Friday, December 23, 2011

LIFE IN POETRY

One of the most interesting sites I have come across while browsing in the internet is Life in Poetry of Philoctetes Center of New York. It is sponsored by YouTube. It conducts discussions of poetry in English language of such great poets like W. B. Yeats, T. S. Eliot, Seamus Heaney, G. M. Hopkins, Thomas Hardy and others. The discussion is conducted by important writers, critics, and teachers. One of the panelists in a discussion on Samuel Beckett`s plays included Edward Albee, an important American playwright. . The discussion continues up to one hour and 40 minutes. View it whenever you have time. It is a rewarding experience.

I wish there are  discussions of important Asian writers in English in a similar manner. This is one important way of familiarizing ourselves and the world with the achievements of Asian writers in different Asian languages.

But, sadly, some of us writers do not even have an email. We simply do not know how to make use of the opportunities available to us. I do not understand this apathy.

Monday, December 5, 2011

ನುಡಿಸಿರಿ


ಈ ಸಲದ ನುಡಿಸಿರಿ ಕಾರ್ಯಕ್ರಮಕ್ಕೆ ನಾನು ಆಹ್ವಾನಿತನಾಗಿ ಹೋಗಿದ್ದೆ. ಇಪ್ಪತ್ತು ನಿಮಿಷಗಳನ್ನು ನನಗೆ ಪದ್ಯ ಓದಲು ಕೊಟ್ಟಿದ್ದರು. ನಾನು ಓದಿದ ಪದ್ಯದ ಕೆಲವು ಭಾಗವನ್ನು ರಾಗಸಂಯೋಜನೆ ಮಾಡಿ ಹಾಡಿದರು. ಅದರ ಆಕಾಶವಾಣಿ ಪ್ರಸಾರಕ್ಕೂ ವ್ಯವಸ್ಥೆ ಮಾಡಿದ್ದರು. ಮಾರನೇ ದಿನ ಬೆಳಿಗ್ಗೆ ಮಂಗಳೂರು ಆಕಾಶವಾಣಿಯಿಂದ ಅದರ ಪ್ರಸಾರ ಇತ್ತು. ಹಾಗೆಂದು ನನಗೆ ತಿಳಿಸಿದವರು ಮುರಳೀಧರ ಉಪಾಧ್ಯರು. ಇದರಿಂದಾಗಿ ಅವರಂಥಾ ಸಹೃದಯಿ ನನಗೆ ಮಾರನೇ ದಿನವಾದರೂ ಕೇಳುಗರಾಗಿ ಸಿಕ್ಕಿದರು.

ಇಡೀ ಕರ್ನಾಟಕದ ಗಮನ ಸೆಳೆದಿರುವ ಈ ಕಾರ್ಯಕ್ರಮದಲ್ಲಿ ನನ್ನನ್ನು ಮೊದಲು ಆಕರ್ಷಿಸಿದ್ದು ಅಲ್ಲಿನ ಅಚ್ಚುಕಟ್ಟುತನ, ದಕ್ಷತೆ, ಮತ್ತು ಅತಿಥಿಗಳ ಬಗೆಗೆ ತೋರಿದ ಕಾಳಜಿ. ಕಾರ್ಯಕ್ರಮಕ್ಕೆ ಒಪ್ಪಿದ ಮೇಲೆ ಪ್ರತಿ ಹಂತದಲ್ಲಿ ಸಂಬಂಧಪಟ್ಟವರು ಫೋನು ಮಾಡಿ ವಿಚಾರಿಸಿಕೊಳ್ಳುತ್ತಿದ್ದರು. ಮನೆಯಿಂದ ಹೊರಟಿರಾ, ಎಷ್ಟು ಗಂಟೆಗೆ ತಲುಪುತ್ತೀರಿ ಎಂಬಲ್ಲಿಂದ ಪ್ರಾರಂಭಿಸಿ ಈ ಯೋಗಕ್ಷೇಮದ ವಿಚಾರಣೆ ನಮ್ಮ ಪ್ರಯಾಣ-ಮರುಪ್ರಯಾಣಗಳ ಎಲ್ಲಾ ಅಂಶಗಳನ್ನು ವ್ಯಾಪಿಸಿತ್ತು.

ನನಗೆ ಇಷ್ಟವಾದ ಇನ್ನೊಂದು ಅಂಶ ಅಲ್ಲಿನ ಕಾರ್ಯಕರ್ತರ ತಯ್ಯಾರಿ. ನನ್ನ ಜೀವನವಿವರಗಳನ್ನು ಸರಿಯಾಗಿ ಓದಿ ಏನು ಹೇಳಬೇಕೆಂದು ನಿರ್ಧರಿಸಿ ಅಲ್ಲಿನ ಕಾರ್ಯಕರ್ತರು ಪರಿಚಯ ಮಾಡಿದರು. ಪರಿಚಯ ಮಾಡುವ ಕೆಲವೇ ಕ್ಷಣಗಳ ಮೊದಲು, ಸಾರ್, ನಿಮ್ಮ ಬಗ್ಗೆ ಒಂದೆರಡು ಪಾಯಿಂಟ್ ಹೇಳಿಬಿಡಿ ಸಾರ್ ಎನ್ನುವುದು ಸಾಮಾನ್ಯವಾಗಿ ಬಹುಶಃ ಅನೇಕ ಲೇಖಕರು ಇಂಥಾ ಕಾರ್ಯಕ್ರಮಗಳಲ್ಲಿ ಎದುರಿಸುವ ಪ್ರಶ್ನೆ. ಹಾಗೆ ಕೇಳದೆಯೂ ಪರಿಚಯ ಮಾಡುವವರಿದ್ದಾರೆ. ನನ್ನನ್ನು ಒಬ್ಬರು ಸಾಹಿತ್ಯ ಅಕಾಡೆಮಿ ಅಧ್ಯಕ್ಷರು ಒಂದು ಸಲ "ಇವರು ಮೂಗೇಲ ಎಂಬ ನಾಟಕ ಬರೆದಿದ್ದಾರೆ" ಎಂದು ಪರಿಚಯ ಮಾಡಿಕೊಟ್ಟಿದ್ದರು. ಗೌರಿಸುಂದರ ಎಂಬವರು ಇತ್ತೀಚೆಗೆ ಸಂಪಾದಿಸಿ ಪ್ರಕಟಿಸಿದ ಸಹಸ್ರಮಾನದ ಕವಿತೆಗಳು ಎಂಬ ಪುಸ್ತಕದಲ್ಲಿ ನನ್ನನ್ನು ರಾಮಚಂದ್ರ ಶರ್ಮ ಎಂದೂ ನಾನು 1923ನೇ ಇಸವಿಯಲ್ಲಿ ಮಂಡ್ಯ ಜಿಲ್ಲೆಯಲ್ಲಿ ಹುಟ್ಟಿದ್ದೇನೆಂದೂ ಈಗ ಸತ್ತಿದ್ದೇನೆಂದೂ ಪರಿಚಯ ಮಾಡಿಕೊಡಲಾಗಿದೆ. ಇದು, ನನ್ನಿಂದ ನನ್ನ ಬಯೋಡೆಟಾ, ನನ್ನ ಕುರಿತು ಶಿವತೀರ್ಥನ್ ಪ್ರಕಟಿಸಿದ ಪುಸ್ತಕ ಮೊದಲಾದವನ್ನು ತರಿಸಿಕೊಂಡ ಮೇಲೆ.

ಇಂಥಾದ್ದರ ಮಧ್ಯೆ ನುಡಿಸಿರಿಯ ದಕ್ಷತೆ ರಿಫ್ರೆಶಿಂಗ್ ಆಗಿತ್ತು. ದಕ್ಷತೆಯೇ ಸೃಜನಶೀಲ ಆಗಬಹುದು ಎನ್ನಿಸುವುದು ಇಂಥಾ ಸಂದರ್ಭಗಳಲ್ಲಿ.

ಇಂಥಾ ಕಾರ್ಯಕ್ರಮಗಳು ಸಾಹಿತ್ಯದ ಬಗ್ಗೆ ಆಸಕ್ತಿ ಹುಟ್ಟಿಸುತ್ತವೆ; ಹೊಸ ಐಡಿಯಾಗಳನ್ನು ಹುಟ್ಟುಹಾಕುತ್ತವೆ. ಪರಿಚಿತರನ್ನು ಭೇಟಿಯಾಗುವುದಕ್ಕಂತೂ ಹೇಳಿ ಮಾಡಿದ ಜಾಗಗಳು. ಇಂಥಾದ್ದನ್ನು ನಡೆಸುತ್ತಿರುವ ಡಾ. ಮೋಹನ ಆಳ್ವರಿಗೆ ನನ್ನ ಹೃತ್ಪೂರ್ವಕ ಅಭಿನಂದನೆ.

Friday, December 2, 2011

Ramanujan`s Many Ramayanas

It is regretting that Oxford University Press, publishers of A. K. Ramanujan`s Collected Essays, in which his controversial "Many Ramayanas" appears, has given a statement in the court that it has  decided to withdraw Ramanujan`s book from the market and has also decided not to reprint it. To go by the report I have read, it has given a statement in the court that Ramanujan`s essay is against the pluralistic structure of this country.

Personally I feel that Ramanujan`s essay on the Ramayanas supports the pluralistic cultures of this country by bringing to our notice many versions of the Ramayanas. Whatever it is, the statements of Prof. Paula Rechamn, William H. Dauforth and others that the Oxford University Press should relinquish its rights on Ramanujan`s book so that the book is reprinted by other publishers to make  this scholarly work  available to the academicians and the public is just and reasonable. I urge my friends and readers to press the Oxford University Press to relinquish its rights of Ramanujan`s book. Making his works available at all the time is a tribute we pay to Ramanujan, who, through his poetry and translations, has enriched Kannada language too.

