Tuesday, June 12, 2012

ನಾಗರಾಜ ರಾವ್ ಜವಳಿ

ನಾಗರಾಜ ರಾವ್ ಜವಳಿ ನನ್ನ ಬ್ಲಾಗಿನ ಫೊಲೊಯರ್ ಆಗಿದ್ದವರು. ನನಗೆ ಅವರು ತೀರ್ಥಹಳ್ಳಿಯವರು, ಸಾಹಿತ್ಯ-ಸಂಸ್ಕೃತಿಗಳಲ್ಲಿ ಗಂಭೀರ ಆಸಕ್ತಿ ಉಳ್ಳವರು ಎಂದು ಮಾತ್ರ ಗೊತ್ತಿತ್ತು. ಆದರೆ ನಿನ್ನೆ ಅವರ ಅಕ್ಕ ಶ್ರೀಮತಿ ಸರಸ್ವತಿ ಪ್ರಭು ಮಾತಾಡುತ್ತಾ ಅವರು ಕಳೆದ ವರ್ಷ ನವೆಂಬರಿನಲ್ಲಿ ಹೃದಯಾಘಾತದಿಂದ ನಿಧನರಾದರೆಂದು ತಿಳಿಸಿದರು. ನಿನ್ನೆ ಸರಸ್ವತಿ ಪ್ರಭು ತಿಳಿಸಿದ ಮೇಲೇ ಅವರು ಅಕ್ಕ-ತಮ್ಮ ಎಂದೂ ನನಗೆ ಗೊತ್ತಾದದ್ದು. ಸರಸ್ವತಿ ಪ್ರಭು ನನ್ನ ನಾಟಕ ಕುದುರೆ ಬಂತು ಕುದುರೆಯನ್ನು ಹಿಂದಿಗೆ ಅನುವಾದಿಸಿದ್ದರು. ಹೀಗಾಗಿ ಅವರು ನನಗೆ ಹೆಚ್ಚು ಪರಿಚಯ. ಆ ಅನುವಾದ ಬಿ. ವಿ ಕಾರಂತರೂ ಸೇರಿದಂತೆ ಅನೇಕ ಹಿಂದಿ ಸಾಹಿತ್ಯ ಬಲ್ಲವರ ಮೆಚ್ಚುಗೆಗೆ ಪಾತ್ರವಾಗಿತ್ತು.

ತಡವಾಗಿಯಾದರೂ, ನಾಗರಾಜ ಜವಳಿ ಅವರಿಗೆ ಈ ಮೂಲಕ ಶ್ರದ್ಧಾಂಜಲಿ ಅರ್ಪಿಸುತ್ತಿದ್ದೇನೆ. ಆ ನೋವು ಸಹಿಸುವ ಶಕ್ತಿ ಅವರ ಅಕ್ಕ ಸರಸ್ವತಿ ಪ್ರಭು ಸೇರಿದಂತೆ ಅವರ ಕುಟುಂಬದ ಮತ್ತು ಅವರನ್ನು ಬಲ್ಲ ಎಲ್ಲರಿಗೆ ಸಿಕ್ಕಲಿ ಎಂದು ಬಯಸುತ್ತೇನೆ.

Monday, June 11, 2012

ಹುಲಿಯ ಕಥೆ

ಮೊನ್ನೆ ಜೂನ್ 9ರಂದು ಮೈಸೂರಿನ ಸಮತೆಂತೋ ತಂಡದವರು ನನ್ನ ನಾಟಕ ಹುಲಿಯ ಕಥೆ ಆಡಿದರು. ಇದು ಎರಡು ವರ್ಷಗಳ ಹಿಂದೆ ಪ್ರಕಟವಾದ ಈ ನಾಟಕದ ಮೊದಲ ಪ್ರಯೋಗ. ನಾನು ಇದನ್ನು ಸ್ನೇಹಿತರೊಬ್ಬರ ಹತ್ತಿರ world premier ಎಂದು ಕರೆದುಕೊಂಡೆ. ಅಮೇರಿಕಾದವರೋ ಇಂಗ್ಲೆಂಡಿನವರೋ ತಮ್ಮ ಊರಿನಲ್ಲಿ ನಾಟಕ ಆಡಿ ಅದನ್ನು world premier ಅಂದುಕೊಳ್ಳಬಹುದಾದರೆ ನಾವೇಕೆ ಅಂದುಕೊಳ್ಳಬಾರದು ಎಂದುದಕ್ಕೆ ಹೌದು ಎಂದು ಅವರೂ ನಗಾಡಿದರು.

