Tuesday, September 28, 2010

ಕ್ಯಾಮೆರಾ ಕಣ್ಣು

ಕೆ. ಎಸ್. ರಾಜಾರಾಂ ನಮ್ಮ ಮುಖ್ಯ ಛಾಯಾಚಿತ್ರಗ್ರಾಹಕರಲ್ಲಿ ಒಬ್ಬರು. ಸುಮಾರು ಮೂರು ದಶಕಗಳಿಗೂ ಮಿಕ್ಕಿ ಅವಧಿಯಿಂದ ಈ ಕ್ಷೇತ್ರದಲ್ಲಿ ಅವರು ತಮ್ಮನ್ನು ತೊಡಗಿಸಿಕೊಂಡಿದ್ದಾರೆ.  ಛಾಯಾಗ್ರಹಣಕ್ಕೆ ಮಾತ್ರ ಅವರು ತಮ್ಮನ್ನು ಸೀಮಿತಗೊಳಿಸಿಕೊಂಡಿಲ್ಲ. ಛಾಯಾಗ್ರಹಣದ ಬಗ್ಗೆ ಶಿಬಿರಗಳನ್ನು ನಡೆಸಿ ಕಲಿಯಬೇಕೆನ್ನುವವರಿಗೆ  ಹೇಳಿಕೊಟ್ಟಿದ್ದಾರೆ. ಯುವ ಪ್ರತಿಭಾವಂತ ಛಾಯಾಗ್ರಾಹಕರಿಗೆ ಅವಕಾಶಗಳನ್ನು ಒದಗಿಸಿಕೊಟ್ಟಿದ್ದಾರೆ. ಹೀಗೆ ಅವಕಾಶಗಳನ್ನು ಒದಗಿಸುವ ಒಂದು ಕ್ರಮವಾಗಿ ನೀನಾಸಂ ಸಂಸ್ಕೃತಿ ಶಿಬಿರದಲ್ಲಿ ಆಯ್ದ ಪ್ರತಿಭಾವಂತ ಛಾಯಾಗ್ರಹಕರ ಪ್ರಾತಿನಿಧಿಕ ಚಿತ್ರಗಳ ಪ್ರದರ್ಶನ ಏರ್ಪಡಿಸುತ್ತಾರೆ. ಈ ಸಲವೂ ಸುಮಾರು ಇಪ್ಪತ್ತು ಜನ ಛಾಯಾಗ್ರಾಹಕರ ಛಾಯಾಚಿತ್ರ ಪ್ರದರ್ಶನವಿದೆ. ಇವರಲ್ಲಿ ಡಿ. ಆರ್. ನಾಗರಾಜ್ ಮಗಳು ಅಮೂಲ್ಯ ಸೇರಿದ್ದಾರೆ. ಚಿಕ್ಕಂದಿನಲ್ಲಿ ತಂದೆಯನ್ನು ಕಳೆದುಕೊಂಡ ಅಮೂಲ್ಯ ಹೀಗೆ ತನ್ನ ಸೃಜನಶೀಲತೆಗಾಗಿ ಒಂದು ಕ್ಷೇತ್ರವನ್ನು ಆರಿಸಿಕೊಂಡು ಬೆಳೆಯುತ್ತಿರುವುದು ನಾಗರಾಜ್ ಸ್ನೇಹಿತರಾದ ನಮಗೆಲ್ಲಾ ಸಂತೋಷದ ವಿಷಯ. ಹಗ್ಗೋಡು ಪ್ರದರ್ಶನದಲ್ಲಿ ಭಾಗವಹಿಸುತ್ತಿರುವ ಇನ್ನೊಬ್ಬ ಪ್ರತಿಭಾವಂತ ಕೇಶವ ಅನನ್ಯ. ಎ. ಎನ್ ಮುಕುಂದ್, ಚೆನ್ನಕೇಶವ, ಚರಣ ಮೊದಲಾದವರು ಛಾಯಾಗ್ರಹಣ ಕುರಿತು ತರಗತಿಗಳನ್ನು ನಡೆಸಲಿದ್ದಾರೆ.
ಕಲಿಯುವವರಿಗೆ ಒಳ್ಳೆಯ ಅವಕಾಶ.

