Friday, August 20, 2010

ಕಲ್ಮಡ್ಕದಲ್ಲಿ ಹತ್ತು ವರ್ಷ

ನಾನು ಕಲ್ಮಡ್ಕ ಗ್ರಾಮಕ್ಕೆ ವಾಸಕ್ಕೆ ಬಂದು ಹತ್ತು ವರ್ಷಗಳಾದವು. ನಾನು ಹುಟ್ಟಿದ್ದು ಈ ಊರಿನಲ್ಲಿ ಅಲ್ಲವಾದರೂ ಬೆಳೆದದ್ದು ಇಲ್ಲಿ. ಆದರೆ  2000ನೇ ಇಸವಿಯಲ್ಲಿ ಇಲ್ಲಿಗೆ ಬಂದಾಗ ಈ ಊರು ಬಿಟ್ಟು 35 ವರ್ಷಗಳೇ ಆಗಿದ್ದವು. ಅಷ್ಟು ವರ್ಷಗಳನ್ನು ಮೈಸೂರು, ಬೆಂಗಳೂರು, ದೆಹಲಿ ಮೊದಲಾದ ನಗರಗಳಲ್ಲಿ ಕಳೆದಿದ್ದೆ. ನಗರ ಜೀವನ ನಡೆಸುತ್ತಿದ್ದಾಗ ಎರಡು ವರ್ಷ ಯಾವುದಾದರೂ ಹಳ್ಳಿಯಲ್ಲಿ ಕಳೆಯಬೇಕು ಅನ್ನಿಸುತ್ತಿತ್ತು. ಯಾಂತ್ರಿಕವಾದ ಜೀವನ ಮತ್ತು ಯೋಚನಾಕ್ರಮಕ್ಕೆ ಅದೊಂದು ಚಿಕಿತ್ಸೆ ಆಗಬಹುದು, ಒಂದು ವೇಳೆ ಆಗದೆ ಇದ್ದರೆ ಹಳ್ಳಿಯಲ್ಲಿ ವಾಸಿಸಬೇಕೆಂಬ ಆಸೆಯನ್ನಾದರೂ ತೀರಿಸಿಕೊಂಡಂತಾಗುತ್ತದೆ ಎನ್ನಿಸುತ್ತಿತ್ತು. ಹೀಗೆ ಇಲ್ಲಿಗೆ ವಾಸಕ್ಕೆ ಬಂದಾಗ ನನ್ನ ಮನಸ್ಸಿನಲ್ಲಿದ್ದದ್ದು ಎರಡು ವರ್ಷ ಕಾಲ ಇಲ್ಲಿ ವಾಸಿಸಬೇಕು ಎಂದು ಮಾತ್ರ. ಆದರೆ ಬಂದ ಮೇಲೆ ಈ ಊರು, ಇಲ್ಲಿನ ಜನ ಇಷ್ಟವಾಗಿ ಹತ್ತು ವರ್ಷದಿಂದ ವಾಸಿಸುತ್ತಿದ್ದೇನೆ. ಸದ್ಯ ಇಲ್ಲಿಂದ ಹೊರಡುವ ಯೋಚನೆ ಇಲ್ಲ.