Saturday, November 26, 2011

ವಿಮರ್ಶಕರು ಮತ್ತು ಓದುಗರು

ನಿನ್ನೆ ನಾನು ವಿಮರ್ಶಕರ ಬಗ್ಗೆ ಬರೆದದ್ದು ಲೇಖಕರ ದೃಷ್ಟಿಯಿಂದ. ಆದರೆ ಲೇಖಕರು ಪೂರ್ತಿ ವಿಮರ್ಶೆ ಬಗ್ಗೆ ನಿರ್ಲಿಪ್ತರಾಗಿ ಇರುತ್ತಾರೆ ಎನ್ನುವುದು ಸರಿಯಲ್ಲ. ಒಳ್ಳೆಯ ವಿಮರ್ಶೆ ಬರದಿದ್ದರೆ ಮಾರಾಟದ ಮೇಲೆ ಪರಿಣಾಮ ಬೀರುತ್ತದೆ. ಲೇಖಕನ ಮೊದಲ ಕೃತಿಯಾದರಂತೂ ಒಳ್ಳೆಯ ವಿಮರ್ಶೆ ಅವನನ್ನು ಸಾಹಿತ್ಯ ಕ್ಷೇತ್ರದಲ್ಲಿ ನೆಲೆಗೊಳಿಸುವ ದೃಷ್ಟಿಯಿಂದ ಮುಖ್ಯ. ಗಟ್ಟಿಯಾಗಿ ನೆಲೆ ನಿಂತ ಲೇಖಕನನ್ನೂ ವಿಮರ್ಶೆ ವಿಚಲಿತಗೊಳಿಸಬಲ್ಲುದು. ಉದಾಹರಣೆಗೆ ಭೈರಪ್ಪನವರ ಬಗ್ಗೆ ಅನಂತಮೂರ್ತಿಯವರು ಬರೆದ ಲೇಖನ ನೋಡಿ. ಅನಂತಮೂರ್ತಿ ಅವರನ್ನು ಜನಪ್ರಿಯ ಲೇಖಕ ಎಂದ ಮೇಲೆ ಅನೇಕರು ಹಾಗೆ ಹೇಳಲು ಸುರು ಮಾಡಿದರು. ಪರಿಣಾಮವಾಗಿ ಈ ದೊಡ್ಡ ಲೇಖಕ ಪರ್ವ  ಕಾದಂಬರಿಯ ನಂತರ ಏರಿದ ಎತ್ತರ ಸರ್ವತ್ರ ಒಪ್ಪಿಗೆ ಪಡೆಯದೆ ಹೋಯಿತು. ಪರ್ವದ ನಂತರದ ಭೈರಪ್ಪ ನಿಸ್ಸಂದಿಗ್ಧವಾಗಿ ಅನಂತಮೂರ್ತಿಯವರಿಗಿಂತ ಹೆಚ್ಚು ಅನುಭವ ವಿಸ್ತಾರ ಇರುವ ಕಾದಂಬರಿಕಾರ.

ಸಹೃದಯತೆಯಿಂದ, ತನ್ನನ್ನು ಮೆರೆಸುವುದಕ್ಕಲ್ಲ, ಕೃತಿಯನ್ನು ಅರಿಯಬೇಕು ಎಂಬ ದೃಷ್ಟಿಯಿಂದ ಬರೆದ ವಿಮರ್ಶೆ ಓದುರಿಗೆ ಸಹಾಯಮಾಡಬಲ್ಲುದು. ಕನ್ನಡದ ಅನೇಕ ನವ್ಯ ವಿಮರ್ಶಕರ ವಿಮರ್ಶೆ ಹೀಗೆ ಕೃತಿಯನ್ನು ಅರಿತುಕೊಳ್ಳಲು ಅನೇಕರಿಗೆ ಸಹಾಯಮಾಡಿದೆ. ನವ್ಯ ವಿಮರ್ಶೆ ಬರುವ ಮೊದಲು ವಿಮರ್ಶೆಯೆಂದರೆ ಬಹುತೇಕ ಕಥಾಸಾರಾಂಶ ಕೊಡುವುದು
ಅಥವಾ ವಿಶೇಷಣಗಳನ್ನು ಬಳಸಿ ಹೊಗಳುವುದಾಗಿತ್ತು. ವಿಮರ್ಶಕರು ಒಂದು ಕೃತಿಯ ನೆಯ್ಗೆಯ ಬಗ್ಗೆ, ಅದರ ಸಂವಿಧಾನದ ಬಗ್ಗೆ, ಪದಗಳ ಬಳಕೆ ಬಗ್ಗೆ ಬರೆಯಲು ಸುರು ಮಾಡಿದ ಮೇಲೆ ಸಮಕಾಲೀನ ಕೃತಿಗಳ ಬಗೆಗಿನ ತಿಳುವಳಿಕೆ ಮಾತ್ರವಲ್ಲ, ಪ್ರಾಚೀನ ಕೃತಿಗಳ ತಿಳುವಳಿಕೆ ಕೂಡಾ ಹೆಚ್ಚಿದೆ. ವಚನಕಾರರ, ಪಂಪನ ಕೃತಿಗಳ ಸೌಂದರ್ಯದ ಬಗ್ಗೆ ನಮ್ಮ ಅರಿವು ವಿಮರ್ಶಕರ ವಿಶ್ಲೇಷಣಿಯಿಂದಾಗಿ ಹೆಚ್ಚು ಸೂಕ್ಷ್ಮವಾಗಿದೆ. ಶೇಕ್ ಸ್ಪಿಯರ್ ಕೃತಿಗಳ ತಿಳುವಳಿಕೆ ಹೆಚ್ಚಿಸಿದ್ದರಲ್ಲಿ ಕೆರೊಲಿನ್ ಸ್ಪರ್ಜನ್ ರಂಥವರು ಮಾಡಿದ ಅವನ ಪ್ರತಿಮೆಗಳ ವಿಶ್ಲೇಷಣೆಯ ಕೊಡುಗೆ ತುಂಬಾ ಇದೆ.

ಆದರೆ ಲೇಖಕರು ವಿಮರ್ಶಕರ ಅಭಿರುಚಿಗೆ ಅನುಗುಣವಾಗಿ ಬರೆಯುವುದು, ಅವರನ್ನು ಓಲೈಸುವುದು ಆತ್ಮಹತ್ಯಾತ್ಮಕ. ಲೇಖಕ ತನ್ನ ಸೃಜನಶೀಲ ಸ್ವಾತಂತ್ರ್ಯ ಉಳಿಸಿಕೊಳ್ಳಬೇಕಾದರೆ ಸ್ವಯಂಭುವಾಗಿರಬೇಕು.


ವಿಮರ್ಶಕರು ಮತ್ತು ಲೇಖಕರು

ಶಿವರಾಮ ಕಾರಂತರು ವಿಮರ್ಶಕರ ಬಗ್ಗೆ ಯೋಚಿಸುತ್ತಿರಲಿಲ್ಲ ಎಂದು ಅವರ ಹುಟ್ಟುಹಬ್ಬದ ದಿನ ನಾನು ಹೇಳಿದ ಮಾತನ್ನು ಒಬ್ಬ ಓದುಗರು ಇಷ್ಟ ಪಟ್ಟಿದ್ದಾರೆ. ನಿಜವಾಗಿ ನೋಡಿದರೆ ಯಾವ ಮುಖ್ಯ ಲೇಖಕನೂ ವಿಮರ್ಶಕರು ಏನು ಹೇಳುತ್ತಾರೆ ಎಂಬ ಬಗ್ಗೆ ಯೋಚಿಸುವುದಿಲ್ಲ. ಅವನು ತನ್ನ ಮನಸ್ಸಿನಲ್ಲಿರುವ ತನ್ನ ಅನುಭವ ಮತ್ತು ತಾನು ಅಭಿವ್ಯಕ್ತಿಗಾಗಿ ಆರಿಸಿಕೊಂಡ ಭಾಷೆ ಬಗ್ಗೆ  ಮಾತ್ರ ಯೋಚಿಸುತ್ತಾನೆ. ಹೆಚ್ಚಿನ ವಿಮರ್ಶಕರು ಕೆಲವು ಪೂರ್ವನಿರ್ಧಾರಿತ ತೀರ್ಮಾನಗಳಿಂದ ಹೊರಡುತ್ತಾರೆ, ಅದಕ್ಕಿಂತ ಭಿನ್ನವಾಗಿರುವ ಕೃತಿ ಅವರಿಗೆ ರುಚಿಸುವುದಿಲ್ಲ, ಅವರ ಪೂರ್ವನಿರ್ಧಾರಿತ ಅಭಿರುಚಿಗೆ ಅನುಗುಣವಾಗಿ ಲೇಖಕರು ಬರೆಯಹೊರಟರೆ ಯಾವ ಹೊಸ ಬಗೆಯ ಪ್ರಯೋಗವೂ ಸಾಧ್ಯವಾಗುವುದಿಲ್ಲ. ಆದರೂ ಕೆಲವು ವಿಮರ್ಶಕರ ಟೀಕೆಯಿಂದ ಲೇಖಕರ ಸ್ವವಿಮರ್ಶೆ ಹೆಚ್ಚುತ್ತದೆ ಮತ್ತು ಅದರಿಂದ ಬರೆವಣಿಗೆಗೆ ಅನುಕೂಲವಾಗುತ್ತದೆ ಎಂಬುದು ನಿಜ. ಹೀಗೆ ಸಹಾಯ ಮಾಡುವವರನ್ನು ಲೇಖಕನಿಗೆ ಹೊರಗಿನವನಾದ ವಿಮರ್ಶಕ ಅನ್ನುವುದಕ್ಕಿಂತ ಲೇಖಕ ಏನು ಮಾಡುತ್ತಾನೆಂಬುದನ್ನು ಸಹಾನುಭೂತಿಯಿಂದ ತಿಳಿದ ಮತ್ತು ತಿಳಿಯಬಲ್ಲ ಸಹೃದಯ ಎನ್ನುವುದು ಹೆಚ್ಚು ಸರಿ. ಕುರ್ತಕೋಟಿ ಅನೇಕರಿಗೆ ಇಂಥಾ ಸಹೃದಯರಾಗಿದ್ದರು; ಅಡಿಗರು ಅವರ ಹತ್ತಿರದವರಿಗೆ ಇಂಥಾ ಸಹೃದಯರಾಗಿದ್ದರು.

ಕಾರಂತರ ಹಾಗೆ ಬೇಂದ್ರೆಯವರೂ ಅಕಡೆಮಿಕ್ ಆದ, ವಿದ್ಯಾವಂತರಾದ ಲೇಖಕ ವಿಮರ್ಶಕ ಮೊದಲಾದವರಿಗೆ ಹೆಚ್ಚು ಬೆಲೆ ಕೊಡುತ್ತಿರಲಿಲ್ಲ. ಅವರಿಗೆ ಮಾತಾಡಲು ಬಿಡದೆ, ಇವರ ಮಾತನ್ನು ಕೇಳಬೇಕಾದ ಅಗತ್ಯವೇ ಇಲ್ಲ ಎಂಬಂತೆ ತಾವೇ ಮಾತಾಡುತ್ತಿದ್ದರಂತೆ. ಆದರೆ ಹಳ್ಳಿಯ ಜನ ಬಂದರೆ, ಹಳ್ಳಿ ಹಾಡುಗಳನ್ನು ಹೇಳುವವರು ಬಂದರೆ, ಗಂಟೆಗಟ್ಟಲೆ ನಿಷ್ಠೆಯಿಂದ ಅವರ ಮಾತು ಕೇಳುತ್ತಾ ಕೂತಿರುತ್ತಿದ್ದರಂತೆ. ಈ ಮಾತನ್ನು ಕೀರ್ತಿನಾಥ ಕುರ್ತಕೋಟಿ ಎಲ್ಲೋ ಉಲ್ಲೇಖಿಸುತ್ತಾರೆ. ಎಲ್ಲಿ ಎಂದು ನೆನಪಿಗೆ ಬರುತ್ತಿಲ್ಲ.  ಪುಸ್ತಕದ ಬದನೇಕಾಯಿಗಳಾದ ಈ ಅಕಡೆಮಿಕ್ ಜನರಿಂದ ಕಲಿಯುವುದು ಏನೂ ಇಲ್ಲ, ಆದರೆ ಸ್ವಂತ ಅನುಭವದ ಮಾತು ಹೇಳುವ ಹಳ್ಳಿ ಜನರಿಂದ ಕಲಿಯುವುದು ಇದೆ ಎಂದು ಅವರಿಗೆ  ಅನ್ನಿಸಿರಬಹುದು.

ಸ್ವವಿಮರ್ಶೆ ಹೆಚ್ಚಿಸದ ವಿಮರ್ಶೆಯಿಂದ ಲೇಖಕನಿಗೆ ಆಗಬೇಕಾದ್ದು ಏನೂ ಇಲ್ಲ. ಅಂಥಾ ವಿಮರ್ಶೆ ಬರೀ ತರಲೆ.

Tuesday, November 22, 2011

ಇಕ್ಬಾಲ್ ಅಹ್ಮದ್ ಮತ್ತು ಹ್ಯಾಮ್ಲೆಟ್

ನಾನು ಹ್ಯಾಮ್ಲೆಟ್ ಅನುವಾದಿಸಿದ್ದು 1978ರಲ್ಲಿ. ಅದರ ನಂತರದ ಈ ಮೂವತ್ತಮೂರು ವರ್ಷಗಳಲ್ಲಿ ಅದನ್ನು ಬೇರೆ ಬೇರೆಯವರು ಆಡಿದ್ದಾರೆ; ರೇಡಿಯೋದಲ್ಲಿ ಪ್ರಸಾರ ಮಾಡಿದ್ದಾರೆ. ಆದರೆ ಅದರ ಬಗ್ಗೆ ನಿರಂತರವಾಗಿ ಅಭಿಮಾನ ಇಟ್ಟುಕೊಂಡು ಆಡುತ್ತಾ ಬಂದವರು ರಂಗ ನಿರ್ದೇಶಕ, ಚಿತ್ರಕಾರ, ಲೇಖಕ ಇಕ್ಬಾಲ್ ಅಹ್ಮದ್. ಇತ್ತೀಚೆಗೆ ಕಿನ್ನರ ಮೇಳಕ್ಕಾಗಿ ಅವರು ಅದನ್ನು ಮತ್ತೆ ಆಡಿಸಿದ್ದಾರೆ. ನಮ್ಮ ಜಾನಪದ ಹಾಗೂ ಪಾಶ್ಚಾತ್ಯ ಆಂಗಿಕಗಳನ್ನು ಮೇಳೈಸಿ ಮಾಡಿದ ಈ ಪ್ರಯೋಗ ನನಗಂತೂ ಖುಷಿ ಕೊಟ್ಟಿತು. ಈ ಸಂದರ್ಭದಲ್ಲಿ ಹ್ಯಾಮ್ಲೆಟ್  ಬಗ್ಗೆ ಆರು ವರ್ಷಗಳ ಹಿಂದೆ ಇಕ್ಬಾಲ್ ಬರೆದ ಲೇಖನವನ್ನು ಇಲ್ಲಿ ಸಾದರ ಪಡಿಸುತ್ತಿದ್ದೇನೆ. ಈ ಪ್ರತಿಭಾವಂತ ಸ್ನೇಹಿತ ಎಷ್ಟು ಒಳ್ಳೆಯ ಲೇಖಕ ಎಂಬುದನ್ನು ತೋರಿಸುವುದು ಒಂದು ಉದ್ದೇಶ; ಇವರ ಈ ಮೆಚ್ಚುವಿಕೆಯಿಂದ ನನಗಾದ ಸಂತೋಷ ಹಂಚಿಕೊಳ್ಳುವುದು ಇನ್ನೊಂದು ಉದ್ದೇಶ.
ಇದು ಅವರ ಲೇಖನ:


Thursday, November 17, 2011

ವಿರಾಮದ ಬಳಿಕ

ಸುಮಾರು ಮೂರು ವಾರಗಳಿಂದ ಇಂಟರನೆಟ್ ಹಾಳಾಗಿ ನನಗೆ ಬ್ಲಾಗ್ ಬರೆಯುವುದಕ್ಕಾಗಲೀ ಮೇಲ್ ನೋಡುವುದಕ್ಕಾಗಲೀ ಆಗಿರಲಿಲ್ಲ. ಹಾಳಾಗಲು ಕಾರಣ ಸಿಡಿಲು. ಈ ವರ್ಷ ಮಳೆಗಾಲಕ್ಕೆ ಮೊದಲು ಮತ್ತು ಆ ಮೇಲೆ ತುಂಬಾ ಹೊತ್ತು ತುಂಬಾ ದಿವಸ ನಿರಂತರವಾಗಿ ಸಿಡಿಲು ಗುಡುಗು. ಇಂಥಾ ಗುಡುಗು ಸಿಡಿಲಿಗೆ ಡಿಸಿಕನೆಕ್ಟ್ ಮಾಡಿದರೂ ಇಲೆಕ್ಟ್ರಾನಿಕ್ ಗೂಡ್ಸುಗಳು ಸುಟ್ಟು ಹೋಗುತ್ತವೆ. ಬೇಗ ರಿಪೇರಿ ಮಾಡಲು ಸಾಧ್ಯ, ಸಂಬಂಧ ಪಟ್ಟವರು ಮನಸ್ಸು ಮಾಡಿದರೆ. ಅಂತೂ ನಿನ್ನೆ ನನ್ನದು ರಿಪೇರಿಯಾಗಿದೆ.

ಈ ಅವಧಿಯಲ್ಲಿ ಬಿಟ್ಟು ಹೋಗಿರುವುದರ ಕುರಿತು ಬರೆಯಬೇಕಾಗಿದೆ. ಮೊದಲು ಮೇಲಿಗೆ ಉತ್ತರಿಸಬೇಕು.

