Sunday, April 21, 2013

ಮುರಳೀಧರ ಉಪಾಧ್ಯ

ಪೂರ್ಣಚಂದ್ರ ತೇಜಸ್ವಿ ಇದ್ದಾಗ ಕಂಪ್ಯೂಟರ್ ಮತ್ತು ಅದರ ಅಗತ್ಯಗಳ ಬಗ್ಗೆ ತುಂಬಾ ಹೇಳುತ್ತಿದ್ದರು. ಕಂಪ್ಯೂಟರನ್ನು ನಾವು ಕನ್ನಡಿಗರು ಸರಿಯಾಗಿ ಬಳಸಲು ಕಲಿಯದಿದ್ದರೆ ಜಾಗತಿಕ ವಲಯದಲ್ಲಿ ಹಿಂದುಳಿದು ಬಿಡುತ್ತೇವೆ ಎಂದು ಎಚ್ಚರಿಸುತ್ತಿದ್ದರು. ಉಳಿದು ಬಿಟ್ಟಿದ್ದೇವೆ ಎಂಬುದು ಕಂಪ್ಯೂಟರ್ ಬಳಸಿ ಇಂಗ್ಲಿಷಿನಂಥಾ ಭಾಷೆಯಲ್ಲಿ ನಡೆಯುತ್ತಿರುವ ಕೆಲಸ ನೋಡಿದರೆ ಗೊತ್ತಾಗುತ್ತದೆ. ನಮ್ಮಲ್ಲಿ ಹಣ ಇಲ್ಲ ಎನ್ನುವುದರಲ್ಲಿ ಅರ್ಥವಿಲ್ಲ. ಹೆಚ್ಚು ಹಣ ಖರ್ಚು ಮಾಡದೆ ಮಾಡಬಹುದಾದ ಕಂಪ್ಯೂಟರಿನ ಕೆಲವು ಸರಳ ಕೆಲಸಗಳನ್ನೂ ನಾವು ಮಾಡುತ್ತಿಲ್ಲ. ನಮ್ಮಲ್ಲಿ ಹೆಚ್ಚಿನ ಲೇಖಕರಿಗೆ ಇಮೇಲ್ ಇಲ್ಲ, ಬ್ಲಾಗ್ ಇಲ್ಲ ಎಂಬುದನ್ನು ಗಮನಿಸಿದರೆ ಮೇಲಿನ ಮಾತು ಅರ್ಥವಾಗುತ್ತದೆ. ಕಂಪ್ಯೂಟರ್ ನ ಅತ್ಯಂತ ಆಧುನಿಕ ತಂತ್ರಜ್ಞಾನ ಬಂದ ಮೇಲೂ ನಾವು ಅಚ್ಚಿನ ತಪ್ಪಿಲ್ಲದೆ ಪುಸ್ತಕ ಮುದ್ರಿಸುವುದನ್ನೇ ಕಲಿತಿಲ್ಲ. ತಿದ್ದುಪಡಿ ನಮ್ಮ ಪುಸ್ತಕಗಳ ವಿಶೇಷ ಲಕ್ಷಣವೇ ಆಗಿಬಿಟ್ಟಿದೆ.

ಇಂಥಲ್ಲಿ ಮುರಳೀಧರ ಉಪಾಧ್ಯ ಕಂಪ್ಯೂಟರ್ ಬಳಸಿ ಮಾಡುತ್ತಿರುವ ಕೆಲಸಗಳು ಸರ್ವತ್ರ ಮೆಚ್ಚುಗೆಗೆ ಅರ್ಹ. ಅವರು ಕನ್ನಡದ ಎಲ್ಲಾ ಬ್ಲಾಗುಗಳು ಒಂದು ಕಡೆ ನೋಡಲು ಸಿಗುವಂತ ಮಾಡಿದ್ದಾರೆ; ಅದರಲ್ಲಿ ಮುಖ್ಯವಾದ ಲೇಖನ ಭಾಷಣ ಬೇಕಾದವರಿಗೆ ಸಿಗುತ್ತವೆ; ಮೊನ್ನೆ ಆಡಿಯೋದ ಮೂಲಕ ಲೇಖಕರೋ ವಿದ್ವಾಂಸರೋ ಓದಿದ ಪದ್ಯ ಅಥವಾ ಅವರ ಭಾಷಣ, ಮಾತು ತರುಣ ಅಧ್ಯಾಪಕರಿಗೆ, ಲೇಖಕರಿಗೆ, ವಿದ್ವಾಂಸರಿಗೆ ಸಿಗುವ ಹಾಗೆ ಮಾಡುವ ಬಗ್ಗೆ ಮಾತಾಡಿದರು. ನಮ್ಮಲ್ಲಿ ಇಂದು ಚಿದಾನಂದಮೂರ್ತಿ, ಕಲಬುರ್ಗಿಯವರಂಥಾ ದೊಡ್ಡ ವಿದ್ವಾಂಸರು, ಭೈರಪ್ಪನವರಂಥಾ ಬಹು ಶ್ರೇಷ್ಠ ಸೃಜನಶೀಲ ಲೇಖಕರು ಇದ್ದಾರೆ; ತಿರುಮಲೇಶ್, ಲಕ್ಷ್ಮಣ ರಾವ್ ಅಂಥಾ ಒಳ್ಳೆಯ ಕವಿಗಳಿದ್ದಾರೆ. ಇವರ ಮಾತು, ಕಾವ್ಯ ತರುಣರಿಗೆ ಆಸಕ್ತರಿಗೆ ಕಂಪ್ಯೂಟರ್ ಮೂಲಕ ಸಿಗುವ ಹಾಗೆ ಮಾಡುವುದರಲ್ಲಿ ಮುರಳೀಧರರ ಕೆಲಸ ಮುಖ್ಯ.

