Sunday, August 7, 2011

ಬರೆಯದ ದಿನಗಳು

ಬ್ಲಾಗು ಬರೆಯದೆ ಅನೇಕ ದಿನಗಳಾದವು.  ನನ್ನ ಸ್ಕಾನರ್ ಕೆಟ್ಟು, ಅದು ರಿಪೇರಿಯಾಗಲಿ, ಆದ ಮೇಲೆ ವಿಜಯ ಕರ್ನಾಟಕದಲ್ಲಿ ಭೈರಪ್ಪನವರ ಕಾದಂಬರಿ ಬಗ್ಗೆ ಬರೆದದ್ದನ್ನು ಹಾಕಿ ಆ ಮೇಲೆ ಬೇರೆ ಬರೆಯೋಣ ಎಂದುಕೊಂಡು ದಿನ ಕಳೆದೆ. ಸ್ಕಾನರ್ ಇನ್ನೂ ರಿಪೇರ ಆಗಿ ಬಂದಿಲ್ಲ. ಹಳ್ಳಿ ಜೀವನದ ಕೆಲವು ತೊಡಕುಗಳಲ್ಲಿ ಇದು ಒಂದು. ಪೇಟೆಯಲ್ಲಿ ಒಂದು ದಿನದಲ್ಲಿ ಆಗುವ ಕೆಲಸಕ್ಕೆ ಇಲ್ಲಿ ಅನೇಕ ದಿನ ಹಿಡಿಯುತ್ತದೆ. ಕೆಲವು ಸಲ ಬಿಡಿ ಭಾಗಗಳನ್ನು ಬೆಂಗಳೂರಿನಿಂದ ತರಿಸಿ ಹಾಕಬೇಕಾಗುತ್ತದೆ. ಅಲ್ಲಿ ಕಮ್ಮಿಗೆ ಸಿಗುವುದರಿಂದ ಹಾಗೆ ಮಾಡಲು ಇಲ್ಲಿನವರು ಇಷ್ಟ ಪಡುತ್ತಾರೆ. ಆದರೆ ಒಂದು ಕೆಲಸ ಮಾಡಲು ಇನ್ನೊಂದು ಕೆಲಸ ಮುಗಿಯುವ ವರೆಗೆ ಕಾಯುವುದರಿಂದ ಸಮಯ ವ್ಯರ್ಥವಾಗುವುದು ನಿಜ.

ಪರ್ವದ ನಂತರ--ಆವರಣ ಬಿಟ್ಟು--ಕವಲು ವರೆಗಿನ ಭೈರಪ್ಪನವರ ಕಾದಂಬರಿಗಳು ಶ್ರೆಷ್ಠ ಎಂದು ವಿಜಯ ಕರ್ನಾಟಕದಂಥಾ ಬಹು ಜನ ಓದುವ ಪತ್ರಿಕೆಯಲ್ಲಿ ಬರೆದೆನೆಂದು ನನಗೆ ಸಂತೋಷವಾಗಿವೆ. ಅನುಭವದ ವ್ಯಾಪ್ತಿಯಲ್ಲಿ , ಪಾತ್ರಚಿತ್ರಣದ ವೈವಿಧ್ಯತೆಯಲ್ಲಿ ಅವರು ಅವರ ಸಮಕಾಲೀನರಲ್ಲೇ ಶ್ರೇಷ್ಠರು. ಅವರು ಅನಂತಮೂರ್ತಿಗಿಂತ ಹೆಚ್ಚು ಶ್ರೇಷ್ಠ ಕಾದಂಬರಿಕಾರರು. ಅನಂತಮೂರ್ತಿ ವಿಮರ್ಶೆ, ಭಾಷಣ, ಸಾಹಿತ್ಯ ಪ್ರಸಾರ ಮೊದಲಾದವುಗಳ ಮೂಲಕ ನಮ್ಮ ಮುಖ್ಯ ಸಾಹಿತ್ಯಪುರುಷ. ಆದರೆ ಕಾದಂಬರಿಕಾರರಾಗಿ ಅವರ ಸಾಧನೆ ಭೈರಪ್ಪ ಸಾಧಿಸಿದದಕ್ಕಿಂತ ಕಮ್ಮಿ ಮಟ್ಟದ್ದು. ಇದನ್ನು ಗುರುತಿಸಲು ಸಾಧ್ಯವಾಗದೆ ಇರುವುದನ್ನು ನೋಡಿದಾಗ ಕೆಲವು ಸಲ ಅವರ ವಿಮರ್ಶನಶಕ್ತಿಯ ಬಗ್ಗೆ  ಅನುಮಾನವಾಗುತ್ತದೆ. ಗೊತ್ತಾಗಿಯೂ ಬೇಕಂತಲೇ ಭೈರಪ್ಪನವರನ್ನು ರಾಹುಗ್ರಸ್ತರೆಂದು ಕರೆಯುವುದು--ತಮ್ಮ ಥಿಯರಿಗಳಿಂದ ಗ್ರಸ್ತರಾಗಿ ಜೀವನಾನುಭವದಿಂದ ದೂರವಾದವರು ಎಂಬ ಅರ್ಥದಲ್ಲಿ--ಎಂದಾಗಿದ್ದರೆ ಅವರ ಪ್ರಾಮಾಣಿಕತೆ ಶಂಕಿಸಬೇಕಾಗುತ್ತದೆ.  ಸಾಕ್ಷಿ, ತಂತು ಮಟ್ಟದ ಅಪಾರ ಜೀವನಾನುಭವದ ಜೀವಂತಿಕೆಯಿಂದ ತುಂಬಿ ತುಳುಕುವ ಕಲಾಕೃತಿಗಳನ್ನು ಅವರ ಸಮಕಾಲೀನರು ಯಾರೂ ಸೃಷ್ಟಿಸಿಲ್ಲ.

No comments:

Post a Comment