Wednesday, June 15, 2011

ಕಿವಿಗೆ ಟಿಕ್ಕಿ

ಸಾಂಪ್ರದಾಯಿಕ ವೇಷಭೂಷಣದ ಪ್ರಕಾರ ಕಿವಿಗೆ ಟಿಕ್ಕಿ ಇರುತ್ತಿತ್ತು. ಯರ್ಮುಂಜ ರಾಮಚಂದ್ರರಿಗೂ ಇದ್ದಿರಬೇಕು. ಫೊಟೋದಲ್ಲಿ ಗೊತ್ತಾಗುವುದಿಲ್ಲ. ಸಾದು ಬೊಟ್ಟೇ ಇತ್ತು ಎಂದ ಮೇಲೆ ಟಿಕ್ಕಿ ಇದ್ದಿರಲೇಬೇಕು. ಯಾಕೆಂದರೆ ಅಪ್ಪ ಇರುವ ಯಾರೇ ಆದರೂ ಟಿಕ್ಕಿ ತೆಗೆದಿಡುವುದು ಹವ್ಯಕರಲ್ಲಿ ಅಶುಭ. ಅಪ್ಪ ಸತ್ತಾಗ  ಈ ಟಿಕ್ಕಿ ತೆಗೆಯುತ್ತಾರೆ. ವರ್ಷಾಂತಿಕ ಕಳೆದ ಮೇಲೆ ಮತ್ತೆ ಹಾಕಿಕೊಳ್ಳುತ್ತಾರೆ. ಈಗಲೂ ಕಲ್ಮಡ್ಕ ಮತ್ತು ಸುತ್ತಮುತ್ತ ಊರುಗಳಲ್ಲಿ ಟಿಕ್ಕಿ ಹಾಕಿಕೊಂಡಿರುವವರು ಇದ್ದಾರೆ. ನನಗೂ ಎಸ್ಸೆಸ್ಸೆಲ್ಸಿ ಮುಗಿಯುವ ವರೆಗೆ ಈ ಟಿಕ್ಕಿ ಇತ್ತು. ಆ ಮೇಲೆ ಕಾಲೇಜಿಗೆ ಹೋಗುವವರು ಯಾರೂ ಟಿಕ್ಕಿ ಹಾಕಿಕೊಳ್ಳುವುದಿಲ್ಲ, ಕ್ಲಾಸಿನಲ್ಲಿ ತಮಾಷೆ ಮಾಡಿಯಾರು ಅನ್ನಿಸಿ ತೆಗೆದಿಟ್ಟೆ. ಅಮ್ಮ "ಹಾಂಗೆಲ್ಲಾ ಟಿಕ್ಕಿ ತೆಗೆದಿರ್ಸುಲೆ ಆಗ" ಎಂದರು. ಈಗಲೂ ಕಿವಿಯಲ್ಲಿ ತೂತು ಇದೆ.

ಟಿಕ್ಕಿಯೆಂದರೆ ಚಿಕ್ಕ ಬೆಂಡೋಲೆ. ಇದನ್ನು ಹಾಕಿಕೊಳ್ಳುವ ಕ್ರಮ ಹವ್ಯಕರಲ್ಲಿ ಮಾತ್ರವಲ್ಲದೆ ಇತರ ಅನೇಕ ಜನಾಂಗಗಳಲ್ಲಿ ಇದೆ.