Saturday, October 15, 2011

ಕೋಡಂಗಿಗಳು

ಕೋಡಂಗಿಗಳು ಕುರಿತ ಈ ಕೆಳಗಿನ ಲೇಖನವನ್ನು ಬರೆದದ್ದು ಇಪ್ಪತ್ತೈದು ವರ್ಷಗಳ ಹಿಂದೆ. ಶೂದ್ರ ಮಾಸ ಪತ್ರಿಕೆಯ ಮೇ 1986ರ ಸಂಚಿಕೆಯಲ್ಲಿ ಇದು ಮೊದಲು ಪ್ರಕಟವಾಗಿತ್ತು. ಆನಂತರ ನನ್ನ ಲೇಖನಗಳ ಸಂಗ್ರಹ ಮುಚ್ಚು (1994)ನಲ್ಲಿ ಪ್ರಕಟವಾಗಿದೆ. ಕೋಡಂಗಿ ಪಾತ್ರವಾಗಿ ಮತ್ತು ಒಂದು ಕಾನ್ಸೆಪ್ಟಾಗಿ ನನ್ನ ಇತರ ಬರೆವಣಿಗೆಯಲ್ಲಿ ಸಹಾ ಬಂದಿದೆ. ರಥಮುಸಲ (1981)ದಲ್ಲಿ ಕೋಡಂಗಿಯ ಇನ್ನೊಂದು ಮುಖವಾದ ವಿದೂಷಕ ಒಂದು ಪಾತ್ರ. ನನ್ನ ಕಥೆ "ರಿಸಾರ್ಟ್"ನಲ್ಲಿ ಸಹಾ ಕೋಡಂಗಿ ಒಂದು ಪಾತ್ರ. ಎರಡೂ ಕೃತಿಗಳಲ್ಲಿ ಕೋಡಂಗಿ ಧೀರೋದಾತ್ತರಾದ ಅಥವಾ ಹಾಗಾಗಲು ಪ್ರಯತ್ನಿಸುವ ಚೇತಕ ಮತ್ತು ಸುಬ್ರಾಯ ಭಟ್ಟರ ಇನ್ನೊಂದು ಮುಖವನ್ನು ಪ್ರತಿನಿಧಿಸುತ್ತಾನೆ. ಕೋಡಂಗಿ, ಕೋಡಂಗಿತನ ನನ್ನ ಪ್ರಮುಖ ಆಸಕ್ತಿಗಳಲ್ಲಿ ಒಂದು.

ನಾನು ಈಗ ಈ ಲೇಖನದ ಮುಂದುವರಿದ ಭಾಗ ಬರೆಯಲು ಸಿದ್ಧತೆ ಮಾಡಿಕೊಳ್ಳುತ್ತಿದ್ದೇನೆ. ಈ ಹಿನ್ನೆಲೆಯಲ್ಲಿ ಇಪ್ಪತ್ತೈದು ವರ್ಷಗಳ ಹಿಂದೆ ಬರೆದ ಈ ಲೇಖನದ ಕಡೆಗೆ ಓದುಗರ ಗಮನ ಸೆಳೆಯಬೇಕು ಅನ್ನಿಸಿತು. ಹೀಗಾಗಿ ಈ ಮರುಮುದ್ರಣ.

--------------------------------------------------------------------------------



ಈ ಪುಸ್ತಕದ ಮುಖಚಿತ್ರ ಪೀಟರ್ ಬ್ರೂಗೆಲ್ ನ ಒಂದು ಚಿತ್ರ ತೋರಿಸುತ್ತದೆ. ಅಕ್ಷರಗಳು ಮನೊಹರ ಅವರದು.

Thursday, October 13, 2011

ಸಮಗ್ರ ಕಥೆಗಳು, ಸಂಪುಟ 1

ಇದು ಸದ್ಯದಲ್ಲಿ ಪ್ರಕಟವಾಗಲಿರುವ ನನ್ನ ಹೊಸ ಪುಸ್ತಕ. ಇದರಲ್ಲಿ ಒಂಭತ್ತು ಕಥೆಗಳಿವೆ. ಪುಟಗಳು: 180.
ಮೇಲಿನ ಮುಖಚಿತ್ರ ಮಾಡಿದವರು ಖ್ಯಾತ ಚಿತ್ರ ಕಲಾವಿದ ಜಾನ್ ಚಂದ್ರನ್.
ಪ್ರಕಾಶಕರು: ಬೋಧಿ ಟ್ರಸ್ಟ್.

Monday, October 3, 2011

ಬೋಧಿ ಟ್ರಸ್ಟ್ ಪುಸ್ತಕಗಳು

ಮೇಲಿನ ಬೋಧಿ ಟ್ರಸ್ಟ್ ಪ್ರಕಟಣೆಗಳ ಪಟ್ಟಿಯಲ್ಲಿ ಮಾತಾಡುವ ಮರದ ಪ್ರತಿಗಳು ಮುಗಿದಿವೆ. ಈ ಕೆಳಗಿನ ಪುಸ್ತಕಗಳು ಕೊಂಡುಕೊಳ್ಳಲು ಸಿಗುತ್ತವೆ.

Thursday, September 22, 2011

ಕ್ಯಾಮೆರಾ ಕಣ್ಣು

ಈ ಹಿಂದೆ ಈ ಬ್ಲಾಗಿನಲ್ಲಿ ಪ್ರಕಟಿಸಿದ "ಕ್ಯಾಮೆರಾ ಕಣ್ಣು" ಎಂಬ ನನ್ನ ಲೇಖನದಲ್ಲಿ ರಘು ರೈಯವರ ಒಂದು ಫೊಟೋವನ್ನು ಉಲ್ಲೇಖಿಸಿದ್ದೆ. ಆಗ ಆ ಫೊಟೋ ಸಿಕ್ಕಿರಲಿಲ್ಲವಾದ್ದರಿಂದ ಲೇಖನದ ಜೊತೆಗೆ ಮುದ್ರಿಸಿದ್ದರೆ ಅರ್ಥಪೂರ್ಣವಾಗಿರುತ್ತಿದ್ದ ಅದನ್ನು ಮುದ್ರಿಸಲು ಸಾಧ್ಯವಾಗಿರಲಿಲ್ಲ. ಆ ಲೇಖನದ ಜೊತೆಗೆ ಇದನ್ನು ನೋಡಿದರೆ ನನ್ನ ಮಾತುಗಳು ಹೆಚ್ಚು ಪರಿಣಾಮಕಾರಿಯಾಗಿ ಮನಸ್ಸು ತಟ್ಟಬಹುದು.

ಇದು ಶ್ರೀಮತಿ ಇಂದಿರಾ ಗಾಂಧಿಯವರು ಪ್ರಧಾನಮಂತ್ರಿಯಾಗಿದ್ದಾಗಿನ ಕ್ಯಾಬಿನೆಟ್ ಮೀಟಿಂಗ್. ನಿಂತಿರುವವರು ಅವರ ಕ್ಯಾಬಿನೆಟ್ಟಿನ ಮಂತ್ರಿಗಳು.

Wednesday, September 14, 2011

ಗೆಂಡಗಯ್ಯ

ಮೇಲಿನದ್ದು ಗೆಂಡಗಯ್ಯ:  ಒಳವು ಎಂಬ 2001ರಲ್ಲಿ ಪ್ರಕಟವಾದ ಪುಸ್ತಕದಲ್ಲಿನ ಲೇಖನ. ಇದರಲ್ಲಿ "ಗೆಂಡಗಯ್ಯ" ಕುರಿತು  ಪಿ. ಲಂಕೇಶ್, ಯು. ಆರ್. ಅನಂತಮೂರ್ತಿ, ಕೆ. ವಿ. ತಿರುಮಲೇಶ್ ಮೊದಲಾದವರು ಬರೆದ ಲೇಖನಗಳಿವೆ. ತಿರುಮಲೇಶ್ ಲೇಖನ ವಿಶೇಷವಾಗಿ ಉಲ್ಲೇಖಿಸಬೇಕಾದಷ್ಟು ಚೆನ್ನಾಗಿದೆ.

Tuesday, September 13, 2011

ಶಿವತೀರ್ಥನ್ ಗೆ ವಿದಾಯ

ಮೇಲಿನದ್ದು ಖ್ಯಾತ ಸೃಜನಶೀಲ ಕಲಾವಿದ ಹಾದಿಮನಿ ಬರೆದ ಶಿವತೀರ್ಥನ್ ಚಿತ್ರ. ಶಿವತೀರ್ಥನ್ ಸ್ವತಃ ಇದನ್ನು ಮೆಚ್ಚಿ ತಮ್ಮ ಒಂದು ಪುಸ್ತಕದಲ್ಲಿ ಹಾಕಿಕೊಂಡಿದ್ದರು. ಗೆರೆಗಳು ಎನ್ನುವುದು ಅವರ ಒಂದು ಕವನ ಸಂಗ್ರಹದ ಹೆಸರು.

ಇವತ್ತು ಮಧ್ಯಾಹ್ನ ಹನ್ನೆರಡು ಗಂಟೆಗೆ ಅವನ ಅಂತ್ಯಸಂಸ್ಕಾರ ನಡೆಯಲಿದೆ. ನನ್ನ ಹಿತೈಷಿಯಾಗಿದ್ದ, ಅನೇಕ ಸಂತೋಷದ ಗಳಿಗೆಗಳಿಗೆ ಕಾರಣನಾದ, ಇನ್ನೂ ಸರಿಯಾಗಿ ಗಡ್ಡ ಮೀಸೆ ಬಾರದ ದಿನಗಳ ಈ ಹಳೆಯ ಗೆಳೆಯನಿಗೆ ಶಿರಸಾಷ್ಟಾಂಗ ನಮಸ್ಕಾರ.