ಹೆಗ್ಗೋಡಿನ ಈ ಪ್ರದರ್ಶನದ ಅವಕಾಶ ಮುಖ್ಯವಾದದ್ದು. ಯಾಕೆಂದರೆ ಹೆಗ್ಗೋಡಿನಲ್ಲಿ ತುಂಬಾ ಜನ ಈ ಚಿತ್ರಗಳನ್ನು ನೋಡುತ್ತಾರೆ. ಅಲ್ಲಿಗೆ ಬರುವವರೆಲ್ಲರೂ ಕಲೆಯ ವಿವಿಧ ಆಯಾಮಗಳಲ್ಲಿ ಆಸಕ್ತರು. ಬಂದ ಮೇಲೆ ಹೆಗ್ಗೋಡಿನಲ್ಲಿ ಛಾಯಾಚಿತ್ರ, ಸಿನೆಮಾ, ನಾಟಕ ನೋಡುವುದು, ಚರ್ಚೆಗಳನ್ನು ಕೇಳುವುದು ಬಿಟ್ಟು ಬೇರೇನೂ ಮಾಡಲು ಸಾಧ್ಯವಿಲ್ಲ. ಖಂಡಿತವಾಗಿ ಬೆಂಗಳೂರು ಮುಂಬೈಗಳಲ್ಲಿ ಬಂದದ್ದಕ್ಕಿಂತ ಹೆಚ್ಚು ಜನ ನೋಡುಗರು ಹೆಗ್ಗೋಡಿನಲ್ಲಿ ಸಿಗುತ್ತಾರೆ. ಬರೀ ನೋಡುಗರಲ್ಲ__ಗಂಭೀರ ನೋಡುಗರು. ಪೇಟೆಗಳಲ್ಲಿ ಎಷ್ಟು ಜನ ನೋಡಲು ಬರುತ್ತಾರೆ ಎಂಬುದಕ್ಕೆ ಎಂ. ಎಸ್. ಮೂರ್ತಿ ಇತ್ತೀಚೆಗೆ ಬರೆದ ಒಂದು ಲೇಖನ ಸಾಕ್ಷಿಯಾಗಬಲ್ಲುದು. ಎಲ್ಲಾ ಪತ್ರಿಕೆಯವರನ್ನು ನೋಡಿ ಆಸಕ್ತರನ್ನು ನೋಡಿ ಆಮಂತ್ರಣ ಕೊಟ್ಟು ಬಂದರೆ ಮುಂಬೈಯಲ್ಲಿ ಅವರ ಚಿತ್ರಪ್ರದರ್ಶನ ನೋಡಲು ಬಂದವರ ಸಂಖ್ಯೆ ಬೆರಳುಗಳಿಗಿಂತ ಕಮ್ಮಿ. ಪೇಟೆಗಳಲ್ಲಿ ಕಲೆಗೆ ಮತ್ತಿತರ ಬೌದ್ಧಿಕ ಹಸಿವುಗಳನ್ನು ಇಂಗಿಸಿಕೊಳ್ಳಲು ಬೇಕಾದ ಆರಾಮ ಇಂದು ಬಹುತೇಕ ಜನರಿಗೆ ಲಭ್ಯವಾಗುತ್ತಿಲ್ಲ. ಮನರಂಜನೆಗೆ ಬೇಕಾದಷ್ಟನ್ನು ಟೀವಿಗಳು ಒದಗಿಸುವುದರಿಂದ ಬಹುತೇಕ ಜನ ಅಷ್ಟಕ್ಕೆ ತೃಪ್ತರಾಗುತ್ತಾರೆ. ಇಂಥಲ್ಲಿ ಸಣ್ಣ ಸಣ್ಣ ಹಳ್ಳಿಗಳಲ್ಲಿರುವ ಸಂಸ್ಥೆಗಳು ನಿಜವಾದ ಸಾಂಸ್ಕೃತಿಕ ತಾಣಗಳು.

ರಾಜಾರಾಂ ಈ ಪ್ರದರ್ಶನದ ಸಮಯಕ್ಕೆ ಒಂದು ಪ್ರಶ್ನೆ ಎತ್ತಿದ್ದಾರೆ. ಈಗ ತಾಂತ್ರಿಕವಾಗಿ ತುಂಬಾ ಸೊಫಿಸ್ಟಿಕೇಟೆಡ್ ಕ್ಯಾಮೆರಾಗಳು ಬಂದಿವೆ. ಹೀಗಾಗಿ ಹಿಂದಿನವರಂತೆ ನೆರಳು ಬೆಳಕು ಬಣ್ಣಗಳ ಪರಿಣಾಮ  ಉಂಟು ಮಾಡಲು ಹೆಚ್ಚು ಕಷ್ಟ ಪಡಬೇಕಿಲ್ಲ. ಅಂಥಲ್ಲಿ ಒಬ್ಬ ಛಾಯಾಚಿತ್ರಗ್ರಾಹಕನ ಪ್ರಾಮುಖ್ಯತೆ ಹೇಗೆ ನಿರ್ಧಾರವಾಗುತ್ತದೆ?__ ರಾಜಾರಾಂ ಅವರ ಈ ಪ್ರಶ್ನೆ ಛಾಯಾಚಿತ್ರಕಾರರಿಗೆ ಮಾತ್ರವಲ್ಲ, ನಾಟಕ, ಸಿನೆಮಾ ಮೊದಲಾದ ಕ್ಷೇತ್ರಗಳ ಕಲಾವಿದರಿಗೂ ಅನ್ವಯಿಸುವಂಥದು. ಉದಾಹರಣೆಗೆ ನಾಟಕದಲ್ಲಿ ಅಪೇಕ್ಷಿತ ಪರಿಣಾಮಗಳನ್ನು ತಾಂತ್ರಿಕತೆಯ ಇಂದಿನ ಯುಗದಲ್ಲಿ ತರುವುದು ಸುಲಭ. ನಾನು ನೋಡಿದ ಶೇಕ್ಸ್ಪಿಯರಿನ ಮ್ಯಾಕ್ಬೆಥ್  ನಾಟಕದ ಒಂದು ಬ್ರಿಟಿಷ್ ಪ್ರದರ್ಶನ ಇಲ್ಲಿ ನೆನಪಾಗುತ್ತದೆ. ಅದರಲ್ಲಿ ಜಕ್ಕಿಣಿಯರು ಅಕ್ಷರಶಃ ಗಾಳಿಯಲ್ಲಿ ತೇಲಾಡುತ್ತಾರೆ. Hover through the fog and filthy air ಎಂಬ ಮೂಲದ ಸಾಲುಗಳನ್ನು ಅವರು ದೃಶ್ಯೀಕರಿಸಿ ತೋರಿಸಿದ್ದರು. ತಾಂತ್ರಿಕ ಪರಿಣತಿಯಿಂದಾಗಿ ಅದು ಸಾಧ್ಯವಾಯಿತು. ಬಿ. ವಿ. ಕಾರಂತರ ಇದೇ ನಾಟಕದ ಪ್ರದರ್ಶನವಾದ ಬರ್ನಂ ವನದಲ್ಲಿ ಜಕ್ಕಣಿಯರು ನೆಲದ ಮೇಲೆ  ಕುಣಿಯುವುದನ್ನಷ್ಟೇ ತೋರಿಸುತ್ತಾರೆ. ಆದರೆ, ಮರದ ಬೊಡ್ಡೆಯಂತೆ ರಂಗದ ಮೇಲೆ ನಿಂತಿದ್ದ ಅವರು ಇದ್ದಕ್ಕಿದ್ದಂತೆ ಕಾಲು ನೆಲಕ್ಕೆ ಅಪ್ಪಳಿಸಿ ಕುಣಿಯತೊಡಗುತ್ತಾರೆ--ಭೂತಗಳು ಕುಣಿದಂತೆ; ಇದು ವರೆಗೆ ಪ್ರಶಾಂತವಾಗಿದ್ದ ಯಾವುದನ್ನೋ ಒದ್ದು ಎಬ್ಬಿಸುವವರಂತೆ; ಕೇಡನ್ನು ಆಹ್ವಾನಿಸಿ ಪ್ರಕೃತಿಗೇ ಜ್ವರ ಬರಿಸಿ ನಡುಗಿಸುವವರಂತೆ. ನನಗೆ  ಆಧುನಿಕ ತಾಂತ್ರಿಕತೆಯ ಮೊರೆಹೋಗದ, ಆದರೆ ಸೃಜನಶೀಲ ಅರ್ಥೈಸುವಿಕೆಯಾದ ಕಾರಂತರ ಪ್ರಯೋಗವೇ ಹೆಚ್ಚು ಚೆನ್ನಾಗಿದೆ ಅನ್ನಿಸಿತು. ಬ್ರಿಟಿಷ್ ಪ್ರಯೋಗ ಮೂಲದ ಸಾಲುಗಳನ್ನು ದೃಶ್ಯೀಕರಿಸಿ ತೋರಿಸಿದರೆ ಕಾರಂತರ ಪ್ರಯೋಗ ಮೂಲದ ಸಾಲುಗಳ ಹಿಂದಿನ ಸತ್ವವನ್ನು ನಮ್ಮೆದುರು ತೋರಿಸುತ್ತದೆ.