ಯರ್ಮುಂಜ ಕುಟುಂಬ ತಮ್ಮ ಪಂಚಾಂಗಕ್ಕಾಗಿ ಪ್ರಸಿದ್ಧವಾಗಿದೆ. ಇವರು ಪ್ರಕಟಿಸುವ ಪಂಚಾಂಗದ ಹೆಸರು ವೈಜಯಂತೀ ಪಂಚಾಂಗ. ಇದು ಈಗ ತನ್ನ ತೊಂಬತ್ತೈದನೇ ವರ್ಷದಲ್ಲಿದೆ. ಹವ್ಯಕರಲ್ಲಿ ವ್ಯಾಪಕವಾಗಿ ಬಳಕೆಯಲ್ಲಿರುವ ಪಂಚಾಂಗ ಇದು.
ಇದನ್ನು ಪ್ರಾರಂಬಿಸಿದವರು ಯರ್ಮುಂಜ ಶಂಕರ ಜೋಯಿಸರು. ಪಂಚಾಂಗದ ಸಂಚಿಕೆಗಳಲ್ಲಿ ಇವರನ್ನು "ಕರ್ನಾಟಕದಲ್ಲಿ ದೃಕ್ಸಿದ್ಧಾಂತದ ಆದ್ಯ ಪ್ರವರ್ತಕರು" ಎಂದು ಬಣ್ಣಿಸಲಾಗಿದೆ. ಇದರ ಈಗಿನ ಸಂಪಾದಕರು "ಯರ್ಮುಂಜ ಭೀಮ ಜೋಯಿಸರ ಮಗ ಶಂಕರ ಜೋಯಿಸ". ಇದರ ಒಂದು ಸಂಚಿಕೆಯಲ್ಲಿ ಕಲಿಪುರುಷ ಬರುವ ಕುರಿತು ಒಂದು ವಿವರಣೆಯಿತ್ತು. ಕೆಂಪು ಕುದುರೆ ಏರಿ ತಲೆ ಓಡಿನಲ್ಲಿ ನೆತ್ತರು ಕುಡಿಯುತ್ತಾ ದಕ್ಷಿಣ ದಿಕ್ಕಿಗೆ ಪ್ರಯಾಣಿಸುತ್ತಾನೆ ಎಂದೆಲ್ಲಾ ಇತ್ತು ಎಂದು ನೆನಪು. ನಾನು ಈ ವಿವರವನ್ನು ನನ್ನ ನಾಟಕ ಕುದುರೆ ಬಂತು ಕುದುರೆಯಲ್ಲಿ ಬಳಸಿಕೊಂಡಿದ್ದೆ.

ಪ್ರಿಸಂ ಬುಕ್ಸ್ ನವರು ಪ್ರಕಟಿಸಿದ ಯರ್ಮುಂಜರ ಸಮಗ್ರ ಕತೆ ಕವನಗಳ ಬಿಡುಗಡೆ 2002ರಲ್ಲಿ ಪುತ್ತೂರಿನಲ್ಲಿ ಆದಾಗ ರಾಮಚಂದ್ರರ ಅಣ್ಣ ಬಂದಿದ್ದರು. ವೇದಿಕೆಯಲ್ಲಿ ಕೂತಿದ್ದು ಭಾಷಣವನ್ನೂ ಮಾಡಿದರು. ರಾಮಚಂದ್ರ ಎಲ್ಲಿಯಾದರೂ ಪತ್ರಿಕೆಗೆ ಸೇರಬೇಕೆಂದು ಇದ್ದರೆಂದೂ ಅದಕ್ಕಾಗಿ ಉತ್ತರ ಕರ್ನಾಟಕದ ಒಂದು ಊರಿಗೆ--ಬೆಳಗಾವಿಗೆ ಎಂದು ನೆನಪು--ಸಂದರ್ಶನಕ್ಕೆ ಹೋಗಿದ್ದರೆಂದೂ  ಕೊನೆಗೆ ಕಡೆಂಗೋಡ್ಲು ಶಂಕರ ಭಟ್ಟರ ರಾಷ್ಟ್ರಬಂಧುವಿನಲ್ಲಿ ಕೆಲಸ ಸಿಕ್ಕಿತೆಂದೂ ಹೇಳಿದರು. ಅದಾದ ಎರಡು ಮೂರು ವರ್ಷಗಳಲ್ಲಿ ಈ ಅಣ್ಣ ತೀರಿಕೊಂಡರೆಂದು ಸುದ್ದಿ ಬಂತು. ಪುತ್ತೂರಿನ ಆ ಸಭೆಯಲ್ಲಿ ನಾನು ಅವರನ್ನು ಕೇಶುವಲ್ ಆಗಿ ಮಾತಾಡಿಸಿದ್ದೆ, ಅಷ್ಟೆ. ಸರಿಯಾಗಿ ಮಾತಾಡಿಸಿ ಗೌರವ ಅರ್ಪಿಸಬೇಕಾಗಿತ್ತೆಂದು ಈಗ ಅನ್ನಿಸುತ್ತಿದೆ.