ರಂಗಾಯಣದವರು ಮೈಸೂರಿನ ನಾಟಕ ತಂಡಗಳ ಒಂದು ಉತ್ಸವ ಏರ್ಪಡಿಸಿದ್ದರು. ಅಲ್ಲಿ ಆಡಿದ ನಾಟಕ ಇದು. House full ಆದ್ದು ಮಾತ್ರವಲ್ಲದೆ ನಾಟಕ ಮುಗಿದ ಮೇಲೆ ಪ್ರೇಕ್ಷಕರು ಉತ್ಸಾಹದ ಪ್ರತಿಕ್ರಿಯೆ ತೋರಿಸಿದರು.

ಸಮತೆಂತೋ ನನಗೆ ಆಧುನಿಕ ರಂಗಭೂಮಿಯನ್ನು ಮೊದಲು ಪರಿಚಯಿಸಿದ ಸಂಸ್ಥೆ. ಹಳ್ಳಿಯಿಂದ ಮೈಸೂರಿನ ಮಹಾರಾಜಾ ಕಾಲೇಜಿನಲ್ಲಿ 1966ರಲ್ಲಿ ಓದಲು ಹೋದ ನನಗೆ ಸಮತೆಂತೋ ಆಡಿದ ಪೂರ್ಣಚಂದ್ರ ತೇಜಸ್ವಿಯವರ ಯಮಳ ಪ್ರಶ್ನೆ, ಡಾ. ರತ್ನರ ಎಲ್ಲಿಗೆ?, ಚೆಕಾವ್ ನ ಕಾಡ್ಮನ್ಸ ಮೊದಲಾದವು ನೋಡಲು ಸಿಕ್ಕಿದ್ದು ಅದೃಷ್ಟ. ಎಲ್ಲಿಗೆ? ನನ್ನ ಮೇಲೆ ತುಂಬಾ ಪ್ರಭಾವ ಬೀರಿದ ನಾಟಕ. ಅದರಲ್ಲಿ ಎಚ್. ಎಂ. ಚೆನ್ನಯ್ಯ ಶಿರಡಿ ಸಾಯಿಬಾಬಾನ ಹಾಗೆ ಕೂತುಕೊಳ್ಳುವುದು ಮತ್ತು ಆ ಗೆಶ್ಚರಿನ ಧ್ವನಿಶಕ್ತಿ ಸಾಯಿಬಾಬಾನ ಭಕ್ತರ ಊರಿನಿಂದ ಹೋಗಿದ್ದ ನನಗೆ ತುಂಬಾ ಇಷ್ಟವಾದವು. ಮುಂದೆ 1973ರಲ್ಲಿ ಸಮತೆಂತೋದವರ ಕದಡಿದ ನೀರು ನಾಟಕದಲ್ಲಿ ನಾನು ಶಂಕರನ ಪಾತ್ರ ಮಾಡಿದ್ದೆ. ಆ ಮೇಲೆ ಮೈಸೂರು ಬಿಟ್ಟದ್ದರಿಂದ ಅವರ ನಾಟಕಗಳಲ್ಲಿ ಅಭಿನಯಿಸುವ ಅವಕಾಶ ಹೊರಟುಹೋಯಿತು.