Monday, September 12, 2011

ಕೆ. ನ. ಶಿವತೀರ್ಥನ್ ನಿಧನ

ನನ್ನ ಪ್ರಿಯ ಮಿತ್ರ, ಕನ್ನಡದ ಖ್ಯಾತ ಕವಿ ಶಿವತೀರ್ಥನ್ ಇವತ್ತು ಬೆಳಿಗ್ಗೆ  (ಸೆಪ್ಟೆಂಬರ್ 12) ಮೈಸೂರಿನಲ್ಲಿ ನಿಧನವಾಗಿದ್ದಾನೆ. 1943ರಲ್ಲಿ ಮಳವಳ್ಳಿಯಲ್ಲಿ ಜನಿಸಿದ ಅವನಿಗೆ ಅರುವತ್ತೆಂಟು ವರ್ಷವಾಗಿತ್ತು. ಡಿಸೆಂಬರ್ 2007ರಿಂದ ಪಾರ್ಶ್ವವಾಯು ಪೀಡಿತನಾಗಿ ಹಾಸಿಗೆ ಹಿಡಿದಿದ್ದ; ಮಾತೂ ಇರಲಿಲ್ಲ. ಮೈಸೂರಿನ ಪ್ರಖ್ಯಾತ ವೈದ್ಯರಾದ ಅವನ ಪತ್ನಿ ಡಾ. ಬಿ. ನಿರ್ಮಲಾರ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ. ಅಲ್ಲೇ ನಿಧನನಾದ.

ಅವನು ಕನ್ನಡದ ಒಳ್ಳೆಯ ಕವಿ. "ಗೆಂಡಗಯ್ಯ" ಕನ್ನಡದ ಒಳ್ಳೆಯ ಕವನಗಳಲ್ಲಿ ಒಂದು. ಅವನು ಇನ್ನು ಉಳಿಯುವುದು ಈ ಕವನದ ಮೂಲಕ. ಅದರ ಪಠನವೇ ಅವನಿಗೆ ಸಲ್ಲಿಸುವ ಶ್ರದ್ಧಾಂಜಲಿ. ಅದನ್ನೂ ಶಿವಪ್ರಕಾಶ್ ಮಾಡಿರುವ ಅದರ ಇಂಗ್ಲಿಷ್ ಅನುವಾದವನ್ನೂ  ಇಲ್ಲಿ ಕೊಡುತ್ತಿದ್ದೇನೆ. ಓದಿ, ಕಾವ್ಯಪ್ರಿಯರಿಗೆ ತಲುಪಿಸಿ.


Saturday, September 10, 2011

ಬಿಟ್ಟಿ ಪ್ರತಿಗಳು

ಪುಸ್ತಕಗಳ ಬಿಟ್ಟಿ ಪ್ರತಿಗಳನ್ನು ಅಪೇಕ್ಷಿಸುವುದು ಮತ್ತು ಪಡೆಯುವುದು ಬಿಟ್ಟಿ ಕೂಳು ತಿಂದಷ್ಟೇ ಹೀನಾಯವಾದದ್ದು. ಪುಸ್ತಕಗಳನ್ನು ಕೊಂಡು ಓದಿ.

Sunday, September 4, 2011

ನನಗೆ ಇಷ್ಟವಾದ ನನ್ನ ಬರೆಹ

ನನಗೆ ಇಷ್ಟವಾದ ನನ್ನ ಬರೆಹದ ಬಗ್ಗೆ ಬರೆಯುವುದು ಕಷ್ಟ. ಮೊದಲನೆಯ ಕಾರಣ, ಬರೆಯುವಾಗ ಪ್ರತಿ ಬರೆಹ ಇಷ್ಟವಾಗಿರುತ್ತದೆ. ಸುರು ಮಾಡುವ ಮೊದಲು ಆ ಬರೆಹಕ್ಕೆ ಕಾರಣವಾದ ಯಾವುದೋ ಒಂದು ಅಂಶ ಮನಸ್ಸನ್ನು ಹಿಡಿದಿರುತ್ತದೆ, ಕಾಡಿರುತ್ತದೆ. ಉದಾಹರಣೆಗೆ ಇತ್ತೀಚೆಗೆ ಪ್ರಕಟವಾದ ನನ್ನ ನಾಟಕ "ರಾಹು ಮತ್ತು ಕೇತು"ವಿನಲ್ಲಿ ನನ್ನನ್ನು ಕಾಡಿದ್ದು ಆ ಪುರಾಣದ ಕತೆಯಲ್ಲಿರುವ ವಿರುದ್ಧಾರ್ಥಗಳನ್ನು ಒಟ್ಟಿಗೇ ಹೊಮ್ಮಿಸುವ ಶಕ್ತಿ. ರಾಹು ಮತ್ತು ಕೇತು ಒಬ್ಬನೇ ವ್ಯಕ್ತಿ; ಅಮರನಾಗಬೇಕೆಂದು ಸುರರ ಸಾಲಿನಲ್ಲಿ ಕದ್ದುಮುಚ್ಚಿ ಕೂತು ಅಮೃತ ಕುಡಿಯಲು ಪ್ರಯತ್ನಿಸಿದ; ಅವನು ಅಮರನಾಗಬಾರದೆಂದು ಅಮೃತ ಹಂಚುತ್ತಿದ್ದ ಸೌಟಿನಿಂದ ದೇವರು ಅವನ ತಲೆ ಕತ್ತರಿಸಿದ. ಪರಿಣಾಮವಾಗಿ ಒಬ್ಬನೇ ವ್ಯಕ್ತಿ ರುಂಡ ಮುಂಡ ಬೇರ್ಪಟ್ಟು ವಿಚ್ಛಿದ್ರನಾದ. ಹೀಗೆ ರಾಹು/ಕೇತುವನ್ನು ಸೋಲಿಸಬೇಕೆಂಬ ದೇವರ ಆಸೆ ಪೂರೈಸಿತು. ಆದರೆ ಸೌಟಲ್ಲಿದ್ದ ಅಮೃತ ದೇಹವನ್ನು ಸೇರಿದ್ದರಿಂದ ರಾಹು/ಕೇತುವಿನ ಅಮರನಾಗಬೇಕೆಂಬ ಆಸೆಯೂ ಪೂರೈಸಿತು. ಇಲ್ಲಿ ದೇವರು ಮತ್ತು ರಾಹು--ಇಬ್ಬರೂ ಗೆದ್ದಿದ್ದಾರೆ, ಇಬ್ಬರೂ ಸೋತಿದ್ದಾರೆ.

ನನ್ನ ನಾಟಕದಲ್ಲಿ ತಲೆಯಾದ ರಾಹು ಮಾತಾಡುತ್ತಿದ್ದಾನೆ, ಯೋಚಿಸುತ್ತಿದ್ದಾನೆ; ಸುಂದರ ಸಮಾಜದ ಕನಸು ಕಾಣುತ್ತಿದ್ದಾನೆ. ತಲೆಯಿಲ್ಲದ ಮುಂಡ ಮಾತ್ರವಾದ ಕೇತು ಕ್ರಿಯೆಯಲ್ಲಿ ತೊಡಗಿದ್ದಾನೆ. ಮುಂಡವಿಲ್ಲದ ರಾಹು ಕ್ರಿಯೆಯಲ್ಲಿ ತೊಡಗಲಾರ; ರುಂಡವಿಲ್ಲದ ಕೇತು ಯೋಚಿಸಲಾರ, ವಿವೇಚಿಸಲಾರ. ಇಂದಿನ ಬುದ್ಧಿಜೀವಿಗಳ ಮತ್ತು ಕ್ರಿಯೆಯಲ್ಲಿ ತೊಡಗಬಲ್ಲವರ ಮಧ್ಯದ ಕಂದರವನ್ನು ಈ ಮೆಟಫರ್ ಸಮರ್ಥವಾಗಿ ಬಿಂಬಿಸುತ್ತದೆ ಅನ್ನಿಸಿತು. ಆದರೆ ನನಗೆ ಈ ನಾಟಕ ಇಷ್ಟವಾಗಲು ಇನ್ನೂ ಒಂದು ಕಾರಣ--ಅದು ವಾಚಿಕವನ್ನು ಅವಲಂಬಿಸಿದ ನಾಟಕ. ಇಂದಿನ ರಂಗಭೂಮಿಯಲ್ಲಿ  ಏಕ್ಷನ್ ತುಂಬಾ ಇದೆ, ಅದರ ಪರಿಣಾಮವಾಗಿ ವಾಚಿಕ ಎರಡನೆಯ ಸ್ಥಾನಕ್ಕೆ ಸರಿದಿದೆ ಎಂದು ಅನೇಕ ಸಲ ಅನ್ನಿಸುತ್ತಿತ್ತು. ವಾಚಿಕಕ್ಕೇ ಪ್ರಮುಖ ಸ್ಥಾನ ಇರುವ ಒಂದು ನಾಟಕ ಬರೆಯಬೇಕು ಎಂದೂ ಅನ್ನಿಸುತ್ತಿತ್ತು. "ರಾಹು ಮತ್ತು ಕೇತು" ರಾಹು ಮಾಡುವ ವಿವಿಧ ಧ್ವನಿಗಳನ್ನು ಮತ್ತು ಅದರಿಂದ ಹುಟ್ಟುವ ಪ್ರತಿಧ್ವನಿಗಳನ್ನು ಅವಲಂಬಿಸಿದ ನಾಟಕ. ಅದು ಬೊಂಬೆಯಾಟವಾದ್ದರಿಂದ ಮುಖಮುದ್ರೆ ಮೊದಲಾದವುಗಳಿಗೆ  ಅವಕಾಶವಿಲ್ಲ. ಕ್ರಿಯೆ ಇದೆ--ಕೇತು ಮಾಡುವಂಥಾದ್ದು. ಆದರೆ ಇದು ಮಾತಿನ ಜೊತೆಗೆ ತಾಳಮೇಳ ಇಲ್ಲದ, ಮೆದುಳಿನ ನಿಯಂತ್ರಣ ಇಲ್ಲದ ಕೇತುವಿನ ಕ್ರಿಯೆ. ಹೀಗಾಗಿ ಮುಖ್ಯ ಭಾಗಗಳನ್ನು ಧ್ವನಿಯ ಏರಿಳಿತಗಳಿಂದ ಕೂಡಿದ ವಾಚಿಕವೇ ನಿಭಾಯಿಸಬೇಕು. ಹೀಗೆ ಇಂದಿನ ದಿನಗಳಲ್ಲಿ ವಾಚಿಕಕ್ಕೆ ಪ್ರಾಮುಖ್ಯತೆ ಇರುವ ಒಂದು ನಾಟಕ ಬರೆದೆ ಎಂಬುದೂ "ರಾಹು ಮತ್ತು ಕೇತು" ಇಷ್ಟವಾಗಲು ಕಾರಣ. ಮುಖ್ಯವಾಹಿನಿಯಿಂದ ದೂರ ಸರಿದು ಕೆಲಸ ಮಾಡಿದಾಗ ಸಹಜವಾಗಿಯೇ ಖುಷಿಯಾಗುತ್ತದೆ--ಯಾರೂ ಮಾಡದ್ದು ಮಾಡಲು ಪ್ರಯತ್ನಿಸಿದೆ ಎಂದು.

ಇತ್ತೀಚೆಗೆ ಪ್ರಕಟವಾದ ನನ್ನ ಸಮಗ್ರ ನಾಟಕಗಳ ನಾಲ್ಕನೇ ಸಂಪುಟದಲ್ಲಿರುವ "ಡಾಗ್ ಶೋ" ಸಹಾ ನನಗೆ ಇಷ್ಟವಾದ ಇನ್ನೊಂದು ಬರೆಹ. ಇದು ನಾಯಿಗಳೇ ಪಾತ್ರವಾಗುಳ್ಳ ಗೀತ ನೃತ್ಯ ನಾಟಕ. ಶಿವರಾಮ ಕಾರಂತ, ಪು. ತಿ. ನರಸಿಂಹಾಚಾರ್ ಮೊದಲಾದವರ ಗೀತ ನಾಟಕ ಓದಿದಾಗಿನಿಂದ ಹೊಸ ಬಗೆಯ ಗೀತ ನಾಟಕ ಬರೆಯಬೇಕೆಂದು ಮನಸ್ಸಿನಲ್ಲಿ ಇತ್ತು. ಜೊತೆಗೆ ನಮ್ಮ ಪಂಚತಂತ್ರ ಮೊದಲಾದ ಪ್ರಾಚೀನ ಕೃತಿಗಳ ಪರಂಪರೆಗೆ ಹಿಂದಿರುಗಿ ಹೊಸ ಒಂದು ಪ್ರಕಾರ ನಿರ್ಮಿಸಿಕೊಳ್ಳಬೇಕೆಂದು ಸಾಕಷ್ಟು ಸಮಯದಿಂದ ಬೇರೆ ಬೇರೆ ಪ್ರಯೋಗಗಳನ್ನು ಮಾಡುತ್ತಿದ್ದೆ. ಪರಂಪರೆಗೆ ಹಿಂದಿರುಗಿ ಮತ್ತೆ ನಮ್ಮ ಬೇರುಗಳನ್ನು ಕಂಡುಕೊಂಡು ಪಾಶ್ಚಾತ್ಯ ಕೃತಿಗಳಿಂದ ನಿರ್ದೇಶಿತವಾದ ಮನಸ್ಸನ್ನು ಬಿಡುಗಡೆಗೊಳಿಸಿಕೊಳ್ಳಬೇಕು ಎಂಬ ಆಸೆಯನ್ನು ಅನೇಕ ದೃಷ್ಟಿಗಳಲ್ಲಿ "ಡಾಗ್ ಶೋ"ದಲ್ಲಿ ನೆರವೇರಿಸಿದ್ದೇನೆ ಅಂದುಕೊಂಡಿದ್ದೇನೆ. ಹೀಗಾಗಿಯೂ ಅದು ಇಷ್ಟವಾಯಿತು.

ಇತ್ತೀಚೆಗೆ ಬರೆದದ್ದು ಎಂಬ ಕಾರಣಕ್ಕಾಗಿ ಹೆಚ್ಚು ಇಷ್ಟವಾಗುತ್ತದೆಯೇ? ಲೇಖಕರಿಗೆ ತಮ್ಮ ಇತ್ತೀಚಿನ ಕೃತಿ ಹೆಚ್ಚು ಇಷ್ಟವಾಗುವುದು ಸಹಜ. ಯಾಕೆಂದರೆ ಅದನ್ನು ವಸ್ತುನಿಷ್ಠವಾಗಿ ನೋಡುವ ದೂರ ಇನ್ನೂ ಲಭಿಸಿರುವುದಿಲ್ಲ. ಆದರೆ ಬರೆದ ಕೂಡಲೇ ನಾನು ನನ್ನ ಕೃತಿಗಳನ್ನು ಪ್ರಕಟಿಸುವುದಿಲ್ಲ. ಕನಿಷ್ಠ ಒಂದು ವರ್ಷ ಹಾಗೇ ಒಂದು ಕಡೆ ಇಟ್ಟುಬಿಡುತ್ತೇನೆ.  ಈಗ ನಾನು ಕಂಪ್ಯೂಟರಿನಲ್ಲಿ ಬರೆವಣಿಗೆ ಮಾಡುವುದರಿಂದ ಆ ಫೈಲು ಓಪನ್ ಮಾಡದೆ ಹಾಗೇ ಬಿಟ್ಟುಬಿಡುತ್ತೇನೆ. ಒಂದು ವರ್ಷ ಅಥವಾ ಅದಕ್ಕಿಂತ ಹೆಚ್ಚು ಕಳೆದ ಮೇಲೆ  ಓದಿದಾಗ ಅದರ ಅರೆಕೊರೆಗಳು, ಅದರ ಸಾಹಿತ್ಯಿಕ ಯೋಗ್ಯತೆ ಗೊತ್ತಾಗುತ್ತದೆ. ಯಾಕೆಂದರೆ ಅಷ್ಟು ಸಮಯ ಆ ಕೃತಿಯಿಂದ ದೂರವಿದ್ದು ಓದಿದಾಗ ನಾನೂ ಇನ್ನೊಬ್ಬ ಓದುಗನಂತೆಯೇ ಆಗಿರುತ್ತೇನೆ: ಅದರ ಬಗ್ಗೆ ಸ್ಪಷ್ಟವಾಗಿ ಯೋಚಿಸಲು ಬೇಕಾದ  ದೂರ ಲಭಿಸಿರುತ್ತದೆ.

ಸ್ನೇಹಿತರಿಗೋ ಬೇರೆ ಇನ್ನೊಬ್ಬರಿಗೋ ತೋರಿಸಿ ಅವರ ವಿಮರ್ಶೆಯ ಮೇಲಿಂದ ತಿದ್ದುವ ಕೆಲಸ ಅಷ್ಟೇನೂ ಒಳ್ಳೆಯದಲ್ಲ ಎಂದು ನನ್ನ ಬರೆವಣಿಗೆಯ ಮೊದಲ ವರ್ಷಗಳಲ್ಲೇ ಅನ್ನಿಸಿತು. ನಾನು ಏನು ಮಾಡಲು ಬಯಸುತ್ತೇನೆ ಎನ್ನುವುದು ಸ್ನೇಹಿತನಿಗೋ ಇನ್ನೊಬ್ಬ ಲೇಖಕನಿಗೋ ಹೇಗೆ ಗೊತ್ತಾಗುತ್ತದೆ? ಹೆಚ್ಚೆಂದರೆ ಅವನಿಗೆ ಕೆಲವಂಶಗಳು ಮಾತ್ರ ಗೊತ್ತಾಗಬಹುದು. ಅದು ಪೂರ್ತಿಯಾಗಿ ನನಗೆ--ಬರೆದವನಿಗೆ--ಮಾತ್ರ ಗೊತ್ತಾಗಲು ಸಾಧ್ಯ. ಆದ್ದರಿಂದ ಸ್ವವಿಮರ್ಶೆಯೇ ಸರಿಯಾದ ವಿಮರ್ಶೆ. ಸ್ವವಿಮರ್ಶೆ ಮಾತ್ರ ಒಬ್ಬ ಲೇಖಕನಿಗೆ ಉಪಯೋಗಕ್ಕೆ ಬರುವಂಥಾದ್ದು. ಇತ್ತೀಚೆಗೆ ಪ್ರಕಟಿಸಿದ ನನ್ನ ಎಲ್ಲಾ ಕೃತಿಗಳು ಬರೆದು ತುಂಬಾ ಸಮಯ ಹಾಗೇ ಇಟ್ಟು ತಿದ್ದಿ ಮತ್ತೆ ಹಾಗೇ ಬಿಟ್ಟು ಓದಿ ತಿದ್ದಿ ಪ್ರಕಟಿಸಿದವಾದ್ದರಿಂದ ಅವುಗಳ ಬಗ್ಗೆ ಸಹಜವಾಗಿಯೇ ನನಗೆ ಹೆಚ್ಚಿನ ಆತ್ಮವಿಶ್ವಾಸವಿದೆ.

ನನಗೆ ಒಟ್ಟಾಗಿ ಒಂದು ಮೆಟಫರ್ ಆಗುವ ಕೃತಿಗಳು ಇಷ್ಟ. ನಾನು ಮೆಚ್ಚುವ ಬೇರೆಯವರ ಕೃತಿಗಳೂ ಅಂಥವೇ: ಒಂದು ಅಥವಾ ಅದಕ್ಕಿಂತ ಹೆಚ್ಚು ಕೇಂದ್ರ ಮೆಟಫರುಗಳು ಇದ್ದು ಆ ಮೂಲಕ ಅರ್ಥಪರಂಪರೆಯನ್ನು ಬಿಟ್ಟುಕೊಡುವ  ಕೃತಿಗಳು ಹೆಚ್ಚು ಅರ್ಥಪೂರ್ಣ ಅನ್ನಿಸುತ್ತದೆ. ನಾನು ನನ್ನ ಬರೆವಣಿಗೆಯಲ್ಲಿ ಪ್ರಯತ್ನಿಸುವುದೂ ಇಂಥದ್ದನ್ನು ಸಾಧಿಸುವುದಕ್ಕಾಗಿ. ಒಟ್ಟಾಗಿ ಒಂದು ಸೃಜನಶೀಲ ಕೃತಿ ಒಂದು ಅಥವಾ ಅದಕ್ಕಿಂತ ಹೆಚ್ಚು ಮೆಟಫರನ್ನು ಹೊಂದಿರಬೇಕು; ಆ ಮೆಟಫರ್ ಇಡೀ ಕೃತಿಯನ್ನು ವ್ಯಾಪಿಸಿರಬೇಕು; ಆ ಕೇಂದ್ರ ಮೆಟಫರಿಗೆ ಹೊಂದುವಂತೆ ಇತರ ವಿವರಗಳು ಸೇರಬೇಕು; ಸೇರಿ ಕೃತಿಯಲ್ಲಿ ವಿವಿಧ ಅರ್ಥದ ಪದರಗಳನ್ನು ಸೃಷ್ಟಿಸಬೇಕು--ಇದು ನನ್ನ ಬರೆವಣಿಗೆಯನ್ನು ನಿರ್ದೇಶಿಸುವ ಈಸ್ಥೆಟಿಕ್ಸ್. ಉದಾಹರಣೆಗೆ ರಥಮುಸಲ ದಲ್ಲಿ ರಥಮುಸಲ ಕೇಂದ್ರ ಮೆಟಫರ್. ಅದು ಸುತ್ತ ಶಸ್ತ್ರಗಳನ್ನು ಕಟ್ಟಿದ ರಥ. ಸಾರಥಿ ಅದರೊಳಗೆ ಅಡಗಿ ಕೂತು ರಥ ನಡೆಸುತ್ತಿದ್ದ. ರಥ ಹೇಗೆ ನಡೆಯುತ್ತಿದೆಯೆಂದು ಗೊತ್ತಾಗುವುದರೊಳಗೆ ರಥದ ಸುತ್ತ ಕಟ್ಟಿದ ಕತ್ತಿಗೆ ವೈರಿ ಬಲಿಯಾಗಿರುತ್ತಿದ್ದ. ಕ್ರಿಸ್ತಪೂರ್ವ ನಾಲ್ಕನೇ ಶತಮಾನದ ವೈಶಾಲಿಯ ಜನರ ಈ ಯುದ್ಧಶಸ್ತ್ರ ಇಂದಿನ ಮುಚ್ಚಿ ಬರುವ ವಸಾಹತುಶಾಹಿಗೆ ಒಳ್ಳೆಯ ರೂಪಕ  ಎಂದು 1970ರ ಕೊನೆಯ ಹೊತ್ತಿಗೆ ಆ ನಾಟಕ ಬರೆಯಲು ಸುರುಮಾಡಿದಾಗ ಅನ್ನಿಸಿತು. ಯಾರು ಏನೆಂದು ಗೊತ್ತಿಲ್ಲದಿರುವುದು, ಗೊತ್ತಾಗುವುದರೊಳಗೆ ಪಾತ್ರಗಳು ಯಾವುದೋ ಪಿತೂರಿಯ ಭಾಗವಾಗಿರುವುದು, ವೇಷ ಮರೆಸಿಕೊಂಡು ವ್ಯವಹರಿಸುವುದು, ಗೂಢಚಾರಿಕೆ ಮೊದಲಾದ ವಿವರಗಳು ಈ ಕೇಂದ್ರ ಮೆಟಫರನ್ನು ಪೋಷಿಸಿದವು. ನನ್ನ ಸಣ್ಣಕತೆ "ರಿಸಾರ್ಟ್" ನಲ್ಲಿ ಅರಮನೆ/ರಿಸಾರ್ಟ್ ಕೇಂದ್ರ ಮೆಟಫರ್. ಅಥವಾ ಕುದುರೆ ಬಂತು ಕುದುರೆಯಲ್ಲಿ ಕುದುರೆ ಕೇಂದ್ರ ಮೆಟಫರ್. ಕೋಲನ್ನು ಕುದುರೆಯೆಂದು ತಿಳಿದು ಆಡುವ ಹುಡುಗ, ಸಿನೆಮಾದ ಕುದುರೆ, ಕೀಲು ಕುದುರೆ, ಕಲಿಪುರುಷ ಕೂತುಕೊಂಡು ಬರುವ ಕುದುರೆ--ಹೀಗೆ ಬೇರೆ ಬೇರೆ ಬಗೆಯ ಕುದುರೆಗಳು ಬಂದು ಅರ್ಥದ ಪದರಗಳನ್ನು ಸೃಷ್ಟಿಸುತ್ತವೆ. ಬರೆಯಲು ಪ್ರಾರಂಭಿಸಿದ ಮೇಲೆ ಕೆಲವು ಪುಟ ಬರೆಯುವುದರೊಳಗೆ ಮೆಟಫರುಗಳು ಸಹಜವಾಗಿ ಮೂಡುತ್ತಿಲ್ಲ, ಹಾಗೆ ಮೂಡಿ ವಿವಿಧ ಅರ್ಥಗಳನ್ನು ಹೊಮ್ಮಿಸಲು ಸಾಧ್ಯ ಆಗುತ್ತಿಲ್ಲ ಎಂದಾದರೆ ನನಗೆ ಆ ಕೃತಿಯ ಬರೆವಣಿಗೆ ಮುಂದುವರಿಸಿಕೊಂಡು ಹೋಗಲು ಆಗುವುದಿಲ್ಲ.

ನಾನು ಮೆಟಫರುಗಳನ್ನು ಹುಡುಕುವುದು, ಅವುಗಳನ್ನು ಪೋಷಿಸುವ ವಿವರಗಳನ್ನು ಅವುಗಳ ಸುತ್ತ ಕಟ್ಟುವುದು ಮೊದಲಾದವನ್ನು ಪ್ರಜ್ಞಾಪೂರ್ವಕವಾಗಿ ಮಾಡುವುದಿಲ್ಲ. ನನ್ನ ಮನಸ್ಸು ಸೃಷ್ಟಿಸುವ, ಅನುಭವಗಳನ್ನು ಸ್ವೀಕರಿಸುವ ಕ್ರಮವೇ ಹಾಗೆ--ಮೆಟಫರುಗಳ ಮೂಲಕ. ನನಗೆ ಒಂದು ಪದ್ಯ, ಕಥೆ ಅಥವಾ ನಾಟಕ ಬರೆಯುವುದೆಂದರೆ ನನ್ನ ಅನುಭವಕ್ಕೆ ಹೊಂದುವ ಮೆಟಫರ್ ಸೃಷ್ಟಿಸುವುದು; ಅಥವಾ ಪುರಾಣದಲ್ಲೋ ಇತಿಹಾಸದಲ್ಲೋ ಇರುವುದನ್ನು ಹೊಸ ಅರ್ಥವಂತಿಕೆಯಿಂದ ಮೆಟಫರ್ ಆಗಿ ಪರಿವರ್ತಿಸಿ ಬಳಸುವುದು. ನನ್ನ ಮಟ್ಟಿಗೆ ಮೆಟಫರುಗಳ ಸೃಷ್ಟಿಯೇ ಬರೆವಣಿಗೆ.


