Monday, August 22, 2011

ಹಳ್ಳಿಗಳಲ್ಲಿ ಲಂಚ

ಇತ್ತೀಚಿನ ಎರಡು ವಿದ್ಯಮಾನಗಳು ನನಗೆ ತುಂಬಾ ಖುಷಿ ಕೊಟ್ಟಿವೆ. ಈ ದೇಶದ ಭವಿಷ್ಯದ ಬಗ್ಗೆ ಭರವಸೆ ಹುಟ್ಟಿಸಿವೆ. ಮೊದಲನೆಯದ್ದು ಅಣ್ಣಾ ಹಜಾರೆಯವರ ಪ್ರತಿಭಟನೆಯ ಹಕ್ಕನ್ನು ದಮನಿಸಲು ಸರಕಾರಕ್ಕೆ ಸಾಧ್ಯವಾಗದೆ ಇದ್ದದ್ದು. ಜನ ಸ್ವಯಂಸ್ಫೂತಿಯಿಂದ ಪ್ರತಿಭಟಿಸಿದ ಕ್ರಮವೇ ಈ ದೇಶದಲ್ಲಿ ಪ್ರಜಾಪ್ರಭುತ್ವ ಬೇರೂರುತ್ತಿದೆ, ಜನರಿಗೆ ಅದರ ಮಹತ್ವ ಗೊತ್ತಾಗಿದೆ ಎನ್ನುವುದಕ್ಕೆ ಸಾಕ್ಷಿ. ಎರಡನೆಯದ್ದು  ಯಡಿಯೂರಪ್ಪನವರು ಅಧಿಕಾರದಿಂದ ಕೆಳಗಿಳಿದದ್ದು. ಮಾತ್ರವಲ್ಲ, ಅವರಿಗೆ ರಾಜ್ಯ ಪ್ರವಾಸಕ್ಕೆ ಅವರ ಪಕ್ಷದ ವರಿಷ್ಠರು ಅನುಮತಿ ನಿರಾಕರಿಸಿದ್ದಾರೆ. ಅತಿ ಭ್ರಷ್ಠರ ಜೊತೆಗಿನ ಸಂಬಂಧಕ್ಕೆ ಅವರಿಗಿಂತ ಕಮ್ಮಿ ಭ್ರಷ್ಠರು  ತಯಾರಿಲ್ಲ. ಭ್ರಷ್ಠತೆಯೇ ಸಂಬಂಧದ ಅಡಿಪಾಯವಾಗಿರುವ ರಾಜಕಾರಣದಲ್ಲಿ ಇದನ್ನು ಶುಭ ಸೂಚನೆಯೆಂದೇ ಪರಿಗಣಿಸಬೇಕಾಗುತ್ತದೆ.

ರಾಜಕಾರಣಿಗಳ, ದೊಡ್ಡ ಅಧಿಕಾರಿಗಳ  ಭ್ರಷ್ಠತೆಯಷ್ಟೇ ಮುಖ್ಯವಾದದ್ದು ಹಳ್ಳಿಗಳ, ಸಣ್ಣ ಪುಟ್ಟ ಊರುಗಳ ಅಧಿಕಾರಿಗಳ ಲಂಚಗುಳಿತನ. ನಮ್ಮ ಎಲ್ಲಾ ವಿಲೇಜ್ ಅಕೌಂಟೆಂಟುಗಳ, ಪಂಚಾಯತ್ ಅಧಿಕಾರಿಗಳ ಆಸ್ತಿಪಾಸ್ತಿ ಆದಾಯಗಳ ತನಿಖೆ ತುಂಬಾ ಅಗತ್ಯ. ಇವರ ಲಂಚಗುಳಿತನ, ಅಧಿಕಾರ ಮದ ತಡೆಯಲು ಮತ್ತು ತಗ್ಗಿಸಲು ಪ್ರತಿ ಊರಿನಲ್ಲಿ ಒಂದು ವಿಜಿಲೆನ್ಸ್ ಕಮಿಟಿ ಇರಬೇಕು. 1980 ದಶಕದ ರೈತ ಹೋರಾಟದ ಸಮಯದಲ್ಲಿ ಶಿವಮೊಗ್ಗ ಸಮೀಪದ ಗಾಜನೂರಿನಲ್ಲಿ ರೈತರೇ ಸೇರಿ ಇಂಥಾ ಒಂದು ವಿಜಿಲೆನ್ಸ್ ಕಮಿಟಿ ಕಟ್ಟಿದ್ದರು. ಮನಸ್ಸಿಗೆ ಬಂದ ಹಾಗೆ ದರ್ಬಾರು ಮಾಡುವುದು ಅಧಿಕಾರಿಗಳಿಗೆ ಆಗ ಅಸಾಧ್ಯವಾಗಿತ್ತು. "ಅಧಿಕಾರಿಗಳು ರೈತರನ್ನು ಭೇಟಿಯಾಗುವ ಸಮಯ: ಸಾಯಂಕಾಲ 7ರಿಂದ 8 ಗಂಟೆ" ಎಂಬ ಒಂದು ಬೋರ್ಡು ಆಗ ಆ ಊರಿನಲ್ಲಿ ಇತ್ತು. ನನಗೆ ಅದು ಸರಿ ಅನ್ನಿಸುತ್ತದೆ. ಅಧಿಕಾರಿಗಳನ್ನು ನಾವು ಭೇಟಿಯಾಗಬಹುದಾದ ಸಮಯವನ್ನು ಅವರು ನಿಗದಿಪಡಿಸಬಹುದಾದರೆ ನಮ್ಮನ್ನು ಅವರು ಭೇಟಿಯಾಗಬೇಕಾದ ಸಮಯವನ್ನು ನಾವು ರೈತರು ಯಾಕೆ ನಿಗದಿ ಪಡಿಸಬಾರದು? ಎಷ್ಟೆಂದರೂ ಅವರಿಗೆ ಸಂಬಳ ಬರುವುದು ನಾವು ಕೊಡುವ ತೆರಿಗೆಯ ದುಡ್ಡಿನಿಂದ. ಹೀಗಾಗಿ ಅವರು ನಮ್ಮ ಕೈಕೆಳಗಿನವರು. ಅವರಲ್ಲಿ ಹೆಚ್ಚಿನವರು ಲಂಚ ತಿನ್ನುವುದರಿಂದ ನೈತಿಕವಾಗಿಯೂ  ನಮಗಿಂತ ಕೆಳಗಿನವರು.