ಛಾಯಾಗ್ರಹಣದಿಂದಲೇ ಒಂದು ಉದಾಹರಣೆ ತೆಗೆದುಕೊಳ್ಳುತ್ತೇನೆ. ಟಿ. ಎಸ್. ಸತ್ಯನ್ ತೆಗೆದ ನೆಹರೂ ಚಿತ್ರ ಪ್ರಸಿದ್ಧವಿದೆ. ತುಂಬಾ ದಿನ ಅದಕ್ಕಾಗಿ ಪ್ರಯತ್ನಿಸಿ ಕೊನೆಗೆ ಹಿಂಬದಿಯಿಂದ ಸೌಥ್ ಬ್ಲಾಕಿನ ಕಿಟಿಕಿಗಳ ಮೂಲಕ ಬೆಳಕು ತೂರಿ ಬರುತ್ತಿದ್ದಾಗ ಈಗ ಪ್ರಖ್ಯಾತವಾಗಿರುವ__ನೆಹರೂರನ್ನು ಹಿಂಬದಿಯಿಂದ ತೋರಿಸುವ__ ಆ ಚಿತ್ರ ತೆಗೆದರಂತೆ. ನೆರಳು ಬೆಳಕು ದೃಷ್ಟಿಯಿಂದ, ನೆಹರೂರ ಚಿಂತನಶೀಲ ವ್ಯಕ್ತಿತ್ವ ಚಿತ್ರಿಸುತ್ತದೆ ಎಂಬ ದೃಷ್ಟಿಯಿಂದ ಚೆನ್ನಾಗಿದೆ. ಇದನ್ನು ನೋಡಿದಾಗ ರಘು ರೈ ತೆಗೆದ ಇಂದಿರಾ ಗಾಂಧಿಯವರ ಚಿತ್ರ ನೆನಪಾಗುತ್ತದೆ. ಇದೂ ಹಿಂಬದಿಯಿಂದ ತೆಗೆದ ಚಿತ್ರವೇ. ಇದರಲ್ಲಿ ನೆಳಲು ಬೆಳಕುಗಳ ವಿಶೇಷ ಸಂಯೋಜನೆಯೇನೂ ಇಲ್ಲ. ಆದರೆ ಈ ಚಿತ್ರ  ಭಾರತ ಸರಕಾರ ಇಂದಿರಾ ಕಾಲದಲ್ಲಿ ಹೇಗೆ ನಡೆಯುತ್ತಿತ್ತು ಎಂಬ ಚಿತ್ರ ಕೊಡುತ್ತದೆ. ಚಿತ್ರದಲ್ಲಿ ಇಂದಿರಾ ಗಾಂಧಿ ಏನೋ ಬರೆಯುತ್ತಿದ್ದಾರೆ. ಅವರ ಇಡೀ ಕ್ಯಾಬಿನೆಟ್ಟು ಅವರೆದುರು ವಿನೀತವಾಗಿ ನಿಂತಿದೆ. ಹೆಚ್ಚಿನವರು ವಯಸ್ಸಾದವರು. ಖಾದಿ ಟೊಪ್ಪಿ ಖಾದಿ ಜುಬ್ಬ ಹಾಕಿದ್ದಾರೆ. ಅಂದರೆ ಸ್ವಾತಂತ್ರ್ಯ ಚಳವಳಿಗಾರರ ತಲೆಮಾರಿಗೆ ಸೇರಿದವರು ಅಥವಾ ಅದರ ಜೊತೆ ನೇರ ಸಂಪರ್ಕ ಇದ್ದವರು. ಒಬ್ಬ ಮಾತ್ರ ಸಫಾರಿ ಸೂಟು ಹಾಕಿದ್ದಾನೆ. ಉಳಿದವರಿಗಿಂತ ಸ್ವಲ್ಪ ಚಿಕ್ಕ ವಯಸ್ಸಿನವನು ಕೂಡಾ.ಇಂದಿರಾ ಗಾಂಧಿ ಒಬ್ಬರೇ ಅಷ್ಟು ಜನರಲ್ಲಿ ಕೂತವರು. ಅವರೆಲ್ಲರೂ ಇಂದಿರಾ ಗಾಂಧಿ ಕ್ಯಾಬಿನೆಟ್ಟಿನ ಮಂತ್ರಿಗಳು. ಇದು ಕ್ಯಾಬಿನೆಟ್ಟು ಮೀಟಿಂಗಂತೆ. ಇಂದಿರಾ ಗಾಂಧಿ ಅವರನ್ನು ಗಮನಿಸುತ್ತಲೂ ಇಲ್ಲ. ತಮ್ಮ ಪಾಡಿಗೆ ತಾವು ಏನೋ ಬರೆಯುತ್ತಿದ್ದಾರೆ. ಮಂತ್ರಿಗಳು ತಮ್ಮನ್ನು ಮೇಡಂ ಗಮನಿಸಲಿ ಎಂದು ಕಾಯುತ್ತಿದ್ದಾರೆ. ಸಫಾರಿ ಸೂಟಿನವ ಏನೋ ಹೇಳಲೆಂದು ಕೃತಕ ಮುಗುಳ್ನಗೆಯನ್ನು ಮುಖಕ್ಕೆ ಅಂಟಿಸಿಕೊಂಡು ಕಾಯುತ್ತಿದ್ದಾನೆ.