ಇಂಗ್ಲಿಷಿನಲ್ಲಿ ಇಂದು ಎಲಿಯಟ್, ಯೇಟ್ಸ್ ಮೊದಲಾದವರು ಸ್ವತಃ ಓದಿದ ಅವರ ಪದ್ಯಗಳು ಕೇಳಲು ಸಿಗುತ್ತವೆ. ಕನ್ನಡದಲ್ಲಿ ಬೇಂದ್ರೆ ಅಡಿಗರು ಮೊದಲಾದವರ ಕವನಗಳನ್ನು ಹೀಗೆಯೇ ನಾವು ಆಸಕ್ತರಿಗೆ ತಲುಪಿಸಬಹುದು. ಅವರ ರೆಕಾರ್ಡಿಂಗುಗಳನ್ನು ಪತ್ತೆ ಮಾಡಿ ವ್ಯವಸ್ಥಿತವಾಗಿ ಕಂಪ್ಯೂಟರಿನಲ್ಲಿ ಇಡಬೇಕಾಗಿದೆ. ಸಾಹಿತ್ಯಿಕ ಚರ್ಚೆಗಳೂ ಖಾಯಮ್ಮಾಗಿ ಕೇಳುವಂತೆ ಮಾಡಬಹುದು. ಆ ಕಡೆಗೆ ಉತ್ಸಾಹದಿಂದ ಕೆಲಸ ಮಾಡುತ್ತಿರುವವರಲ್ಲಿ ಮುರಳೀಧರ ಪ್ರಮುಖರು.

ಬಿಎಂಶ್ರೀಯವರ ಕಾಲದಲ್ಲಿ ಇಂಥಾ ಸೌಲಭ್ಯ ಇಲ್ಲದಿದ್ದಾಗ ಊರೂರು ತಿರುಗಿ ಕನ್ನಡದ ಪ್ರಚಾರ ಮಾಡಬೇಕಾಗಿತ್ತು. ಅವರು ಮಾಡಿದರು. ಶಿವರಾಮ ಕಾರಂತರು, ಅವರ ಓರಗೆಯ ಬೇರೆ ಕೆಲವರು ಲೇಖಕರು ಎಲ್ಲಿಗೇ ಕರೆದರೂ ಹೋಗಿ ಭಾಷಣ ಮಾಡುತ್ತಿದ್ದರು. ಇಂದು ಕಂಪ್ಯೂಟರ್ ಇರುವುದರಿಂದ ಲೇಖಕರು ಮನೆಯಲ್ಲಿ ಕೂತೇ ತಮ್ಮ ಓದುಗರನ್ನು ಉದ್ದೇಶಿಸಿ ಮಾತಾಡಲು, ಪದ್ಯ ಓದಲು ಸಾಧ್ಯ. ಅಂಥಾ ಒಂದು ಸಾಧ್ಯತೆಯನ್ನು ತಮ್ಮ ಸೀಮಿತ ಸಂಪನ್ಮೂಲಗಳನ್ನೇ ಬಳಸಿ ಅನ್ವೇಷಿಸುತ್ತಿರುವ ಹೊಸತರ ಹರಿಕಾರರಾಗಿ ನನಗೆ ಮುರಳೀಧರ ಕಾಣಿಸುತ್ತಾರೆ.

ಅನೇಕರು ಉದ್ಯೋಗದಿಂದ ನಿವೃತ್ತರಾದ ಮೇಲೆ ಮನೆಯಲ್ಲಿ ಸುಮ್ಮನೆ ಕೂತರೆ ಇವರು ನಿವೃತ್ತ ಜೀವನವನ್ನು ಹೊಸರೀತಿಯಲ್ಲಿ ಸೃಜಶೀಲರಾಗಲು ಬಳಸಿಕೊಳ್ಳುತ್ತಿದ್ದಾರೆ. ಅದು ಭವಿಷ್ಯದಲ್ಲಿ ಕನ್ನಡಕ್ಕೆ ಬಹು ಹೆಚ್ಚಿನ ಅರ್ಥಪೂರ್ಣತೆ ತಂದುಕೊಡಬಲ್ಲ ಸೃಜನಶೀಲತೆ.

1 comment:

  1. ನಲ್ಮೆಯ ದೇವರಿಗೆ ನಮಸ್ಕಾರ. ನಾನು ನನ್ನ ಬ್ಲಾಗ್ ನಲ್ಲಿ ಮಾಡುತ್ತಿರುವ ಕನ್ನಡ ಸಾಹಿತ್ಯ ವಿದ್ಯಾರ್ಥಿಗಳಿಗೆ , ಸಂಶೋಧಕರಿಗೆ ಉಪಯುಕ್ತವಾದ ಕೆಲಸದ ಮಹತ್ವವನ್ನು ಗುರುತಿಸಿದ್ದೀರಿ . Thank u - ಮುರಳೀಧರ ಉಪಾಧ್ಯ ಹಿರಿಯಡಕ - http://mupadhyahiri.blogspot.in

    ReplyDelete