ಆಗ ಕದಡಿದ ನೀರುನಲ್ಲಿ ಮಲ್ಲಿ ಪಾತ್ರ ಮಾಡಿದ ಇಂದಿರಾ ನಾಯರ್ ಹುಲಿಯ ಕಥೆಯಲ್ಲಿ ಸೀತೆಯ ಪಾತ್ರ ಮಾಡಿದ್ದರು. ಮೂವತ್ತೈದು ವರ್ಷಗಳ ಬಳಿಕ ಈಗ ಮತ್ತೆ ಪಾತ್ರ ಮಾಡುತ್ತಿದ್ದಾರೆ. ತುಂಬಾ ಒಳ್ಳೆಯ ನಟಿಯಾದ ಅವರನ್ನು ಮತ್ತೆ ಭೇಟಿಯಾದದ್ದೇ ನನಗೆ ಸಂತೋಷದ ವಿಷಯವಾಗಿತ್ತು. ಇನ್ನೊಬ್ಬರು ನಟಿ ಸರ್ವಮಂಗಳಾ. ಅವರೂ ಅಭಿನಯಿಸದೆ ಅನೇಕ ವರ್ಷಗಳಾದವಂತೆ. ಡಾ. ರತ್ನ, ಅವರ ಮನೆಯವರು, ಹಳೆಯ ಸ್ನೇಹಿತ ರಘುನಾಥ್ ಮತ್ತು ಅವರ ಮನೆಯವರು, ಬಸವರಾಜ್--ಈ ಹಳೆಯ ಸ್ನೇಹಿತರನ್ನೆಲ್ಲಾ ಮತ್ತೆ ಭೇಟಿಯಾದದ್ದು ನನಗೆ ನನ್ನ ನಾಟಕ ಆಡಿದ್ದನ್ನು ನೋಡಿದಷ್ಟೇ ಖುಷಿ ಕೊಟ್ಟಿತು.

ಇದನ್ನು ನಿರ್ದೇಶಿಸಿದವರು ಸಹಮತ್. ಅತ್ಯಂತ ಚಿಕ್ಕ ವಯಸ್ಸಿನ ನಿರ್ದೇಶಕಿ. ಆದರೆ ಅವರ ಆತ್ಮವಿಶ್ವಾಸ ದೊಡ್ಡದನ್ನು ಸಾಧಿಸುವವರಲ್ಲಿ ಇರಲೇಬೇಕಾದ ಆತ್ಮವಿಶ್ವಾಸ. 

ಪ್ರಯೋಗದಲ್ಲಿ ಅನೇಕ ಕೊರತೆಗಳಿವೆ. ಆದರೆ ಇದು ಮೊದಲ ಪ್ರಯೋಗ. ಅವೆಲ್ಲಾ ಮುಂದೆ ಸರಿಯಾಗುವಂಥದು.

Saturday, June 2, 2012

THEATRE UNIVERSITY

ಸ್ನೇಹಿತರೊಬ್ಬರು ರಂಗಾಯಣದ ಕೆಲವರನ್ನು ಬೇರೆ ಕಡೆಗೆ ವರ್ಗ ಮಾಡಿರುವುದರ ಬಗ್ಗೆ ಲೇಖನ ಬರೆದು ನಮ್ಮ ಗಮನ ಸೆಳೆದಿದ್ದಾರೆ.

ಅದರ ಬಗ್ಗೆ ಪ್ರತಿಭಟನೆ ಸಲ್ಲಿಸಬಹುದು; ಸದ್ಯಕ್ಕೆ ಅದನ್ನು ಬದಲಾಯಿಸುವಂತೆ ಒತ್ತಡ ಹೇರಲೂ ಸಾಧ್ಯವಾಗಬಹುದು. ಆದರೆ ರಂಗಾಯಣದ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಸಿಗಬೇಕಿದ್ದರೆ ಅದನ್ನೊಂದು ಥಿಯೇಟರ್ ಯುನಿವರ್ಸಿಟಿಯಾಗಿ ಬೆಳೆಸುವುದು ಹೊರತು ಬೇರೆ ಮಾರ್ಗವಿಲ್ಲ. ಥಿಯೇಟರಿಗೆ ಸಂಬಂಧಪಟ್ಟ ಎಲ್ಲಾ ಸರಕಾರಿ ಸಂಸ್ಥೆಗಳು ಒಟ್ಟುಗೂಡಿ ಅದರ ಜೊತೆ ಸೇರಿ ಕೆಲಸ ಮಾಡುವಂತೆ ಅದನ್ನು ಥಿಯೇಟರ್ ವಿಶ್ವವಿದ್ಯಾನಿಲಯವಾಗಿ ರೂಪಿಸಿ ಬೆಳೆಸಬೇಕು.

