಭವದ ಮಂಗಲಮುಖವನ್ನು ಮಾತ್ರ
ಕಾಣಿಸುತ್ತದೆ. ವಿಭಿನ್ನ ಕುಣಿತ, ನಾದಗಳನ್ನು ಒಂದೇ ಕಾವ್ಯಶರೀರದಲ್ಲಿ ಹಿಡಿಯುವುದಿಲ್ಲ. ಎಲಿಯಟ್ ಕವನ ಕೊಡುವ  ಅನುಭವ ಹೆಚ್ಚು ಸಮಗ್ರವಾದದ್ದು.

ನನಗೆ ತಿಳಿದಂತೆ ದದದ ಬಳಸಿ ರಚಿತವಾದ ಕವನಗಳು ಇವು ಎರಡು. ದದದಕ್ಕೆ ಕಾವ್ಯ ರೂಪದ ವ್ಯಾಖ್ಯಾನಗಳು ಇವು. ಇನ್ನೂ ಬೇರೆ ಬಗೆಯಲ್ಲಿ  ಈ ಉಪನಿಷತ್ ಕಥೆಯನ್ನು ಬಳಸಲು ಸಾಧ್ಯ.  ಹಾಗೆ ಬಳಸಲು ಈ ಲೇಖಕನೂ ತನ್ನ "ಮಾತಾಡುವ ಮರ" ಕವನದಲ್ಲಿ  ಪ್ರಯತ್ನಿಸಿದನೆಂದು  ಇಲ್ಲಿ ವಿನಮ್ರವಾಗಿ ಸೂಚಿಸಬಯಸುತ್ತೇನೆ. ಇಂಥವುಗಳ ಬಳಕೆ ಹೆಚ್ಚುತ್ತಾ ಹೋದಂತೆ ದದದ ಬೇರೆ ಬೇರೆ ರೀತಿಯಲ್ಲಿ ಹೊಸತೇ ಆಗಿ ರೂಪು ತಾಳುತ್ತಾ ಹೋಗುತ್ತದೆ. ಒಂದು ಕೃತಿ ಬದುಕುವುದೇ ಹೀಗೆ. ಕಾಲಾಂತರದಲ್ಲಿ ಬೇರೆ ಬೇರೆ ಅರ್ಥಗಳಲ್ಲಿ ರೂಪಗಳಲ್ಲಿ--ಅನುವಾದಗಳು, ರೂಪಾಂತರಗಳು, ಭಿತ್ತಿಯ --ಎಲ್ಯೂಷನ್ನಿನ--ಬಳಕೆ ಮೊದಲಾದವು ಹೀಗೆ ಒಂದು ಹಳೆಯ ಕೃತಿ ಮತ್ತೆ ಜೀವ ಪಡೆಯುವ ಕ್ರಮ.  ಅವುಗಳ ಒಟ್ಟು  ಮೊತ್ತವೇ ಒಂದು ಸಾಂಸ್ಕೃತಿಕ/ಸಾಹಿತ್ಯಿಕ/ಯೋಚನಾ ಪರಂಪರೆ. ಆ ಇಡೀ ಪರಂಪರೆಯನ್ನು ಮತ್ತೊಬ್ಬ ಹೊಸ ಲೇಖಕ ಬಳಸಿ ಮತ್ತೆ ಆ ಪರಂಪರೆಯನ್ನು ಹರಿಯಬಿಡುತ್ತಾನೆ;  ಅದಕ್ಕೆ ಹೊಸತು ಸೇರಿಸಿ ಎಲ್ಲವನ್ನೂ ಮತ್ತೆ ಹೊಸತಾಗಿ ಅರ್ಥೈಸುವಂತೆ ಮಾಡುತ್ತಾನೆ.

ದದದಕ್ಕೆ ನನ್ನ ಗೆಳೆಯ ಕವಿ ಕಿರಣ ಕಾವ್ಯನಾಮದ ಕುತ್ಯಾಳ ನಾಗಪ್ಪ ಗೌಡರು ಹೊಸ  ಒಂದು ಅರ್ಥ ಸೂಚಿಸಿದ್ದಾರೆ. ಪ್ರಜಾಪತಿ ದ  ಎಂದು ಅರ್ಥವಾಯಿತೇ ಎಂದು ಕೇಳಿದಾಗ ಒಂದು ಗುಂಪು "ಅರ್ಥವಾಯಿತು. ದರ್ಪಣ  ಎಂದು ಉಪದೇಶಿಸುತ್ತಿದ್ದೀಯೆ" ಎನ್ನುತ್ತದೆ.  ಅದು ಉಪನಿಷತ್ತಿನ ನಂತರ ಬೆಳೆದು ಬಂದ ನೀತಿಯ ಪರಿಕಲ್ಪನೆಯ ಹಿನ್ನೆಲೆಯಲ್ಲಿ ಮುಖ್ಯವಾದದ್ದು. ಯಾಕೆಂದರೆ ದಾನವನ್ನು ದಾನಶೂರ ಎನ್ನಿಸಿಕೊಳ್ಳಲು ಮಾಡಿರಬಹುದಲ್ಲ? ನಮ್ಮ ದೊಡ್ಡ ದೊಡ್ಡ ದೇವಸ್ಥಾನಗಳ ಹುಂಡಿಗೆ ಹಣ, ಚಿನ್ನ ದಾನ ಮಾಡುವ ಬಹುತೇಕ ಮಂದಿ ತಮ್ಮ ಕಳ್ಳ ಹಣಕ್ಕೆ ಒಂದು ಹೊರದಾರಿ ಕಾಣಲು ಹಾಗೆ ಮಾಡುತ್ತಾರೆ. ಅಥವಾ Tolstoyನ Anna Kareninaದ  ಒಂದು ಪಾತ್ರವಾದ Vronsky ಮಾಡುವಂತೆ ಹೆಣ್ಣನ್ನು ಗೆಲ್ಲುವುದಕ್ಕಾಗಿಯೂ ಮಾಡಿರಬಹುದು. ದಯೆಯೂ ಹಾಗೆಯೇ ನಾಟಕವಿರಬಹುದು; ದಾಮ್ಯತವೂ ನಾಕು ಜನರ ಎದುರು ಕಟ್ಟಿರುವ ವೇಷವಿರಬಹುದು. ಇನ್ನೊಬ್ಬರನ್ನು  ಈ ವಿಷಯದಲ್ಲಿ ಮೋಸಗೊಳಿಸಬಹುದು--ಯಶಸ್ವಿಯಾಗಿಯೇ. ಆದರೆ ತಾನು ನಿಜವಾಗಿಯೂ ಇನ್ನೊಬ್ಬರ ಕುರಿತ ದಯೆಯಿಂದ, ನಿಜವಾದ ಸಂಯಮದಿಂದ, ನಿಜವಾದ ಅಪರಿಗ್ರಹ ಬುದ್ಧಿಯಿಂದ ನಡೆದುಕೊಂಡೆನೇ ಎಂಬುದನ್ನು ಹಾಗೆ ನಡೆದುಕೊಂಡವನು ತನ್ನ ಮನಸ್ಸಿನ ಒಳಗಿನ ಕನ್ನಡಿಯನ್ನು ನೋಡಿ  ಖಂಡಿತ ಮಾಡಿಕೊಳ್ಳಬೇಕು. ತನ್ನದೇ ಮನಸ್ಸಿನ ಒಳಗಿನ ದರ್ಪಣದಲ್ಲಿ ಸಾಬೀತುಪಡಿಸಿಕೊಳ್ಳಬೇಕು. ಹೀಗಾಗಿ ದದದಕ್ಕೆ  ದಾಮ್ಯತ ದತ್ತ ದಯಗಳಷ್ಟೇ ದರ್ಪಣ ಎಂಬ ಅರ್ಥವೂ ಮುಖ್ಯವಾದದ್ದು.