ಸತ್ಯನ್ ಅವರ ಚಿತ್ರ ಚೆನ್ನಾಗಿದೆ. ಆದರೆ ರಘು ರೈ ಅವರ ಚಿತ್ರ ತುರ್ತುಪರಿಸ್ಥಿತಿಯ ಒಂದು ಪರಿಣಾಮಕಾರಿ ಚಿತ್ರವನ್ನು ನಮ್ಮ ಕಣ್ಣೆದುರು ಇಡುತ್ತದೆ. ಅದು ಒಂದು ರಾಜಕೀಯ ಕವನ ಅಥವಾ ನಾಟಕ ಅಥವಾ ಕಾದಂಬರಿಯಷ್ಟೇ ಪರಿಣಾಮಕಾರಿಯಾಗಿದೆ. ಅಂದರೆ ಮುಖ್ಯವಾದದ್ದು ಛಾಯಾಗ್ರಾಹಕನ ಸಂವೇದನೆ, ಪರ್ಸ್ಪೆಕ್ಟಿವ್, ಎಷ್ಟನ್ನು ಒಳಗೊಳ್ಳಬಲ್ಲದೆಂಬ ಪ್ರಶ್ನೆ. ಇದೇ ಪ್ರಶ್ನೆಯನ್ನು ನಾವು ಒಬ್ಬ ಲೇಖಕನ ಬಗ್ಗೆ ಅಥವಾ ಒಬ್ಬ ಸಿನೆಮಾ ನಿದೇಶಕನ ಬಗ್ಗೆ ಕೇಳುತ್ತೇವೆ. ಅಂತಿಮವಾಗಿ ಆ ಸಂವೇದನೆ ಎಷ್ಟು ಘಟ್ಟಿಯಾದದ್ದು ಎಂಬುದೇ ಮುಖ್ಯವಾದದ್ದು. ಅಂದರೆ ದಾಖಲಿಸುವ ಕ್ಯಾಮೆರಾ ಕಣ್ಣು ಒಂದೇ ಅಲ್ಲ; ಆ ಕಣ್ಣಿನ ಹಿಂದಿರುವ ಕಣ್ಣೂ ಎಷ್ಟು ನೋಡುತ್ತದೆ ಎಂಬುದರ ಮೇಲಿಂದ ಒಂದು ಚಿತ್ರದ ಪ್ರಾಮುಖ್ಯತೆ ನಿಲ್ಲುತ್ತದೆ.

Wednesday, September 22, 2010

My Legs are Pillars

 We are on the eve of a very important  judgment about the supposed birthplace of Shri Rama in Ayodhya.The dispute is what should stand in the controvertial place--should it be a temple or a mosque. In this context, I want to bring to your notice a Kannada poem by Basava, 11th century AD saint-poet. In A. K. Ramanujan`s famous translation, the poem is as follows:

The rich
will make temples for Siva.
What shall I,
a poor man,
do?