ಯುನಿವರ್ಸಿಟಿ ಆದ ಕೂಡಲೇ ಎಲ್ಲಾ ಸಮಸ್ಯೆಗಳು ಪರಿಹಾರ ಆಗುತ್ತವೆ ಎಂದಲ್ಲ. ಬೇರೆ ಯುನಿವರ್ಸಿಟಿಗಳಲ್ಲಿರುವ ಸಮಸ್ಯೆಗಳು ನನಗೆ ಗೊತ್ತಿವೆ. ಆದರೆ ಯುನಿವರ್ಸಿಟಿ ಆದೊಡನೆ ನಾವು ಸಮಸ್ಯೆಗಳ ಪರಿಹಾರಕ್ಕಾಗಿ ಥಿಯೇಟರಿಗೆ ಸಂಬಂಧಪಟ್ಟವರೊಡನೆ ವ್ಯವಹರಿಸಬಹುದು. ಕೊನೆಯ ಪಕ್ಷ ಥಿಯೇಟರ್ ಎಂದರೆ ಏನೆಂದು ಗೊತ್ತಿರುವವರೊಡನೆ ಮಾತಾಡಬಹುದು. ಒಂದು ಸಮಾನ ವೇದಿಕೆ ಸಿಗುತ್ತದೆ.

ರಂಗಾಯಣವನ್ನು ಥಿಯೇಟರ್ ಯುನಿವರ್ಸಿಟಿಯಾಗಿ ಮಾಡಿ ಎಂದು ನಾವೀಗ ಒತ್ತಾಯಿಸಬೇಕಿದೆ.

Monday, May 21, 2012

MY PLAYS IN ENGLISH

I have translated ten of  eleven plays of mine into English. That is what I had been doing during the last six months.

 I want to publish them. Probably volume 1 and 2 will be published either in December this year or January next. Volume one contains Rathamusala, Here Comes the Horse the Horse, and Tiger`s Tale, and volume 2, Rahu and Ketu, and Jarasandha, two plays for puppet theatre, The Rebel, and The Priest and the Prostitute, a version of Bhagavadajjukiyam, Sanskrit play attributed to Bodhayana of 6th century A. D.

Personally it had been a rewarding experience to translate my own plays into English. It was almost like rewriting. It is so especially because when a writer translates his own work, he is not bound by the original. He can make changes. That is what I had been doing.  I think I created new texts in English, based on the plays I once wrote in Kannada. At least that is how I would like to describe these plays.

To illustrate this, I should mention what happened while translating Rathamusala. When I came to the last scene, I felt it can end differently. So, I wrote another 11th scene. In the previous versions, Chetaka, commits suicide. I have retained it. But, I have also written another scene in which he wears the costumes of the Vidushak and escapes from the country, and from the enemy. I thought this ending is also equally valid because it is also a possibility; it is also born of the previous scenes. May be this ending makes it more multidimensional than the previous ending.

Friday, May 18, 2012

ಕುಲಾಂತರಿ ಬೀಜಗಳು

ಮೇ 20ರಿಂದ ಬೆಂಗಳೂರಿನಲ್ಲಿ ಕುಲಾಂತರಿ ಬೀಜಗಳ ಕುರಿತು ಒಂದು ಸೆಮಿನಾರು ನಡೆಯಲಿದೆ.