********

ಸೂಚನೆ:¨ಬೋಧಿ ಟ್ರಸ್ಟ್, ಕಲ್ಮಡ್ಕ 574212, ಕರ್ನಾಟಕ--ಇದರ ಪ್ರಕಟಣೆಗಳನ್ನು ನೀವೀಗ ನೇರವಾಗಿ ಬೋಧಿ ಟ್ರಸ್ಟಿನಿಂದ ಕೊಂಡುಕೊಳ್ಳಬಹುದು. Bodhi Trust, SB Account Number 1600101008058, Canara Bank, Yenmur--574328, Sullia Taluk, Dakshina Kannada District, Karnataka--ಇಲ್ಲಿಗೆ ನಿಮಗೆ ಬೇಕಾದ ಪುಸ್ತಕಗಳ ಮೊತ್ತ ರವಾನಿಸಿ; ಆ ಮೇಲೆ  ನಿಮ್ಮ ಅಂಚೆ ವಿಳಾಸವನ್ನು bodhitrustk@gmail.com --ಈ ವಿಳಾಸಕ್ಕೆ ಇಮೇಲ್ ಮಾಡಿ. ಪುಸ್ತಗಳನ್ನು ನಮ್ಮ ವೆಚ್ಚದಲ್ಲಿ ಕಳಿಸುತ್ತೇವೆ. ಭಾರತದಿಂದ ಹೊರಗಿರುವವರು ಅಂಚೆ ವೆಚ್ಚ ಸೇರಿಸಿ ಕಳಿಸಿ. ಪುಸ್ತಕದ ಬೆಲೆ ನಮೂದಿತ ಬೆಲೆಗೆ ಸಮಾನವಾದ ಡಾಲರ್ ಮೊತ್ತ. 
ಬಳಸಬೇಕಾದ ಕೋಡ್:  IFSC: CNRB0001600

ಇವು ಮಾರಾಟಕ್ಕೆ ಲಭ್ಯವಿರುವ ಪುಸ್ತಕಗಳು. ಎಲ್ಲಾ ಪುಸ್ತಕಗಳ ಲೇಖಕ ನಾನು, ರಾಮಚಂದ್ರ ದೇವ.
1. ಸಮಗ್ರ ನಾಟಕಗಳು, ಸಂಪುಟ 2 (ಪುಟ್ಟಿಯ ಪಯಣ, ಸುದರ್ಶನ--ಈ ಎರಡು ನಾಟಕಗಳಿವೆ). ರೂ60.00  
2. ಸಮಗ್ರ ನಾಟಕಗಳು, ಸಂಪುಟ 3 (ಅಶ್ವತ್ಥಾಮ, ಹುಲಿಯ ಕಥೆ, ದಂಗೆ--ಈ ಮೂರು ನಾಟಕಗಳು) ರೂ75.00
3. ಮಾತಾಡುವ ಮರ, ಸಮಗ್ರ ಕಾವ್ಯ, 1964--2003. ರೂ100.00
4. ಹ್ಯಾಮ್ಲೆಟ್. ಶೇಕ್ಸ್ಪಿಯರ್ ಅನುವಾದ. ರೂ50.00
5. ಮುಚ್ಚು ಮತ್ತು ಇತರ ಲೇಖನಗಳು. ರೂ60.00. (ವಡ್ಡಾರಾಧನೆ, ಮಹಾಭಾರತ, ಶಾಕುಂತಲ, ಶೇಕ್ಸ್ಪಿಯರ್, ಶಿವರಾಮ ಕಾರಂತ, ಗೋಪಾಲಕೃಷ್ಣ ಅಡಿಗ, ಕೋಡಂಗಿಗಳು ಮೊದಲಾದ ವಿಷಯ ಕುರಿತು ಲೇಖನಗಳಿವೆ).

Friday, November 12, 2010

ಒಬ್ಬ/ಇನ್ನೊಬ್ಬ: ಡೊಂಕುಜೀ ಆತ್ಮಹತ್ಯೆ ಹಾಗೂ ಪುನರವತಾರ

1. ತನಿಖೆ

ನನ್ನ ಒಡಲಿಂದ ಡೊಂಕುಜೀ ಹೊರಬಂದ.
ನಡುವಿಂದಲೇ ಬೆಳೆವ ಹುಣ್ಣಿನ ಹಾಗೆ ಮಗ ಇವನು.
ಭೂಜಲದ ಹಾಗೆಯೇ ಒಳಗಿರುವ ಲಾವದ ರೀತಿ.
ಕಳ್ಕಿದನು. ಕರವಾಳ ಝಳಪಿಸಿದ. ಅರ್ದಾಳ ಮುಖ.
ಮರಳಿ ಒಳನುಗ್ಗಿ ಮರಸಿಗೆ ಕೂತ
--ಹೃದ್ರೋಗದಂತೆ, ಮಧುಮೇಹದಂತೆ, ಬ್ಲಡ್ ಪ್ರೆಶರಿನಂತೆ.