ಈ ಹತ್ತು ವರ್ಷಗಳಲ್ಲಿ ಅಡಿಕೆ, ತೆಂಗು, ಕೊಕ್ಕೊ, ಬಾಳೆ, ಗೇರು ಬೀಜ, ಕಾಳು ಮೆಣಸು ಕೃಷಿ ಮಾಡಿದೆ. ಕಾಡು ಪ್ರಾಣಿಗಳ ಜೊತೆ ಸೆಣಸಿದೆ. ಬಾವಿ ತೆಗೆಸಿದೆ. ಮನೆ ಕಟ್ಟಿಸಿದೆ. ಸಾಕಷ್ಟು ಬರೆದೆ. ಅನೇಕ ವರ್ಷಗಳಿಂದ ಬರೆಯಬೇಕೆಂದಿದ್ದುದರ ಬಹುಭಾಗ ಬರೆದೆ. ಅವು ಮತ್ತು ಹಿಂದಿನ ಬರೆವಣಿಗೆ ಒಟ್ಟು ಸೇರಿ ಇಪ್ಪತ್ತು ಸಂಪುಟಗಳಲ್ಲಿ ನನ್ನ ಬರೆವಣಿಗೆಗಳು ಮುಂದಿನ ನಾಲ್ಕು ವರ್ಷಗಳಲ್ಲಿ ಪ್ರಕಟವಾಗಲಿವೆ. ಅದರ ಮೊದಲ ಕಂತಾಗಿ ನನ್ನ ಸಮಗ್ರ ನಾಟಕಗಳ ಸಂಪುಟ 2, 3, 4 ಮತ್ತು ಒಂದು ಕವನ ಸಂಗ್ರಹ ಈ ವರ್ಷ ಅಕ್ಟೋಬರ್ ತಿಂಗಳಲ್ಲಿ ಪ್ರಕಟವಾಗಲಿವೆ. ಸಮಗ್ರ ನಾಟಕಗಳ ನಾಲ್ಕು ಸಂಪುಟಗಳಿಂದ ಒಟ್ಟಿಗೆ  ಹನ್ನೊಂದು ನಾಟಕಗಳಿವೆ. ಇವುಗಳಲ್ಲಿ ಹೆಚ್ಚಿನವು ಅಪ್ರಕಟಿತ ನಾಟಕಗಳು. ಕವನ ಸಂಗ್ರಹದಲ್ಲಿ 2003ರಲ್ಲಿ ಪ್ರಕಟವಾದ ನನ್ನ ಸಮಗ್ರ ಕಾವ್ಯ ಮಾತಾಡುವ ಮರದ ನಂತರ ಬರೆದ ಕವನಗಳಿವೆ.

ಈ ಬ್ಲಾಗಿನಲ್ಲಿ ಕೃಷಿಕನಾಗಿ, ಅಧ್ಯಾಪಕನಾಗಿ, ಪತ್ರಕರ್ತನಾಗಿ, ಲೇಖಕನಾಗಿ ನನ್ನ ಅನುಭವ, ವಿಚಾರಗಳನ್ನು ನಾನು ನಿಮ್ಮೆದುರು ಸಾದರ ಪಡಿಸಲಿದ್ದೇನೆ. ಬಹುಶ: ವಾರಕ್ಕೊಮ್ಮೆ. ಸೋ__ಮುಂದಿನ ಭೇಟಿಯ ವರೆಗೆ__ನಮಸ್ಕಾರ.

6 comments:

  1. ನಿಮ್ಮ ಬರವಣಿಗೆಯಲ್ಲಿ ನನಗೆ ಮೊದಲಿನಿಂದಲೂ ಆಸಕ್ತಿ. ಡಾ. ಮುರಳೀಧರ ಉಪಾಧ್ಯರು ನಿಮ್ಮ ಬ್ಲಾಗ್‌ ವಿಳಾಸ ನೀಡಿದರು. ಓದುತ್ತಿದ್ದೇನೆ.
    ಭವಾನಿಶಂಕರ್‌, ಶಿರ್ವ