ಈ ಸಂದರ್ಭದಲ್ಲಿ ಅಡಿಕೆ ಬೆಳೆಗಾರನಾಗಿ ನಾನು ಮತ್ತು ನನ್ನ ಹಾಗಿರುವ ಇತರ ಅನೇಕ ಅಡಿಕೆ ಬೆಳೆಗಾರರು ಬೀಜ ಮತ್ತು ಅಡಿಕೆ ಸಸಿಗಳನ್ನು ಹೇಗೆ ಮಾಡಿಕೊಳ್ಳುತ್ತೇವೆ ಎಂದು ನಮೂದಿಸುವುದು ಉಚಿತವಾಗಬಹುದು.

ನಾವು ಯಾರೂ ಅಡಿಕೆ ಬಿತ್ತನ್ನು ಇನ್ನೊಂದು ಕಡೆಯಿಂದ ತರುವುದಿಲ್ಲ. ಕೆಲವು ಸಲ ವಿಟ್ಲದಲ್ಲಿರುವ  ಅಡಿಕೆ ಸಂಶೋಧನಾ ಕೇಂದ್ರದಿಂದ ಬಿತ್ತನ್ನೋ ಗಿಡವನ್ನೋ ತರುವುದು ಉಂಟಾದರೂ ಅಂಥದ್ದು ಕಮ್ಮಿ; ಅಪರೂಪ. ಅವರ ವಿಶೇಷ ತಳಿಯಾದ ಮಂಗಳದಲ್ಲಿ ಪ್ರಾರಂಭದ ವರ್ಷಗಳಲ್ಲಿ ಇಳುವರಿ ಹೆಚ್ಚಿಗೆ ಇರುತ್ತದಾದರೂ ಕೆಲವೇ ವರ್ಷಗಳಲ್ಲಿ ಇಳುವರಿ ಕಮ್ಮಿಯಾಗುತ್ತದೆ. ಅಲ್ಲದೆ ಊರ ತಳಿಯನ್ನು ಸಾಕುವುದಕ್ಕಿಂತ ಅದರ ಸಾಕಣೆಗೆ ತಗಲುವ ವೆಚ್ಚ ಹೆಚ್ಚು. ಹೀಗಾಗಿ ಹೆಚ್ಚು ತಾಳಿಕೆಯ ಮತ್ತು ಹೆಚ್ಚು ಗಟ್ಟಿ ತಳಿಗಳಾದ ಊರ ತಳಿಗಳನ್ನೇ ಅಡಿಕೆ ರೈತರು ಇಷ್ಟಪಡುತ್ತಾರೆ.

ಹೆಚ್ಚಿನ ಎಲ್ಲ ರೈತರು ತಮ್ಮದೇ ತೋಟದಲ್ಲಿರುವ ಬಿತ್ತಿನ ಮರವೆಂದೇ ಆರಿಸಿ ಇಟ್ಟುಕೊಂಡ ಮರದಿಂದ ಬಿತ್ತನ್ನು ಆರಿಸಿ, ಅದಕ್ಕೆ ಸೆಗಣಿ ಉದ್ದಿ ಕಳ್ಪ ಹಾಕಿ ಮಳೆ ಬಂದ ಮೇಲೆ ಗಿಡ ನೆಡುವ ಸಮಯದಲ್ಲಿ ನೆಡುತ್ತಾರೆ. ಹೀಗಾಗಿ ಎಲ್ಲಿಂದಲೋ ಬೀಜ ತಂದು ಬೇಸ್ತು ಬೀಳುವ ಪ್ರಮೇಯವೇ ಇಲ್ಲ.  ಹೆಚ್ಚಿನ ರೈತರು ಮಳೆಗಾಲದಲ್ಲಿ ಅಂಗಳದಲ್ಲಿ ತರಕಾರಿ ಬೆಳೆಯುತ್ತಾರೆ. ಅಲ್ಲಿಯೂ ಬಿತ್ತು ಕಳೆದ ವರ್ಷ ಬೆಳೆದ ತರಕಾರಿಯಿಂದ ಆರಿಸಿ ಇಟ್ಟುಕೊಂಡದ್ದೇ ಹೊರತು ಬೇರೆ ಕಡೆಯಿಂದ ತಂದದ್ದಲ್ಲ. ಒಂದು ವೇಳೆ ತರುವುದಿದ್ದರೂ ಅದು ನೋಡಿ ಗೊತ್ತಿರುವ ಊರಿನ ಅಥವಾ ಸಂಬಂಧಿಕರ ತೋಟದಿಂದಲೇ ಹೊರತು ಎಲ್ಲೆಲ್ಲಿಂದಲೋ ಅಲ್ಲ; ಕಂಪೆನಿಗಳಿಂದ ಅಂತೂ ಖಂಡಿತ ಅಲ್ಲ.