ಮೇನೇಜು ಮಾಡುವೆನು ಎಂದು ತಿಳಿಯುತ್ತಿರುವೆ:
ಹುಲಿಗೆ ಕರಡಿಗೆ ತೊಡಿಸಿ ಪ್ಯಾಂಟನ್ನು ಶರಟನ್ನು
ಮೋಟಾರು ಬಿಡುವುದ ಕಲಿಸಿ, ಸೆಲ್ಯೂಟು ಹೊಡೆಯಿಸಿ ಕುಣಿಸಿ
ತೋರಿಸಿದಂತೆ ಪಬ್ಲಿಕ್ಕಲ್ಲಿ. ಮುಖವಾಡ ಇದೆ:
ಹಸುಮುಖದ ಶಿಶುಮುಖದ ಋಷಿಮುಖದ ಭಜಮುಖದ
ಅಪ್ಪಂಥ ಮುಖವಾಡ.

ಆದರೂ ಹಬ್ಬುತಿದೆ ಎಲ್ಲ ಕಡೆ ಅನುಮಾನ:
ಎಲ್ಲಿಂದ ಈ ದುರ್ವಾಸ?--ತನಿಖೆ ಸುರುವಾಗುತಿದೆ.


2. ಡೊಂಕುಜೀ ಸ್ವಗತ


ಎದುರು ಮನೆ ಮಗು ಹೀಚು. ಬೆಳೆವವಳೇ. ಕರೆದೇನು.
ಅಂಕಲ್ ಎಂದು ತೊಡೆ ಏರುವವಳು. ಅಡಗಿಸಿ ಇಟ್ಟು
ಎಂಟೋ ಹತ್ತೋ ಲಕ್ಷ ಕೇಳಿದರೆ  ರಾನ್ಸಂ, ಅವಳಪ್ಪ ಬೋಳೀಮಗನ್ನ,
ಬೆಳಗೊಳಗೆ ಶ್ರೀಮಂತ. ತಿರುಚಿದರೆ ಕೈ ಕಾಲು,
ಚುಚ್ಚಿದರೆ ಪಿನ್ನಲ್ಲಿ ಅಂಗಾಂಗ ಎಳೆಹಣ್ಣ--ಅತ್ತಾಳು;
ಅಂಕಲ್, ಬೇಡ--ಎಂದು ಒದ್ದಾಡುವುದ, ಹೊರಳುವುದ, ತೆವಳುವುದ
ನೋಡುವುದೆ ಮಜ--ಅವಳಮ್ಮ ಹಲವರಿಯುವುದ.

ಆ ಕಪ್ಲು, ನಾಯಿ ಸೂಳೇಮಕ್ಳು,
ಅವಳ ಸೊಕ್ಕೇನು, ನಗುವೇನು--ಕುಂಡೆ ತಿರುಪುವುದೇನು--ಅವ ಮಡೆಯ--
ಅವಳಿಗೇ ಬರೆದೇನು ಲವ್ಲೆಟರ್--ಇವಗೆ ಸಿಕ್ಕುವ ಹಾಗೆ--
ಸಂಸಾರ, ಅಹಾ ಗೋತ--ಬೊಬ್ಬೆಗಳ ಜಗಳಗಳ ಕೇಳಿದರೆ ಸುಪ್ರೀತ;
ಮಲಗಿದರೆ ಎಂಡ್ರೆಕ್ಸ್ ಕುಡಿದು, ತಿಂದು ನಿದ್ರೆಯ ಮಾತ್ರೆ, ಈ ರಾತ್ರೆ,
ಕಿಟಿಕಿ ಬಾಗಿಲು ಮುಚ್ಚಿ, ಬೀದಿಗೆ ನಾಳೆ ನಾಡಿದ್ದು ಬೆಳಗೊಳಗೆ
ಹೆಣದ ವಾಸನೆ--ಈ ಜನದ ರಂಧ್ರಕ್ಕೆ ಜಡಿದು--
ಜಜ್ಜಡಿದು--ನನ್ನ ಕಂಡರೆ ಎಷ್ಟು ನಿರ್ಲಕ್ಷ್ಯ ಕ್ರಿಮಿಗಳಿಗೆ!


3. ಸ್ವಗತದ ನಂತರ

ಬಾಗಿಲು ಒಡೆಸಿ ಜನ ಒಳಗೆ ನುಗ್ಗಿದರು. ಬಾತಿದೆ ದೇಹ
ದೈತ್ಯಾಕಾರ. ಜಿರಲೆ ಹಿಕ್ಕೆಗಳು ಮೈ ಮೇಲೆ. ಇಲಿ ಇರುವೆ
ಅಂಗಾಂಗ ತಿನ್ನುತಿವೆ. ಯಾಕೆ ಏನಂತೆ ಎಂಬ ಗುಸು  ಗುಸುವೆ
ಎಲ್ಲ ಕಡೆ. ವಾಸನೆಗೆ ಊಟ ಸೇರದು. ಸೆಟೆದಿದ್ದ ಡೊಂಕುಜೀ
ವಿಳಾಸ ಬಲ್ಲವ ಯಾರು? ಪೊಲೀಸರು
ಪೋಸ್ಟಮಾರ್ಟಂ ಮಾಡಿ
ಮೋರ್ಗಲ್ಲಿ ಎಸೆದು ಬಂದರು ಹೆಣವ.

ಆಕಾಶ ಬದಲಾಗಿ
ನೇರಿಳೆ ಕೆಂಪು ಕಿತ್ತಳೆ ಬಣ್ಣ ಹಬ್ಬಿವೆ ಈಗ.
ಎದುರು ಮರದಲ್ಲೊಂದು ಕೋಗಿಲೆ
ಕುಹೂ ಎಂದು ಕುಹೂ ಎಂದು ಕುಹುಕ್ಕುಹೂ ಎಂದು ಕೂಗುತಿದೆ.
ಮಂದಾರ ಗಿಡದಿಂದ ಭೂಮಿ ತೂಗುವ ಹಕ್ಕಿ ಪುಳಕ್ಕನೆ ಹಾರಿ
ಭಾರಕ್ಕೆ ಗಿಡ ತೂಗಿ ಹೂವಿನ ಎಸಳು ಕೆಳ ಬಿತ್ತು.
ಹಕ್ಕಿಗಳ ದಂಡು ಹೊರಟಿದೆ ಎತ್ತ? ಗಾಳಿ ಬೀಸುತಿದೆ ಹಿಗ್ಗಿ
ಹಿಗ್ಗಿ, ಹಿರಿ ಹಿರಿ ಹಿಗ್ಗಿ.