My legs are pillars,
the body the shrine,
the head a cupola
of gold.

Listen, O lord of the meeting rivers,
things standing shall fall,
but the moving ever shall stay.

                 (Speaking of Siva, Penguin Classics, 1973, p.88)

 A mosque or  a temple is built by a rich person. Whatever it is, you see beggars sitting in front of it; there is a watchman to safeguard our chappals. And, inside, there are priests with their chantings and incense and flowers and all that. If the body is the temple, then every one is equal to the other. There are no caste or class diffrences. And it is also easy to find out whether it is God or the devil that dwells in such a temple. One can easily make out whether the insider is god or devil just by listening to a few sentences a person speaks or a few gestures he makes. If it is a mosque or a temple or such dwelling places of the gods, it is not easy to make out who is inside--god or devil. The glittering lights, the incense, the chantings, the folklore about the palce  mask what is really inside.

I don`t have to elaborate the relevence of this 1000-year old poem on the eve of the judgment about the Babri Masjid/Shri Rama Temple issue. I, with anxiety, hope we at least make attempts to make our legs the pillars, our heads the cupola, and our bodies the shrines.



 ನಾವು ಒಂದು ಬಹು ಮುಖ್ಯ ದಿನದ ಮುನ್ನಾದಿನದಲ್ಲಿದ್ದೇವೆ. ಅಯೋಧ್ಯೆಯ ಆ ಜಾಗ ರಾಮ ಹುಟ್ಟಿದ ಜಾಗವೇ ಅಲ್ಲವೇ, ಅಲ್ಲಿ ರಾಮನ ದೇವಸ್ಥಾನ ಇರಬೇಕೇ ಅಥವಾ ಮಸೀದಿ ಇರಬೇಕೇ ಎಂಬುದು ವಿವಾದದ ಮುಖ್ಯ ಕೇಂದ್ರ. ತೀರ್ಪು  ಮಸೀದಿ ಇರಬೇಕೆನ್ನಲಿ ದೇವಸ್ಥಾನ ಇರಬೇಕೆನ್ನಲಿ__ಅಂತೂ  ಆ ಸ್ಥಾವರ ಇರಬೇಕೇ ಈ ಸ್ಥಾವರ ಇರಬೇಕೇ ಎಂಬ ಮಾತಿನ ಸುತ್ತವೇ ನಿರ್ಧಾರ ಸುತ್ತುತ್ತದೆ. ಈ ಸಂದರ್ಭದಲ್ಲಿ ನನಗೆ ಬಸವಣ್ಣನವರ ಉಳ್ಳವರು ಶಿವಾಲಯವ ಮಾಡುವರು ಎಂದು ಪ್ರಾರಂಭವಾಗುವ ಈ ವಚನ ನೆನಪಾಗುತ್ತದೆ. ವಚನ ಹೀಗಿದೆ:

ಉಳ್ಳವರು ಶಿವಾಲಯವ ಮಾಡುವರು
ನಾನೇನ ಮಾಡುವೆ__ಬಡವನಯ್ಯಾ.
ಎನ್ನ ಕಾಲೇ ಕಂಬ, ದೇಹವೇ ದೇಗುಲ,
ಶಿರವೇ ಹೊನ್ನ ಕಳಶ__
ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ
ಕೂಡಲ ಸಂಗಮದೇವ.

ಈ ವಚನವನ್ನು ನೆನೆಸಿಕಂಡಾಗ ನನಗೆ ಅನ್ನಿಸುವುದು ಇಷ್ಟು:

ಹಣವಿರುವವರು ದೇವಸ್ಥಾನವನ್ನೋ ಮಸೀದಿಯನ್ನೋ ಕಟ್ಟಿಸುತ್ತಾರೆ. ಅದೊಂದು ಸ್ಥಾವರ. ಅದರ ಎದುರು ಭಿಕ್ಷುಕರು ಕೂತಿರುತ್ತಾರೆ. ಚಪ್ಪಲಿ ನೋಡಿಕೊಳ್ಳುವವ  ಇರುತ್ತಾನೆ. ಅಂದರೆ ಚಪ್ಪಲಿಯನ್ನೂ ಕದಿಯುವಂಥಾ ಕಳ್ಳರು, ಕಳ್ಳತನದಿಂದಲೇ ಚಪ್ಪಲಿಯ ಅಗತ್ಯವನ್ನು ಪೂರೈಸಬೇಕಾದಷ್ಟು ಬಡವರು ಇರುತ್ತಾರೆ ಎಂದಾಯಿತು. ಜೊತೆಗೆ ದೇವರ ಮತ್ತು  ಭಕ್ತರ ಮಧ್ಯೆ ವ್ಯವಹರಿಸುವುದಕ್ಕೆ ಪೂಜಾರಿಗಳು, ಪೂಜೆಗಳು, ಅವರ ನಿಯಮ ಕಟ್ಟಳೆಗಳು ಇರುತ್ತವೆ. ಆದರೆ, ದೇಹವೇ ದೇಗುಲವಾದರೆ, ಅಲ್ಲಿ ಭಿಕ್ಷುಕರೂ ಇಲ್ಲ, ಚಪ್ಪಲಿ ನೋಡಿಕೊಳ್ಳುವವನೂ ಬೇಕಾಗಿಲ್ಲ. ಪ್ರತಿಯೊಬ್ಬ ಇನ್ನೊಬ್ಬನಿಗೆ ಸಮಾನ. ಮತ್ತು, ಇಂಥಾ ದೇಗುಲದೊಳಗೆ  ಇರುವವ ದೇವರೋ ಪಿಶಾಚಿಯೋ ಎಂಬುದೂ ಆಯಾ ವ್ಯಕ್ತಿಯ ಜೊತೆ ಎರಡು ವಾಕ್ಯ ಮಾತಾಡುವುದರ ಒಳಗೆ ಗೊತ್ತಾಗಿಬಿಡುತ್ತದೆ. ಸ್ಥಾವರವಾದ ದೇವಸ್ಥಾನದ  ಒಳಗೆ ಇರುವುದು ಪಿಶಾಚಿಯೋ ದೇವರೋ ಎನ್ನುವುದು ಕಣ್ಣು ಕೋರೈಸುವ ವಿದ್ಯುತ್ ಬೆಳಕಿನಲ್ಲಿ, ವಿಧ ಬಗೆಯ ಅಲಂಕಾರಗಳಲ್ಲಿ, ಉದ್ಘೋಷಗಳಲ್ಲಿ ಮರೆಯಾಗಿಬಿಡುತ್ತದೆ.