    ReplyDelete
  2. ಕೃತಜ್ಞತೆಗಳು ಭವಾನಿ ಶಂಕರ್ ಅವರೆ. ಬ್ಲಾಗ್ ಬರೆಯುತ್ತಿರುವುದು ಗೊತ್ತಾಗುವಂತೆ ಮಾಡುವುದೇ ಸಮಸ್ಯೆ. ನೀವೀಗ ನನ್ನ ಬ್ಲಾಗನ್ನು ಇಮೇಲ್ ಮೂಲಕ ತರಿಸಿಕೊಳ್ಳಬಹುದು. ಈ ಬಾಕ್ಸ್ ಕೆಳಗೆ ಕಾಣುವ subscribe by email ಅನ್ನುವುದನ್ನು ಕ್ಲಿಕ್ ಮಾಡಿದರೆ ನಿಮ್ಮ inboxಗೆ ಬ್ಲಾಗ್ ಬರುತ್ತದೆ. ಒಂದು ವೇಳೆ subscribe by email ಅನ್ನುವುದು ಕಾಣಿಸದಿದ್ದರೆ, comment ಅನ್ನುವುದನ್ನು ಕ್ಲಿಕ್ ಮಾಡಿರಿ. ಆಗ ಅದು ಕಾಣಿಸಿಕೊಳ್ಳುತ್ತದೆ.

    ಈ ವಿಷಯ ಬಹುಶಃ ನಿಮಗೆ ಗೊತ್ತಿರಬಹುದು.ಗೊತ್ತಿದ್ದರೆ ನಿರ್ಲಕ್ಷಿಸಿರಿ.

    ReplyDelete
  3. ಭವಾನಿ ಶಂಕರ್ ಅವರೆ,
    ಇವತ್ತು ಪತ್ರಿಕೆ ನೋಡಿದ ಮೇಲೇ ಗೊತ್ತಾದದ್ದು ಕನ್ನಡದಲ್ಲಿ ಇಮೇಲ್, ಕಂಪ್ಯೂಟರ್ ಮೊದಲಾದವುಗಳ ಬಗ್ಗೆ ಉಪಯುಕ್ತ ಪುಸ್ತಕ ಬರೆದವರು ನೀವೇ ಎಂದು. ಪುಸ್ತಕ ಬಂದಿದೆ ಎಂದು ಗೊತ್ತಿತ್ತು ಹೊರತು ಬರೆದವರ ಹೆಸರು ಗೊತ್ತಿರಲಿಲ್ಲ. ಮೇಲಿನ ಕಮೆಂಟಿನಲ್ಲಿನ ನನ್ನ ಬಾಲಿಶ ಸಲಹೆಗಳನ್ನು ಮನ್ನಿಸಿರಿ.
    ಗೌರವಪೂರ್ವಕ
    ರಾಮಚಂದ್ರ ದೇವ

    ReplyDelete
  4. ನಮಸ್ಕಾರ.
    ಪರಿಚಯ ಇಕ್ಕು ಹೇಳಿ ಜಾನ್ಸುತ್ತೆ. ಯಾಕೆ ಹೇಳಿದೆ ಹೇಳಿರೆ ಬೇಟಿ ಆಗದ್ದೆ ವರ್ಶಗಳೆ ಕಳುದತ್ತು..
    ಲೇಖನಗಳ ಓದಿದೆ.. ತುಂಬಾ ಚೆಂದಕ್ಕೆ ಬರೆದ್ದಿ..
    ನಿಂಗಳ ಮಿಂಚಂಚೆಯ ಎನಗೆ ಕಳುಹಿಸಿ ಕೊಡಿ.
    ಎನ್ನ ಮಿಂಚಂಚೆ: ag.ramachandra@gmail.com
    ಮಾತೃ ಭಾಷೆ ಪ್ರೇಮಂದ ಹವ್ಯಕಲ್ಲಿ ಬರೆದ್ದೆ, ಕ್ಷಮಿಸಿ.

    ReplyDelete
  5. Dear Deva,
    Now I am more comfortable with this space. I will try to read and comment regularly.
    Janardana Bhat

    ReplyDelete
  6. Thanks Janardan.
    Someone has hacked my yahoo mail and is sending message that I am in Spain, and am in need of money. I am very much here in Kalmadka. I have heard of such electronic cheatings. Now this is happening to me. I received such a message to my gmail address. Probably you also receievd one. Many of my friends have receieved such messages.

    ReplyDelete