ಮನುಷ್ಯರಿಗೆ ಅರಿವಿರದ ಒಂದು ಸುಖ
--ಒಂದು ಪ್ರಾಣಾಯಾಮ--ನೆಲ ಮುಗಿಲು ಹಬ್ಬುತಿದೆ;
ಇಡೀ ಸೃಷ್ಟಿ ರಾವು ಕಳೆದಂತೆ ಸುಗ್ಗುತಿದೆ.


4

ಇವ ಪಾಪ ಅಂಥಾ ಪಾಪ
ಏನು ಸಹ ಮಾಡಿಲ್ಲ.

ಎಂದೋ ಒಮ್ಮೆ ಕುರುಡನು ಒಬ್ಬ
ಬಸ್ಸಿನ ಸ್ಟೇಂಡಿಗೆ ಕೇಳಲು ಹಾದಿ
ವಿರುದ್ಧ ದಿಕ್ಕನು ತೋರಿಸಿ ಸ್ವಲ್ಪ
ತಮಾಷೆ ನೋಡಿದ--ಹುಡುಗನ ಬುದ್ಧಿ.

ಮದುವೆಗೆ ಎಷ್ಟೋ ವರ್ಷಕೆ ಮೊದಲು
ಗಂಡಸು ತಾನೇ ಬಸುರು ಮಾಡೇನೇ
ಎಂಬುದ ತಿಳಿಯಲು ಒಬ್ಬಳು ಹುಡುಗಿಗೆ
ಹೊಟ್ಟೆಯ ಬರಿಸಿದ; ಟೆಸ್ಟ್ ಅಷ್ಟೇನೇ.

ಹುಡುಗಿಯ ಒಲಿಸಿಯೆ ಮುಂದರಿದಿದ್ದ;
ಅಬಾರ್ಶನ್ ಕೂಡಾ ಲೀಗಲ್ ಇತ್ತು; ತನ್ನದೆ
ಖರ್ಚಲಿ ಮಾಡಿಸಿಕೊಟ್ಟ; ಮೇಲಷ್ಟು ಪಾಕೆಟ್ಟು
ಮನಿಯೂ ಕೊಟ್ಟ; ಕಣ್ಣಲಿ ನೀರೂ ಬಂದಿತ್ತು ಕೂಡ.

ಅಪ್ಪನು ಹಾಸಿಗೆ ಹಿಡಿದನು; ಇನ್ನಿವ
ಸಾಯುವುದಿಲ್ಲ ಬದುಕುವುದಿಲ್ಲ
ಎಂದಾಗಿರಲು, ವರ್ಷವು ಕಳೆಯಲು
ಔಷಧಿ ಕೊಡುವುದು ಮರೆತೇ ಹೋಯಿತು;
ಅಲ್ಲದೆ ಇದ್ದರು ಸಾಯುತ್ತಿದ್ದ; ಈಗಲೆ
ಸತ್ತುದು ಸುಖ ಮರಣವೆ ಸರಿ.

ಸಜೆ ಆಗುವ ಯಾವುದೆ ಗುರುತರ
--ಪೊಲೀಸ್ ಕೇಳಿ, ಜಡ್ಜನು ಕೇಳಿ--
ಅಪರಾಧವ ಅವ ಮಾಡೇ ಇಲ್ಲ.

ಆದರೂ ಜಂಟಲ್ಮನ್ ಇತ್ತೀಚೆಗೆ
ಕನಸಂದ್ರೆ ಹೆದರೋದು ಛೇ ಏನಕೆ?

ಸುಮ್ಮಸುಮ್ಮನೆ ಬಯ್ಯೋದು
ನಿದ್ದೆಯ ಮಾಡದೆ ಕಾಯೋದು
"ತಿಳಿಸಿದ್ರೆ ನೋಡಿ ನಿಮ್ಮ"
ಎಂದೆಲ್ಲ ಹೆದರ್ಸೋದು
ಛೇ ಏನಕೆ ಹೀಗೆ ಛೇ ಏನಕೆ?


5


ಅಂದರು ಅವನಿಗೆ:
ಒಳಗೊಂದು ದೀಪವ
ಹೊತ್ತಿಸಿ ಇಡು ಸಾಕು.

ಪೂರಾ ತೆಗೆದರೆ
ಕಿಟಿಕಿಯ ಬಾಗಿಲ
ಬೀಸುವ ಗಾಳಿಗೆ
ಉಳಿಯದು ದೀಪ;
ಬಾಗಿಲು ಕಿಟಿಕಿಯ
ಮುಚ್ಚಿದರೂ ಸಹ
ಹೊಗೆ ಏರಿಯೆ ಒಳ
ಉಸಿರು ಕಟ್ಟುವುದು.

ಆರದ ಹಾಗೂ ಹೊಗೆ
ಏರದ ಹಾಗೂ ಒಳ
ದೀಪವ ಹೊತ್ತಿಸಿ
ಇಟ್ಟಿರು ಸಾಕು.

6

ಆದರೆ ಬಂದಿತು ನಾಯೊಂದು
ಎಂದಿತು ಬೌ ಬೌ ಬೌ ಎಂದು.

ಹಚ ಹಚ ಎಂದ;  
ಕೈಯ್ಯೂ ಬೀಸಿದ.

ಹತ್ತಿರ ಬಂತು,
ಕಚ್ಚಿಯೆ ಬಿಟ್ಟಿತು.

ಸಿಟ್ಟಲ್ಲಿ ತಾನೂ
ನಾಯಿಗೆ ಕಚ್ಚಿದ.

ಬಾಯಿಯ ತುಂಬಾ
ನಾಯಿಯ ರೋಮ;
ನಾಯಿಗೆ ಕಚ್ಚಿದ
ಎಂಬುದು ನಾಮ.

7

ಹಾಸಿಗೆ ಹಚ್ಚಡ ಹಾಸುತ್ತಾನೆ
ಒಬ್ಬನೆ ಹೊಕ್ಕು ಮಲಗುತ್ತಾನೆ.

ಹಾಸಿಗೆ ಒಬ್ಬಳು ಹೆಂಗಸು ಬೇಕು
ಹೆಂಗಸು ತರಿಸಲು ಪೈಸಾ ಬೇಕು.

ಕಾಸಿಗೆ ಕಾಸು ಸೇರಿಸ್ತಾನೆ
ಹಾಸಲು ಹೆಣ್ಣು ಹುಡುಕುತ್ತಾನೆ.

ಚೆಂದದ ಸ್ತ್ರೀಗಳ ಕಲ್ಪಿಸಿಕೊಂಡು
ಹಾಸಿಗೆ ಹೊಕ್ಕು ಮಲಗುತ್ತಾನೆ.