ಯರ್ಮುಂಜ ರಾಮಚಂದ್ರರ  ಪ್ರಖ್ಯಾತ ಕವನ "ಯಾರಿಲ್ಲಿಗೆ ಬಂದರು ಕಳೆದಿರುಳು?"ನ್ನು ಇಲ್ಲಿ ಕೊಡುತ್ತಿದ್ದೇನೆ. ಅವರು ಎಷ್ಟು ಒಳ್ಳೆಯ ಲೇಖಕ ಎಂಬುದಕ್ಕೆ ಇದೊಂದು ಉದಾಹರಣೆ ಸಾಕು.

ಯಾರಿಲ್ಲಿಗೆ ಬಂದರು ಕಳೆದಿರುಳು

ಯಾರಿಲ್ಲಿಗೆ ಬಂದರು ಕಳೆದಿರುಳು
ಏ ಗಾಳಿ
ಆ ಕಥೆಯನೊರೆದು ಮುಂದಕೆ ತೆರಳು.

ನೆನೆದು ನೆನೆದು ತನು ಪುಳಕಗೊಳ್ಳುತಿದೆ
ನುಡಿವೆನೆ ದನಿ ನಡುಗುತಿದೆ;
ಸ್ಮೃತಿ ವಿಸ್ಮೃತಿಗಳ ಕಂಬನಿ ಮಾಲೆ
ಎಲ್ಲೆಲ್ಲೂ ತೂಗುತಿದೆ;
ಕಳೆದಿರುಳಿನ ಬೆಳದಿಂಗಳಿನ ಮರೆಯಲಿ
ಏನೂ ಅರಿಯದ ಮುಗ್ಧೆಯ ಕಿವಿಯಲಿ
ಯಾರೇನನು ಪಿಸು ನುಡಿದರು ಹೇಳು
ಏ ಗಾಳಿ
ಆ ಕಥೆಯನೊರೆದು ಮುಂದಕೆ ತೆರಳು.

ನಸುಕಿನ ಬೆಳಕಿನೊಳೆಂಥ ಬಳಲಿಕೆ
ಮೂಡಲ ಹಣೆ ಕಡುಗೆಂಪು!
ಮರಮರದೆಡೆಯಲಿ ಕೂಕೂ ಆಟ
ಭೂಮಿಗೆ ಮೈಮರೆವು.
ಅಲ್ಲಿ ಇಲ್ಲಿ ಗಿಡ ಬಳ್ಳಿ ಮರಗಳು
ಯಾವ ನೆನಪಿನಲೊ ಮೈಮರೆತಿಹವು
ಹೃದಯದೊಳೇನನು ಎರೆದರು ಕೊರೆದರು
ಏ ಗಾಳಿ
ಆ ಕಥೆಯನೊರೆದು ಮುಂದಕೆ ತೆರಳು.

ಮೈಯ್ಯೆಲ್ಲಾ ಗದಗುಟ್ಟುತಲಿದೆಯೇ
ಬೆದರಿಸಿದವರಾರು?
ಮುಖ ತೊಯ್ದಿದೆ, ಕಣ್ಣೀರಿನ ಹನಿಯನು
ಹರಿಯಿಸಿದವರಾರು?
ಯಾರೂ ಕಾಣದ ಆ ಮರೆಯೊಳಗೆ
ಕುಲುಕುಲು ಎನುತಿದೆ ಮೆಲುನಗೆಯ ನೊರೆ
ನಿನ್ನೆಯ ಹಾಡಿನ ದನಿಯಿನ್ನೂ ಗುಣು
ಗುಣಿಸುವ ಮಾಯೆಯಿದೆಂಥದು ಹೇಳು
ಏ ಗಾಳಿ
ಆ ಕಥೆಯನೊರೆದು ಮುಂದಕೆ ತೆರಳು.

(14.3.1954)

**********************


1 comment: