Saturday, November 26, 2011

ವಿಮರ್ಶಕರು ಮತ್ತು ಓದುಗರು

ನಿನ್ನೆ ನಾನು ವಿಮರ್ಶಕರ ಬಗ್ಗೆ ಬರೆದದ್ದು ಲೇಖಕರ ದೃಷ್ಟಿಯಿಂದ. ಆದರೆ ಲೇಖಕರು ಪೂರ್ತಿ ವಿಮರ್ಶೆ ಬಗ್ಗೆ ನಿರ್ಲಿಪ್ತರಾಗಿ ಇರುತ್ತಾರೆ ಎನ್ನುವುದು ಸರಿಯಲ್ಲ. ಒಳ್ಳೆಯ ವಿಮರ್ಶೆ ಬರದಿದ್ದರೆ ಮಾರಾಟದ ಮೇಲೆ ಪರಿಣಾಮ ಬೀರುತ್ತದೆ. ಲೇಖಕನ ಮೊದಲ ಕೃತಿಯಾದರಂತೂ ಒಳ್ಳೆಯ ವಿಮರ್ಶೆ ಅವನನ್ನು ಸಾಹಿತ್ಯ ಕ್ಷೇತ್ರದಲ್ಲಿ ನೆಲೆಗೊಳಿಸುವ ದೃಷ್ಟಿಯಿಂದ ಮುಖ್ಯ. ಗಟ್ಟಿಯಾಗಿ ನೆಲೆ ನಿಂತ ಲೇಖಕನನ್ನೂ ವಿಮರ್ಶೆ ವಿಚಲಿತಗೊಳಿಸಬಲ್ಲುದು. ಉದಾಹರಣೆಗೆ ಭೈರಪ್ಪನವರ ಬಗ್ಗೆ ಅನಂತಮೂರ್ತಿಯವರು ಬರೆದ ಲೇಖನ ನೋಡಿ. ಅನಂತಮೂರ್ತಿ ಅವರನ್ನು ಜನಪ್ರಿಯ ಲೇಖಕ ಎಂದ ಮೇಲೆ ಅನೇಕರು ಹಾಗೆ ಹೇಳಲು ಸುರು ಮಾಡಿದರು. ಪರಿಣಾಮವಾಗಿ ಈ ದೊಡ್ಡ ಲೇಖಕ ಪರ್ವ  ಕಾದಂಬರಿಯ ನಂತರ ಏರಿದ ಎತ್ತರ ಸರ್ವತ್ರ ಒಪ್ಪಿಗೆ ಪಡೆಯದೆ ಹೋಯಿತು. ಪರ್ವದ ನಂತರದ ಭೈರಪ್ಪ ನಿಸ್ಸಂದಿಗ್ಧವಾಗಿ ಅನಂತಮೂರ್ತಿಯವರಿಗಿಂತ ಹೆಚ್ಚು ಅನುಭವ ವಿಸ್ತಾರ ಇರುವ ಕಾದಂಬರಿಕಾರ.

ಸಹೃದಯತೆಯಿಂದ, ತನ್ನನ್ನು ಮೆರೆಸುವುದಕ್ಕಲ್ಲ, ಕೃತಿಯನ್ನು ಅರಿಯಬೇಕು ಎಂಬ ದೃಷ್ಟಿಯಿಂದ ಬರೆದ ವಿಮರ್ಶೆ ಓದುರಿಗೆ ಸಹಾಯಮಾಡಬಲ್ಲುದು. ಕನ್ನಡದ ಅನೇಕ ನವ್ಯ ವಿಮರ್ಶಕರ ವಿಮರ್ಶೆ ಹೀಗೆ ಕೃತಿಯನ್ನು ಅರಿತುಕೊಳ್ಳಲು ಅನೇಕರಿಗೆ ಸಹಾಯಮಾಡಿದೆ. ನವ್ಯ ವಿಮರ್ಶೆ ಬರುವ ಮೊದಲು ವಿಮರ್ಶೆಯೆಂದರೆ ಬಹುತೇಕ ಕಥಾಸಾರಾಂಶ ಕೊಡುವುದು
ಅಥವಾ ವಿಶೇಷಣಗಳನ್ನು ಬಳಸಿ ಹೊಗಳುವುದಾಗಿತ್ತು. ವಿಮರ್ಶಕರು ಒಂದು ಕೃತಿಯ ನೆಯ್ಗೆಯ ಬಗ್ಗೆ, ಅದರ ಸಂವಿಧಾನದ ಬಗ್ಗೆ, ಪದಗಳ ಬಳಕೆ ಬಗ್ಗೆ ಬರೆಯಲು ಸುರು ಮಾಡಿದ ಮೇಲೆ ಸಮಕಾಲೀನ ಕೃತಿಗಳ ಬಗೆಗಿನ ತಿಳುವಳಿಕೆ ಮಾತ್ರವಲ್ಲ, ಪ್ರಾಚೀನ ಕೃತಿಗಳ ತಿಳುವಳಿಕೆ ಕೂಡಾ ಹೆಚ್ಚಿದೆ. ವಚನಕಾರರ, ಪಂಪನ ಕೃತಿಗಳ ಸೌಂದರ್ಯದ ಬಗ್ಗೆ ನಮ್ಮ ಅರಿವು ವಿಮರ್ಶಕರ ವಿಶ್ಲೇಷಣಿಯಿಂದಾಗಿ ಹೆಚ್ಚು ಸೂಕ್ಷ್ಮವಾಗಿದೆ. ಶೇಕ್ ಸ್ಪಿಯರ್ ಕೃತಿಗಳ ತಿಳುವಳಿಕೆ ಹೆಚ್ಚಿಸಿದ್ದರಲ್ಲಿ ಕೆರೊಲಿನ್ ಸ್ಪರ್ಜನ್ ರಂಥವರು ಮಾಡಿದ ಅವನ ಪ್ರತಿಮೆಗಳ ವಿಶ್ಲೇಷಣೆಯ ಕೊಡುಗೆ ತುಂಬಾ ಇದೆ.

ಆದರೆ ಲೇಖಕರು ವಿಮರ್ಶಕರ ಅಭಿರುಚಿಗೆ ಅನುಗುಣವಾಗಿ ಬರೆಯುವುದು, ಅವರನ್ನು ಓಲೈಸುವುದು ಆತ್ಮಹತ್ಯಾತ್ಮಕ. ಲೇಖಕ ತನ್ನ ಸೃಜನಶೀಲ ಸ್ವಾತಂತ್ರ್ಯ ಉಳಿಸಿಕೊಳ್ಳಬೇಕಾದರೆ ಸ್ವಯಂಭುವಾಗಿರಬೇಕು.


No comments:

Post a Comment