ಮಲಗಿದ್ದಲ್ಲೆ ಮುಲ ಮುಲ ಮಾಡಿ
ಮೂಸಿ ಹೇಸಿ ನೋಡುತ್ತಾನೆ.

ಎದ್ದರೆ ಜ್ಞಾನ ಆ ಮೇಲೆ ಸ್ನಾನ
ಉಳಿಸಲು ತಾಖತ್  ಪ್ರಾಣಾಯಾಮ.


8

ಅವಳೊಂದು ಮರ
ಇವನು ಹೂವಿನ ಬಳ್ಳಿ;
ಮೈ ಬಳಸಿ ಮೇಲಕ್ಕೆ
ಹತ್ತುತ್ತಿದ್ದ.

ಹಾವಾಗಿ ಪೊಟರೆ ಒಳ
ನುಗ್ಗುತ್ತಿದ್ದ.

ತೋಳನ್ನು ಕೊಕ್ಕಲ್ಲಿ
ತಿವಿಯುತ್ತಿದ್ದ.

ಮರ ಅಲ್ಲಾಡದೇ ಇತ್ತು
ಇದ್ದ ಹಾಗೇ.

ಮಂಚ ಮಾಡಿದ ಕಡಿದು
ಮಲಗಿ ಎದ್ದ.


**********

ಸೂಚನೆ: ಮೇಲಿನ ಕವನ ನನ್ನ ಕವನ ಸಂಗ್ರಹ ಮಾತಾಡುವ ಮರ, ಸಮಗ್ರ ಕಾವ್ಯ, 1964--2003ರಲ್ಲಿ ಪ್ರಕಟವಾಗಿದೆ. ಈ ಪುಸ್ತಕದ ವಿತರಕರು: ನುಡಿ ಪುಸ್ತಕ (ನ್ಯೂ ಪ್ರೀಮಿಯರ್ ಬುಕ್ ಶಾಪ್), ಬನಶಂಕರಿ 2ನೇ ಹಂತ, ಬೆಂಗಳೂರು, ಫೋನ್ 080 26711329 ಮತ್ತು ಅತ್ರಿ ಬುಕ್ ಸೆಂಟರ್, ಮಂಗಳೂರು, ಫೋನ್ 0824 2425161.













 

Friday, November 5, 2010

ನಾಟಕಗಳ ಹಾಡುಗಳು

ಈ ಕೆಳಗಿನವು ಈಗ ಪ್ರಕಟವಾಗಿರುವ ನನ್ನ ಸಮಗ್ರ ನಾಟಕಗಳು, ಸಂಪುಟ 1 ಮತ್ತು 2ರಲ್ಲಿರುವ ನಾಟಕಗಳ ಕೆಲವು ಹಾಡುಗಳು. ಈ ಎರಡು ಪುಸ್ತಕಗಳ ಪ್ರಕಾಶಕರು: ಬೋಧಿ ಟ್ರಸ್ಟ್. ವಿತರಕರು:  1. ನುಡಿ ಪುಸ್ತಕ (ನ್ಯೂ ಪ್ರೀಮಿಯರ್ ಬುಕ್ ಶಾಪ್), ನಂ. 27, 21ನೇ ಮುಖ್ಯ ರಸ್ತೆ, ಬಿ. ಡಿ. ಎ. ಕಾಂಪ್ಲೆಕ್ಸ್ ಎದುರು,  ಬನಶಂಕರಿ ಎರಡನೇ ಹಂತ, ಬೆಂಗಳೂರು 560070 (ಫೋನ್ 080 26711329) email premierpublishingco@yahoo.in  ಮತ್ತು  2. ಅತ್ರಿ ಬುಕ್ ಸೆಂಟರ್, ಶರಾವತಿ ಬಿಲ್ಡಿಂಗ್, ಬಲ್ಮಠ ರಸ್ತೆ, ಮಂಗಳೂರು 575001 (ಫೋನ್ 0824 2425161) email athreebook@gmail.com

*********


ಹತ್ತು ಹತ್ತು ಹತ್ತು
ಹತ್ತಿದ ಕುದುರೆಯ ರಾಜ
ರಾಜಾ ರಾಜಾ ರಾಜಾ
ರಾಜಂಗೊಬ್ಳು ರಾಣಿ
ರಾಣೀ ರಾಣೀ ರಾಣೀ
ರಾಣೀಗೊಂದು ಮಂಚ
ಮಂಚಾ ಮಂಚಾ ಮಂಚ
ಮಂಚಕ್ಕೆ ಎರಡು ರೆಕ್ಕೆ
ರೆಕ್ಕೇ ರೆಕ್ಕೇ ರೆಕ್ಕೇ

ಮಂಚದ ರೆಕ್ಕೆ ಗಾಳಿಲಿ ಬಡಿದು
ಮೇಲಕೆ ಹಾರೀ ಹಾರಿ

ಸೂರ್ಯನ ಬೆಂಕಿಗೆ ಮೋಡದ ತಂಪಿಗೆ
ಮಂಚಕೆ ಚಿಗುರೆಲೆ ಮೂಡಿ

ಮಂಚಕೆ ಚಿಗುರೆಲೆ  ಮೂಡಿ
ಮಂಚಕೆ ಚಿಗುರೆಲೆ ಮೂಡಿ

******

ಢಣಾಂ ಢಣಾಂ ಗಂಟೇ ಬಡಿದು
ಬಡಿದೂ ಬಡಿದೂ ಬಡಿದೂ
ಗಂಟೇ ಹಕ್ಕಿ ದಿನಗಳ ಹಾರಿ
ದಿನಗಳ ಹಾರಿ ತಾರೆಯ ಗೋರಿ
ಡಣಾ ಡಣಾಂ ಗಂಟೇ ಹಕ್ಕಿ
ಹಾರೀ ಹಾರೀ ಹಾರೀ--