ಆದರೂ ನನಗೆ ಎಲ್ಲಾ ವಿವರಣೆ ಮೀರಿ ಇಷ್ಟವಾದ ಒಂದು ಪದ್ಯವಿದೆ. ಇದು "ಬೇಸಿಗೆಯ ನಡುಹಗಲು" ಎಂಬ ಹೆಸರಿನ ಪದ್ಯ. ಇದು ನನ್ನ ಸಂಗ್ರಹ ಮಾತಾಡುವ ಮರದ ಮೊದಲ ಪದ್ಯವಾಗಿ ಪ್ರಕಟವಾಗಿದೆ. ಇದನ್ನು ನಾನು ಪಂಜ ಹೈಸ್ಕೂಲಿನಲ್ಲಿ ಓದುತ್ತಿದ್ದಾಗ ನನ್ನ ಹದಿನಾರನೇ ವಯಸ್ಸಿನಲ್ಲಿ ಬರೆದೆ. ಆಗ ಅದು ಬಾಕಿನ ಸಂಪಾದಿಸಿ ಪ್ರಕಟಿಸುತ್ತಿದ್ದ ತ್ರೈಮಾಸಿಕ ಕವಿತಾದಲ್ಲಿ ರಾಮಚಂದ್ರ ಶರ್ಮರ "ಹೆಸರಗತ್ತೆ". ಜಿ. ಎಸ್. ಶಿವರುದ್ರಪ್ಪನವರ ಒಂದು ಪದ್ಯ ಪ್ರಕಟವಾದ ಸಂಚಿಕೆಯಲ್ಲಿ ಅವರ ಕವನಗಳ ಜೊತೆ ಪ್ರಕಟವಾಗಿತ್ತು. ಈ ಬಗ್ಗೆ ನನಗೆ ಹೆಮ್ಮೆಯಿದೆ. ಆಗ ನಾನು ತುಂಬಾ ಪದ್ಯ ಪ್ರಕಟಿಸುತ್ತಿದ್ದೆ. ಸಂಕ್ರಮಣ, ಖಾದ್ರಿ ಶಾಮಣ್ಣನವರ ಸಂಪಾದಕತ್ವದ ಕವಿತೆಗಾಗಿಯೇ ಒಂದು ಪುಟ ಮೀಸಲಿಟ್ಟಿದ್ದ ಗೋಕುಲ ವಾರಪತ್ರಿಕೆ ಮೊದಲಾದೆಡೆ ಹೈಸ್ಕೂಲು ವಿದ್ಯಾರ್ಥಿಯಾಗಿದ್ದಾಗಲೇ  ನನ್ನ ಪದ್ಯಗಳು ಪ್ರಕಟವಾಗಿವೆ. ಆದರೆ ಯಾರಿಗೂ ನಾನು ಹೈಸ್ಕೂಲು ವಿದ್ಯಾರ್ಥಿ ಎಂದು ತಿಳಿಸುತ್ತಿರಲಿಲ್ಲ. ತಿಳಿಸಿದರೆ ಪತ್ರಿಕಾಸಂಪಾದಕರು ನನ್ನನ್ನು ಗಂಭೀರವಾಗಿ ತೆಗೆದುಕೊಳ್ಳಲಾರರು, ಓದಲಾರರು, ಪ್ರಕಟಿಸಲಾರರು ಎಂಬ ಅಳುಕು ಇತ್ತು. ರಾಮಚಂದ್ರಯ್ಯ, ಲ್ಯಾಂಡ್ ಲಾರ್ಡ್, ರಾಮತ್ತಿಕಾರಿ ಎಸ್ಟೇಟ್ ಎಂದು ವಿಳಾಸ ಬರೆದು ಪದ್ಯ ಕಳಿಸುತ್ತಿದ್ದೆ. ಲ್ಯಾಂಡ್ ಹೋಗಲಿ, ಆಗ ನನಗೆ ಚಪ್ಪಲಿ ಕೂಡಾ ಇರಲಿಲ್ಲ. ಆದರೆ ಬರಿಗಾಲಿನಲ್ಲಿ ನಡೆಯುತ್ತಿದ್ದೆ ಎನ್ನುವುದು ದೊಡ್ಡ ವಿಷಯ, ಕೊರತೆ ಅನ್ನಿಸುತ್ತಿರಲಿಲ್ಲ. ನಮ್ಮ ತಂದೆ ತಾಯಿ ಸೇರಿದಂತೆ ಅನೇಕರು ಬರಿಗಾಲಿನಲ್ಲಿ ನಡೆಯುತ್ತಿದ್ದರು. ಆದರೆ ಲ್ಯಾಂಡ್ ಲಾರ್ಡ್ ಆದ್ದರಿಂದ ಚಂದಾ ಕೊಟ್ಟಾನೆಂದೋ ಏನೋ--ಅಂತೂ ಪದ್ಯ ಪ್ರಕಟಿಸುತ್ತಿದ್ದರು. ಹೀಗೆ ಪ್ರಕಟವಾದ್ದರಿಂದ ಊರಿನ ಮತ್ತು ಶಾಲೆಯ ಯಾರಲ್ಲೂ ಇಲ್ಲದ್ದೊಂದು ನನ್ನಲ್ಲಿದೆ, ನಾಡಿನ ಪ್ರಖ್ಯಾತ ಪತ್ರಿಕೆಗಳಲ್ಲಿ ನನ್ನ ಪದ್ಯ ಪ್ರಕಟವಾಗಿದೆ ಎಂಬ ಆತ್ಮವಿಶ್ವಾಸ ಬೆಳೆದಿತ್ತು. ಸೊಕ್ಕೂ ಸಖತ್ತಾಗಿತ್ತು.

ಆದರೆ ಪದ್ಯ ಈಗಲೂ ಇಷ್ಟವಾಗುತ್ತಿರುವುದು ಹೈಸ್ಕೂಲಲ್ಲಿ ಇದ್ದಾಗ ಬರೆದೆ ಎಂಬ ಕಾರಣಕ್ಕ ಮಾತ್ರವೇ ಅಲ್ಲ. ಆಗ  ನಾನು ದಿನಾ ಐದು ಮೈಲು ಬೆಳಿಗ್ಗೆ ಐದು ಮೈಲು ಸಂಜೆ ನಡೆದುಕೊಂಡು ಕಲ್ಮಡ್ಕದ ಮನೆಯಿಂದ ಪಂಜಕ್ಕೆ ಹೈಸ್ಕೂಲಿಗೆ ಹೋಗಿ ಬರುತ್ತಿದ್ದೆ. ಜನವರಿಯಿಂದ ಮಾರ್ಚ್ ಕೊನೆ ವರೆಗಂತೂ ತುಂಬಾ ಸೆಕೆ, ಬಿಸಿಲು, ಧೂಳು. ಶನಿವಾರ ಮಧ್ಯಾಹ್ನದ ವರೆಗೆ ಮಾತ್ರ ಶಾಲೆ ಇರುತ್ತಿದ್ದುದರಿಂದ ಮಧ್ಯಾಹ್ನದ ಬಿಸಿಲಲ್ಲಿ ನಡೆದುಕೊಂಡು ಬರಬೇಕಾಗಿತ್ತು. ಈಗ ಓದಿದಾಗ ಆ ಪದ್ಯದಲ್ಲಿ ಆ ದಿನಗಳ ನನ್ನ ಬಿಸಿಲಿನ ಸೆಖೆಯ ಉರಿಯ ಅನುಭವ ಹೇಳಿದ್ದೇನೆ ಅನ್ನಿಸುತ್ತದೆ. ಹೀಗಾಗಿ ಇದು ಅತ್ಯಂತ ಖಾಸಗಿ ಪದ್ಯ. ಆದರೆ ನಡುಹಗಲಿನ ಬಗ್ಗೆ ಬರೆದ ವಸ್ತುನಿಷ್ಠ ಪದ್ಯ ಎಂದೂ ಅನ್ನಿಸುತ್ತದೆ. ಹೀಗೆ ಸ್ವಂತ ಅನುಭವವನ್ನು ವಸ್ತುನಿಷ್ಠ ಚಿತ್ರಣ ಎನ್ನಿಸುವ ಹಾಗೆ ಬರೆದಿದ್ದೇನೆಂದು ಇಷ್ಟವಾಗುತ್ತಿದೆ.

ಅಲ್ಲದೆ, ಬರಗಾಲ, ಬಿಸಿಲು, ಸೆಖೆ, ದಾಹ, ನೀರಿಲ್ಲದಿರುವಿಕೆಗಳ ಈ ವಸ್ತುವಿಗೆ ನಾನು ನನ್ನ ಬರೆವಣಿಗೆಯಲ್ಲಿ ಮತ್ತೆ ಮತ್ತೆ ಹಿಂದಿರುಗುತ್ತೇನೆ ಅನ್ನಿಸುತ್ತದೆ. "ದಂಗೆಯ ಪ್ರಕರಣ"ದಲ್ಲಿ ಸೆಖೆ ಬಿಸಿಲು ತಾಪಗಳ ವಿವರಣೆಯಿದೆ. ಇತ್ತೀಚಿನ "ಮಾತಾಡುವ ಮರ"ದಲ್ಲಿ ಮತ್ತೆ ನೀರಿಲ್ಲದಿರುವಿಕೆಯ ಚಿತ್ರಣ ಬರುತ್ತದೆ. ನನ್ನ ಬರೆವಣಿಗೆಯುದ್ದಕ್ಕೆ ಬೇರೆ ಕೃತಿಗಳಲ್ಲಿ ಸಹಾ ಬೆಳೆಯುತ್ತಾ ಬಂದ ವಸ್ತುವಿನ ಕುರಿತು ಬರೆದ ಮೊದಲ ಕೃತಿಯೆಂದೂ "ಬೇಸಿಗೆಯ ನಡುಹಗಲು" ಇಷ್ಟವಾಗುತ್ತಿದೆ.
ಮಂಗಳ ವಾರಪತ್ರಿಕೆ ಇತ್ತೀಚೆಗೆ "ನನಗೆ ಇಷ್ಟವಾದ ನನ್ನ ಬರೆಹ" ಎಂಬ ವಿಷಯ ಕುರಿತು ಬೇರೆ ಬೇರೆ ಲೇಖಕರು ಬರೆದ ಲೇಖನಮಾಲೆ ಪ್ರಕಟಿಸಿತು. ಇದು ಅದಕ್ಕಾಗಿ ಬರೆದ ಲೇಖನ.

Monday, August 29, 2011

ಗೀತಾಂಜಲಿ: ಸಾಮಾನ್ಯ ಕಾವ್ಯ

ಇದು ವಿಜಯ ಕರ್ನಾಟಕದಲ್ಲಿ ಜುಲೈ 31ರಂದು ಪ್ರಕಟವಾದ ನನ್ನ ಲೇಖನ. ಈ ಲೇಖನದೊಂದಿಗೆ ನಾನು ಈ ಅಂಕಣ ನಿಲ್ಲಿಸಿದ್ದೇನೆ.

Saturday, August 27, 2011

YARMUNJA RAMACHANDRA`S STORY IN ENGLISH

The above translation was first published in Sthithi Gathi, a quarterly bilingual--Kannada and English--journal, July-September 2011,  edited by Dr. N. Bhaskara Acharya, and published by NRAMH Prakashana, Koteshwara 576222, Karanataka.