ಕೋರ್ಟಿನ ತೀರ್ಪಿಗೆ ಕಾದಿರುವ ಈ ಆತಂಕದ ದಿನಗಳಲ್ಲಿ ಒಂದು ಸಾವಿರ ವರ್ಷ ಹಿಂದಿನ ಮೇಲಿನ ಕಾವ್ಯದ ರೆಲೆವೆನ್ಸ್ ಬಗ್ಗೆ ಮತ್ತೆ ವಿವರಿಸಬೇಕಾದ್ದಿಲ್ಲ. ಏನಾಗುತ್ತದೋ ಎಂಬ ಆತಂಕದ ಈ ಸಂಜೆ, ಕಾಲು ಕಂಬ ಮಾಡುವ, ದೇಹ ದೇಗುಲ ಮಾಡುವ, ಶಿರ ದೇವರ ಕಳಶ ಮಾಡುವ ಪ್ರಯತ್ನವನ್ನಾದರೂ ನಾವು ಮಾಡಬೇಕು ಅನ್ನಿಸುತ್ತದೆ.

Wednesday, September 15, 2010

Two Poems

TWO POEMS


 I am publishing here English and Kannada versions of  two of my poems. These are not translations, but different  creations on the same subject in two different languages. Kannada versions of these poems are published in Mataduva mara (2003),  my collected poems written between 1964-2003.


Aunt of the River-side 


After seeing an old man, a dead body, and a monk
Siddhartha left the palace, went to the forest, and became the Buddha.
There were people who thought differently.
For example, there was a twenty year old young man in our village.
He was joking and laughing till 12 o`clock in the night.
The next day morning  we woke up to find out 
that he had hanged himself to the branch of a nearby tree.
Another person committed suicide adding poison to whisky
on his birthday, in his birth-place, wearing his best dress,
listening to his favourite music.
If life is meaningless,
why did he try to combine everything harmoniously like this 
before death?

Our aunt of the river-side too is different. 
One day, all of a sudden,
she took an umbrella and went to the river in the pouring rain 
shouting that she is fed up with life,
would like to kill herself, drowning in the river.
She stood there on the river-side for quite sometime,
came back, sat in the courtyard, 
and began to wail that nobody tried to rescue her,
nobody cared for her.
Then she had her meal, took bath, ate santani,
spread a bed in the verandah and slept--
covering herself in a blanket. 



Lear`s Curse


That couple--husband and wife--
make different designs on  the plain cloth and sell.
They are creators, in a way. 
There is a big iron frame in the courtyard.
A palin cloth in diferent stages of design
is spread on the frame.
The daughetr-in law and the son live inside the house.
The father-in-law, three score and ten,
lives under this frame in the courtyard.
They provide him three meals a day
and drinking water round the clock.

"Blow, winds, and crack your cheeks! rage! blow!
You cataracts and hurricanoes, sprout
Till you have drenched our steeples, drown`d the cocks!
You sulph`rous and thought-executing fires,
Vaunt-couriers of oak-cleaving thunderbolts,
Singe my white head! And thou, all-shaking  thunder,
Strike flat the thick rotundity o` th` world!
Crack Nature`s moulds, all germens spill at once 
That makes ingrateful man!"*

To curse like this
one needs an auditorium and a stage
and the relaxing audience
sitting comfortably in their chairs.


(*King Lear, Act III, Scene 2, lines 1-9)






ಎರಡು ಪದ್ಯಗಳು


ಈ ಕೆಳಗಿನ ಎರಡು ಪದ್ಯಗಳು ನನ್ನ ಸಮಗ್ರ ಕವನಗಳ ಸಂಗ್ರಹ ಮಾತಾಡುವ ಮರ (2003)ದಲ್ಲಿ ಪ್ರಕಟವಾಗಿವೆ. ಇವುಗಳ ಇಂಗ್ಲಿಷ್ ಆವೃತ್ತಿಗಳನ್ನು ಮೇಲೆ ಕೊಟ್ಟಿದ್ದೇನೆ. ಇವು ಅನುವಾದಗಳಲ್ಲ. ಒಂದೇ ವಸ್ತುವಿನ ಮೇಲೆ ಎರಡು ವಿಭಿನ್ನ ಭಾಷೆಗಳಲ್ಲಿ ಒಬ್ಬನೇ ಲೇಖಕ ಸೃಷ್ಟಿಸಿದ ಪ್ರತ್ಯೇಕ  ಕವನಗಳು. ಓದುಗರಿಗೆ ಸಾಮ್ಯಗಳಿರುವಂತೆ ವ್ಯತ್ಯಾಸಗಳೂ ಕಾಣಬಹುದು.