******

ಕಾಡಿಗೆ ಹೋಗ್ತೀಯಾ ಪುಟ್ಟಿ
ಕಾಡಿಗೆ ಹೋಗ್ತೀಯಾ--
ಎಲ್ಲ ನೋಡಿಕೊಂಡು ಚೆಲುವೆ
ವಾಪಾಸು ಬರ್ತೀಯಾ--

ಕಾಡಿಗೆ ಹೋಗೋ ಕಾಲ ಬಂತು
ಕಾಡಿಗೆ ಹೋಗ್ತೀಯಾ--
ಎಲ್ಲ ನೋಡಿಕೊಂಡು ಚೆಲುವೆ
ವಾಪಾಸು ಬರ್ತೀಯಾ--

*****

ಕಾಲ ಸುರುವು ಆಗುವ ಮೊದಲು
ಆದಿಮಾಯೆ ದೇವರ ತಾಯಿ
ಅವಕಾಶದಲ್ಲಿ ಇದ್ದಳು ಆಗ
ಆದಿಮಾಯೆ ಲೋಕದ ತಾಯಿ
ಅವಕಾಶದಲ್ಲಿ ಇದ್ಕೊಂಡು ತಾಯಿ
ನೋಡುತ್ತಾಳೆ ಸುತ್ತಾಮುತ್ತ
ತಾಯಿ ನಾನು ಮಕ್ಕಳ ಸೃಷ್ಟಿ
ಮಾಡಿ ಕಾಲ ಚಾಲೂಲಿಡುವೆ
ಎಂದುಕೊಂಡು ಆದಿಮಾಯೆ
ದೇವರ ತಾಯಿ ಸೃಷ್ಟಿಯ ಮೂಲ
ಮನಸ್ಸಿನೊಳಗೆ ಗಂಡಸು ರೂಪ
ಮಾಡಿ ಹೊರಗೆ ತೆಗೆದು ಇಟ್ಟು
ಹಾಗೇ ಇನ್ನೊಂದು ಹೆಂಗಸು ರೂಪ
ಮಾಡಿ ಹೊರಗೆ ತೆಗೆದು ಇಟ್ಟು
ಆಡ್ಕೊಂಡು ಇರ್ರಿ ಮಕ್ಕಳೆ ನೀವು
ನಿಮ್ಮಂಥವರ ಹುಟ್ಟಿಸ್ಕೊಳ್ಳಿ
ಅಂತ ಅವರಿಗೆ ಆಟಕೆ ಬಿಟ್ಟು
ಆದಿಮಾಯೆ ಸೃಷ್ಟಿಯ ತಾಯಿ
ಇವೂ ಇರಲಿ ಎಂದು ಮಾಡಿ
ಪ್ರಾಣಿ ಪಕ್ಷಿ ಹರಿಯುವ ಜಂತು
ಇವರ ಯೋಗಕ್ಷೇಮ ನೋಡಲು
ದೇವರ ಮಾಡಿ ಮಗನೇ ದೇವರೇ
ಪ್ರಾಣಿ ಮನುಷ್ಯ ಯೋಗಕ್ಷೇಮ
ಹಗಲು ನೀನು ನೋಡ್ಕೋಬೇಕು
ಆ ಮೇಲೆ ಮಾಡಿ ಭೂತದ ರೂಪ
ಹೊರಗೆ ತೆಗೆದು ರಾತ್ರಿಯಲ್ಲಿ
ರಾತ್ರಿ ಹೊತ್ತ ಯೋಗಕ್ಷೇಮ
ನೋಡ್ಕೋಬೇಕು ನೀನು ಮಗನೆ
ಅಂತ ಅಂದು ಗಂಡು ಹೆಣ್ಣು
ಹಗಲು ರಾತ್ರಿ ಭೂತ ದೇವರು
ಮಾಡಿ ತಾಯಿ ಒಂದಕ್ಕೊಂದು
ಪೋಷಿಸಿಕೊಂಡು ಇರ್ರಿ ಎಂದು
ಅಂತರ್ಧಾನ ಆದ ಮೇಲೆ
ದೇವರು ಭೂತ ಹಂಚಿಕೊಂಡು
ಜಗತ್ತಿನ ಕೆಲಸ ಸೃಷ್ಟಿ ಸ್ಥಿತಿಯ
ಕಾಲದ ಚಾಲನೆ ಯೋಗಕ್ಷೇಮ
ಮಾಡ್ತಾ ಇರಲು ಭೂತಕ್ಕೆ ಹೇಗೋ
ಮನುಷ್ಯರ ರುಚಿಯು ಹತ್ತಿಬಿಡ್ತು
ಹತ್ತಿದ್ದೇನೇ ದೇವರ ಓಡಿಸಿ
ಮನುಷ್ಯರ ನಾವು ಅಡಿ ಮಾಡ್ಕೊಂಡ್ವಿ
ಭೋಗಿಸಿಕೊಂಡು ಇದ್ವಿ ನಾವು
ದೇವರ ಓಡಿಸಿ ದೆವ್ವವೆ ತುಂಬಿ
ದೆವ್ವವೆ ತುಂಬಿ ಭೂತದ ರಾಜ್ಯ
ಎಲ್ಲಾ ಕಡೆಗೆ ತುಂಬಿ ತುಂಬಿ

*******

ಎಷ್ಟೊಂದು ಹೂವುಗಳು!
ಎಷ್ಟೊಂದು ಹೂವುಗಳು!
ತಲೆಯ ಮೇಲೆ ಕಾಲ ಮೇಲೆ ಮೈಯ್ಯ ಮೇಲೆ ಹೂವು!
ಇಳೆಯ ಮೇಲೆ ಬಾನ ಮೇಲೆ ನದಿಯ ಮೇಲೆ ಹೂವು!
ಹೂವು ಮೈಯ್ಯ ತುಂಬ ಹೂವು!
ಹೂವು ಸಂದಿ ಸಂದಿ ಹೂವು!
ಹೂವು ಎದೆಯ ತುಂಬಿ ಹೂವು!
ಸಂದಿ ಸಂದಿ ಅರಳಿ ಹೂವು!
ಹೂವು ಹೂವು ಹೂವು!

*******

ಸುಗ್ಗಿ ಬಂದಿದೇ ವನಕೆ
ಸುಗ್ಗಿ ಬಂದಿದೆ.
ಸುಗ್ಗಿ ಬಂದಿದೇ ಈಗ
ಸುಗ್ಗಿ ಬಂದಿದೆ.
ಸುಗ್ಗಿ ಹಿರಿದು ಹಿರಿದು ಹಿಗ್ಗಿ
ತಗ್ಗು ತೆವರು ಕಣಿವೆ ಬೆಟ್ಟ
ಎಲ್ಲ ಎಲ್ಲ ಕಡೆಗೆ ನುಗ್ಗಿ
ಸುಗ್ಗಿ ಬಂದಿದೇ ಹಿಗ್ಗಿ
ಸುಗ್ಗಿ ಬಂದಿದೆ;
ಸುಗ್ಗಿ ಬಂದಿದೇ ಉಬ್ಬಿ
ಸುಗ್ಗಿ ಬಂದಿದೆ.