ಗಾಜನೂರಿನಲ್ಲಿ ಆಗ ಭಾನುವಾರ ಒಂದು ಸರಕಾರಿ ಜೀಪು ಜನರನ್ನು ತುಂಬಿಕೊಂಡು ಹೋಗುತ್ತಿತ್ತಂತೆ. ವಿಚಾರಿಸಿದಾಗ ಅಧಿಕಾರಿಯೊಬ್ಬರ ಸಂಬಂಧಿಕರ ಮದುವೆಗೆ ಹೋಗುತ್ತಿತ್ತೆಂದು ತಿಳಿಯಿತು. ರೈತರು ಆ ಖಾಸಗಿ ಪಾರ್ಟಿಯನ್ನು ಸರಕಾರಿ ಜೀಪಿನಿಂದ ಇಳಿಸಿ ಬಸ್ಸಿನಲ್ಲಿ ಹೋಗುವಂತೆ ಮಾಡಿದರಂತೆ. ಪ್ರತಿ ಹಳ್ಳಿಯಲ್ಲಿ ಇಂದು ಇಂಥಾ ಎಚ್ಚರ ಮೂಡಬೇಕಾದ ಅಗತ್ಯವಿದೆ.

ನಾನು ಕಲ್ಮಡ್ಕಕ್ಕೆ ಬಂದ ಸುರುವಿಗೆ 2000-2001ರ ಸುಮಾರಿಗೆ ಒಂದು ಸಭೆ ನಡೆದಿತ್ತು. ಯಾವುದರ ಕುರಿತ ಸಭೆಯೆಂದು ಮರೆತುಹೋಗಿದೆ. ಅದರ ಅಧ್ಯಕ್ಷತೆಯನ್ನು ನಾನೇ ವಹಿಸಿದ್ದೆ. ಹೀಗಾಗಿ ಸಾಹಿತ್ಯಕ್ಕೆ ಸಂಬಂಧಿಸಿದ ಯಾವುದೋ ಸಭೆ ಇರಬೇಕು. ಅದಕ್ಕೆ ಇಲ್ಲಿನ ಆಗಿನ  ವಿಲೇಜ್ ಅಕೌಂಟೆಂಟ್ ಬಂದಿದ್ದ. ಅವನು ಕೂತ ಗತ್ತು ನೋಡಬೇಕಿತ್ತು. ಕಾಲು ಚಾಚಿ. ಕುರ್ಚಿಯಲ್ಲಿ ಮಲಗಿದಂತೆ ನೀಳವಾಗಿ ಮೈ ಚಾಚಿ ಒರಗಿ. ತೊಡೆಗಳನ್ನು ಅಗಲಿಸಿ ಕೂತಿದ್ದ. ಆ ಸಭೆಯಲ್ಲಿ ಬೇರೆ ಯಾರೂ ಹಾಗೆ ಕೂತಿರಲಿಲ್ಲ. ಹಾಗೆ ಅವ ಕೂತ ಕ್ರಮ ನೋಡಿ ಬರುತ್ತಿದ್ದ ಸಿಟ್ಟನ್ನು ನುಂಗಿಕೊಂಡು ಸಭೆ ನಡೆಸಿದೆ. ಈಗ ಅನ್ನಿಸುತ್ತಿದೆ: ಒಂದೋ ಸರಿಯಾಗಿ ಎಲ್ಲರೂ ಕೂತ ಹಾಗೆ ಕೂತುಕೊಳ್ಳಿ, ಆಗುವುದಿಲ್ಲ ಎಂದಾದರೆ get out ಎಂದು ಹೇಳಬೇಕಿತ್ತು ಎಂದು. ಹಾಗೆ ಅವತ್ತು ಹೇಳಲಿಲ್ಲ, ನನ್ನ ಸಿಟ್ಟನ್ನು ತೋರಿಸಿಕೊಳ್ಳಲಿಲ್ಲ ಎಂದು ನನ್ನ ಬಗ್ಗೆ ನನಗೆ ಅಸಮಾಧಾನವಿದೆ.




No comments:

Post a Comment