ಆಚೆ ಮನೆ ಅತ್ತೆ

ಈ ಜೀವ ಮುಪ್ಪಲ್ಲಿ ಕಾಯಿಲೆಯಲ್ಲಿ ಸಾವಲ್ಲಿ ವ್ಯರ್ಥ
ಮುಗಿಯುವುದೆ ಇದ್ದರೂ ಹುಡುಕಿ ಬದುಕಿನ ಅರ್ಥ
ಕಂಡವರು ದಿವ್ಯ ಚಕ್ಷುಗಳು. ಕತ್ತಲೆಯಲ್ಲಿ
ಬರಿಯ ಕತ್ತಲೆ ಕಂಡು ಜೀವಾಗ್ನಿ ನಂದಿಸಿದವರು
ಆತ್ಮ ನಷ್ಟರೆ? ಇಪ್ಪತ್ತು ವರ್ಷದ ಹುಡುಗ. ಇರುಳಲ್ಲಿ
ಹನ್ನೆರಡು ಗಂಟೆ ವರೆಗೂ ಜೋಕು ಮಾತಾಡುತ್ತ
ಮಲಗಿದವ  ಮೂರು ಗಂಟೆಗೆ ಎದ್ದು
ವಾಚಿಗೆ ಕೀ ಕೊಟ್ಟು, ಚಪ್ಪಲಿ ಪೊಟರೆಯಲ್ಲಿಟ್ಟು
ಆಗಸದ ಕುರುಡು ಬೆಳಕಲ್ಲಿ ಮರದ ಮಧ್ಯ ವರೆಗೂ ಹತ್ತಿ
ಕುಣಿಕೆ ಕೊರಳಿಗೆ ಸೆಕ್ಕಿ ಕೆಳ ಜಿಗಿದ--

ದ್ದು  ಶೂನ್ಯಕ್ಕೋ ಆತ ಕಲ್ಪಿಸಿಕೊಂಡ
ಇನ್ನೊಂದು ಜಗತ್ತಿಗೋ? ಬೆಳಿಗ್ಗೆ
ನೆಲ ಮುಗಿಲು ಧಿಕ್ಕರಿಸಿ ತ್ರಿಶಂಕು ನೇಲುತ್ತಿದ್ದ.
ಇನ್ನೊಬ್ಬ ತನ್ನ ಹುಟ್ಟಿನ ದಿವಸ ಗಳಿಗೆ ಊರಲ್ಲಿ
ತನಗೆ ಪ್ರಿಯವಾದ ಬಟ್ಟೆ ತೊಟ್ಟು
ಸಂಗೀತ ಕೇಳುತ್ತ, ಸಿಗರೇಟು ಸೇದುತ್ತ
ಪ್ರಿಯವಾದ ವಿಸ್ಕಿಗೆ ಐಸು ಮತ್ತು ವಿಷ ಬೆರೆಸಿ
ಕಣ್ಣು ಮುಚ್ಚಿದ__ಎಲ್ಲವೂ ಶೂನ್ಯ ಎಂದಾದಲ್ಲಿ
ಸಾಯುವ ಗಳಿಗೆ ಹೀಗೆ ಒಂದನ್ನೊಂದು
ಬದುಕ ಧಿಕ್ಕರಿಸುವುದೆ ಪರಮ ಪುರುಷಾರ್ಥ ಎನ್ನುವ ಹಾಗೆ
ಹೊಂದಿಸುವ ಕೆಲಸ ಯಾಕೋ ಏನೋ.

ಹೊಸ ಜಗತ್ತ ಕನಸಲ್ಲಿ ಸಾವ ಕರೆದವರು ತೀರ್ಥಂಕರರು.
ದಧೀಚಿ ಕೂಡ ಹಾಗೇ: ಇಂದ್ರ ಹೊಸ ನಾಡ ಕಟ್ಟಲಿ ಎಂದು
ಮೂಳೆ ಒಪ್ಪಿಸಿಕೊಂಡ. ಇಲ್ಲ,
ಹೊರಗೆ ಹೋಗುವ ಎಲ್ಲ ಬಾಗಿಲು ಮುಚ್ಚಿ
ಬಲೆ ಸಿಕ್ಕಿ ಸತ್ತವರು--ಬ್ರೂಟಸ್ ಹಾಗೆ, ಚೇತಕನಂತೆ.
ಆಚೆ ಮನೆ ಅತ್ತೆ ಕತೆ ಮಾತ್ರ ಬೇರೆಯೇ.
ಗಂಡ ಯಾರೋ ಹೆಂಗಸಿನ ಜೊತೆ ಹೋದ ಎನಿಸಿದ್ದೆ
ಸುರಿವ ಜಡಿಮಳೆಯಲ್ಲಿ
ನಾನಿನ್ನು ಹೊಳೆ ಹಾರಿ  ಸಾಯುವುದೆ ಸರಿ ಎಂದು
ಕೊಡೆ ಬಿಡಿಸಿ ಹೊಳೆ ಬದಿಗೆ
ಬೀಳದ ಹಾಗೆ ಜಾಗ್ರತೆ ನಡೆದು