********

ಕುಣಿಯುತ್ತಾಳೆ ಸೃಷ್ಟಿಯ ತಾಯಿ
ಎಲ್ಲರ ತಾಯಿ ಸೃಷ್ಟಿಯ ಮೂಲ.
ಇರುಳನು ಒಳಗಡೆ ಅದುಮಿ ಹಗಲು
ಏಳುತ್ತಿರಲು ಮೈ ಮುರಕೊಂಡು
ಅದುಮಿದ ಇರುಳು ಕಂಪಿಸುತಿರಲು
ಹಗಲಿನ ಬೆನ್ನಿನ ಹಿಂಬದಿ ಕಾದು
ಹಕ್ಕಿ ಪಕ್ಕಿ ಬಡಿಯಲು ರೆಕ್ಕೆ
ಒಳಗಡೆ ಹೊಂಚಲು ಪಶುಗಳು ಪ್ರಾಣಿ
ಭೂತ-ದೇವರು ಹೋರುತ್ತಿರಲು
ಮರಸಿಗೆ ಕೂತಿರೆ ನೊಣೆಯುವ ಇರುಳು
ಭೂಮಿ ಆಗಸ ಆಗಲಿಸೆ ತೊಡೆಯ
ಸೂರ್ಯ ತೂರಲು ಕೆಂಪನೆ ಕಿರಣ
ತೂರಲು ಸೂರ್ಯ ಕೆಂಪನೆ ಕಿರಣ
ಕಂಪಿಸೆ ಒಳಗಡೆ ನೊಣೆಯುವ ಇರುಳು
ಕುಣಿಯುತ್ತಾಳೆ ಕುಣಿಯುತ್ತಾಳೆ
ಸೃಷ್ಟಿಯ ತಾಯಿ ಎಲ್ಲರ ತಾಯಿ
ನೊಣೆಯುವ ಇರುಳು ಕಂಪಿಸುತಿರಲು
ಹಗಲಿನ ಬೆನ್ನಿನ ಹಿಂಬದಿ ಹೊಂಚಿ
ನೊಣೆಯುವ ಇರುಳು ಕಂಪಿಸುತಿರಲು
ಹಗಲಿನ ಬೆನ್ನಿನ ಹಿಂಬದಿ ಹೊಂಚಿ
ಕುಣಿಯುತ್ತಾಳೆ ಕುಣಿಯುತ್ತಾಳೆ
ಎಲ್ಲರ ತಾಯಿ ಸೃಷ್ಟಿಯ ಮೂಲ
ಎಲ್ಲರ ತಾಯಿ ಸೃಷ್ಟಿಯ ಮೂಲ.
                
                                                  (ಪುಟ್ಟಿಯ ಪಯಣ)
******

ಮುದದಿಂದ ಹಾಡುವ
ಒದಗಿ ಬಂದಿರುವಂಥ
ಚದುರ ಜನಗಳ ಎದುರು
ಮುಕ್ತ ಅಂಗಣದೀ.

ದೇಗುಲದ ಒಳಗಿಹನು
ಪ್ರಭುವು ನಾರಾಯಣನು
ಪರಮ ಕರುಣಾಸಿಂಧು
ಜಗದ ಒಡೆಯಾ.

ಸರುವ ಶಕ್ತನು ಅವನು
ಜೊತೆಗೆ ಲಕ್ಷ್ಮೀದೇವಿ
ಜಗದ ತಾಯ್ತಂದೆಯರು
ಸಲಹಲೆಮ್ಮಾ.

ನಾವು ಸೂತ್ರದ ಬೊಂಬೆ
ದೇವ ಆಡಿಸಿದಂತೆ
ಆಡುವೆವು ಕೆಲವು ಕ್ಷಣ
ಅರ್ಥ ಹುಡುಕೀ.

ಮುದದಿಂದ ಕುಣಿಯುವ
ದೇಗುಳದ ಅಂಗಣದಿ
ಚದುರ ಜನಗಳ ಎದುರು
ಒದಗಿದಂಥಾ.

ಒಳಗೆ ನಾರಾಯಣನು
ಜೊತೆಗೆ ಲಕ್ಷ್ಮೀದೇವಿ
ಪರಮ ಕರುಣಾಮೂರ್ತಿ
ಕೃಪೆದೋರಲೀ.

******

ಬಂದ ನಾರಾಯಣನು
ಬಂದ ಲಕ್ಷ್ಮೀರಮಣ
ಬಂದ ಸೃಷ್ಟಿಯ ಒಡೆಯ
ಎದ್ದು ಬಂದ.

ಅವನಿಂದಲೇ ಚಲನೆ
ಅವನಿಂದಲೇ ಬೆಳಸು
ಪ್ರತಿಯೊಂದು ಖಗಮೃಗಕೆ
ಜೀವದೊಡೆಯಾ.

ದೇವ ಅವ ಇದ್ದಾನೆ
ಅಣು ರೇಣು ತೃಣ ಕಾಷ್ಠ
ಮೂಲೆ ಮೂಲೆಗಳಲ್ಲಿ
ಪರಮ ಪುರುಷಾ.

ಎದ್ದು ಬಂದಾಗವನು
ಎದ್ದು ಬಂದಂತೆ ಜಗ
ಅಂಥ ಅವಿನಾಭಾವ
ದೇವ-ಭವಕೇ.

ದೇವರು ತೋರಿದ ದಾರಿಯ ಹಿಡಕೊಂಡು
ಜೀವಿಯ ಬದುಕದೊ ಸಾಗುವುದು.

ಪ್ರತಿಯೊಂದು ನಡಿಗೆಯ ಪ್ರತಿಯೊಂದು ಹೆಜ್ಜೆಯು
ಅವನೆಡೆ ಮುಕ್ತಿಯ ಗತಿಯು.

ನಂಬುತ ನಡೆದರೆ ಹಾದಿಯ ಮುಳ್ಳನು
ಅವನೇ ಹೂಗಳ ಮಾಡುವನು.

ಅವ ಸಿಟ್ಟಾದರೆ ಹೂಗಳ ಮಾಲೆಯೆ
ಮುಳ್ಳಾಗಿಯೆ ಎಡೆ ಚುಚ್ಚುವುದು.

ಅವನೇ ಮತಿಯು ಅವನೇ ಶಕುತಿಯು
ಅವನೇ ಮಾರ್ಗವು ಗತಿಯು.

