Wednesday, January 25, 2012

ತುಳುವ ಪತ್ರಿಕೆ

ತುಳುವ ಉಡುಪಿಯ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ ಹೊರ ತರುತ್ತಿರುವ ತ್ರೈಮಾಸಿಕ. ಇದರ ಪ್ರಧಾನ ಸಂಪಾದಕರು ಗೋವಿಂದ ಪೈ ಸಂಶೋಧನ ಕೇಂದ್ರದ ನಿರ್ದೇಶಕರಾದ ಪ್ರೊ. ಎಚ್. ಕೃಷ್ಣ ಭಟ್ಟ ಅವರು. ಅವರ ಜೊತೆಗೆ ಸಂಪಾದಕ ಮಂಡಲಿಯಲ್ಲಿರುವವರು ಡಾ. ಎನ್. ತಿರುಮಲೇಶ್ವರ ಭಟ್ಟ, ಪ್ರೊ. ಮುರಳೀಧರ ಉಪಾಧ್ಯ, ಎಸ್. ಎ. ಕೃಷ್ಣಯ್ಯ, ಅಶೋಕ ಆಳ್ವ, ಮತ್ತು ಪಾದೇಕಲ್ಲು ವಿಷ್ಣು ಭಟ್ಟ. ನಿಯತವಾಗಿ, ಚಿತ್ರ, ವಿಮರ್ಶಾತ್ಮಕ/ಸಂಶೋಧನ ಲೇಖನಗಳಿಂದ ಕೂಡಿ ಚೆಂದಕ್ಕೆ ಬರುತ್ತಿರುವ ಪತ್ರಿಕೆ ಇದು. ವಿಮರ್ಶೆಗಿಂತ ಎನೆಕ್ಡೋಟುಗಳು, ಸಂಶೋಧನೆಗಿಂತ ರೂಮರುಗಳು ಪ್ರಿಯವಾಗುತ್ತಿರುವ ಇಂದಿನ ದಿನಗಳಲ್ಲಿ ಸಂಶೋಧನೆಗೇ ಒತ್ತು ಕೊಡುವ ಈ ಪತ್ರಿಕೆ ಅಪರೂಪದ್ದೂ ಪ್ರೋತ್ಸಾಹಕ್ಕೆ ಅರ್ಹವಾದದ್ದೂ ಆಗಿದೆ.

ಹೆಸರು ತುಳುವ ಆಗಿದ್ದರೂ ಇಲ್ಲಿನ ಅನೇಕ ಲೇಖನಗಳು ಒಟ್ಟು ಕನ್ನಡ ಸಂಸ್ಕೃತಿಯನ್ನು ಬಿಂಬಿಸುತ್ತವೆ. ಉದಾಹರಣೆಗೆ ಈ ಸಲದ ಸಂಚಿಕೆಯಲ್ಲಿ ಇರುವ ಎನ್. ಪಿ. ಶೆಟ್ಟಿ ಬರೆದಿರುವ ಮುಳಿಯ ತಿಮ್ಮಪ್ಪಯ್ಯನವರ ಕವಿರಾಜಮಾರ್ಗ ವಿವೇಕ ಕುರಿತ ಲೇಖನ ನೋಡಿ. ಈ ಲೇಖನ ನೋಡಿದ ಮೇಲೆ ಮುಳಿಯರ ಆ ಪುಸ್ತಕ ಹುಡುಕಿಕೊಂಡು ಹೋಗಿ ಓದಬೇಕು ಅನ್ನಿಸಿತು. ಹಾಗೆಯೇ ಕವಿ ಕಣವಿಯವರ ಗದ್ಯ ಸಂಪುಟ ಕುರಿತು ಎಂ. ರಾಮಚಂದ್ರರ ಭಾಷಣದ ಲಿಖಿತ ರೂಪ ಉಪಯುಕ್ತವಾಗಿದೆ.

ಕವಿರಾಜ ಮಾರ್ಗದ ಕಾಲ ಕನ್ನಡಿಗರು ಸಾಮ್ರಾಜ್ಯ ಕಟ್ಟಿದ ಕಾಲ. ಸಾಮ್ರಾಟರ ಮಂಡೆ ಅವರು ಬ್ರಿಟಿಷರಿರಲಿ ಅಮೆರಿಕನ್ನರಿರಲಿ ಕನ್ನಡಿಗರಿರಲಿ ಯಾವಾಗಲೂ ಒಂದೇ ನಮೂನೆ ಇರುತ್ತದಾದರೂ ಕನ್ನಡಿಗರು ಅಸ್ಮಿತೆ ಪಡೆಯುತ್ತಿರುವ ಈ ಕಾಲದಲ್ಲಿ ನಮ್ಮ ಹಿರಿಯರು ಎರಡು ಸಲ ಅಖಿಲ ಭಾರತ ಮಟ್ಟದಲ್ಲಿ ಸಾಮ್ರಾಜ್ಯ ಕಟ್ಟಿದರು ಎನ್ನುವುದು ನೆನಪಿಗೆ ತಂದುಕೊಳ್ಳಬೇಕಾದ ವಿಷಯವಾಗಿದೆ. ಈ ದೃಷ್ಟಿಯಿಂದ ಕವಿರಾಜ ಮಾರ್ಗ ಮತ್ತೆ ಮತ್ತೆ ಚರ್ಚಿಸಬೇಕಾದ ಕೃತಿ.

ಜೊತೆಗೆ ಗೋವಿಂದ ಪೈ ಸಂಶೋಧನ ಕೇಂದ್ರ ಎಷ್ಟು ಮುಖ್ಯ ಮತ್ತು ಉಪಯುಕ್ತ ಕೆಲಸಗಳನ್ನು ಮಾಡುತ್ತಿದೆ ಎಂಬ ವಿವರಗಳು ನಮಗೆ ಈ ಪತ್ರಿಕೆಯಿಂದ ಸಿಗುತ್ತವೆ.

ಮೇಲಿನ ಚಿತ್ರ 2011ರಲ್ಲಿ ಶಿವರಾಮ ಕಾರಂತರ ಜನ್ಮದಿನದ ಕಾರ್ಯಕ್ರಮದ ಅಂಗವಾಗಿ ನಡೆದ ಕಲಾಶಿಬಿರದಲ್ಲಿ ಬಿಡಿಸಲಾದ ಚಿತ್ರ. ಇದು ಮತ್ತು ಕೆಳಗಿನ ಚಿತ್ರಗಳನ್ನು ನೋಡಿದಾಗ, ಅರೇ, ಕಾರಂತರ ಅನೇಕ ಪಾತ್ರಗಳು ಸುಮಾರು ಹೀಗೇ ಇದ್ದಾವಲ್ಲ, ಅವರ ಕಾದಂಬರಿಗಳನ್ನು ಓದುವಾಗ ನಾನು ಆ ಪಾತ್ರಗಳನ್ನು ಕಲ್ಪಸಿಕೊಂಡದ್ದು ಹೆಚ್ಚು ಕಡಿಮೆ ಹೀಗೇ ಅಲ್ಲವೇ ಅನ್ನಿಸಿತು.
************************


No comments:

Post a Comment