ಹಾರುವುದೆ ನಾನಿನ್ನು ಖಂಡಿತಾ ಹಾರುವುದೆ
ಸಾಯುವುದೆ ನಾನಿನ್ನು ಜೀವಾಗ್ನಿ ನಂದುವುದೆ

ಎಂದು ಬೊಬ್ಬಿರಿದರೂ ಉಳಿಸೆ ಬಾರದ್ದು ಯಾರೂ ಕಂಡು
ಹಿಂದಿರುಗಿ ಮನೆ ಜಗುಲಿಗೇ ಬಂದು
ನಾನು ಯಾರಿಗೂ ಬೇಡ, ನನಗ ಯಾರೂ ಇಲ್ಲ
ಎಂದು ನೆಲ ತಟ್ಟಿ ತಟ್ಟಿ ಗೋಳಿಟ್ಟು
ಹೊಟ್ಟೆ ತುಂಬಾ ಉಂಡು, ಸಾಂತಾಣಿ ಮಿಣಿ ಮಿಣಿ ತಿಂದು
ಕಂಬಳಿ ಹೊದೆದು ಮಲಗಿ
ನಿದ್ದೆ ಹೋದಳು.

ಆತ್ಮಹತ್ಯ ಜೀವನದ ತಾತ್ವಿಕ ಪ್ರಶ್ನೆ ಎಂದಾಗ
ಅತ್ತೆ ಅಂಥವರು ಬರುವರೇ__
ಸಾವಿನ ಮುಸ್ಸಂಜೆ ನಾಡಲ್ಲಿ
ಸಾಯುತ್ತಿರುವ ನಕ್ಷತ್ರಗಳ ಈ ಕಣಿವೆಯಲ್ಲಿ
ಅನಿಮೇಷ ಬೆಳಗದೇ ಇದ್ದಲ್ಲಿ
ಸಾಯುತ್ತೇನೆ ಸಾಯುತ್ತೇನೆ ಸಾಯುವೆನೆಂದು ತೆವಳುತ್ತ
ಆಕಳಿಸಿ ನಿದ್ರಿಸುವ ಈ ಅತ್ತೆ ಅಂಥವರು?




ಲಿಯರಿನ ಶಾಪ

ಆ  ಕಪ್ಲು ಬಟ್ಟೆಯ ಮೇಲೆ ಥರಥರದ ಡಿಸೈನ್ ಒತ್ತಿ ಮಾರುವರು;
ಬಟ್ಟೆ ಹರಡುವುದಕ್ಕ ವಿಸ್ತಾರ ಫ್ರೇಮು ಅಂಗಳದಲ್ಲಿ;
ಸೊಸೆ ಮಗನ ವಾಸ ಮನೆ ಒಳಗೆ: ಮಾವ,--ಮುದುಕ--
ಹೊರಗೆ ಫ್ರೇಮಿನ ಕೆಳಗೆ; ಬೆಳಿಗ್ಗೆ ಮಧ್ಯಾಹ್ನ ರಾತ್ರಿ
ಬಟ್ಟಲಿನಲ್ಲಿ ಅನ್ನ ಸಾಂಬಾರು ಹೊಯ್ಯುವರು; ಚೆಂಬಿಗೆ ನೀರು.

"ಬೀಸಿ ಬಿರುಗಾಳಿಗಳೆ, ಕೆನ್ನೆ ಹರಿವಂತೆ ಉಬ್ಬರಿಸಿ. ಸೊಕ್ಕಿ ಸೊಕ್ಕಿ
ಹೊಯ್ಯುವ ನೀರೇ, ಗೋಪುರ ಮುಕುಟ ಮುಳುಗುವ ವರೆಗೆ ಸುರಿ.
ಸ್ವಚ್ಛಂದ ವೃತ್ತಿಯಗ್ನಿಗಳೆ, ಬೃಹದ್ದಾರು ಭೇದಕರೆ, ಹೊಗಳು ಭಟ ವಂದಿಗಳೆ,
ನನ್ನ ಬಿಳಿ ತಲೆಯ ಸೀಯಿಸಿ. ಎಲ್ಲವನು ನಡುಗಿಸುವ ಸಿಡಿಲೇ,
ಜಗತ್ತೆಂಬ  ಈ ಗೋಲ ಕುಟ್ಟಿ ಕುಟ್ಟಿ ಪುಡಿ ಪುಡಿ ಮಾಡು; ಪ್ರಕೃತಿಯ
ಚೌಕಟ್ಟುಗಳ ಸೀಳು; ಕೃತಘ್ನ ಮನುಜಕುಲ ಬೆಳೆಯಿಸುವ ಬೀಜಗಳ
ಬೇಯಿಸಿ ಕೊಲ್ಲು; ಮಾಡು ನಿರ್ಬೀಜ ನಿರ್ವಂಶ ಈ ಜಗದಖಿಲ ಕೋಟಿ ಬ್ರಹ್ಮಾಂಡ."

--ಹೀಗ ಶಪಿಸುತ್ತ ಅಲೆಯುವುದಕ್ಕೆ ಸ್ಟೇಜು, ಧ್ವನಿ ಇರಬೇಕು;
ಕೇಳುವುದಕ್ಕೆ ಕಾಲ್ಚಾಚಿ ಕೂತ ಜನವೂ ಬೇಕು.