                                                        (ಸುದರ್ಶನ)
******

ನಾನೇ ಕೃಷ್ಣ ಅಂತ ಹಾಡುತ್ತ ಕುಣೀತಾರೆ
ವೇಷಕೆ ಎಷ್ಟೊಂದು ಜನ ಈಗ ಉಂಟು

ಕೃಷ್ಣ ಕೃಷ್ಣ ಅಂತ ಹರಕೊಂಡು ಕುಣಿತಾರೆ
ವೇಷಕೆ ಎಷ್ಟೆಲ್ಲ ಪರಿಕರ ಉಂಟು

ಕೃಷ್ಣ ಎಂಬವನೊಬ್ಬ ಆದವ ಎಂಬುದ
ಮರೀತಾರೆ ವೇಷಕೆ ಜನ ಎಷ್ಟು ಉಂಟು

ಸತ್ತಿದ್ರು ಬದುಕಿದ ಹಾಗೇನೆ ಕುಣಿತಾರೆ
ಕಾಲದ ಹೊರಗೆಷ್ಟು ಜನ ಈಗ ಉಂಟು

ಕೃಷ್ಣ ಕೃಷ್ಣ ಅಂತ ನಾನೆ ಕೃಷ್ಣ ಅಂತ
ಕುಣಿಯೋಕೆ ಎಷ್ಟೊಂದು ಜನ ಈಗ ಉಂಟು.

                                                         (ಕೊಳಲು ಮತ್ತು ಶಂಖ)
********

ಪ್ರೇಮಿಗಳ ಹೃದಯದಿ ನೆಲೆ ನಿಂತ ದೇವರು
ಶೋಭಾನೆಯೇ ಶುಭ ಶೋಭಾನೆಯೇ.

ಇದ್ದರು ವಿಘ್ನ ವಿಡ್ಡೂರ ಶತ ಸಾವಿರ
ಕಟ್ಟುವ ಗುಬ್ಬಚ್ಚಿ ಸಂಸಾರ ಶೋಭಾನೆ
ಶೋಭಾನೆಯೇ ಶುಭ ಶೋಭಾನೆಯೇ

ಸೆರೆಯಲಿ ಹುಟ್ಟಿದ ಬಾಲಕ ನಮ್ಮಯ
ಮನ ಸೆರೆ ಗೋಡೆಯ ಒಡೆಯಲಿ ಶೋಭಾನೆ
ಶೋಭಾನೆಯೇ ಶುಭ ಶೋಭಾನೆಯೇ.

ಕಾಲು ಆಗಲಿ ಕಂಬ ದೇಹವು ದೇಗುಲ
ಶಿರ ಹೊನ್ನ ಕಳಶವು ಶೋಭಾನೆಯೇ
ಶೋಭಾನೆಯೇ ಶುಭ ಶೋಭಾನೆಯೇ.

ದೇಹವು ದೇಗುಲ ಶಿರ ಹೊನ್ನ ಕಳಶವು
ಕಾಲೆಂಬ ಕಂಬವು ಶೋಭಾನೆಯೇ
ಶೋಭಾನೆಯೇ ಶುಭ ಶೋಭಾನೆಯೇ.

                                                 (ಸುದರ್ಶನ)

Monday, November 1, 2010

I AM NOT IN SPAIN

Today morning I received a message to my gmail address from my yahoo address that I am in Spain, have been robbed, am in need of 2000 Euros, and please send that amount of money. I learn from friends that many have received  this message. I  haven`t gone to Spain. I am here in India. Someone has hacked my mail and sending  this message. Please ignore it.
In future, please use the following email to correspond with me:
ramachandradv@gmail.com
bodhitrustk@gmail.com

Thursday, October 28, 2010

TWO POEMS BY ADIGA

The following are my  translations  of  two more poems by Gopalakrishna Adiga, Kannada poet.

THIS LAND OF OURS NOW

Put this tree, dead in roots, erect,
Let the branches be as they are;
Collect the fallen leaves with choked feelings,
Boil them, prepare soup, and drink.

Water the tree; while you are sad
Water  it with tears; show sympathy
With all your might; inside
Curry the favours of  Sani.

Bring bulbs of rainbow colours; and
Hang them on evey branch of the tree;
Fix the paper flowers, scent them with perfumes;
And play the casettes of birds` songs.

You can`t complain that the tree is dead, there`s no shade;
Do you want a better shade than the shade of the roof of gold?
This is an ancient tree; what other solid branch you want
Than this to hang yourself and die?

When the wind blows from the west
The stage becomes active with the western dance and music;
This immortal tree doesn`t like the muddy water of the surrounding earth:
It sucks the nectar of heaven and grows.

Won`t even a single bird come here? --
Parrot, koyal, sparrow, crow, or owl?
Beat the koyal to death, stuff  it with grass,
And then neatly arrange it on the branch.

Cover the moth-eaten tree with gold; and,
Carve its story on the trunk:
"There was shade here once, green leaves and buds, flowers and fruits,
koyal`s song, parrot`s nest;

Here was Kodanda, and the Panchajanya,
And the wheel--it was turning;
There were hermits, and the Vedas,
And this and that and much more."

Hoist high the flag of "Was".
Bother not about the "Is".
There is tree, there is gold,
Water it and grow.


THE CRITIC


Like a shadow you climbed the heights I climbed,
Crept into the lower depths I jumped,
Rubbing your wings to my wings you too flew towards the horizons I flew,
Explored, like me, new horizons; still,
You stood apart, untouched, spreading yourself
Above, below, around, piercing the sky,
Drilling the ground.

I opened myself  from top to toe,
Filled the inside with salt,
Stitched the wounds,
Went underground, became a vampire,
Came up, jumped towards the sun, burnt the wings,
Fell on the ground,
On that very place built a cave around,
Became the very darkness of that cave,
Strived for fourteen years, became bitter,
Then ripened, exploded like fire,
Got back the wings--one seen, the other unseen.
Harmoniously I kept changing
From the concrete to the abstract, from the abstract
To the real--all these
Were seen by you too.
Still, like a shadow,
You remained whole, undisturbed.

You rise in the mind`s eye: you are not there outside,
But here in me:
Testing, measuring, weighing, checking--all these
Are your tasks. You pricked me with a needle
While I slept; let out
The unnecessary air while I swelled.
Are you an inside shadow? Or,
A spy  from Chitraguptha?
You didn`t allow me to wander around
Like any emotion-bound animal would like to do.
You made me regret, burnt me with regret,
Caught me in the wheel of right and wrong,
Insulted me, dragged me to the streets, killed me,
By killing you rejuvenated me,
You, a Sani, a leech, yet a friend, my guru.