ಗದ್ದೆ ಬೇಸಾಯ ಇದ್ದಾಗಲೂ ಬಿತ್ತಿನ ಮುಡಿ ಎಂದು ಬೇರೆಯೇ ಕಟ್ಟಿ ಅಟ್ಟದಲ್ಲಿ ಇಡುತ್ತಿದ್ದರು. ಮುಂದಿನ ವರ್ಷ ಬೇಸಾಯದ ಸಮಯದಲ್ಲಿ ಅದರಿಂದ ಬಿತ್ತು ತೆಗೆದು ಬಿತ್ತುತ್ತಿದ್ದರೇ ಹೊರತು ಬೇರೆ ಕಡೆಯಿಂದ ತರುವ ಪದ್ಧತಿ ಇರಲಿಲ್ಲ.

ಇದು ತಲೆತಲಾಂತರದಿಂದ ನಡೆದು ಬಂದ ಪದ್ಧತಿ. "ಬಿತ್ತಿಗೆ  ಅಡಿಕೆ ಇರ್ಸುದು", "ಬಿತ್ತು ತೆಗೆದಿರಿಸುವುದು", "ಬಿತ್ತಿನ ಮುಡಿ ಕಟ್ಟುದು" ಮೊದಲಾದವು ರೈತನ ಭಾಷೆಯ ಅವಿಭಾಜ್ಯ ನುಡಿಗಟ್ಟುಗಳು.

ಕರ್ನಾಟಕದ ಉಳಿದ ಪ್ರದೇಶಗಳ ರೈತರ ಗಮನಕ್ಕಾಗಿ ಈ ವಿಷಯ ಇಲ್ಲಿ ನಮೂದಿಸಿದ್ದೇನೆ. ನಮ್ಮದೇ ಬೆಳೆಗೆಳ ಬಿತ್ತುಗಳನ್ನು ಶೇಖರಿಸಿಟ್ಟು ಅವನ್ನೇ ಮುಂದಿನ ಬೇಸಾಯಕ್ಕೆ  ಬಳಸುವುದು ಸುಲಭ, ಅಗ್ಗ, ಸುರಕ್ಷಿತ ಮತ್ತು ಸ್ವಾವಲಂಬಿ.



Thursday, May 3, 2012

ಶೇಕ್ ಸ್ಪಿಯರ್ ಹುಟ್ಟು ದಿನ ಕುರಿತು ನಾನು ಈ ಬ್ಲಾಗಿನಲ್ಲಿ ಬರೆದು ಪ್ರಕಟಿಸಿದ ಲೇಖನ ಎಪ್ರಿಲ್ 22ರ ವಿಜಯವಾಣಿ ದೈನಿಕದಲ್ಲಿ ಈ ಮೊದಲು ಪ್ರಕಟವಾಗಿತ್ತು. ಆ ಲೇಖನ ಬರೆಯಲು ಕಾರಣರಾದ ಶ್ರೀಧರಮೂರ್ತಿ ಅವರಿಗೆ ಕೃತಜ್ಞತೆಗಳು.

ಶೇಕ್ ಸ್ಪಿಯರ್ ಜನ್ಮದಿನ